ಗಲಭೆ, ಬಾಂಬ್ ವಿವಾದ ; ಮಂಗಳೂರು ಪೊಲೀಸ್ ಆಯುಕ್ತ ಹರ್ಷ ಯಾರು?
ಮಂಗಳೂರು ನಗರದಲ್ಲಿ 2019ರ ಡಿಸೆಂಬರ್ನಲ್ಲಿ ನಡೆದ ಗಲಭೆ ಮತ್ತು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆಯಾದ ಪ್ರಕರಣದ ನಂತರ ಹೆಚ್ಚಾಗಿ ಕೇಳಿ ಬರುತ್ತಿರುವ ಮತ್ತು ಚರ್ಚೆಗೆ ಒಳಗಾಗಿರುವ ಹೆಸರು ಪಿ. ಎಸ್. ಹರ್ಷ.
2003ನೇ ಬ್ಯಾಚ್ ಐಪಿಎಸ್ ಅಧಿಕಾರಿ ಮತ್ತು ಪ್ರಸ್ತುತ ಮಂಗಳೂರು ನಗರದ ಪೊಲೀಸ್ ಆಯುಕ್ತರು ಪಿ. ಎಸ್. ಹರ್ಷ. ಕರ್ನಾಟಕದ ಮಟ್ಟಿಗೆ ಅತಿ ಸೂಕ್ಷ್ಮವಾದ ನಗರದ ಭದ್ರತೆಯ ಹೊಣೆಯನ್ನು ಹೊತ್ತುಕೊಂಡಿರುವ ಅಧಿಕಾರಿ ವೈದ್ಯರು ಮತ್ತು ಕನ್ನಡಿಗ ಎಂದರೆ ಹಲವು ಜನರಿಗೆ ಅಚ್ಚರಿಯಾದೀತು.
ಕುಮಾರಸ್ವಾಮಿ ಭೇಟಿ ಬಗ್ಗೆ ಮಂಗಳೂರು ಪೊಲೀಸ್ ಆಯುಕ್ತ ಹರ್ಷ ಟ್ವೀಟ್
ಪಿ. ಎಸ್. ಹರ್ಷರನ್ನು ಒಮ್ಮೆ ನೋಡಿದವರು ಇವರು ಉತ್ತರ ಭಾರತದವರು ಇರಬೇಕು ಎಂದು ಭಾವಿಸುವುದೇ ಹೆಚ್ಚು. ಆದರೆ, ಹರ್ಷ ಅಪ್ಪಟ್ಟ ಕನ್ನಡಿಗರು. ಮೂಲತಃ ಕೋಟೆನಾಡು ಚಿತ್ರದುರ್ಗದವರು. 2019ರ ಆಗಸ್ಟ್ನಿಂದ ಮಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.
ಮಂಗಳೂರು ಘಟನೆ: ಪೊಲೀಸರ ಬೆನ್ನು ತಟ್ಟಿದ ಸಚಿವ ಈಶ್ವರಪ್ಪ
ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ಡಿಸೆಂಬರ್ 19ರಂದು ಬೃಹತ್ ಪ್ರತಿಭಟನೆ ನಡೆಯಿತು. ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದಾಗ ಪೊಲೀಸರು ಗೋಲಿಬಾರ್ ನಡೆಸಿದರು. ಆಗ ಇಬ್ಬರು ಸಾವನ್ನಪ್ಪಿದರು. ಈ ಘಟನೆ ಬಳಿಕ ನಗರ ಪೊಲೀಸ್ ಆಯುಕ್ತರಾದ ಹರ್ಷ ಕುರಿತು ಚರ್ಚೆ ನಡೆಯುತ್ತಿದೆ.
ಆದಿತ್ಯರಾವ್ ಶರಣು; ಮಂಗಳೂರು ಪೊಲೀಸರು ಹೇಳಿದ್ದೇನು?
ಎಂಬಿಬಿಎಸ್ ಪದವಿ ಪಡೆದಿದ್ದಾರೆ
ಚಿತ್ರದುರ್ಗ ಮೂಲದ ಮೂಲದ ಪಿ. ಎಸ್. ಹರ್ಷ ಬೆಂಗಳೂರಿನ ಡಾ. ಅಂಬೇಡ್ಕರ್ ಕಾಲೇಜಿನಿಂದ 2001ರಲ್ಲಿ ಎಂಬಿಬಿಎಸ್ ಪದವಿ ಪಡೆದಿದ್ದಾರೆ. 2003ರಲ್ಲಿ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆ ಬರೆದು ಉತ್ತೀರ್ಣಗೊಂಡರು. 2004ರಲ್ಲಿ ಕರ್ನಾಟಕ ಕೇಡರ್ ಮೂಲಕ ಹೈದರಾಬಾದ್ ಮತ್ತು ಕಲಬುರಗಿಯಲ್ಲಿ ತರಬೇತಿ ಪಡೆದರು. ಪುತ್ತೂರಿನಲ್ಲಿ ಎಎಸ್ಪಿಯಾಗಿ ವೃತ್ತಿ ಜೀವನವನ್ನು ಆರಂಭಿಸಿದರು.
ವಿವಿಧ ಇಲಾಖೆಗಳಲ್ಲಿ ಕೆಲಸ
ಕೆಎಸ್ಟಿಡಿಸಿ ವ್ಯವಸ್ಥಾಪಕ ನಿರ್ದೇಶಕರಾಗಿ, ವಾರ್ತಾ ಇಲಾಖೆಯ ನಿರ್ದೇಶಕರಾಗಿ ಕೆಲಸ ಮಾಡಿದರು. ಎಸ್ಪಿಯಾಗಿ ವಿವಿಧ ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಣೆ ಮಾಡಿದರು. ಬೆಂಗಳೂರು ಈಶಾನ್ಯ ವಿಭಾಗದ ಡಿಸಿಪಿಯಾಗಿಯೂ ಕೆಲಸ ನಿರ್ವಹಣೆ ಮಾಡಿದ್ದಾರೆ.
ಆರೋಗ್ಯ ಕ್ಯಾಂಪ್, ಸಂವಾದ
ವಿವಿಧ ಇಲಾಖೆಯಲ್ಲಿ ಕೆಲಸ ಮಾಡುವಾಗ ಸಿಬ್ಭಂದಿಗಳನ್ನು ಗೌರವದಿಂದ ನೋಡಿಕೊಳ್ಳುತ್ತಿದ್ದರು. ಸ್ವತಃ ವೈದ್ಯ ಪದವಿ ಪಡೆದಿದ್ದ ಅವರು ಸಿಬ್ಭಂದಿಗಳ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿದ್ದರು. ಆರೋಗ್ಯ ಕ್ಯಾಂಪ್ಗಳನ್ನು ನಡೆಸುತ್ತಿದ್ದರು. ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಜೊತೆ ಸಂವಾದ ಕಾರ್ಯಕ್ರಮಗಳನ್ನು ಮಾಡಿದ್ದರು.
ಸಮಾಜಮುಖಿ ಅಧಿಕಾರಿ
ಈಶಾನ್ಯ ವಿಭಾಗದ ಡಿಸಿಪಿಯಾಗಿ ಕೆಲಸ ಮಾಡುವಾಗ ಬೆಂಗಳೂರು ವಿಮಾನ ನಿಲ್ದಾಣದ ಭದ್ರತೆ ಹೊಣೆ ಅವರ ಮೇಲಿತ್ತು. ತಮ್ಮ ವ್ಯಾಪ್ತಿಗೆ ಬರುವ ಐಟಿ ಕಂಪನಿಗಳ ಅಧಿಕಾರಿಗಳು, ವ್ಯವಸ್ಥಾಪಕರ ಜೊತೆ ಮಹಿಳಾ ಸುರಕ್ಷತೆಗೆ ತೆಗೆದುಕೊಂಡ ಕ್ರಮಗಳ ಬಗ್ಗೆ ಸಂವಾದ ನಡೆಸುತ್ತಿದ್ದರು. ಸಮಾಜದ ಬಗ್ಗೆ ಅಪಾರವಾದ ಕಾಳಜಿ ಇರುವ ಅಧಿಕಾರಿ ಇವರು.
ಮಂಗಳೂರು ಪೊಲೀಸ್ ಆಯುಕ್ತರು
2019ರ ಆಗಸ್ಟ್ನಿಂದ ಪಿ. ಎಸ್. ಹರ್ಷ ಮಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಕೆಲಸ ಮಾಡುತ್ತಿದ್ದಾರೆ. ಮಂಗಳೂರಿನಲ್ಲಿ ಡಿಸೆಂಬರ್ನಲ್ಲಿ ನಡೆದ ಗಲಭೆ ಮತ್ತು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆಯಾದ ಪ್ರಕರಣದ ಬಳಿಕ ಪ್ರತಿಪಕ್ಷಗಳ ಟಾರ್ಗೆಟ್ ಆಗಿದ್ದಾರೆ ಆಯುಕ್ತರು.