ಜೂನ್ 21, 2020ಕ್ಕೆ ಜಗತ್ತೇ ನಾಶ-ಮಾಯನ್ ಕ್ಯಾಲೆಂಡರ್ ಭವಿಷ್ಯ!
2020ರ ಖಗೋಳ ವಿಸ್ಮಯ ಸೂರ್ಯಗ್ರಹಣ ವೀಕ್ಷಿಸಲು ವಿಜ್ಞಾನಿಗಳು ಕುತೂಹಲದಿಂದ ಕಾದಿದ್ದಾರೆ. ಈ ನಡುವೆ ಮಾಯನ್ ಕ್ಯಾಲೆಂಡರ್, ಬುರುಡೆ ಭವಿಷ್ಯ ಬಿಡುವವರ ಪ್ರಕಾರ ಈ ಸೂರ್ಯಗ್ರಹಣ ಅತ್ಯಂತ ಮಾರಕವಾಗಿ ಪರಿಣಮಿಸಲಿದ್ದು, ಜಗತ್ತನ್ನು ನಾಶಪಡಿಸಲಿದೆ ಎಂಬ ಆತಂಕದ ಸುದ್ದಿ ಹಬ್ಬಿದೆ. ಇಂದ ಕಲ್ಪಿತ ಸುಳ್ಳು ಸುದ್ದಿ, ಊಹಾಪೋಹಗಳಿಗೆ ಕಿವಿಕೊಡಬೇಡಿ. ಸಾರ್ವಜನಿಕರಿಗೆ ಪ್ರಳಯದ ಭೀತಿ ಬೇಡ ಎಂದು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾದ ವಿಜ್ಞಾನಿಗಳು ಹೇಳಿದ್ದಾರೆ.
Recommended Video
ಮಾಯನ್ ಕ್ಯಾಲೆಂಡರ್ ಪ್ರಕಾರ ಡಿಸೆಂಬರ್ 21, 2012ರಂದು ಪ್ರಳಯವಾಗಬೇಕಿತ್ತು. ಆದರೆ, ಜಗತ್ತು ಈಗ 2020ನ್ನು ಕಂಡಿದೆ. ಕೊರೊನಾವೈರಸ್ ಭೀತಿ ಬಿಟ್ಟರೆ ಪ್ರಳಯ ಭೀತಿ ಮರೆತು ಹೋಗಿದೆ. ಆದರೆ, ಮಾಯನ್ ಕ್ಯಾಲೆಂಡರ್ ನಲ್ಲಿ ಅಂಕಿ ಅಂಶ ತಪ್ಪಾಗಿತ್ತು, ಈಗ ಹೊಸ ದಿನಾಂಕ ಪ್ರಕಟವಾಗಿದ್ದು, ಈ ಹೊಸ ದಿನಾಂಕವೇ ಜೂನ್ 21, 2020 ಎಂದು ಎಲ್ಲೆಡೆ ಸುದ್ದಿ ಹಬ್ಬಿದೆ. ಜೂನ್ 21ರಂದು ಸೂರ್ಯಗ್ರಹಣ ಸಂಭವಿಸಲಿದೆ. ಈ ಬಾರಿ ಪೂರ್ಣ ಗ್ರಹಣ ಸಂಭವಿಸಲಿದ್ದು ರಿಂಗ್ ಆಫ್ ಫೈರ್ ನೋಡಲು ಎಲ್ಲರೂ ಕುತೂಹಲಿಗಳಾಗಿದ್ದಾರೆ.
ಕೊರೊನಾ ಕರಿ ನೆರಳಿನಲ್ಲಿ ಸೂರ್ಯಗ್ರಹಣ ದರ್ಶನ ಮಾಡಿ
ವೆಬ್ ಸೈಟ್, ಸಾಮಾಜಿಕ ಜಾಲ ತಾಣಗಳಲ್ಲಿ 2012ರಲ್ಲಿ ವಿಶ್ವ ಕೊನೆಗೊಳ್ಳಬೇಕಿತ್ತು ಈಗ 2020ರ ಜೂನ್ 21ರಂದು ಪ್ರಳಯ ಎಂದು ವರದಿ ಇದೆ, ಜಗತ್ತಿಗೆ ಏನಾದರೂ ಆಪತ್ತು ಕಾದಿದೆಯೆ? ಎಂಬ ಪ್ರಶ್ನೆಗೆ ನಾಸಾ ನೀಡಿರುವ ಉತ್ತರ ಇನ್ನಷ್ಟು ಮಾಹಿತಿ ಮುಂದಿದೆ...
ಜಗತ್ತಿಗೆ ಏನಾದರೂ ಆಪತ್ತು ಕಾದಿದೆಯೆ?
2012ಕ್ಕೆ ಸಂಬಂಧಿಸಿ ಯಾವುದೇ ಬೆದರಿಕೆ ಎದುರಾಗಿರಲಿಲ್ಲ, ಜೂನ್ 21,2020ಕ್ಕೂ ಏನು ಆಗುವುದಿಲ್ಲ. 4 ಬಿಲಿಯನ್ ವರ್ಷಗಳಿಗಿಂತ ಗ್ರಹವು ಇನ್ನಷ್ಟು ಉತ್ತಮಗೊಳ್ಳುತ್ತಿದೆ, ಭೂ ಗ್ರಹಕ್ಕೆ ಯಾವುದೇ ಕ್ಷುದ್ರಗ್ರಹ(asteroid) ಅಥವಾ ಧೂಮಕೇತು(comet) ಅಪ್ಪಳಿಸುತ್ತಿಲ್ಲ, ಇನ್ನು ಕನಿಷ್ಠ ನೂರು ವರ್ಷವಾದರೂ ಇಂಥ ಅಪಾಯಕ್ಕಾಗಿ ಕಾಯಬೇಕಾಗುತ್ತದೆ ಎಂಬುದು ವಿಶ್ವದ ಎಲ್ಲ ವಿಜ್ಞಾನಿಗಳಿಗೆ ಚೆನ್ನಾಗಿ ತಿಳಿದಿದೆ ಎಂದು ನಾಸಾ ತನ್ನ ವೆಬ್ ಸೈಟ್ ನಲ್ಲಿ ಸ್ಪಷ್ಟಪಡಿಸಿದೆ
ನಿಬಿರು ಎಂದು ಕರೆಯುವ ಕಾಲ್ಪನಿಕ ಗ್ರಹ
ನಿಬಿರು ಎಂದು ಕರೆಯುವ ಕಾಲ್ಪನಿಕ ಗ್ರಹದ ಜೊತೆಗೆ ಈ ಎಲ್ಲಾ ಕಥೆ ಹುಟ್ಟುಕೊಂಡಿದೆ. ಸುಮೇರಿಯನ್ನರು ಕಂಡು ಹಿಡಿದ ಈ ಗ್ರಹ ಜಗತ್ತಿನೆಡೆಗೆ ಧಾವಿಸುತ್ತಿದೆ ಎಂದು ಬಿಂಬಿಸಲಾಗಿದೆ. 2003ರಲ್ಲೇ ನಿಬಿರು ಭಾರತಕ್ಕೆ ಬಂದು ಅಪ್ಪಳಿಸಲಿದೆ ಎನ್ನಲಾಗಿತ್ತು. ಆದರೆ, ಆಗೇನು ಆಗಲಿಲ್ಲ. ಈಗ ಮತ್ತೊಮ್ಮೆ ಡಿಸೆಂಬರ್ 2012ರಲ್ಲಿ ಜನರಲ್ಲಿ ಇದೇ ಭೀತಿ ತುಂಬಲಾಗಿತ್ತು. ಇದಕ್ಕೆ ಮಾಯನ್ ಕ್ಯಾಲೆಂಡರ್ ಕೊನೆಗೊಳ್ಳಲಿದೆ ಎಂದು ಇನ್ನಷ್ಟು ಪೊಳ್ಳು ಪುರಾವೆ ಒದಗಿಸಲಾಗಿತ್ತು. ಈಗ ಅದೇ ಕೆಲಸವನ್ನು ಮಾಡಲಾಗುತ್ತಿದ್ದು ಜೂನ್ 21ಕ್ಕೆ ಎಲ್ಲವನ್ನು ಕ್ಷುದ್ರಗ್ರಹ ನಾಶಪಡಿಸಲಿದೆ ಎಂಬ ಸುಳ್ಳು ಭೀತಿ ಹಬ್ಬಿಸಲಾಗಿದೆ.
Paolo Tagaloguin ಎಂಬ ವಿಜ್ಞಾನಿ
ಪಾಲೋ ತಗಲೊಗ್ವಿನ್ ಎಂಬ ವಿಜ್ಞಾನಿ ನೀಡಿರುವ ಲೆಕ್ಕಾಚಾರದಂತೆ ಜೂನ್ 21ಕ್ಕೆ ಜಗತ್ತು ನಾಶ ಎಂದು ಹೇಳಿದ್ದು ಏಕೆ? ಎಂಬ ವಿವರ ಇಲ್ಲಿದೆ. ಜ್ಯೂಲಿಯನ್ ಕಾಲೆಂಡರ್ ಪ್ರಕಾರ 2012 ಇದ್ದಾಗ ಇದಕ್ಕೂ ಗ್ರೆಗೊರಿಯನ್ ಕ್ಯಾಲೆಂಡರ್ (1752-2020) ಗೂ ಇರುವ ವ್ಯತ್ಯಾಸ 11 ದಿನಗಳಾಗಿದೆ. ಗ್ರೆಗೊರಿಯನ್ ಕ್ಯಾಲೆಂಡರ್ ಬಳಸಿ 268 ವರ್ಷ X 11 ದಿನಗಳು ಎಂದರೆ 2,948 ದಿನಗಳಾಗುತ್ತದೆ. 2,948 ದಿನಗಳು/ 365ದಿನ(ಒಂದು ವರ್ಷ) =8 ವರ್ಷ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ December 21, 2012 = June 21, 2020 ಎಂದು ನಿರ್ಧರಿಸಲಾಗಿದೆ ಎಂದು ಟ್ವೀಟ್ಸ್ ಹರಿದಾಡಿವೆ. ಮಾಯನ್ ಕ್ಯಾಲೆಂಡರ್ ಕ್ರಿ. ಪೂ 3114ರಲ್ಲಿ ಅಸ್ತಿತ್ವದಲ್ಲಿತ್ತು. 5,125 ಬಳಕೆಯಲ್ಲಿತ್ತು.
ಜಗತ್ತು ಇಡೀ ಕಗ್ಗತ್ತಲೆಯಲ್ಲಿ ಮುಳುಗಲಿದೆಯೆ?
ಜೂನ್ 21ರಂದು ಜಗತ್ತು ಇಡೀ ಕಗ್ಗತ್ತಲೆಯಲ್ಲಿ ಮುಳುಗಲಿದೆಯೆ? ಎಂಬ ಪ್ರಶ್ನೆಗೆ ಹೌದು, ಇಲ್ಲ ಎನ್ನಬಹುದು. ಸಂಪೂರ್ಣ ಸೂರ್ಯಗ್ರಹಣದಿಂದ ಹಗಲು ಸಂದರ್ಭದಲ್ಲಿ ರಾತ್ರಿಯ ಎಫೆಕ್ಟ್ ಕಾಣಬಹುದೇ ಹೊರತು ಯಾವುದೇ ನಾಶದ ಭೀತಿ ಇಲ್ಲ. 1962ರಲ್ಲಿ ಹಾಗೂ 1982 ಮತ್ತು 2000 ರಲ್ಲಿ ಈ ರೀತಿ ಯೂರ್ನಿವರ್ಸಲ್ ಅಲೈನ್ ಮೆಂಟ್ ಸಂಭವಿಸಿತ್ತು. ಮಿಲ್ಕಿ ವೇ ಗ್ಯಾಲಕ್ಸಿ(ಅಕಾಶಗಂಗೆ) ನಕ್ಷತ್ರಪುಂಜದ ಮಧ್ಯಭಾಗಕ್ಕೆ ಸೂರ್ಯ ಮತ್ತು ಭೂಮಿ ಸಾಮಾನಾಂತರವಾಗಿ ಹೊಂದಾಣಿಕೆಯಾಗುವುದು ವಾರ್ಷಿಕ ಪ್ರಕ್ರಿಯೆಯಾಗಿದೆ. ಇದರಿಂದ ಯಾವುದೇ ಪರಿಣಾಮ ಜನಜೀವನ, ಪ್ರಕೃತಿಯ ಮೇಲೆ ಆಗದು.
ನಿಬಿರು ಗ್ರಹ ಇರುವುದು ನಿಜವೇ?
ನಿಬಿರು ಗ್ರಹ ಇರುವುದು ನಿಜವೇ? ಕಂದು ಬಣ್ಣದ ಕುಬ್ಜ ಗ್ರಹ ಅಥವಾ ಎರಿಸ್ ಜಗತ್ತಿಗೆ ಅಪ್ಪಳಿಸಲಿದೆಯೇ?
ನಿಬಿರು ಗ್ರಹ ಅಥವಾ ಇತರೆ ಕಂದು ಬಣ್ಣದ ಕುಬ್ಜ ಗ್ರಹಗಳು ಭೂಮಿಗೆ ಅಪ್ಪಳಿಸುವುದು ಇಂಟರ್ನೆಟ್ ನಲ್ಲಿ ಹರಿದಾಡಿರುವ ಸುಳ್ಳು ಕಥೆ. ನಿಬಿರು ಅಥವಾ ಪ್ಲಾನೆಟ್ X ಭೂ ಗ್ರಹದೆಡೆಗೆ ಧಾವಿಸುತ್ತಿದ್ದರೆ ದಶಕದ ಹಿಂದೆಯೇ ಖಗೋಳ ಶಾಸ್ತ್ರಜ್ಞರಿಗೆ ತಿಳಿಯುತ್ತಿತ್ತು. ನಿಬಿರು ಇರೋದು ನಿಜವಾಗಿದ್ದರೆ ಈ ವೇಳೆಗೆ ಬರೀ ಕಣ್ಣಿಗೆ ಕಾಣಿಸುತ್ತಿತ್ತು. ಪ್ಲುಟೋನಂತೆ ಎರೀಸ್ ಕುಬ್ಜ ಗ್ರಹ, ಸೌರ ಮಂಡಲದ ಹೊರ ವಲಯದಲ್ಲಿದೆ. ಇದರಿಂದ ಅಪಾಯವಿಲ್ಲ. ಭೂ ಗ್ರಹದಿಂದ 4 ಬಿಲಿಯನ್ ಮೈಲಿಗಳ ದೂರದಲ್ಲಿ ಸಂಚರಿಸಬಹುದು.
ಧೂಮಕೇತುಗಳು, ಉಲ್ಕಾಪಾತಗಳ ಭೀತಿಯೂ ಇಲ್ಲ
ಭೂ ಗ್ರಹಕ್ಕೆ ಧೂಮಕೇತುಗಳು, ಉಲ್ಕಾಪಾತಗಳು ಹೊಸದೇನಲ್ಲ. ಆದರೆ, ಬೃಹತ್ ಗಾತ್ರದ ಉಲ್ಕೆಗಳ ದಾಳಿ ಅತಿ ವಿರಳ. 65 ಮಿಲಿಯನ್ ವರ್ಷಗಳ ಕೆಳಗೆ ಬೃಹತ್ ಉಲ್ಕೆಗಳು, ಧೂಮಕೇತು ದಾಳಿ ಸಂಭವಿಸಿತ್ತು ಎಂದು ನಂಬಲಾಗಿದೆ. ಇದರಿಂದ ದೈತ್ಯ ಸರಿಸೃಪಗಳಾದ ಡೈನೋಸರಸ್ ನಾಶಗೊಂಡಿದೆ ಎನ್ನಲಾಗಿದೆ. ನಾಸಾದ ಖಗೋಳ ವಿಜ್ಞಾನಿಗಳು ಭೂಗ್ರಹಕ್ಕೆ ಅಪ್ಪಳಿಸಬಹುದಾದ ಉಲ್ಕೆಗಳು, ಧೂಮಕೇತು, ಕ್ಷುದ್ರ ಗ್ರಹ(asteroids) ಗಳ ಬಗ್ಗೆ ಪೂರ್ವ ಮಾಹಿತಿ ಸಂಗ್ರಹಿಸಿದ್ದಾರೆ. ದೈತ್ಯ ಸರೀಸೃಪಗಳನ್ನು ನಾಶಮಾಡಿದಂಥ ಕ್ಷುದ್ರಗ್ರಹಗಳು ಭೀತಿ ಸದ್ಯಕ್ಕಂತೂ ಇಲ್ಲ.
ಸೌರ ಮಾರುತಗಳ ಭೀತಿ ಇದೆಯೇ?
ಸೌರ ಮಂಡಲದ ಸಹಜ ಪ್ರಕ್ರಿಯೆಗಳಿಂದ ಭೂಮಿ ಮೇಲೆ ಹೆಚ್ಚಿನ ಪರಿಣಾಮವಾಗುವುದಿಲ್ಲ. ಸೌರ ಮಾರುತಗಳ ಪ್ರಖರತೆ 11 ವರ್ಷಗಳಿಗೊಮ್ಮೆ ಹೆಚ್ಚಾಗುತ್ತದೆ. ಇದರಿಂದ ಉಪಗ್ರಹ ಸಂವಹನ ಶಕ್ತಿ ಕೆಲಕಾಲ ವ್ಯತ್ಯಯ ವಾಗಬಹುದು ಅಷ್ಟೇ. ಸಾಮಾನ್ಯವಾಗಿ ಟಿವಿಯಲ್ಲಿ ಈ ರೀತಿ ಸಂದೇಶವನ್ನು ಪ್ರಸಾರ ಮಾಡುವುದನ್ನು ಕಂಡಿರಬಹುದು. 2012ರಲ್ಲಿ ಜಗತ್ತನ್ನೇ ನಾಶ ಮಾಡಬಲ್ಲ ವಿಕಿರಣವಾಗಲಿ, ಸೌರ ಮಾರುತವಾಗಲಿ ಭೂಮಿಗೆ ತಟ್ಟುವುದಿಲ್ಲ.