ನಿಗಿ ನಿಗಿ ಕೆಂಡವಾದ ಮಂಡ್ಯ ರಣಾಂಗಣದಲ್ಲಿ ಗೆಲ್ಲೋರು ಯಾರು?
Recommended Video
ಮಂಡ್ಯ, ಏಪ್ರಿಲ್ 16:ಮಂಡ್ಯ ಲೋಕಸಭಾ ಚುನಾವಣಾ ಕಣ ನಿಗಿನಿಗಿ ಕೆಂಡವಾಗಿದೆ. ಇಲ್ಲಿ ಹಲವರು ತಮ್ಮ ಮಾತಿನಲ್ಲಿಯೇ ಬೆಂಕಿಯನ್ನು ಉಗುಳುವ ಮೂಲಕ ಎದುರಾಳಿಗಳನ್ನು ಸದೆಬಡಿಯ ಬಹುದೆಂಬ ತೀರ್ಮಾನಕ್ಕೆ ಬಂದು ಬಿಟ್ಟಿದ್ದಾರೆ. ಹೀಗಾಗಿಯೇ ಮಾತಿನ ಸಮರಗಳು ರೋಚಕ ಘಟ್ಟವನ್ನು ತಲುಪಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಇಡೀ ರಾಜ್ಯವನ್ನು ಪ್ರತಿನಿಧಿಸಬೇಕಾಗಿದ್ದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ನಿಖಿಲ್ ತನ್ನ ಪುತ್ರ ಎಂಬ ಕಾರಣಕ್ಕೆ ಮಂಡ್ಯದಲ್ಲಿ ವಾಸ್ತವ್ಯ ಹೂಡಿ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ.
ಮಂಡ್ಯದಲ್ಲಿ ಸುಮಲತಾ ಸ್ವಾಭಿಮಾನಿ ಸಮಾವೇಶ: ವಿರೋಧಿಗಳಿಗೆ ನಡುಕ
ಈಗಾಗಲೇ ಬೇರೆ ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ ಮೈತ್ರಿ ಅಭ್ಯರ್ಥಿಗಳು ತಮ್ಮ ಪರ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬಂದು ಪ್ರಚಾರ ಮಾಡಿದರೆ ಒಂದಷ್ಟು ಅನುಕೂಲವಾಗುತ್ತಿತ್ತು ಎಂಬ ನಂಬಿಕೆಯಲ್ಲಿ ಇದ್ದರಾದರೂ ಅವರೆಲ್ಲರಿಗೂ ನಿರಾಸೆಯಾಗಿದೆ. ಮಂಡ್ಯದಲ್ಲಿ ತನ್ನ ಪುತ್ರನನ್ನು ಗೆಲ್ಲಿಸಲೇಬೇಕೆಂಬ ಹಠಕ್ಕೆ ಕುಮಾರಸ್ವಾಮಿ ಅವರು ಬಿದ್ದಿರುವ ಕಾರಣ ಇದು ಇತರೆ ಕ್ಷೇತ್ರಗಳ ಮೇಲೆ ಪರಿಣಾಮ ಬೀರಿದರೂ ಅಚ್ಚರಿ ಪಡಬೇಕಾಗಿಲ್ಲ.
ಬಿಜೆಪಿ, ಕಾಂಗ್ರೆಸ್, ಸಿಪಿಎಂ ಪ್ರಣಾಳಿಕೆಯ ತುಲನೆ. ಯಾವ ಪಕ್ಷದ ಪ್ರಣಾಳಿಕೆ ಉತ್ತಮವಾಗಿದೆ?
ಸುಮಲತಾ ಅವರು ಸ್ವತಂತ್ರ ಅಭ್ಯರ್ಥಿ ಎನ್ನುತ್ತಿದ್ದ ಎದುರಾಳಿಗಳು ಅವರ ಪ್ರಚಾರ ಕಾರ್ಯಕ್ರಮಗಳಲ್ಲಿ ಕಾಂಗ್ರೆಸ್, ಬಿಜೆಪಿ ಬಾವುಟಗಳು ಕಾಣಿಸಿಕೊಂಡಾಗ ಅಷ್ಟೊಂದಾಗಿ ತಲೆಕೆಡಿಸಿಕೊಂಡಿರಲಿಲ್ಲ. ಆದರೆ ಮೋದಿ ಸುಮಲತಾ ಅವರನ್ನು ಬೆಂಬಲಿಸಬೇಕು ಎಂಬ ಹೇಳಿಕೆ ನೀಡಿದ ತಕ್ಷಣದಿಂದಲೇ ವರಸೆಗಳು ಬದಲಾಗಿ ಹೋಯಿತು.
ಮಾತಿನ ದಿಕ್ಕನ್ನೇ ಬದಲಾಯಿಸಿಬಿಟ್ಟರು
ತಮ್ಮ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಮತ ಕೇಳಬೇಕಾದವರು ಮಾತಿನ ದಿಕ್ಕನ್ನೇ ಬದಲಾಯಿಸಿಬಿಟ್ಟರು. ಸುಮಲತಾ ಅವರ ಬಗ್ಗೆ ಹಗುರವಾಗಿ ಮಾತನಾಡಲು ಆರಂಭಿಸಿದರು. ಅಂಬರೀಶ್ ಅವರ ಸಾವಿನ ರಾಜಕಾರಣವನ್ನು ಮಾಡತೊಡಗಿದರು. ಬಿಜೆಪಿ ಬೆಂಬಲಿತ ಅಭ್ಯರ್ಥಿ ಎಂದೇ ಸಂಬೋಧಿಸುವ ಮೂಲಕ ಸ್ವತಂತ್ರ ಅಭ್ಯರ್ಥಿ ಸುಮಲತಾ ಅವರ ಶಕ್ತಿಯನ್ನು ಕುಂದಿಸುವ ಕೆಲಸವೂ ನಡೆಯುತ್ತಿದೆ. ಆದರೆ ರಾಜಕೀಯದಲ್ಲಿ ಇದೆಲ್ಲ ಇದ್ದದ್ದೇ ಎನ್ನುವುದನ್ನು ನಾವು ಒಪ್ಪಿಕೊಳ್ಳಲೇಬೇಕಾಗಿದೆ. ಮಂಡ್ಯದಲ್ಲಿ ಬಿಜೆಪಿಯನ್ನು ದುರ್ಬಲಗೊಳಿಸುವ ಮಹತ್ವಾಕಾಂಕ್ಷೆಯೊಡನೆ ಕಾಂಗ್ರೆಸ್-ಜೆಡಿಎಸ್ ಒಗ್ಗಟ್ಟಿನ ಹೋರಾಟಕ್ಕೆ ಮುಂದಾಗಿದ್ದವು. ಆದರೆ, ಮಂಡ್ಯ ಕ್ಷೇತ್ರದಲ್ಲಿ ಯಾವಾಗ ಸುಮಲತಾ ಅವರು ಕಣಕ್ಕಿಳಿದ ಬಳಿಕ ಮೈತ್ರಿಗೆ ಮಾರಕ ವಾತಾವರಣ ನಿರ್ಮಾಣವಾಯಿತು. ಜತೆಗೆ ಬಿಜೆಪಿ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಸುಮಲತಾ ಅವರಿಗೆ ಬೆಂಬಲ ನೀಡಿದ್ದು ದಳಪತಿಗಳು ಮುಗಿ ಬೀಳಲು ಕಾರಣವಾಯಿತು.
ಪರಿಸ್ಥಿತಿಯೇ ಬದಲಾಗಿ ಹೋಗಿದೆ
ಒಂದು ವೇಳೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಇಲ್ಲಿ ಬಲವಾಗಿದ್ದಿದ್ದರೆ ಸುಮಲತಾ ಅವರಿಗೆ ಕಷ್ಟವಾಗಿರೋದು ಜತೆಗೆ ನಿಖಿಲ್ ಕುಮಾರಸ್ವಾಮಿ ಸುಲಭವಾಗಿ ಗೆಲ್ಲಬಹುದಿತ್ತು. ಆದರೆ ಪರಿಸ್ಥಿತಿಯೇ ಬದಲಾಗಿ ಹೋಗಿದೆ. ಇಲ್ಲಿ ರಾಷ್ಟ್ರೀಯ ಎದುರಾಳಿ ಪಕ್ಷಗಳಾದ ಕಾಂಗ್ರೆಸ್-ಬಿಜೆಪಿ ಒಗ್ಗೂಡಿ ಸುಮಲತಾ ಅವರನ್ನು ಬೆಂಬಲಿಸಲು ಮುಂದಾಗಿರುವುದು ಇದೀಗ ಇಡೀ ರಾಜ್ಯ ಮಾತ್ರವಲ್ಲ ದೇಶದ ಜನರೇ ಇತ್ತ ನೋಡುವಂತಾಗಿದೆ. ಜತೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಧಾನದ ನಡುವೆಯೂ ಕಾಂಗ್ರೆಸ್ನ ಪ್ರಬಲ ನಾಯಕರಾದ ಎನ್.ಚಲುವರಾಯಸ್ವಾಮಿ, ಪಿ.ಎಂ. ನರೇಂದ್ರಸ್ವಾಮಿ, ಕೆ.ಬಿ. ಚಂದ್ರಶೇಖರ್ ಇತರರು ಮೈತ್ರಿ ಅಭ್ಯರ್ಥಿಯ ಪರವಾದ ಪ್ರಚಾರದಲ್ಲಿ ಎಲ್ಲಿಯೂ ಕಾಣಿಸಿಕೊಂಡಿಲ್ಲದಿರುವುದು ಸಿದ್ದರಾಮಯ್ಯ ಅವರ ಮಾತಿಗೂ ಕಿಮ್ಮತ್ತು ಇಲ್ಲ ಎಂಬುದನ್ನು ಸಾಬೀತು ಮಾಡಿದೆ.
ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಸುಮಲತಾ, ನಿಖಿಲ್ ಪ್ಲಸ್-ಮೈನಸ್ ಗಳೇನು?
ಕಾಂಗ್ರೆಸ್ ಪಕ್ಷದ ಧ್ವಜ ಕಾಣಿಸುತ್ತಿದೆ
ಕಾಂಗ್ರೆಸ್ನ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಕೆ.ಆರ್.ನಗರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸಾಂಕೇತಿಕವಾಗಿ ಪಾಲ್ಗೊಳ್ಳುವ ಮೂಲಕ ತಾಂತ್ರಿಕವಾಗಿ ಕಾಂಗ್ರೆಸ್ ಪಕ್ಷದಲ್ಲೇ ಇರುವುದಾಗಿ ಮತ್ತು ಮೈತ್ರಿಯ ಬೆಂಬಲಕ್ಕೆ ನಿಂತಿರುವುದಾಗಿ ಪ್ರದರ್ಶಿಸಿಕೊಂಡಿದ್ದರೂ ಇದೀಗ ಮೌನಕ್ಕೆ ಶರಣಾಗಿರುವುದು ಅಚ್ಚರಿಗೆ ಕಾರಣವಾಗಿದೆ.ಅತ್ತ ಸಿದ್ದರಾಮಯ್ಯ ಅವರು ಬಿಜೆಪಿ ಬೆಂಬಲಿತ ಸುಮಲತಾ ಅವರಿಗೆ ಮತ ನೀಡ ಬೇಡಿ ಎಂದು ಕಾಂಗ್ರೆಸ್ ಕಾರ್ಯಕರ್ತರಿಗೆ ಬಹಿರಂಗವಾಗಿ ಹೇಳಿಕೆ ನೀಡಿದ್ದರೂ ಸುಮಲತಾ ಅವರ ಪ್ರಚಾರದಲ್ಲಿ ಕಾಂಗ್ರೆಸ್ ಪಕ್ಷದ ಧ್ವಜ ಕಾಣಿಸುತ್ತಿದೆ.
ಅಲ್ಲಿಯೂ ವಿಭಜನೆಯಾಗುವ ಸಾಧ್ಯತೆಯಿದೆ
ಒಕ್ಕಲಿಗ ಸಮುದಾಯವೇ ಶೇ. 45 ರಷ್ಟಿರುವುದೇ ಜೆಡಿಎಸ್ ಅಭ್ಯರ್ಥಿಗೆ ಧೈರ್ಯ ತಂದರೂ ಈ ಬಾರಿ ಅಲ್ಲಿಯೂ ವಿಭಜನೆಯಾಗುವ ಸಾಧ್ಯತೆಯೂ ಇದೆ. ಜತೆಗೆ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಮತ್ತು ಲಿಂಗಾಯತ ಸಮುದಾಯದ ಮತದಾರರು ಇಲ್ಲಿರುವುದರಿಂದ ಅವರ ಮತಗಳು ಕೂಡ ನಿರ್ಣಾಯಕವಾಗಲಿವೆ. ಇಲ್ಲಿ ಒಟ್ಟು 17,10,901ಮತದಾರರಿದ್ದು, ಅವರ ಚಿತ್ತ ಯಾರತ್ತ ಎನ್ನುವುದೇ ನಿಗೂಢವಾಗಿದೆ.