ಬಿಜೆಪಿಯ ಗೆಲುವಿಗೆ ಪಣತೊಟ್ಟವರಲ್ಲಿ ಮಮತಾ ಬ್ಯಾನರ್ಜಿಗೆ ಅಗ್ರಸ್ಥಾನ!
ಕೋಲ್ಕತ್ತಾ, ಜೂನ್ 06: ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಅಭೂತಪೂರ್ವ ಗೆಲುವಿಗೆ ಕಾರಣವಾಗಿದ್ದು ಮಮತಾ ಬ್ಯಾನರ್ಜಿ ಎಂದು ಸಿಎಸ್ ಡಿಎಸ್ -ಲೋಕನೀತಿ ಚುನಾವಣೋತ್ತರ ಸಮೀಕ್ಷೆಯ ಅಂಕಿ-ಅಂಶಗಳು ಸಾಬೀತುಪಡಿಸಿವೆ.
18(42) ಸ್ಥಾನಗಳನ್ನು ಗೆದ್ದ ಬಿಜೆಪಿ ಮಮತಾ ಬ್ಯಾನರ್ಜಿ ಅವರ ಟಿಎಂಸಿ(22)ಗಿಂತ ಕೇವಲ 4 ಸ್ಥಾನಗಳಲ್ಲಿ ಹಿಂದುಳಿದಿದೆ. ಅಷ್ಟೇ ಅಲ್ಲ, ಶೇ.37.4 ರಷ್ಟು ಮತಹಂಚಿಕೆಯ ಮೂಲಕ ಬಿಜೆಪಿ 2014ಕ್ಕೆ ಹೋಲಿಸಿದರೆ ಶೇ.31 ಪಟ್ಟು ಹೆಚ್ಚು ಮತಪಡೆದಿತ್ತು. ಇದು ಮಮತಾ ಬ್ಯಾನರ್ಜಿ ಅವರಿಗೆ ಎಚ್ಚರಿಕೆಯ ಗಂಟೆಯೂ ಆಯಿತು.
ಪಶ್ಚಿಮ ಬಂಗಾಳದಲ್ಲಿ ಅಚ್ಚರಿ, ಮತದಾರನ ಚಿತ್ತ 'ಎಡದಿಂದ ಬಲ'ಕ್ಕೆ!
ಲೋಕಸಭೆ ಚುನಾವಣೆಯ ಸಮಯದಲ್ಲಿ ಪ್ರಚಾರದ ಹೆಸರಿನಲ್ಲಿ ಮಮತಾ ಬ್ಯಾನರ್ಜಿ ಅವರು ಬಿಜೆಪಿ ವಿರುದ್ಧ ಮಾಡಿದ ನಿರಂತರ ವಾಗ್ದಾಳಿ, ಪ್ರಧಾನಿ ಹುದ್ದೆಯ ಘನತೆಯನ್ನೂ ಮರೆತು, ನರೇಂದ್ರ ಮೋದಿ ಅವರ ವಿರುದ್ಧ ಮಾಡಿದ ಟೀಕೆಗಳು ಜನರ ಮೇಲೆ ಪರಿಣಾಮ ಬೀರಿದ್ದೇ ಬೇರೆ ರೀತಿ.
ಮತದಾರರಲ್ಲಿ ಆ ಹೇಳಿಕೆಗಳು ಪ್ರಧಾನಿ ಮೇಲೆ, ಬಿಜೆಪಿ ಮೇಲೆ ಬೇಸರ ಮೂಡಿಸಿದ್ದಕ್ಕಿಂತ ಹೆಚ್ಚಾಗಿ ಮುಖ್ಯಮಂತ್ರಿ ಹುದ್ದೆಯ ಘನತೆ ಮರೆತು ಮಾತನಾಡಿದ ಮಮತಾ ದೀದಿ ಮೇಲೆ ಬೇಸರ ಹುಟ್ಟಿಸಿತ್ತು.
ದೀದಿ ಬಗ್ಗೆ ಜನರಲ್ಲಿ ಹತಾಶೆ ಮೂಡಿಸಿದ ಘಟನೆಗಳು!
ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಂದರ್ಶನ ಮಾಡಿದ್ದ ಸಮಯದಲ್ಲಿ, "ಮಮತಾ ಬ್ಯಾನರ್ಜಿ ನನಗೆ ಪ್ರತಿವರ್ಷ ಖುರ್ತಾ ಮತ್ತು ರಸಗುಲ್ಲಾ ಕಳಿಸತ್ತಾರೆ" ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಅದಕ್ಕೆ ಪ್ರತಿಕ್ರಿಯೆ ನೀಡಿದ್ದ ದೀದಿ, ಮೋದಿಗೆ ಕಲ್ಲು-ಮಣ್ಣಿನ ರಸಗುಲ್ಲ ಕಳಿಸುತ್ತೇನೆ ಎಂಬ ಬಾಲಿಶ ಹೇಳಿಕೆ ನೀಡಿದ್ದರು. ಆದರೆ ಆ ಹೇಳಿಕೆಗೆ ಪ್ರತಿಕ್ರಿಯೆ ನೀಡುವಾಗಲೂ ಬಂಗಾಳದ ಜನರ ವಿಶ್ವಾಸ ಗಿಟ್ತಿಸಿಕೊಳ್ಳುವಲ್ಲಿ ಸಫಲರಾದ ಮೋದಿ, ''ಪರವಾಗಿಲ್ಲ ದೀದಿ, ನೀವು ಕಲ್ಲು-ಣ್ಣಿನ ರಸಗುಲ್ಲ ಕಳಿಸಿದರೂ ನಾನು ತೃಪ್ತಿಯಿಂದ ತಿನ್ನುತ್ತೇನೆ. ಏಕೆಂದರೆ ಬಂಗಾಳದ ಕಲ್ಲು-ಮಣ್ಣಿನಲ್ಲೂ ಸಿಹಿ ಇದೆ" ಎಂದುಬಿಟ್ಟಿದ್ದರು. ಇದು ಬಂಗಾಳದ ಮಣ್ಣನ ಮಕ್ಕಳಲ್ಲಿ ಮೋದಿ ಬಗೆಗಿನ ಗೌರವವನ್ನು ಹೆಚ್ಚಿಸಿತ್ತು.
ಅಯೋಗ್ಯ ಪ್ರಧಾನಿ
ಪ್ರಧಾನಿ ಮೋದಿ ಹಿಟ್ಲರ್ ನ ತಾನ ಇದ್ದ ಹಾಗೆ. ಅವರೊಬ್ಬ ಅಯೋಗ್ಯ ಪ್ರಧಾನಿ ಎಂದು ಮಮತಾ ಬ್ಯಾನರ್ಜಿ ಹೇಳಿದ್ದರು.
ಮತ್ತೊಮ್ಮೆ ಪ್ರಚಾರದ ಸಮಯದಲ್ಲಿ ಮಾತನಾಡುತ್ತ, "ಈ ದೇಶಕ್ಕಾಗಿ ಪ್ರಾಣ ತೆತ್ತವರಿಗೆ ಗೌರವ ನೀಡುವುದು ನಿಮಗೆ ಗೊತ್ತಿಲ್ಲ. ರಾಜೀವ್ ಗಾಂಧಿ ಅವರನ್ನು ನೀವು ಭ್ರಷ್ಟ ಪ್ರಧಾನಿ ಎಂದಿರಿ. ಈಗ ನನ್ನನ್ನು 'ತೋಲಬಾಜಿ' ಎಂದು ಕರೆದಿದ್ದೀರಿ. ನಾನು ತೋಲಬಾಜಿಯಾದರೆ ನೀವು ಯಾರು? ನೀವು ಯಾರು ಹೇಳಿ? ನಿಮ್ಮ ಇಡೀ ದೇಹವೂ-ಅಡಿಯಿಂದ ಮುಡಿಯವರೆಗೆ ರಕ್ತಮಯವಾಗಿದೆ. ಜನರ ರಕ್ತದಿಂದ ನಿಮ್ಮ ದೇಹ ತೊಯ್ದಿದೆ. ನಿಮಗೆ ಗೊತ್ತಿರುವುದು ಕೇವಲ ಧಂಗೆ, ಧಂಗೆ ಮತ್ತು ಧಂಗೆ" ಎಂದಿದ್ದರು.
'ನಮ್ಮ ತಂಟೆಗೆ ಬಂದ್ರೆ ಮುಗಿಸಿಬಿಡ್ತೀವಿ!' ಹೂಂಕರಿಸಿದ ಮಮತಾ ಬ್ಯಾನರ್ಜಿ
ಸರ್ವಾಧಿಕಾರಿ ವರ್ತನೆ
ಅಕ್ಷರಶಃ ಸರ್ವಾಧಿಕಾರಿಯಂತೇ ವರ್ತಿಸಿದ್ದ ಮಮತಾ ಬ್ಯಾನರ್ಜಿ ತಮ್ಮ ಎಡಿಟೆಡ್ ಚಿತ್ರವನ್ನು ಫೇಸ್ ಬುಕ್ ನಲ್ಲಿ ಹಂಚಿದ್ದ ಬಿಜೆಪಿ ನಾಯಕಿಯನ್ನು ಬಂಧಿಸುವಂತೆ ಆಜ್ಞೆ ಮಾಡಿದ್ದರು. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಹೆಲಿಕಾಪ್ಟರ್ ಲ್ಯಾಂಡ್ ಆಗಲು ಅವಕಾಶ ನೀಡದೆ ಬಿಜೆಪಿ ನಾಯಕರ ಗೆಂಗಣ್ಣಿಗೆ ಗುರಿಯಾಗಿದ್ದರು. ಫೋನಿ ಚಂಡಮಾರುತದ ನಂತರದ ಸ್ಥಿತಿಗತಿ ತಿಳಿಯಲು ಕರೆ ಆಡಿದ ಮೋದಿ ಅವರ ಕರೆಯನ್ನು ಎರಡು ಬಾರಿ ರಿಸೀವ್ ಮಾಡದೆ ಉದ್ಧಟತನ ಮೆರೆದಿದ್ದರು.
ಈಗಲೂ ತಿದ್ದಿಕೊಳ್ಳದ ದೀದಿ !
ಲೋಕಸಭೆ ಚುನಾವಣೆಗೂ ಮುನ್ನ ಪ್ರಚಾರದ ಹುಮ್ಮಸ್ಸಲ್ಲಿ ನಾಲ್ಕು ಮಾತು ಬರುತ್ತದೆ, ಹೋಗುತ್ತದೆ. ಚುನಾವಣೆ ಮುಗಿದ ಮೇಲೆ ಆ ಮಾತಿಗೆಲ್ಲ ಪ್ರಸ್ತುತತೆ ಇರುವುದಿಲ್ಲ ಎಂದು ಮಮತಾ ಬ್ಯಾನರ್ಜಿ ಸುಮ್ಮನಾಗಲಿಲ್ಲ. ಚುನಾವಣೆಯ ನಂತರವೂ ಅವರು ವಿರೋಧಿಗಳ ಮೇಲೆ ಅದೇ ರೀತಿಯ ವಾಗ್ದಾಳಿ, ರೋಷಾವೇಶದ ವರ್ತನೆ ತೋರುತ್ತಲೇ ಇದ್ದಾರೆ. ಜೈ ಶ್ರೀರಾಮ್ ಘೋಷಣೆಗೆ ಅಡ್ಡಿ, ಬಿಜೆಪಿ ಕಚೇರಿಗೆ ತೆರಳಿ ಟಿಎಂಸಿ ಚಿನ್ಹೆ ಬಿಡಿಸಿದ್ದು... ಇತ್ಯಾದಿ ವರ್ತನೆಗಳಿಂದ ರಾಜಕೀಯದಾಚೆ ವೈಯಕ್ತಿಕ ದ್ವೇಶದ ಹಾದಿಯಲ್ಲಿ ನಡೆಯತೊಡಗಿದ್ದಾರೆ. ಅದು ಅವರ ರಾಜಕೀಯ ಭವಿಷ್ಯಕ್ಕೇ ಮುಳುವಾಗುವ ಎಲ್ಲಾ ಲಕ್ಷಣಗಳೂ ಕಾಣಿಸುತ್ತಿವೆ.
ವಿಡಿಯೋ: ಬಿಜೆಪಿ ಕಚೇರಿ ಬಾಗಿಲು ಮುರಿದು ಟಿಎಂಸಿ ಚಿಹ್ನೆ ಬಿಡಿಸಿದ ದೀದಿ!