ಮಣಿಪುರ ದಾಳಿ: ಕುಟುಂಬದೊಂದಿಗೆ ಕೊಲ್ಲಲ್ಪಟ್ಟ ಕರ್ನಲ್ ತ್ರಿಪಾಠಿ ಯಾರು?
ಮಣಿಪುರ ನವೆಂಬರ್ 14: ಉಗ್ರರು ಹೊಂಚು ಹಾಕಿ ನಡೆಸಿದ ದಾಳಿಯಲ್ಲಿ ಭಾರತೀಯ ಸೇನೆಯ ನಾಲ್ವರು ಯೋಧರು, ಅಸ್ಸಾಂ 46 ರೈಫಲ್ನ ಕಮಾಂಡಿಂಗ್ ಅಧಿಕಾರಿ, ಅವರ ಮಗ, ಪತ್ನಿ ಸೇರಿ ಒಟ್ಟು ಏಳು ಮಂದಿ ಸಾವನ್ನಪ್ಪಿದ್ದಾರೆ. ಮಣಿಪುರದ ಸಿಂಘಾತ್ನಲ್ಲಿ ಶನಿವಾರ ಈ ಘಟನೆ ನಡೆದಿದ್ದು, ಮೂವರು ಯೋಧರು ಗಾಯಗೊಂಡಿದ್ದಾರೆ. ಗಂಭೀರವಾಗಿ ಗಾಯಗೊಂಡ ಯೋಧರನ್ನೆಲ್ಲ ಬೆಹಿರಂಗ್ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.
ಮಣಿಪುರ ಮೂಲದ ಬಂಡುಕೋರರ ಗುಂಪು ಪೀಪಲ್ಸ್ ಲಿಬರೇಶನ್ ಆರ್ಮಿ ಈ ದಾಳಿ ನಡೆಸಿದ್ದಾಗಿ ಮಾಹಿತಿ ಸಿಕ್ಕಿದೆ. ಹುತಾತ್ಮರಾದ ಕಮಾಂಡಿಂಗ್ ಆಫೀಸರ್ನ್ನು ಕರ್ನಲ್ ವಿಪ್ಲವ್ ತ್ರಿಪಾಠಿ ಎಂದು ಗುರುತಿಸಲಾಗಿದೆ. ಇವರು ಮಯನ್ಮಾರ್ ಗಡಿಯಲ್ಲಿ ಇದ್ದರು, ದಾಳಿ ನಡೆಯುವ ಸಂದರ್ಭದಲ್ಲಿ ಅಲ್ಲಿಂದ ತಮ್ಮ ಕುಟುಂಬದೊಂದಿಗೆ ಹಿಂತಿರುಗುತ್ತಿದ್ದರು.
ಅಸ್ಸಾಂ ರೈಫಲ್ನ ಕಮಾಂಡಿಂಗ್ ಅಧಿಕಾರಿ ತ್ರಿಪಾಠಿ ಅವರು ನಾಗರಿಕರಿಗೆ ಸಹಾಯ ಮಾಡುವ ಸಭ್ಯ ಅಧಿಕಾರಿಯಾಗಿದ್ದರು ಎಂದು ಸ್ಥಳೀಯ ಪತ್ರಕರ್ತರು ಹೇಳುತ್ತಾರೆ. ಮಣಿಪುರದ ಮ್ಯಾನ್ಮಾರ್ ಗಡಿಯಲ್ಲಿ ನಡೆದ ದಾಳಿಯನ್ನು ತೀವ್ರವಾಗಿ ಖಂಡಿಸಿರುವ ಪ್ರಧಾನಿ ನರೇಂದ್ರ ಮೋದಿ "ಸೇನೆಯ ತ್ಯಾಗವನ್ನು ಎಂದಿಗೂ ಮರೆಯಲಾಗುವುದಿಲ್ಲ" ಎಂದು ಹೇಳಿದರು.
ದಿವಂಗತ ಅಧಿಕಾರಿಯ ತಂದೆ, ಸುಭಾಷ್ ತ್ರಿಪಾಠಿ (76) ಹಿರಿಯ ಪತ್ರಕರ್ತ ಮತ್ತು ಸ್ಥಳೀಯ ಹಿಂದಿ ದಿನಪತ್ರಿಕೆಯ ಸಂಪಾದಕ ಮತ್ತು ತಾಯಿ ಆಶಾ ತ್ರಿಪಾಠಿ ನಿವೃತ್ತ ಗ್ರಂಥಪಾಲಕಿಯಾಗಿದ್ದಾರೆ. ಸೇನಾ ಸಮವಸ್ತ್ರ ಧರಿಸಲು ವಿಪ್ಲವ್ಗೆ ಪ್ರೇರಣೆ ನೀಡಿದವರು ಅವರ ಅಜ್ಜ ಮತ್ತು ತಂದೆ. ತ್ರಿಪಾಠಿ ಅವರು ಖಡಕ್ವಾಸ್ಲಾದ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ (ಎನ್ಡಿಎ) ಯಿಂದ ಪದವಿ ಪಡೆದರು ಮತ್ತು ನಂತರ ಡೆಹ್ರಾಡೂನ್ನ ಇಂಡಿಯನ್ ಮಿಲಿಟರಿ ಅಕಾಡೆಮಿ (ಐಎಂಎ) ಗೆ ಸೇರಿದರು. ನಂತರ ಅವರು ಡಿಫೆನ್ಸ್ ಸರ್ವಿಸ್ ಸ್ಟಾಫ್ ಕಾಲೇಜ್ (DSSC) ವೆಲ್ಲಿಂಗ್ಟನ್ನಿಂದ ಕಮಾಂಡ್ ಕೋರ್ಸ್ನಲ್ಲಿ ಉತ್ತೀರ್ಣರಾದರು. 2001 ರಲ್ಲಿ, ಅವರು ರಾನಿಖೇತ್ನಲ್ಲಿರುವ ಕುಮಾನ್ ರೆಜಿಮೆಂಟ್ನಲ್ಲಿ ಲೆಫ್ಟಿನೆಂಟ್ ಆಗಿ ನೇಮಕಗೊಂಡರು.
ತ್ರಿಪಾಠಿ ಕುಟುಂಬ ಛತ್ತೀಸ್ಗಢದ ರಾಯಗಢದಿಂದ ಬಂದಿತ್ತು. "ಈ ವರ್ಷ ವಿಪ್ಲವ್ ಸೇರಿದಂತೆ ಇಡೀ ಕುಟುಂಬವು ಮಣಿಪುರದಲ್ಲಿ ದೀಪಾವಳಿಯನ್ನು ಆಚರಿಸಿದರು. ವಿಪ್ಲವ್ ಅವರ ಪೋಷಕರು ನವೆಂಬರ್ 6 ರಂದು ರಾಯಗಢಕ್ಕೆ ಮರಳಿದರು" ಎಂದು ಅವರ ತಾಯಿಯ ಚಿಕ್ಕಪ್ಪ ತಾಯಿ ರಾಜೇಶ್ ಪಟ್ನಾಯಕ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ಕರ್ನಲ್ ವಿಪ್ಲವ್ ತ್ರಿಪಾಠಿ ಅವರು ಕುಟುಂಬದೊಂದಿಗೆ ಫಾರ್ವರ್ಡ್ ಕ್ಯಾಂಪ್ಗೆ ಹೋಗಿದ್ದರು. ಹಿಂದಿರುಗುತ್ತಿದ್ದಾಗ ಅವರ ಬೆಂಗಾವಲು ಪಡೆ ಹೊಂಚು ಹಾಕಿ ಕೊಂದಿದೆ ಎಂದು ಮೂಲಗಳು ತಿಳಿಸಿವೆ. ಕರ್ನಲ್ ಅವರಿಗೆ ನ್ಯಾಯವನ್ನು ನೀಡಲಾಗುವುದು. ಪ್ರದೇಶದಲ್ಲಿ ಬೃಹತ್ ಕೂಂಬಿಂಗ್ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ ಎಂದು ಮಣಿಪುರ ಮುಖ್ಯಮಂತ್ರಿ ಬಿರೇನ್ ಸಿಂಗ್ ಹೇಳಿದ್ದಾರೆ.
ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಯೋಧರ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಉಗ್ರರ ಈ ಹೇಡಿತನದ ದಾಳಿ ನಿಜಕ್ಕೂ ನೋವು ತಂದಿದೆ ಮತ್ತು ಖಂಡನೀಯವಾಗಿದೆ. ಐವರು ವೀರ ಯೋಧರನ್ನು ಈ ದೇಶ ಇಂದು ಕಳೆದುಕೊಂಡಿದೆ. ಅದರಲ್ಲೂ ಕಮಾಂಡಿಂಗ್ ಅಧಿಕಾರಿಯ ಕುಟುಂಬವನ್ನು ಟಾರ್ಗೆಟ್ ಮಾಡಿದ್ದು ನಿಜಕ್ಕೂ ದುರಂತ. ಈ ಸಾವಿಗೆ ನ್ಯಾಯ ಒದಗಿಸದೆ ಸುಮ್ಮನಾಗುವುದಿಲ್ಲ ಎಂದಿದ್ದಾರೆ. ಮಣಿಪುರ ಮುಖ್ಯಮಂತ್ರಿ ಖಂಡನೆ ಈ ಉಗ್ರ ದಾಳಿಯನ್ನು ಮಣಿಪುರ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ತೀವ್ರವಾಗಿ ಖಂಡಿಸಿದ್ದಾರೆ. ಟ್ವೀಟ್ ಮಾಡಿರುವ ಅವರು, 46 ಅಸ್ಸಾಂ ರೈಫಲ್ಸ್ ಮೇಲೆ ಉಗ್ರರು ಹೇಡಿತನದಿಂದ, ಹೊಂಚು ಹಾಕಿ ದಾಳಿ ಮಾಡಿದ್ದು ಖಂಡನೀಯ. ಸಿಸಿಪುರ ಎಂಬಲ್ಲಿ ನಡೆದ ಈ ದಾಳಿಯಲ್ಲಿ ಕಮಾಂಡಿಂಗ್ ಅಧಿಕಾರಿ ಕರ್ನಲ್ ವಿಪ್ಲವ್ ತ್ರಿಪಾಠಿ ಮತ್ತವರ ಕುಟುಂಬವೂ ಹತ್ಯೆಗೀಡಾಗಿದೆ. ಯೋಧರು ಹುತಾತ್ಮರಾಗಿದ್ದಾರೆ.
ಉಗ್ರರನ್ನು ಸೆರೆ ಹಿಡಿಯಲು ರಾಜ್ಯದ ಭದ್ರತಾ ಪಡೆಗಳು ಮತ್ತು ಪ್ಯಾರಾಮಿಲಿಟರಿ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ತಪ್ಪಿತಸ್ಥರಿಗೆ ಶಿಕ್ಷೆ ಖಂಡಿತ ಆಗುತ್ತದೆ ಎಂದು ಹೇಳಿದ್ದಾರೆ.