ಮಣಿಪುರ ಮುಖ್ಯಮಂತ್ರಿ ಸ್ಥಾನಕ್ಕೆ ಕೇಳಿ ಬಂತು ಹೊಸ ಹೆಸರು!
ಮಣಿಪುರದ 60 ಕ್ಷೇತ್ರಗಳಿಗೆ ಫೆಬ್ರವರಿ 28 ಮತ್ತು ಮಾರ್ಚ್ 5 ರಂದು ಎರಡು ಹಂತಗಳಲ್ಲಿ ಮತದಾನ ನಡೆಸಲಾಯಿತು. 2022ರ ಮಾರ್ಚ್ 10ರಂದು ಮತ ಎಣಿಕೆ ನಂತರ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ. ಸಿಎಂ ಆಗಿ ಮತ್ತೊಂದು ಅವಧಿಗೆ ಬಿರೇನ್ ಸಿಂಗ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂಬ ಸುದ್ದಿಯಿದೆ. ಇದರ ಬೆನ್ನಲ್ಲೇ ಹೊಸ ಹೆಸರೊಂದು ಕೇಳಿ ಬಂದಿದೆ.
ಮಣಿಪುರದ ಬಿಜೆಪಿಯ ಹಿರಿಯ ನಾಯಕ ತೊಂಗಂ ಬಿಸ್ವಜಿತ್ ಸಿಂಗ್ ಅವರು ಕೇಸರಿ ಪಕ್ಷದ ಭವಿಷ್ಯವನ್ನು ಬದಲಿಸಿದ ಕೀರ್ತಿಗೆ ಪಾತ್ರರಾಗಿರುವ ರಾಜ್ಯ ಘಟಕದ ಪ್ರಮುಖ ನಾಯಕರಲ್ಲಿ ಒಬ್ಬರು. ಇತಿಹಾಸದಲ್ಲಿ ಮೊದಲ ಬಾರಿಗೆ, ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ ಮತ್ತು ಈಶಾನ್ಯ ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆಯ ಅಭ್ಯರ್ಥಿಯಾಗಿ ಇವರ ಹೆಸರು ಕೇಳಿ ಬಂದಿದೆ.
ಮಣಿಪುರದಲ್ಲಿ ಬಿಜೆಪಿ ಸರ್ಕಾರ ರಚನೆಗೆ ಜೆಡಿಯು ಬೆಂಬಲ
ಪ್ರಸ್ತುತ ಮಣಿಪುರ ಸರ್ಕಾರದ ಅವಧಿಯು ಮಾರ್ಚ್ 20, 2017 ರಂದು ಪ್ರಾರಂಭವಾಯಿತು ಮತ್ತು ಮಾರ್ಚ್ 19, 2022 ರಂದು ಕೊನೆಗೊಳ್ಳಲಿದೆ.
ಮೈತ್ರಿ ಬಗ್ಗೆ ಬಿರೇನ್ ಸಿಂಗ್
ಈ ನಡುವೆ ಮಣಿಪುರದಲ್ಲಿ ಶೇ 10.77ರಷ್ಟು ಮತ ಗಳಿಕೆ ಮೂಲಕ 6 ಸ್ಥಾನ ಗೆದ್ದಿರುವ ಜನತಾ ದಳ(ಸಂಯುಕ್ತ) ಪಕ್ಷವು ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿರುವ ಭಾರತೀಯ ಜನತಾ ಪಕ್ಷಕ್ಕೆ ಬೆಂಬಲ ವ್ಯಕ್ತಪಡಿಸಿದೆ. ಈಗಾಗಲೇ ಎನ್ ಪಿ ಎಫ್ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಂ ಬಿರೇನ್ ಸಿಂಗ್, ಮುಂದಿನ ಸರ್ಕಾರದಲ್ಲಿ ಎನ್ಪಿಪಿ ನಮ್ಮೊಂದಿಗೆ ಇರುತ್ತದೆ ಎಂದು ನಾನು ಭಾವಿಸುವುದಿಲ್ಲ ಎಂದಿದ್ದಾರೆ. ಈ ಮೂಲಕ ಜೆಡಿಯು ಶಾಸಕರಿಗೆ ಸಚಿವರಾಗುವ ಅವಕಾಶ ಲಭ್ಯವಾಗಲಿವೆ.
ಎನ್ಪಿಎಫ್ ಹಾಗೂ ಎನ್ಪಿಪಿ ಎರಡೂ ಪಕ್ಷಗಳು ಬಿಜೆಪಿ ನೇತೃತ್ವದ ಪ್ರಸ್ತುತ ಆಡಳಿತ ಮೈತ್ರಿಕೂಟದ ಭಾಗವಾಗಿದೆ. ಆದಾಗ್ಯೂ, ಎರಡೂ ಪಕ್ಷಗಳು ಬಿಜೆಪಿಯೊಂದಿಗೆ ಯಾವುದೇ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿಲ್ಲ. ಎಲ್ಲಾ 60 ಸ್ಥಾನಗಳಲ್ಲಿ ಏಕಾಂಗಿಯಾಗಲು ಸ್ಪರ್ಧಿಸಿತ್ತು.
2022ರ ವಿಧಾನಸಭೆ ಫಲಿತಾಂಶ
60 ಸ್ಥಾನಗಳ ವಿಧಾನಸಭೆಯಲ್ಲಿ ಬಿಜೆಪಿ 32 ಸ್ಥಾನ, ಜನತಾ ದಳ (ಯುನೈಟೆಡ್) 6, ಕಾಂಗ್ರೆಸ್ 5, ಎನ್ ಪಿ ಪಿ 7, ಎನ್ ಪಿಎಫ್ 5, ಕುಕಿ ಪೀಪಲ್ಸ್ ಮೈತ್ರಿಕೂಟ 2 ಸ್ಥಾನ ಗೆದ್ದುಕೊಂಡಿವೆ. ಬಿಜೆಪಿ ಶೇ 37.83, ಕಾಂಗ್ರೆಸ್ 16.83%, ಜೆಡಿಯು 10.77%, ಎನ್ ಪಿ ಇ ಪಿ 17.29%, ಎನ್ ಪಿ ಎಫ್ 8.09 %, ಇತರೆ 7.53 % ಬಂದಿದೆ.
ಬಿಸ್ವಜಿತ್ ಸಿಂಗ್ ಪ್ರತಿಕ್ರಿಯೆ ಏನು?
ಮುಖ್ಯಮಂತ್ರಿ ಬಿರೇನ್ ಸಿಂಗ್ ಅವರನ್ನು ಪ್ರಮುಖ ಅಭ್ಯರ್ಥಿಯನ್ನಾಗಿಸಿಕೊಂಡು ಬಿಜೆಪಿ ಚುನಾವಣೆ ಎದುರಿಸಿತ್ತು. ಆದರೆ, ಮುಂದಿನ ಮುಖ್ಯಮಂತ್ರಿ ಯಾರೆಂದು ಹೈಕಮಾಂಡ್ ಕರೆ ನೀಡಿಲ್ಲ. ಬಿರೇನ್ ಸಿಂಗ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಇತ್ತೀಚೆಗೆ ಭೇಟಿಯಾಗಿದ್ದು, ಇದು ಸೌಜನ್ಯದ ಭೇಟಿ ಎಂದು ಪ್ರತಿಕ್ರಿಯಿಸಿದ್ದಾರೆ.
ಬಿಸ್ವಜಿತ್ ಸಿಂಗ್ ಅವರು ರಾಜ್ಯದ ಮುಂದಿನ ಮುಖ್ಯಮಂತ್ರಿ ರೇಸ್ನಲ್ಲಿ ತಮ್ಮ ಬಗ್ಗೆ ಸುತ್ತುತ್ತಿರುವ ಊಹಾಪೋಹಗಳ ಬಗ್ಗೆ ಪ್ರತಿಕ್ರಿಯಿಸಲು ಗುರುವಾರ ನಿರಾಕರಿಸಿದ್ದರು. "ನಾನು ಅದರ ಬಗ್ಗೆ ಪ್ರತಿಕ್ರಿಯಿಸಲು ಬಯಸುವುದಿಲ್ಲ. ನಮ್ಮಲ್ಲಿ ಯಾವುದೇ ಗುಂಪು ಇಲ್ಲ, ಅದು ಖಚಿತವಾಗಿದೆ. ಬಿಜೆಪಿ ಪ್ರಜಾಪ್ರಭುತ್ವ ಪಕ್ಷವಾಗಿದೆ ಮತ್ತು ನಾಯಕತ್ವವು ಇದನ್ನು (ಮುಖ್ಯಮಂತ್ರಿ ವಿಷಯ) ನಿರ್ಧರಿಸುತ್ತದೆ" ಎಂದು ಅವರು ಹೇಳಿದರು.
ಟಿಎಂಸಿಯಿಂದ ಬಿಜೆಪಿಗೆ ಬಂದಿರುವ ಬಿಸ್ವಜಿತ್
ತೊಂಗಂ ಬಿಸ್ವಜಿತ್ ಸಿಂಗ್ ಅವರು ಆರು ವರ್ಷಗಳ ಹಿಂದೆ ತೃಣಮೂಲ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಅವರು ಕೇಸರಿ ಪಕ್ಷಕ್ಕೆ ಬಂದ ನಂತರ, ಪಕ್ಷವು ಪ್ರಭಾವಶಾಲಿ ಬೆಳವಣಿಗೆಯನ್ನು ಕಂಡಿದ್ದರಿಂದ ಪ್ರಮುಖ ನಾಯಕರಾದರು.
2017 ರಲ್ಲಿಯೇ, ಬಿಸ್ವಜಿತ್ ಸಿಂಗ್ ಮುಖ್ಯಮಂತ್ರಿ ಹುದ್ದೆಗೆ ಮುಂಚೂಣಿಯಲ್ಲಿದ್ದರು ಆದರೆ ಅವರು ಎನ್ ಬಿರೇನ್ ಸಿಂಗ್ ಅವರ ಅಭ್ಯರ್ಥಿಯನ್ನು ಬೆಂಬಲಿಸಿದರು. ಅದೇನೇ ಇದ್ದರೂ, ಅವರು ಸರ್ಕಾರದಲ್ಲಿ ಪ್ರಮುಖ ಖಾತೆಗಳನ್ನು ಹೊಂದಿದ್ದರು. ನಾಲ್ಕು ಬಾರಿ ಶಾಸಕರಾಗಿರುವ ಬಿಸ್ವಜಿತ್ ಸಿಂಗ್ ಅವರು ಗಡಿ ರಾಜ್ಯದಲ್ಲಿ ಮೊದಲ ಬಿಜೆಪಿ ನೇತೃತ್ವದ ಸರ್ಕಾರವನ್ನು ರಚಿಸಲು 2017 ರಲ್ಲಿ ನಾಗಾ ಪೀಪಲ್ಸ್ ಫ್ರಂಟ್ ಮತ್ತು ನ್ಯಾಷನಲ್ ಪೀಪಲ್ಸ್ ಪಾರ್ಟಿಯೊಂದಿಗೆ ಬಿಜೆಪಿಯ ಮೈತ್ರಿಯನ್ನು ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ವೀಕ್ಷಕರಾಗಿ ನಿರ್ಮಲಾ, ಕಿರಣ್ ರಿಜಿಜು
2022 ರಲ್ಲಿ ಬಿಸ್ವಜಿತ್ ಸಿಂಗ್ ಅವರು ತೊಂಗ್ಜು ವಿಧಾನಸಭಾ ಕ್ಷೇತ್ರದಿಂದ ಗೆದ್ದರು. ಅವರ ಬೆಂಬಲಿಗರ ಪ್ರಕಾರ, ಅವರು ತಮ್ಮ ಕ್ಷೇತ್ರದಲ್ಲಿ ಪ್ರಚಾರ ಮಾಡಲಿಲ್ಲ, ಏಕೆಂದರೆ ಅವರು ತಮ್ಮ ಪತ್ನಿ ಅವರ ಪರವಾಗಿ ಪ್ರಚಾರ ಮಾಡುವಾಗ ಇತರ ಸ್ಥಾನಗಳಿಗೆ ಸಮಯ ಮೀಸಲಿಟ್ಟರು. ಬಿಸ್ವಜಿತ್ ಸಿಂಗ್ ಅವರು ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ "ಹಲವಾರು ಹಗರಣಗಳನ್ನು" ಬಯಲಿಗೆಳೆದ ಕೀರ್ತಿಗೂ ಪಾತ್ರರಾಗಿದ್ದಾರೆ.
ಏತನ್ಮಧ್ಯೆ, ರಾಜ್ಯದಲ್ಲಿ ಬಿಜೆಪಿಯ ಶಾಸಕಾಂಗ ಪಕ್ಷದ ನಾಯಕರ ಆಯ್ಕೆಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ವೀಕ್ಷಕರಾಗಿ ಮತ್ತು ಕಾನೂನು ಸಚಿವ ಕಿರಣ್ ರಿಜಿಜು ಅವರನ್ನು ಸಹ ವೀಕ್ಷಕರಾಗಿ ನೇಮಿಸಲಾಗಿದೆ. ಮುಂದಿನ ವಾರದ ಆರಂಭದಲ್ಲಿ ಇಂಫಾಲ್ನಲ್ಲಿ ಸಭೆ ನಡೆಯುವ ನಿರೀಕ್ಷೆಯಿದೆ.