ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಮಹತ್ಕಾರ್ಯ; ಬಡ ವಿದ್ಯಾರ್ಥಿನಿಗೆ ಹೊಸ ಸೂರಿನ ಆಶ್ರಯ
ಮಂಗಳೂರು, ಜು.1: ಸರ್ಕಾರಿ ಅಧಿಕಾರಿಗಳೆಂದರೆ ಜನರಿಗೆ ತಾತ್ಸರ ಭಾವನೆಯಿದೆ. ಐದಂಕಿಯ ಸಂಬಳ ಪಡೆದು ಸರಿಯಾಗಿ ಕೆಲಸ ಮಾಡಲ್ಲ. ಅತ್ತ ಕಡೆ ಸರ್ಕಾರಿ ಸಂಬಳ ಪಡೆದು,ಇತ್ತ ಲಂಚನೂ ಪಡೆದು ಹಣದ ಹೊಳೆಯಲ್ಲಿ ಮಿಂದೇಳುತ್ತಾರೆ ಎಂಬ ಭಾವನೆ ಇದೆ. ಆದರೆ, ಈ ಭಾವನೆಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಅವರ ತಂಡ ತೊಡೆದುಹಾಕಿದೆ. ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಸಿದ್ಧತೆಗಳನ್ನು ನೋಡಲು ಮನೆ ಮನೆಗೆ ತೆರಳಿದ ವೇಳೆ ಬಡ ವಿದ್ಯಾರ್ಥಿನಿಯ ಸಂಕಷ್ಟ ನೋಡಿ ಮರುಗಿ ಈಗ ಹೊಸ ಮನೆಗೆ ವಿದ್ಯಾರ್ಥಿನಿ ಕುಟುಂಬ ತೆರಳುವಂತೆ ಮಾಡಿದೆ.
ಪುತ್ತೂರಿನ ಪ್ರತಿಭಾವಂತ ಬಡ ವಿದ್ಯಾರ್ಥಿನಿಯೋರ್ವಳ ಮನೆಯನ್ನು ಶಿಕ್ಷಣ ಇಲಾಖೆಯ ಅಧಿಕಾರಿ ಹಾಗೂ ಶಿಕ್ಷಕರ ತಂಡ ಬೆಳಗಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಗರಸಭೆಯ ವ್ಯಾಪ್ತಿಯ ಪೆರ್ವತ್ತೋಡಿಯ ಸುನಂದಾ ಎನ್ನುವ ದಲಿತ ವಿಧವೆ ಮನೆಯಲ್ಲಿ ಕಿತ್ತು ತಿನ್ನುವ ಬಡತನವಿದ್ದರೂ ತನ್ನಿಬ್ಬರು ಹೆಣ್ಣುಮಕ್ಕಳಿಗೆ ವಿದ್ಯಾಭ್ಯಾಸ ಕೊಡುವ ಅಪ್ಪಟ ಛಲದಿಂದ ಬದುಕಿನ ಬಂಡಿಯ ನೊಗ ಹೊತ್ತಿದ್ದರು. ಸರಿಯಾಗಿ ಮನೆಯಿಲ್ಲದೇ ಜೋಪ ಹಾಕಿಕೊಂಡು ಜೀವನ ಸಾಗಿಸುತ್ತಿದ್ದರು. ಹೊಟ್ಟೆಗೆ ಬಟ್ಟೆ ಕಟ್ಟಿ ಎರಡು ಹೆಣ್ಣುಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುತ್ತಿದ್ದರು. ಮಕ್ಕಳ ವಿದ್ಯಾಭ್ಯಾಸಕ್ಕೆ ತಾಯಿ ಪಡುವ ಕಷ್ಟ ನೋಡಿ ಮರುಗಿದವರೇ ಹೆಚ್ಚಾದರೆ ಹೊರತು ಸಹಾಯಕ್ಕೆ ಯಾರೂ ಆಗಮಿಸಿರಲಿಲ್ಲ.
ಮಂಗಳೂರಿನಲ್ಲಿ ಭಾರೀ ಮಳೆ: ಬಸ್, ರೈಲು, ವಿಮಾನ ಸಂಚಾರದಲ್ಲಿ ವ್ಯತ್ಯಯ
ವಿದ್ಯಾರ್ಥಿಗಳ ಕಷ್ಟ-ಪರದಾಟ ಕಂಡ ಶಿಕ್ಷಣಾಧಿಕಾರಿ
ಕಳೆದ ವರ್ಷದ ಎಸ್ಎಸ್ಎಲ್ ಸಿ ಪರೀಕ್ಷೆ ಎದುರಿಸಲು ಸಿದ್ಧಳಾಗಿದ್ದ ಸುನಂದಾ ಅವರ ಎರಡನೇ ಮಗಳಾದ ಅನಿತಾ ಮನೆಗೆ ಎಸ್. ಎಸ್.ಎಲ್.ಸಿ ಪರೀಕ್ಷೆಯ ಸಿದ್ಧತೆಯನ್ನು ಪರಿಶೀಲಿಸಲೆಂದು ಪುತ್ತೂರು ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಹಾಗೂ ಪುತ್ತೂರಿನ ಕೊಂಬೆಟ್ಟು ಶಾಲೆಯ ಶಿಕ್ಷಕಿಯಾದ ಗೀತಾಮಣಿ ತಂಡ ಭೇಟಿ ನೀಡಿತ್ತು. ಭೇಟಿಯ ಸಂದರ್ಭದಲ್ಲಿ ಸುನಂದಾ ಹಾಗೂ ಆಕೆಯ ಮಕ್ಕಳು ಅನುಭವಿ ಸುತ್ತಿರುವ ಕಷ್ಟ, ಮಕ್ಕಳ ಓದಿಗಾಗಿ ಸುನಂದಾ ಅವರ ಪರದಾಟ ಕಂಡ ಶಿಕ್ಷಣಾಧಿಕಾರಿ ಹಾಗೂ ಶಿಕ್ಷಕರು ಅಂದೇ ಒಂದು ನಿರ್ಧಾರಕ್ಕೆ ಬಂದಿತ್ತು. ಅತ್ಯಂತ ಬಡತನದಿಂದ ಜೀವನ ಸಾಗಿಸುತ್ತಿದ್ದರೂ, ಮಕ್ಕಳ ಶಿಕ್ಷಣಕ್ಕಾಗಿ ಹೆಚ್ಚು ಒತ್ತು ನೀಡಿದ್ದ ಸುನಂದಾ, ಊರಲ್ಲಿ ಕೂಲಿ-ನಾಲಿ ಮಾಡಿ ಮಕ್ಕಳನ್ನು ಓದಿಸುತ್ತಿದ್ದರು.
ದಕ್ಷಿಣ ಕನ್ನಡದಲ್ಲಿ ಭಾರಿ ಮಳೆ: ಶಾಲಾ-ಕಾಲೇಜುಗಳ ರಜೆ ಘೋಷಿಸಿದ ಡಿಸಿ
ವಿದ್ಯುತ್ ಸಂಪರ್ಕವಿಲ್ಲ
ಮನೆಯಲ್ಲಿ ವಿದ್ಯುತ್ ಸಂಪರ್ಕವಿಲ್ಲದಿದ್ದರೂ, ಚಿಮಣಿ ದೀಪದ ಸಹಾಯದಿಂದ ಮಕ್ಕಳನ್ನು ಓದಿಸಿದ್ದ ಸುನಂದಾರ ಹಿರಿಮಗಳು ಲಾವಣ್ಯ ಪದವಿ ಮುಗಿಸಿ, ಬಿಎಡ್ ಮಾಡಿ ಇದೀಗ ಬೆಂಗಳೂರಿನ ಖಾಸಗಿ ಶಾಲೆಯಲ್ಲಿ ಅಧ್ಯಾಪಕಿಯಾಗಿ ದುಡಿಯುತ್ತಿದ್ದಾರೆ. ಎಸ್.ಎಸ್.ಎಲ್.ಸಿಯಲ್ಲಿ ಡಿಸ್ಟಿಂಕ್ಷನ್ ನಲ್ಲಿ ಪಾಸಾಗಿರುವ ಕಿರಿಮಗಳು ಅನಿತಾ ಇದೀಗ ಕೊಂಬೆಟ್ಟು ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪಿಯುಸಿ ಮೊದಲ ವರ್ಷದಲ್ಲಿ ಕಲಿಯುತ್ತಿದ್ದಾಳೆ.
ಗೃಹಪ್ರವೇಶಕ್ಕೆ ಸಜ್ಜಾಗಿರುವ ಮನೆ
ಸುನಂದಾ ತನ್ನ ಮಕ್ಕಳಿಗೆ ಈ ರೀತಿಯ ಬಡತನದಲ್ಲೂ ಶಿಕ್ಷಣ ನೀಡಿರುವ ವಿಚಾರವನ್ನು ಕಣ್ಣಾರೆ ಕಂಡ ಶಿಕ್ಷಣಾಧಿಕಾರಿ ಮತ್ತು ಕೊಂಬೆಟ್ಟು ಶಾಲೆಯ ಶಿಕ್ಷಕಿ ಗೀತಾಮಣಿ ಹಕ್ಕುಪತ್ರವಿಲ್ಲದ ಜಮೀನಿಗೆ ಹಕ್ಕುಪತ್ರವನ್ನು ಒದಗಿಸುವ ಕೆಲಸವನ್ನು ಮಾಡಿದ್ದಾರೆ. ಆ ಬಳಿಕ ರೋಟರಿ ಕ್ಲಬ್ ಸಹಾಯದೊಂದಿಗೆ ಇದೀಗ ಸುನಂದಾ ಕುಟುಂಬಕ್ಕೆ ಹೊಸ ಮನೆಯನ್ನೂ ನಿರ್ಮಿಸುತ್ತಿದ್ದು, ಮನೆ ಗೃಹಪ್ರವೇಶಕ್ಕೆ ಸಜ್ಜಾಗಿದೆ.
ಸುನಂದಾ ಅವರ ಪತಿ ಪ್ರತಿದಿನವೂ ಕುಡಿದು ಗಲಾಟೆ ಮಾಡುತ್ತಿದ್ದು, ಮನೆಯ ಹಾಗು ಮಕ್ಕಳ ಎಲ್ಲಾ ಜವಾಬ್ದಾರಿಯೂ ಸುನಂದಾ ಮೇಲಿತ್ತು. ಈ ನಡುವೆ ವರ್ಷದ ಹಿಂದೆ ಪತಿ ಕೂಡಾ ಕುಡಿದೂ ಕುಡಿದು ಸಾವನ್ನಪ್ಪಿದ ಬಳಿಕ ಇಬ್ಬರು ಹೆಣ್ಣು ಮಕ್ಕಳ ಜೊತೆ ಸುನಂದಾ ಭದ್ರತೆಯಿಲ್ಲದ ಜೋಪಡಿಯಲ್ಲಿ ವಾಸಿಸುವ ಸ್ಥಿತಿಯಿತ್ತು. ಈ ಸಂದರ್ಭದಲ್ಲಿ ಆಕೆಗೆ ಸಹಾಯ ಮಾಡುವುದಾಗಿ ಹಲವರು ಭರವಸೆಗಳನ್ನೇನೋ ನೀಡಿದ್ದರೂ, ಭರವಸೆ ಮಾತ್ರ ಭರವಸೆಯಾಗಿಯೇ ಉಳಿದಿತ್ತು. ಈ ನಡುವೆ ವಿದ್ಯಾರ್ಥಿನಿಯ ಶಿಕ್ಷಣದ ತಯಾರಿಯನ್ನು ವೀಕ್ಷಿಸಲು ಬಂದ ಶಿಕ್ಷಣ ಅಧಿಕಾರಿ ಮತ್ತು ಶಿಕ್ಷಕರ ತಂಡ ಸುನಂದಾರ ಸಂಕಷ್ಟಕ್ಕೆ ಸ್ಪಂದಿಸಿದೆ.
ಆಸೆ ಹೊತ್ತ ಸೂರಿಗೆ ಕಾಲಿಡುತ್ತಿದೆ ಕುಟುಂಬ
ಸುನಂದಾರ ಮಕ್ಕಳ ಶಿಕ್ಷಣದ ಇಂಗಿತದ ಜೊತೆಗೆ ಭವಿಷ್ಯದ ದಾರಿಯನ್ನೂ ಸುಭದ್ರಗೊಳಿಸಿದೆ. ನೀಡಿದ ಭರವಸೆಯನ್ನು ಒಂದೊಂದಾಗಿ ನೆರವೇರಿಸಿರುವ ಶಿಕ್ಷಣಾಧಿಕಾರಿ ಹಾಗು ಶಿಕ್ಷಕರ ಈ ಸ್ಪಂದನೆ ಹಾಗೂ ರೋಟರಿ ಕ್ಲಬ್ ಪದಾಧಿಕಾರಿಗಳ ನೆರವಿಗೆ ಭಾರೀ ಮೆಚ್ಚುಗೆಯೂ ವ್ಯಕ್ತವಾಗಿದೆ. ಜೋಪಡಿಯಲ್ಲಿದ್ದ ಸುನಂದಾ ಅವರ ಕುಟುಂಬ ಈಗ ಸುಂದರ ಭವಿಷ್ಯದ ಆಸೆ ಹೊತ್ತ ಸೂರಿಗೆ ಕಾಲಿಡುತ್ತಿದೆ.ಹೆಣ್ಣು ಮಕ್ಕಳನ್ನು ಓದಿಸಲು ಪಡಬಾರದ ಕಷ್ಟ ಪಟ್ಟ ಆ ಮಹಾತಾಯಿಯ ಜೀವನ ಮುಂದಿನ ನೆಮ್ಮದಿಯಿಂದ ಕೂಡಿರಲಿ ಅನ್ನೋದು ನಮ್ಮ ಆಶಯ.
Recommended Video