ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು, ಅಚ್ಚರಿಯ ಅಂಕಿಸಂಖ್ಯೆಗಳು
Recommended Video
ಹದಿನೇಳನೇ ಲೋಕಸಭೆ ಚುನಾವಣೆಯಲ್ಲಿ ಹಲವಾರು ದಾಖಲೆಗಳನ್ನು ಭಾರತೀಯ ಜನತಾ ಪಕ್ಷ ಧೂಳಿಪಟ ಮಾಡಿದೆ. ನರೇಂದ್ರ ಮೋದಿ ಅಲೆಯ ಸುನಾಮಿಯಲ್ಲಿ ಕೆಲ ವಿರೋಧ ಪಕ್ಷಗಳು ಹೇಳಹೆಸರಿಲ್ಲದಂತೆ ಸರ್ವನಾಶವಾಗಿದ್ದರೆ, ಮೇ 23ರಂದು ಪ್ರಕಟವಾದ ಫಲಿತಾಂಶ ಬಿಜೆಪಿಗೂ ಅಚ್ಚರಿ ಮೂಡಿಸಿದೆ.
ಭಾರತೀಯ ಜನತಾ ಪಕ್ಷ 2014ಕ್ಕೆ ಹೋಲಿಸಿದರೆ ತನ್ನ ಮತಗಳಿಕೆಯನ್ನು ಮಾತ್ರ ಉತ್ತಮಪಡಿಸಿಕೊಂಡಿಲ್ಲ, ಜೊತೆಗೆ ಗುಜರಾತ್, ಮಧ್ಯ ಪ್ರದೇಶ, ರಾಜಸ್ಥಾನ, ಹಿಮಾಚಲ ಪ್ರದೇಶ, ದೆಹಲಿ, ಹರ್ಯಾಣ, ಆಸ್ಸಾಂ, ಛತ್ತೀಸ್ ಗಢ, ಜಮ್ಮು ಮತ್ತು ಕಾಶ್ಮೀರ ಅರುಣಾಚಲ ಪ್ರದೇಶ ಮುಂತಾದವೆಡೆಗಳಲ್ಲಿ ಪ್ರದರ್ಶನವನ್ನು ಇನ್ನಷ್ಟು ಉತ್ತಮಪಡಿಸಿಕೊಂಡಿದೆ.
ಫಲಿತಾಂಶ ಹೊರಬಿದ್ದ ನಂತರ ಹಲವಾರು ಅಚ್ಚರಿಯ ಅಂಕಿಸಂಖ್ಯೆಗಳು ಹೊರಬೀಳುತ್ತಿವೆ. ಜಮ್ಮು ಮತ್ತು ಕಾಶ್ಮೀರ, ಹಾಗು ಆಸ್ಸಾಂ ಅನ್ನು ಹೊರತುಪಡಿಸಿದರೆ, ಸುಮಾರು ಎಲ್ಲಾ ರಾಜ್ಯಗಳಲ್ಲಿ ಮತಗಳಿಕೆ ಶೇ.50 ದಾಟಿದೆ. ಗೆದ್ದಿರುವ 303 ಕ್ಷೇತ್ರಗಳಲ್ಲಿ 224 ಲೋಕಸಭಾ ಕ್ಷೇತ್ರಗಳಲ್ಲಿ ಶೇ.50ಕ್ಕೂ ಹೆಚ್ಚು ಮತಗಳನ್ನು ಬಿಜೆಪಿ ಗಳಿಸಿ ವಿಜಯದುಂಧುಬಿ ಮೆರೆದಿದೆ.
ಪ್ರಮಾಣವಚನಕ್ಕೂ ಮುನ್ನ ಮೋದಿಯಿಂದ ಬಾಪು, ಅಟಲ್ ಸ್ಮರಣೆ
ಕರ್ನಾಟಕ ಸೇರಿದಂತೆ, ಉತ್ತರ ಪ್ರದೇಶ, ಬಿಹಾರ, ಮಹಾರಾಷ್ಟ್ರ, ಜಾರ್ಖಂಡ್ ಮುಂತಾದವೆಡೆಗಳಲ್ಲಿ ಎಲ್ಲೆಲ್ಲಿ ಇತರ ಪಕ್ಷಗಳು ಬಿಜೆಪಿ ವಿರುದ್ಧ ಮೈತ್ರಿ ಮಾಡಿಕೊಂಡಿವೆಯೋ, ಅಲ್ಲೆಲ್ಲ ಭಾರತೀಯ ಜನತಾ ಪಕ್ಷ ತನ್ನ ಪ್ರದರ್ಶನವನ್ನು ಇನ್ನಷ್ಟು ಉತ್ತಮಪಡಿಸಿಕೊಂಡಿದೆ. ಕರ್ನಾಟಕದ ಸೇರಿದಂತೆ ಮೈತ್ರಿಕೂಟಗಳು ಅತ್ಯಂತ ಕಳಪೆ ಪ್ರದರ್ಶನ ನೀಡಿವೆ. ಇದು ನರೇಂದ್ರ ಮೋದಿಯವರ ಮೇಲೆ ದೇಶದ ಜನರು ಇಟ್ಟ ನಂಬಿಕೆಗೆ ಸಾಕ್ಷಿಯಾಗಿದೆ.
ಈ ಎಲ್ಲ ಅಂಕಿಅಂಶಗಳನ್ನು ಸೆಂಟರ್ ಫಾರ್ ಸ್ಟಡಿ ಆಫ್ ಡೆವಲಪಿಂಗ್ ಸೊಸೈಟೀಸ್ (ಸಿಎಸ್ಡಿಎಸ್) ಸಂಸ್ಥೆಯ ನಿರ್ದೇಶಕರು ನೀಡಿದ್ದಾರೆ.
ಮತಗಳಿಕೆಯಲ್ಲಿ ಬಿಜೆಪಿ ಸಿಂಹಪಾಲು
ಒಟ್ಟಾರೆಯಾಗಿ 303 ಕ್ಷೇತ್ರ ಗೆದ್ದಿರುವ ಬಿಜೆಪಿ ಶೇ.55.8ರಷ್ಟು ಮತಗಳಿಸಿದೆ. ಎರಡನೇ ಸ್ಥಾನದಲ್ಲಿರುವ ಕಾಂಗ್ರೆಸ್ 52 ಸ್ಥಾನಗಳನ್ನು ತನ್ನದಾಗಿಸಿಕೊಂಡಿದ್ದು, ಶೇ.9.6ರಷ್ಟು ಮಾತ್ರ ಮತ ಪಡೆದಿದೆ. ಮೂರನೇ ಸ್ಥಾನದಲ್ಲಿ 23 ಕ್ಷೇತ್ರಗಳಲ್ಲಿ ಗೆದ್ದಿರುವ ಡಿಎಂಕೆ ಶೇ.4.2ರಷ್ಟು ಮತ ಗಳಿಸಿದೆ. ನಾಲ್ಕನೇ ಸ್ಥಾನದಲ್ಲಿ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ 22 ಸ್ಥಾನ ಗೆದ್ದಿದ್ದು, ಶೇ.4.1ರಷ್ಟು ಮತ ಪಡೆದಿದೆ. ಇನ್ನು ವೈಎಸ್ಆರ್ಸಿಪಿ 22 ಸ್ಥಾನಗಳಲ್ಲಿ ಗೆದ್ದಿದ್ದು, ಶೇ.4.1ರಷ್ಟು ಮತಗಳನ್ನು ಪಡೆದಿದೆ ಮತ್ತು ನಾಲ್ಕನೇ ಸ್ಥಾನವನ್ನು ಹಂಚಿಕೊಂಡಿದೆ.
ಮೋದಿ ಸುನಾಮಿ ಮುಂದೆ ಮಕಾಡೆ ಮಲಗಿದ ಕುಟುಂಬ ರಾಜಕಾರಣಿಗಳು
ಗ್ರಾಮೀಣ ಪ್ರದೇಶಗಳಲ್ಲಿಯೂ ಗಣನೀಯ ಏರಿಕೆ
ಹೆಚ್ಚಾಗಿ ನಗರ ಪ್ರದೇಶಗಳಲ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದ ಭಾರತೀಯ ಜನತಾ ಪಕ್ಷ, ಈ ಬಾರಿ ಗ್ರಾಮೀಣ ಪ್ರದೇಶ ಮತ್ತು ಸಣ್ಣಪಟ್ಟಣಗಳಲ್ಲಿಯೂ ಭರ್ಜರಿ ಪ್ರದರ್ಶನ ತೋರಿದೆ. 2014ರ ಲೋಕಸಭಾ ಚುನವಣೆ ಫಲಿತಾಂಶಕ್ಕೆ ಹೋಲಿಸಿದರೆ, ಗ್ರಾಮೀಣ ಪ್ರದೇಶದಲ್ಲಿ ಬಿಜೆಪಿ ಮತಗಳಿಕೆ ಈಬಾರಿ ಶೇ.6.6ರಷ್ಟು ಹೆಚ್ಚಾಗಿದೆ, ಸಣ್ಣ ಪಟ್ಟಣಗಳಲ್ಲಿ ಶೇ.3.5ರಷ್ಟು ಹೆಚ್ಚಾಗಿದೆ ಮತ್ತು ನಗರ ಪ್ರದೇಶಗಳಲ್ಲಿ ಮತಗಳಿಕೆಯ ಪ್ರಮಾಣ ಶೇ.2.2ರಷ್ಟು ಏರಿಕೆ ಕಂಡುಬಂದಿದೆ. ಎಲ್ಲಕ್ಕಿಂತ ಮುಖ್ಯವಾಗಿ ಪ್ರಮುಖ ರಾಜ್ಯಗಳಾದ ಗುಜರಾತ್ (26ಕ್ಕೆ 26), ರಾಜಸ್ಥಾನ (25ಕ್ಕೆ 24) ಮತ್ತು ಮಧ್ಯ ಪ್ರದೇಶ (29ರಲ್ಲಿ 29) ರಾಜ್ಯಗಳಲ್ಲಿ ಬಿಜೆಪಿ ಕ್ಲೀನ್ ಸ್ವೀಪ್ ಮಾಡಿ ಕಾಂಗ್ರೆಸ್ಸಿಗೆ ಮಂಗಳಾರತಿ ಮಾಡಿದೆ. ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದ ಕಾಂಗ್ರೆಸ್ ಈ ಬಾರಿ ಮತಗಳಿಕೆಯನ್ನು ಶೇ.1.2ರಷ್ಟು ತಗ್ಗಿಸಿಕೊಂಡಿದೆ.
ಕರ್ನಾಟಕದಲ್ಲಿ ಮತಗಳಿಕೆ ಭರ್ಜರಿ ಏರಿಕೆ
ಈ ಚುನಾವಣೆಯಲ್ಲಿ ಎಲ್ಲಕ್ಕಿಂತ ಅಚ್ಚರಿ ಮೂಡಿಸಿದ್ದು ಕರ್ನಾಟಕದ ಫಲಿತಾಂಶ. ಇರುವ 28 ಕ್ಷೇತ್ರಗಳಲ್ಲಿ ಭಾರತೀಯ ಜನತಾ ಪಕ್ಷ 25ರಲ್ಲಿ ಜಯಭೇರಿ ಬಾರಿಸಿದೆ. ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ (ಸುಮಲತಾ) ಅವರನ್ನೂ ಪರಿಗಣಿಸಿದರೆ 26 ಕ್ಷೇತ್ರಗಳು. ಕರ್ನಾಟಕದಲ್ಲಿ ಮೈತ್ರಿ ಸರಕಾರ ರಚಿಸಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಪಡೆದದ್ದು ಅವಮಾನಕರ ಒಂದೊಂದು ಕ್ಷೇತ್ರ ಮಾತ್ರ. ರಾಜ್ಯದಲ್ಲಿ ಬಿಜೆಪಿಯ ಮತ ಗಳಿಕೆ 2014ರಲ್ಲಿ ಶೇ.43.4ರಷ್ಟು ಇದ್ದದ್ದು 2019ರಲ್ಲಿ ಶೇ.51.8ಕ್ಕೆ ಏರಿದೆ. ಪಶ್ಚಿಮ ಬಂಗಾಳದಲ್ಲಿ ಕೂಡ ಕಳೆದ ಚುನಾವಣೆಯಲ್ಲಿ ಶೇ.17.2ರಷ್ಟು ಇದ್ದದ್ದು 2019ರಲ್ಲಿ ಶೇ.40.2ರಷ್ಟು ಏರಿದೆ. ಹಿಂದಿನ ಬಾರಿ 2 ಕ್ಷೇತ್ರ ಗೆದ್ದಿದ್ದ ಬಿಜೆಪಿ ಈ ಬಾರಿ 18 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದೆ. ಹಾಗೆಯೆ, ತ್ರಿಪುರಾ, ಒಡಿಶಾ ಮತ್ತು ತೆಲಂಗಾಣದಲ್ಲಿಯೂ ಬಿಜೆಪಿ ತನ್ನ ಮತಗಳಿಕೆ ಪ್ರಮಾಣವನ್ನು ಅಗಾಧವಾಗಿ ಹೆಚ್ಚಿಸಿಕೊಂಡಿದೆ.
ಮೋದಿ ಪ್ರಮಾಣವಚನ ಕಾರ್ಯಕ್ರಮದಲ್ಲಿ ಸಸ್ಯಾಹಾರದ ಜತೆಗೆ ಬಾಡೂಟ
ಬಿಜೆಪಿ ಕೈ ಬಲಪಡಿಸಿದ ಎಸ್ಸಿ, ಎಸ್ಟಿ
ನರೇಂದ್ರ ಮೋದಿ ಹವಾಕ್ಕೆ ರಾಜಕೀಯ ಪಕ್ಷಗಳ ಮತಬ್ಯಾಂಕ್ ಆಗಿರುವ ಹಲವಾರು ಸಮುದಾಯಗಳು ಕೂಡ ಫಿದಾ ಆಗಿವೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳು ಈಬಾರಿ ಬಿಜೆಪಿಯ ಕೈಯನ್ನ ಭದ್ರಪಡಿಸಿವೆ. 2014ಕ್ಕೆ ಹೋಲಿಸಿದರೆ, ಪರಿಶಿಷ್ಟ ಜಾತಿಯ ಮತಗಳು ಶೇ.5.9ರಷ್ಟು ಏರಿಕೆಯಾಗಿವೆ, ಪರಿಶಿಷ್ಟ ಪಂಗಡಗಳ ಮತಗಳು ಶೇ.6.7ರಷ್ಟು ಹೆಚ್ಚಿವೆ ಮತ್ತು ಸಾಮಾನ್ಯ ವರ್ಗದ ಮತಗಳು ಶೇ.5.4ರಷ್ಟು ಏರಿಕೆ ಕಂಡಿವೆ. ಆದರೆ, ಕಾಂಗ್ರೆಸ್ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಸಾಮಾನ್ಯ ಸಮುದಾಯದ ಮತಗಳನ್ನು ಕಳೆದುಕೊಂಡು ಕಳೆಗುಂದಿದೆ.
ಮೋದಿಗೆ ಜೈ ಎಂದ ದೇಶದ ಯುವ ಸಮೂಹ
ಮತ್ತೊಂದು ಗಮನಾರ್ಹ ಅಂಶವೆಂದರೆ, ಮೊದಲ ಬಾರಿ ಮತದಾನ ಮಾಡುತ್ತಿದ್ದ ಯುವ ಸಮುದಾಯ ನರೇಂದ್ರ ಮೋದಿಯ ಮೇಲೆ ನಂಬಿಕೆಯಿಟ್ಟು ಭಾರೀ ಪ್ರಮಾಣದಲ್ಲಿ ಮತ ಚಲಾವಣೆ ಮಾಡಿದೆ. ಈ ಬಾರಿ ನರೇಂದ್ರ ಮೋದಿಯವರು ಯುವ ಹೃದಯಕ್ಕೇ ಲಗ್ಗೆ ಹಾಕಿದ್ದಾರೆ. 18ರಿಂದ 22ರ ನಡುವಿನ ವಯಸ್ಕ ಯುವಜನತೆ ಶೇ.41ರಷ್ಟು ಬಿಜೆಪಿ ಮತ ಹಾಕಿದ್ದರೆ, ಶೇ.20ರಷ್ಟು ಮಾತ್ರ ಕಾಂಗ್ರೆಸ್ಸಿಗೆ ಮತ ಹಾಕಿದೆ. ಇದು 2014ರಲ್ಲಿ ಬಿಜೆಪಿಯ ಪ್ರಮಾಣ ಶೇ.36ರಷ್ಟಿತ್ತು. ಅಲ್ಲದೆ, 16 ರಾಜ್ಯಗಳಲ್ಲಿ ಕಾಂಗ್ರೆಸ್ ಖಾತೆಯನ್ನೇ ತೆರೆಯಲು ವಿಫಲವಾಗಿದೆ. ಇದು ರಾಹುಲ್ ಗಾಂಧಿ ಅವರ ನಾಯಕತ್ವ ವಿಫಲತೆಗೆ ಕನ್ನಡಿ ಹಿಡಿದಂತಿದೆ. ಅಲ್ಲದೆ, ಅಧಿಕಾರದಲ್ಲಿರುವ ಮಧ್ಯ ಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್ ಗಢದಲ್ಲಿಯೂ ಕಾಂಗ್ರೆಸ್ ಹೀನಾಯ ಸೋಲು ಕಂಡಿದೆ. ಈ ರಾಜ್ಯಗಳಲ್ಲಿಯೂ ಮತಗಳಿಕೆ ಪ್ರಮಾಣ ಅಗಾಧವಾಗಿ ಕುಸಿದಿದೆ.