ಮೊನ್ನೆ ಮೋದಿ, ನಿನ್ನೆ ಶಾ ಭೇಟಿ: ಹಮ್ಮು ತೊರೆದರೇ ದೀದಿ?
ಕೊಲ್ಕತ್ತಾ, ಸೆಪ್ಟೆಂಬರ್ 20: ರಾಜಕೀಯದಲ್ಲಿ ಶಾಶ್ವತ ಮಿತ್ರರೂ ಇಲ್ಲ, ಶತ್ರುಗಳೂ ಇಲ್ಲ ಎಂಬ ಮಾತಿಗೆ ಪುಷ್ಠಿ ಸಿಗುವಂಥ ಬೆಳವಣಿಗೆ ದಿನ ದಿನವೂ ನಡೆಯುತ್ತದೆ. ಅದಕ್ಕೆ ಅತ್ಯುತ್ತಮ ಉದಾಹರಣೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದು, ಮತ್ತು ನಿನ್ನೆ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿದ್ದು.
ಪ್ರಧಾನಿಯನ್ನು, ಕೇಂದ್ರ ಗೃಹ ಸಚಿವರನ್ನು ರಾಜ್ಯವೊಂದರ ಮುಖ್ಯಮಂತ್ರಿ ಭೇಟಿಯಾಗುವುದು ಅಚ್ಚರಿಯ ವಿಷಯವಲ್ಲ. ಆದರೆ ಮಮತಾ ಬ್ಯಾನರ್ಜಿ ವಿಷಯದಲ್ಲಿ ಇದು ಮಾಮೂಲಿ ಸಂಗತಿಯಲ್ಲವೇ ಅಲ್ಲ.
ಲೋಕಸಭೆ ಚುನಾವಣೆಗೂ ಮುನ್ನ ಮಮತಾ ಬ್ಯಾನರ್ಜಿ ಅವರು ಪ್ರಧಾನಿ ಮೋದಿ ಅವರ ವಿರುದ್ಧ ಮಾಡಿದ ಟೀಕೆಗಳು ಮತ್ತು ಅದಕ್ಕೆ ಮೋದಿ ಪ್ರತಿಕ್ರಿಯಿಸಿದ ರೀತಿಯನ್ನು ನೆನಪಿಸಿಕೊಂಡರೆ, ಮುಂದೊಮ್ಮೆ ಈ ಇಬ್ಬರು ನಾಯಕರೂ ಮುಖಾಮುಖಿಯಾಗುವುದೇ ಅನುಮಾನ ಎಂಬಂಥ ಸ್ಥಿತಿ ಇತ್ತು.
ದ್ವೇಷ ಮರೆತ ದೀದಿ: ಪ್ರಧಾನಿ ಮೋದಿಗೆ ಕುರ್ತಾ ಉಡುಗೊರೆ
ಆದರೆ ಹಮ್ಮು ಮರೆತು ದೀದಿ ಕೇಂದ್ರದ ನಾಯಕರನ್ನು ಭೇಟಿ ಮಾಡುತ್ತಿದ್ದಾರೆ. ತಮ್ಮ ರಾಜ್ಯಕ್ಕೆ ಕೇಂದ್ರದ ಕಡೆಯಿಂದ ಆಗಬೇಕಾದ ನೆರವನ್ನು ಮುಲಾಜಿಲ್ಲದೆ ಕೇಳುತ್ತಿದ್ದಾರೆ.
ಮೋದಿ ಭೇಟಿ
ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ಮಮತಾ ಬ್ಯಾನರ್ಜಿ, ಅವರಿಗೆ ಖುರ್ತಾ ನೀಡಿ, ಕುಶಲೋಪರಿ ವಿಚಾರಿಸಿದರು. ನಂತರ ಪಶ್ಚಿಮ ಬಂಗಾಳದ ಹೆಸರನ್ನು ಬಾಂಗ್ಲಾ ಎಂದು ಬದಲಿಸುವ ಪ್ರಸ್ತಾವನೆಯನ್ನು ಅವರ ಮುಂದಿಟ್ಟರು.
ಅಮಿತ್ ಶಾ ಭೇಟಿ
ಗುರವಾರ ಗೃಹಸಚಿವ ಅಮಿತ್ ಶಾ ಅವರನ್ನು ಭೇಟಿಯಾದ ಮಮತಾ ಬ್ಯಾನರ್ಜಿ ಎನ್ ಆರ್ ಸಿ ಬಗ್ಗೆ ಮಾತುಕತೆ ನಡೆಸಿದರು. ಎನ್ ಆರ್ ಸಿ ಪಟ್ತಿಯಿಂದ 19 ಲಕ್ಷ ಜನರ ಹೆಸರು ಕೈಬಿಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ಶಾ ಅವರ ಬಳಿ ದೀದಿ ಮಾತುಕತೆ ನಡೆಸಿದರು.
ಕುತೂಹಲದ ನಡೆ: ಮೋದಿ ಭೇಟಿಗೂ ಮುನ್ನ ಅವರ ಪತ್ನಿಯ ಭೇಟಿಯಾದ ದೀದಿ!
ಶಾ-ದೀದಿ ಯುದ್ಧ
ಲೋಕಸಬೆ ಚುನಾವಣೆಯ ಸಂದರ್ಭದಲ್ಲಿ ಪಶ್ಚಿಮ ಬಂಗಾಳದಲ್ಲಿ ಅಮಿತ್ ಶಾ ಹಲವು ಸಮಾವೇಶಗಳನ್ನು ನಡೆಸಿದ್ದರು. ಆದರೆ ಅಮಿತ್ ಶಾ ಅವರು ಪಶ್ಚಿಮ ಬಂಗಾಳಕ್ಕೆ ಚುನಾವಣಾ ಸಮಾವೇಶಕ್ಕೆಂದು ತೆರಳುವ ಸಂದರ್ಭದಲ್ಲಿ ಆವರ ಹೆಲಿಕಾಪ್ಟರ್ ಇಳಿಯಲು ದೀದಿ ಅವಕಾಶ ನೀಡದೆ ಇದ್ದಿದ್ದು ವಿವಾದ ಸೃಷ್ಟಿಸಿತ್ತು. ಅಮಿತ್ ಶಾ ಭಾಗವಹಿಸಿದ್ದ ಮತ್ತೊಂದು ಸಮಾವೇಶದಲ್ಲಿ ಬಿಜೆಪಿ, ಟಿಎಂಸಿ ಕಾರ್ಯಕರ್ತರ ನಡುವೆ ನಡೆದ ಹಿಂಸಾಚಾರದಲ್ಲಿ ಅಮಿತ್ ಶಾ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದರು. ಈ ಸಂದರ್ಭದಲ್ಲಿ ಸಮಾಜ ಸುಧಾರಕ ಈಶ್ವರಚಂದ್ರ ವಿದ್ಯಾಸಾಗರ ಅವರ ಪ್ರತಿಮೆಯನ್ನು ಭಗ್ನಗೊಂಡ ಘಟನೆ ಸಾಕಷ್ಟು ಸುದ್ದಿ ಮಾಡಿತ್ತು.
ಮೋದಿ-ದೀದಿ ಜಟಾಪಟಿ
ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ನಿರಂತರವಾಗಿ ಟೀಕಾ ಪ್ರಹಾರವನ್ನೇ ನಡೆಸಿದ್ದ ಮಮತಾ ಬ್ಯಾನರ್ಜಿ, 'ಮೋದಿಯವರಿಗೆ ಪ್ರಜಾಪ್ರಭುತ್ವದ ಕಪಾಳಮೋಕ್ಷ ನೀಡಬೇಕು, ಅವರಿಗೆ ಕಲ್ಲು ಮಣ್ಣಿನ ರಸಗುಲ್ಲ ಕಳಿಸುತ್ತೇನೆ, ಮೋದಿ ಅಂದ್ರೆ ದುರಹಂಕಾರ" ಎಂಬೆಲ್ಲ ಹೇಳಿಕೆ ನೀಡಿದ್ದರು. ಲೋಕಸಭೆ ಚುನಾವಣೆಯ ನಂತರ ಮೋದಿಯವರ ಪ್ರಮಾಣವಚನಕ್ಕೂ ದೀದಿ ತೆರಳಿರಲಿಲ್ಲ.