ಪಂಜಾಬ್ ಮುಖ್ಯಮಂತ್ರಿ ಸ್ಥಾನದ ರೇಸಿನಲ್ಲಿ ಯಾರಿದ್ದಾರೆ ಮುಂದೆ?
ಅಮೃತ್ ಸರ್, ಸೆಪ್ಟೆಂಬರ್ 19: ಪಂಜಾಬ್ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಕ್ಯಾಪ್ಟನ್ ಅಮರೀಂದರ್ ಸಿಂಗ್ ರಾಜೀನಾಮೆ ನೀಡಿದ ಬಳಿಕ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಮುಖ್ಯಮಂತ್ರಿ ಸ್ಥಾನದಲ್ಲಿ ಹಲವರ ಹೆಸರು ಕೇಳಿ ಬಂದಿದ್ದು, ಹಿರಿಯ ನಾಯಕಿ ಅಂಬಿಕಾ ಸೋನಿ ಮುಂಚೂಣಿಯಲ್ಲಿತ್ತು, ಆದರೆ, ಸೋನಿ ಅವರು ತಮಗೆ ಸಿಎಂ ಸ್ಥಾನ ಬೇಡ, ಸಿಖ್ ಸಮುದಾಯವರೇ ಸಿಎಂ ಆಗಲಿ ಎಂದು ಪ್ರತಿಕ್ರಿಯಿಸಿದ ಮೇಲೆ ಕುತೂಹಲ ಇನ್ನಷ್ಟು ಹೆಚ್ಚಾಗಿದೆ.
ರಾಜ್ಯ ರಾಜಕಾರಣದ ಬೆಳವಣಿಗೆಗಳ ಮಧ್ಯೆ ಭಾನುವಾರ ಬೆಳಗ್ಗೆ 11 ಗಂಟೆಗೆ ನಡೆಯಬೇಕಿದ್ದ ಪಂಜಾಬ್ ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್ಪಿ) ಸಭೆಯನ್ನು ಮುಂದೂಡಲಾಗಿದೆ. ಹೊಸ ಸಿಎಲ್ಪಿ ನಾಯಕನ ಹೆಸರು ಇನ್ನೂ ಅಂತಿಮಗೊಳಿಸದ ಹಿನ್ನೆಲೆ ಈ ನಿರ್ಧಾರ ತೆಗೆದುಕೊಂಡಿರುವ ಬಗ್ಗೆ ಪಕ್ಷದ ಮೂಲಗಳಿಂದ ತಿಳಿದು ಬಂದಿದೆ.
ಸೆಪ್ಟೆಂಬರ್ 18ರ ಶನಿವಾರ ಅಮರೀಂದರ್ ಸಿಂಗ್ ರಾಜೀನಾಮೆ ನೀಡಿದ ನಂತರ ಪಂಜಾಬ್ನ ಹೊಸ ಮುಖ್ಯಮಂತ್ರಿ ಆಯ್ಕೆ ಮಾಡುವ ಹೊಣೆಯನ್ನು ಪಕ್ಷದ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರಿಗೆ ವಹಿಸಲಾಗಿದೆ. ಶಾಸಕಾಂಗ ಸಭೆಯಲ್ಲಿ ಹೊಸ ನಾಯಕ ಒಮ್ಮತ ಮೂಡದ ಕಾರಣ, ಆಯ್ಕೆ ಗೊಂದಲ ಮುಂದುವರೆದಿದೆ.
ಚುನಾವಣೆಗೆ ಇನ್ನು ಐದು ತಿಂಗಳು ಬಾಕಿ
ಪಂಜಾಬ್ ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ಇನ್ನೂ ಐದು ತಿಂಗಳು ಬಾಕಿ ಇರುವಾಗಲೇ ನಾಯಕತ್ವದ ಪ್ರಶ್ನೆ ಎದುರಾಗಿದ್ದು, ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆ ಎನ್ನಬಹುದು. ಭಾನುವಾರದಂದು ಸಿಎಂ ಆಯ್ಕೆಗಾಗಿ ಚಂಡೀಗಢದಲ್ಲಿ ಬೆಳಗ್ಗೆ 11ರ ವೇಳೆಗೆ ನಡೆಯಬೇಕಿದ್ದ ಶಾಸಕಾಂಗ ಪಕ್ಷದ ಸಭೆಯನ್ನು ಮುಂದೂಡಲಾಗಿದೆ. ನಾಯಕತ್ವ ಆಯ್ಕೆ ಬಗ್ಗೆ ಒಮ್ಮತ ಮೂಡದ ಕಾರಣ ಸಭೆಯನ್ನು ನಡೆಸಿಲ್ಲ ಎಂದು ತಿಳಿದು ಬಂದಿದೆ.
ರೇಸಿನಲ್ಲಿ ಯಾರಿದ್ದಾರೆ?
ಮಾಜಿ ಕ್ರಿಕೆಟರ್ ಕಮ್ ರಾಜಕಾರಣಿ ನವಜ್ಯೋತ್ ಸಿಂಗ್ ಸಿಧು ಅಲ್ಲದೆ, ಪಂಜಾಬ್ ಕಾಂಗ್ರೆಸ್ ಪ್ರದೇಶ ಸಮಿತಿ ಮಾಜಿ ಅಧ್ಯಕ್ಷ ಸುನೀಲ್ ಜಾಖರ್, ಪ್ರತಾಪ್ ಬಾಜ್ವಾ ಸದ್ಯಕ್ಕೆ ಸಿಎಂ ಸ್ಥಾನದ ರೇಸಿನಲ್ಲಿ ಮುಂದಿದ್ದಾರೆ ಎಂದು ತಿಳಿದು ಬಂದಿದೆ. ಇವರಲ್ಲದೆ ಸಚಿವರಾದ ಸುಖ್ ಜಿಂದರ್ ರಾಂಧವ, ಸುಖ್ವಿಂದರ್ ಸಿಂಗ್ ಸಕರಿಯಾ. ತೃಪ್ತ್ ರಾಜೀಂದರ್ ಸಿಂಗ್ ಬಾಜ್ವಾ ಕೂಡಾ ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟಿದ್ದಾರೆ.
ಅಚ್ಚರಿಯ ಹೆಸರುಗಳು ಕೇಳಿ ಬಂದಿದೆ
ಕಾಂಗ್ರೆಸ್ ಪಕ್ಷ ತನ್ನ ಸಾಂಪ್ರಾದಾಯಿಕ ಆಯ್ಕೆ ವಿಧಾನವನ್ನು ಪಕ್ಕಕ್ಕಿಟ್ಟು, ಅಚ್ಚರಿಯ ಆಯ್ಕೆ ಕೂಡಾ ಸಾಧ್ಯತೆ ಎಂಬ ಸುದ್ದಿಯಿದೆ. ಅಂಬಿಕಾ ಸೋನಿ ಅಲ್ಲದೆ, ಬ್ರಹ್ಮ್ ಮೋಹಿಂದ್ರಾ, ವಿಜಯ್ ಇಂದರ್ ಸಿಂಗ್ಲಾ, ಪಂಜಾಬ್ ಕಾರ್ಯಕಾರಿ ಅಧ್ಯಕ್ಷ ಕುಲ್ಜಿ ಸಿಂಗ್ ನಾಗ್ರಾ, ಸಂಸದ ಪ್ರತಾಪ್ ಸಿಂಗ್ ಬಾಜ್ವಾ ಹೆಸರು ಕೂಡಾ ಕೇಳಿ ಬಂದಿದೆ.
|
2017ರ ಚುನಾವಣೆಯಲ್ಲಿ ಅಮರೀಂದರ್ ನೇತೃತ್ವ
2017ರ ಚುನಾವಣೆಯಲ್ಲಿ ಅಮರೀಂದರ್ ಸಿಂಗ್ ನೇತೃತ್ವ ವಹಿಸಿಕೊಂಡು ಪಕ್ಷವನ್ನು ಅಧಿಕಾರಕ್ಕೆ ತಂದಿದ್ದರು. ಯಾರನ್ನು ಬೇಕಾದರೂ ಸಿಎಂ ಮಾಡಲಿ, ಅವರಿಗೆ ಯಾರ ಮೇಲೆ ನಂಬಿಕೆ ಇದೆಯೋ ಅವರಿಗೆ ಕುರ್ಚಿ ನೀಡಲಿ ಎಂದು ಅಮರೀಂದರ್ ಸಿಂಗ್ ಪ್ರತಿಕ್ರಿಯಿಸಿದ್ದು, ಸಿಎಂ ಆಯ್ಕೆ ಪ್ರಕ್ರಿಯೆಯಿಂಡ ಸಂಪೂರ್ಣ ದೂರ ಉಳಿದಿದ್ದಾರೆ. ಆದರೆ, ಯಾವುದೇ ಕಾರಣಕ್ಕೂ ನವಜ್ಯೋತ್ ಸಿಂಗ್ ಸಿಧು ಅವರನ್ನು ಸಿಎಂ ಆಗಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಅಮರೀಂದರ್ ಹೇಳಿದ್ದಾರೆ. ಈ ನಡುವೆ ಪಂಜಾಬ್ ರಾಜ್ಯಕ್ಕೆ ಸಿಖ್ ಸಮುದಾಯದವರೇ ಸಿಎಂ ಆದರೆ ಒಳ್ಳೆಯದು ಎಂದು ಅಂಬಿಕಾ ಸೋನಿ ಪ್ರತಿಕ್ರಿಯಿಸಿದ್ದಾರೆ.