ಸಿಯಾಚಿನ್ ಮೃತ್ಯುಕೂಪದ ಬದಲು ಮಿಲಿಟರಿ ಮುಕ್ತ ತಾಣವಾಗಲಿ
ವಿಶ್ವದ ಅತಿ ಎತ್ತರದ ಹಾಗೂ ಅತ್ಯಂತ ದುಬಾರಿ ವೆಚ್ಚದ ಯುದ್ಧ ಭೂಮಿಯಾಗಿರುವ ಸಿಯಾಚಿನ್ ನಿರ್ಗಲ್ಲು ಪ್ರದೇಶವು ಭಾರತ ಹಾಗೂ ಪಾಕಿಸ್ತಾನದ ಯೋಧರ ಮೃತ್ಯುಕೂಪವಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ನೆಲೆಸಲು ಹರಸಾಹಸ ಪಟ್ಟ ಅಮಿತ್ ಶಾ- ನರೇಂದ್ರ ಮೋದಿ ಜೋಡಿ ಈಗ ಸಿಯಾಚಿನ್ ಪ್ರದೇಶವನ್ನು ಮಿಲಿಟರಿ ಮುಕ್ತ ತಾಣವನ್ನಾಗಿಸಲಿ, ಇಲ್ಲಿ ಹುತಾತ್ಮರಾಗಿ ನಮ್ಮ ಇಂದಿನ ನಾಳೆಯ ಬದುಕಿಗೆ ಬೆಳಕಾದ ಅಸಂಖ್ಯ ಯೋಧರ ಸಾವಿಗೆ ಬೆಲೆ ತರಲಿ, ಇಡೀ ವಿಶ್ವಕ್ಕೆ ಅಲಿಪ್ತ ನೀತಿ ಬೋಧಿಸುವ, ಶಾಂತಿ ಮಂತ್ರ ಪಠಿಸುವ ಭಾರತವು ಈ ಹೊಸ ಹೆಜ್ಜೆ ಮೂಲಕ ಜಾಗತಿಕವಾಗಿ ಗುರು ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಲಿ ಎಂಬುದು ಈ ಲೇಖನದ ಆಶಯ, ಉದ್ದೇಶ.
Recommended Video
ಸಮುದ್ರಮಟ್ಟದಿಂದ ಸುಮಾರು 20 ಸಾವಿರ ಅಡಿಗಳಷ್ಟು ಎತ್ತರದ ಈ ಪ್ರದೇಶದಲ್ಲಿ ಸಾಮಾನ್ಯ ಮನುಷ್ಯರು ಕ್ಷಣ ಕಾಲ ಇರಲು ಕಷ್ಟವಾಗುತ್ತದೆ ಅಸಾಧ್ಯವಾದ ಬದ್ಧತೆ, ಆತ್ಮವಿಶ್ವಾಸ, ಬದುಕುವ ಛಲ, ದೈಹಿಕವಾಗಿ ಮಾತ್ರವಲ್ಲ ಮಾನಸಿಕವಾಗಿಯೂ ಬಲವಾಗಿರುವ ಯೋಧರಿಗೆ ಮಾತ್ರ ಮಾತ್ರ ಇಲ್ಲಿ ಕೆಲಸ ನಿರ್ವಹಿಸಲು ಸಾಧ್ಯ. ಸದಾ ಸಾವನ್ನು ಕೈಯಲ್ಲೇ ಹಿಡಿದುಕೊಂಡು ಗಸ್ತು ಕಾಯುವ ಈ ಅಸಾಮಾನ್ಯರು ಇನ್ನೆಷ್ಟು ಕಾಲ ಈ ಕ್ಲಿಷ್ಟಕರವಾದ ಪ್ರದೇಶದಲ್ಲಿ ಕಾರ್ಯ ನಿರ್ವಹಿಸಬೇಕು. ದೇಶಕ್ಕಾಗಿ ಎಂಥ ತ್ಯಾಗಕ್ಕೂ ಸಿದ್ಧನಾದವನು ಮಾತ್ರ ಸಿಯಾಚಿನ್ ನಲ್ಲಿ ಕೆಲಸ ಮಾಡಲು ಸಾಧ್ಯ ಎಂದು ಹೇಳಬಹುದು. ಆದರೆ ತ್ಯಾಗ ಬಲಿದಾನದ ಜೊತೆಗೆ ಪ್ರತಿಕೂಲ ಹವಾಮಾನಕ್ಕೆ ಸಿಲುಕಿ ಮೃತರಾಗುವುದಕ್ಕೆ ನಾವು -ನೀವು ಎಲ್ಲರೂ ಕಾರಣರಾಗುತ್ತೀವಿ.
ಜ್ಯೂಸು ಇಟ್ಟಿಗೆಯಾಗುವ, ಮೊಟ್ಟೆ ಕಲ್ಲಾಗುವ ಸಿಯಾಚಿನ್ ಎಂಬ ಮಾಯಾ ತಾಣ!
ಮನೆಯಲ್ಲಿ, ಆಫೀಸಲ್ಲಿ, ಕಾರಲ್ಲಿ ಒಂದು ಕ್ಷಣ ಎಸಿ ಇಲ್ಲದೆ ಬದಕು ಅಸಾಧ್ಯ ಎನಿಸುವಂತೆ ಆಡುವ ನಾಗರಿಕರು, ಮೈನಸ್ 55 ರಷ್ಟು ತಾಪಮಾನ ಹೊಂದಿರುವ ಈ ಪ್ರದೇಶಕ್ಕೆ ಒಮ್ಮೆಯಾದರೂ ಭೇಟಿ ನೀಡಿದರೆ ಅಲ್ಲಿನ ಪರಿಸ್ಥಿತಿ ಅರ್ಥವಾಗುತ್ತದೆ.
'ಅಮರ' ಯೋಧ ಹನುಮಂತಪ್ಪನ ಅಂತಿಮ ಯಾತ್ರೆಯ ಚಿತ್ರಗಳು
ಅಲ್ಲಿ ನೆಲೆಸಿದವರಿಗೆ ಆಮ್ಲಜನಕರ ಕೊರತೆ, ತಲೆನೋವು, ಮಾತಾಡಲು ಸಾಧ್ಯವಾಗದಿರುವುದು, ನಿದ್ರಾಹೀನತೆ, ಹಸಿವಾಗದಿರುವ ತೊಂದರೆಯನ್ನೂ ಎದುರಿಸುತ್ತಿರಬೇಕು. ದುರ್ಬಲ ಹೃದಯ ಇರುವವರಿಗೆ ಇಲ್ಲಿ ಕೆಲಸ ಮಾಡಲು ಸಾಧ್ಯವೇ ಇಲ್ಲ.
[ಮಾಹಿತಿ ಕೃಪೆ: ವಿಕಿಪೀಡಿಯಾ, ದಿ ಹಿಂದೂ, ಡಾನ್.ಕಾಂ]
ಸಿಯಾಚಿನ್ ನಿರ್ಗಲು ಪ್ರದೇಶ ವಿವಾದ
ಭಾರತ ಹಾಗೂ ಪಾಕಿಸ್ತಾನ ಗಡಿ ರೇಖೆ (Line of Control) ಬಗ್ಗೆ 1972ರಲ್ಲಿ ಅಂದಿನ ಪ್ರಧಾನಿ ಇಂದಿರಾಗಾಂಧಿ ಹಾಗೂ ಪಾಕಿಸ್ತಾನ ಪ್ರಧಾನಿ ಝುಲ್ಫಿಕರ್ ಅಲಿ ಭುಟ್ಟೋ ನಡುವೆ ಒಪ್ಪಂದ ಆಗಿತ್ತು. ಆದರೆ, 1984ರಲ್ಲಿ ಭಾರತದ ಗಡಿ ದಾಟದಂತೆ ಪಾಕ್ ಸೈನಿಕರನ್ನು ಹಿಮ್ಮೆಟ್ಟಿಸಲಾಯಿತು. ಅಲ್ಲಿಂದ ಇಲ್ಲಿ ತನಕ ಕರೋಕೋರಮ್ ವ್ಯಾಪ್ತಿಯಲ್ಲಿರುವ ಸಿಯಾಚಿನ್ ನಿರ್ಗಲು ಪ್ರದೇಶ ವಿವಾದದಲ್ಲೇ ಮುಂದುವರೆದಿದೆ.
ಪ್ರಾಣ ಬಲಿ ಪಡೆಯುವಲ್ಲಿ ಭಾರತ ಹಾಗೂ ಪಾಕಿಸ್ತಾನ ಯೋಧರಿಬ್ಬರಿಗೂ ಹಿಮಪಾತ ಮಾರಕ. 2012ರಲ್ಲಿ ಗಯಾರಿ ಸೆಕ್ಟರ್ ನಲ್ಲಿ ಪಾಕಿಸ್ತಾನದ 6ನೇ ನಾರ್ಥರನ್ ಲೈಟ್ ಇನ್ಫ್ರಾಂಟ್ರಿಗೆ ಸೇರಿದ 129 ಮಂದಿ ಯೋಧರು, 11 ಜನ ಸಾರ್ವಜನಿಕರು ಮೃತಪಟ್ಟಿದ್ದರು. 1984ರಿಂದ ಇಲ್ಲಿ ತನಕ ಅಂದಾಜು 2 ಸಾವಿರಕ್ಕೂ ಅಧಿಕ ಮಂದಿ ಅಸುನೀಗಿದ್ದಾರೆ. 19ನೇ ಮದ್ರಾಸ್ ರೆಜಿಮೆಂಟ್ ನ 10 ಯೋಧರನ್ನು ಹಿಮಪಾತ ಬಲಿ ಪಡೆದಿದೆ. ಕರ್ನಾಟಕ ಲಾನ್ಸ್ ನಾಯಕ್ ಹನುಮಂತಪ್ಪ ಹಲವು ದಿನ ಹಿಮರಾಶಿಯಲ್ಲಿ ಜೀವ ಉಳಿಸಿಕೊಂಡು ನಂತರ ಹುತಾತ್ಮರಾಗಿದ್ದು ಮರೆಯಲು ಸಾಧ್ಯವಿಲ್ಲ.
ಸಿಯಾಚಿನ್ ಸಂಘರ್ಷ: ಹಿಮದ ಸೌಂದರ್ಯದ ಮೇಲೆ ಯುದ್ಧ ಮೂಡಿಸಿದ ನೆತ್ತರ ಕಲೆ
1989ರಲ್ಲೇ ಮಿಲಿಟರಿ ಮುಕ್ತವಾಗಬೇಕಿತ್ತು
ಶಿಮ್ಲಾ ಒಪ್ಪಂದದಂತೆ 1989ರಲ್ಲೇ ಮಿಲಿಟರಿ ಮುಕ್ತವಾಗಬೇಕಿತ್ತು. ಆದರೆ, ಸರಿಯಾದ ರಾಜಕೀಯ ಪ್ರೇರಕ ಶಕ್ತಿ ಸಿಗದ ಕಾರಣ ಈ ಪ್ರದೇಶ ಇನ್ನೂ ಮಿಲಿಟರಿ ಪಡೆಗಳ ಗಸ್ತಿನಲ್ಲಿದೆ. ಎನ್ ಜೆ 9842 ಪ್ರದೇಶದ ಉತ್ತರ ಭಾಗವನ್ನು ಮುಕ್ತಗೊಳಿಸಲು ಭಾರತ ಬಲವಾಗಿ ಪ್ರತಿಪಾದಿಸಿತ್ತು. 1999ರ ಕಾರ್ಗಿಲ್ ಯುದ್ಧದ ನಂತರ ಪಾಕಿಸ್ತಾನ ಹಾಗೂ ಭಾರತ ಯಾವ ಎತ್ತರ ಪ್ರದೇಶದಲ್ಲಿ ಬೇಕಾದರೂ ಕಾದಾಡಬಹುದು ಎಂಬುದು ಜಗಜ್ಜಾಹೀರಾಯಿತು.
ಇದಕ್ಕೂ ಮುನ್ನ 1949ರಲ್ಲಿ ಕರಾಚಿ ಒಪ್ಪಂದದಂತೆ ಭಾರತ ಹಾಗೂ ಪಾಕಿಸ್ತಾನ ಗಡಿರೇಖೆಯ NJ9842 ಲೈನ್ ಆಫ್ ಸೆಪೆರೇಷನ್ ಉತ್ತರ ಭಾಗಕ್ಕೆ ಸಾಲ್ಟರೋ ಪರ್ವತ ಶ್ರೇಣಿ ಹಾಗೂ ಪಶ್ಚಿಮದಲ್ಲಿ ಸಿಯಾಚಿನ್ ಮುಕ್ತಗೊಳಿಸಲು ಭಾರತ ಪ್ರಸ್ತಾವನೆ ಇಟ್ಟಿತ್ತು.
ಭಾರತೀಯ ನಾಗರಿಕರಿಗೆ ಸಿಯಾಚಿನ್ ಪ್ರವೇಶ; ಗೊತ್ತಿರಬೇಕಾದ 5 ಸಂಗತಿ
ಮುನ್ಸೂಚನೆ ಸಾಧ್ಯವಿಲ್ಲವೇ?
ಭಾರತದ ರಕ್ಷಣಾ ಸಚಿವಾಲಯದ Snow and Avalanche Studies Establishment (SASE) ಎಚ್ಚರಿಕೆ ಪ್ರಕಾರ ಹಿಮಪಾತವನ್ನು ಊಹಿಸುವುದು ಅಸಾಧ್ಯ. ಕಳೆದ ನೂರು ವರ್ಷಗಳಲ್ಲಿ 0.8ಡಿಗ್ರಿ ಸೆಲ್ಸಿಯಸ್ ತಾಪಮಾನ ಏರಿಕೆ ಕಂಡಿದೆ. ಹಿಮಾಲಯ ಪ್ರದೇಶದಲ್ಲಿ 1.25 ಡಿ.ಸೆ ನಷ್ಟು ತಾಪಮಾನ ವ್ಯತ್ಯಾಸ ಕಂಡು ಬಂದಿದೆ. ಹವಾಮಾನ ಮೈನಸ್ 40 ಡಿ. ಸೆಗೆ ಇಳಿಯುತ್ತದೆ ಎಂದು SASE ನ ಮುಖ್ಯಸ್ಥ ಅಶ್ವಘೋಶ ಗಂಜು ಅಭಿಪ್ರಾಯಪಟ್ಟಿದ್ದಾರೆ.
ವಿಶ್ವದ ಅತ್ಯಂತ ದುಬಾರಿ ಯುದ್ಧ ಭೂಮಿ
ವಿಶ್ವದ ಅತ್ಯಂತ ದುಬಾರಿ ಯುದ್ಧ ಭೂಮಿ ಸಿಯಾಚೆನ್ ಪ್ರದೇಶವನ್ನು ಕಾಯುವುದಕ್ಕೆ ಭಾರತ ಸರ್ಕಾರ ಪ್ರತಿ ವರ್ಷ ಅಂದಾಜು 1,000 ರಿಂದ 1,200 ಕೋಟಿ ರು ($148-177 million) ಖರ್ಚು ತಗಲುತ್ತದೆ. ಜೊತೆಗೆ ಈ ಭಾಗದಲ್ಲಿ ಕಾರ್ಯನಿರ್ವಹಿಸುವ ಗಡಿ ಭದ್ರತಾ ಪಡೆ, ಭಾರತೀಯ ಸೇನೆಗೆ ಅನುದಾನ ಪ್ರತಿ ವರ್ಷ ಹೆಚ್ಚಾಗುತ್ತಲೇ ಇದೆ. ಇದಕ್ಕೆ ತಕ್ಕಂತೆ ಪಾಕಿಸ್ತಾನವೂ ಹಣ ತೊಡಗಿಸಿದೆ. ಜೊತೆಗೆ ಉಭಯ ದೇಶಗಳ ಸೈನಿಕರು ಪ್ರಾಣವನ್ನು ಪ್ರಕೃತಿಗೆ ಪಣಕ್ಕಿಟ್ಟು ದೇಶ ರಕ್ಷಿಸುತ್ತಿದ್ದಾರೆ.
ಇಟ್ಟಿಗೆಯಂತಾಗುವ ಜ್ಯೂಸ್, ಕಲ್ಲಿನಂತಾಗುವ ಮೊಟ್ಟೆ; ಇದು ಸಿಯಾಚಿನ್
ಶಾಂತಿ ಉದ್ಯಾನ ಸ್ಥಾಪನೆ ಬಗ್ಗೆ ಪ್ರಸ್ತಾಪ
2003ರಲ್ಲಿ ಇಲ್ಲಿ ಶಾಂತಿ ಉದ್ಯಾನ ಸ್ಥಾಪನೆ ಬಗ್ಗೆ ಉಭಯ ದೇಶಗಳು ಮನಸ್ಸು ಮಾಡಿದ್ದವು. ಇಟಲಿಯ ಪರಿಸರವಾದಿ ಗಿಯುಲಿನೋ ಟಲೋನ್ ಅವರು ಪ್ರಸ್ತಾವನೆ ಮಾಡಿದ ಮೇಲೆ ಜಾಗತಿಕವಾಗಿ ಜಿನಿವಾದ ಅಂತಾರಾಷ್ಟ್ರೀಯ ಪರಿಸರ ಸಂರಕ್ಷಣೆ(IUCN) ಸಮಾವೇಶದಲ್ಲಿ ಚಾರಣಿಗರನ್ನು ಆಹ್ವಾನಿಸಿ ಚರ್ಚಿಸಲಾಯಿತು. ವಿಶ್ವ ಪಾರಂಪರಿಕ ತಾಣ ಮಾಡಲು ವಿಶ್ವ ಸಂಸ್ಥೆ ಬಯಸಿತ್ತು. 2007ರಿಂದ ಟ್ರೆಕ್ಕಿಂಗ್ ಮೊದಲಾಯಿತು. ಆದರೆ, ಪಾಕಿಸ್ತಾನ ಕ್ಯಾತೆ ತೆಗೆಯಿತು. ಈಗಲೂ ಆರ್ಮಿ ಮೌಂಟನೈನಿರಿಂಗ್ ಇನ್ಸ್ ಸ್ಟಿಟ್ಯೂಟ್ ನೆರವಿಲ್ಲದೆ ಇಲ್ಲಿ ಟ್ರೆಕ್ಕಿಂಗ್ ನಡೆಸಲಾಗುತ್ತದೆ.
ವಿಶ್ವ ಪಾರಂಪರಿಕ ತಾಣವನ್ನಾಗಿಸಿ
ಚೀನಾ ನಿಯಂತ್ರಣದಲ್ಲಿ ಇರುವ ಶಾಕ್ಸಗಂ ಕಣಿವೆ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದ ಬಾಲ್ಟಿಸ್ತಾನ್ ಮಧ್ಯೆ ಈ ಸ್ಥಳವು ತಡೆಯಂತೆ ಇದೆ. ಮಿಲಿಟಿರಿ ಮುಕ್ತಗೊಂಡರೆ ಚೀನಾ ಹಾಗೂ ಪಾಕಿಸ್ತಾನ ನಡುವೆ ಸಂಪರ್ಕ ಏರ್ಪಟ್ಟು, ಭಾರತಕ್ಕೆ ಅಪಾಯ ಎದುರಾಗಬಹುದು ಎಂಬ ಶಂಕೆ ಇದೆ. ಆದರೆ, ವಿಶ್ವ ಪಾರಂಪರಿಕ ತಾಣವನ್ನಾಗಿ ಘೋಷಿಸಿದರೆ ಆಗ ಶಾಂತಿ ನೆಲೆಸುವ ತಾಣವನ್ನಾಗಿ ಪರಿವರ್ತಿಸಲು ಇಡೀ ವಿಶ್ವವೇ ಮುಂದಾಗಬಹುದು.ಆದರೆ ವಿಶ್ವ ಪಾರಂಪರಿಕ ತಾಣವನ್ನಾಗಿ ಪರಿಗಣಿಸಲು ಸಮಿತಿ ಮುಂದಾಗಿಲ್ಲ.
ಈ ಪ್ರದೇಶವನ್ನು ಕಾಯಲು ಸಿದ್ಧವಾದ ಎನ್ಜಿಒ
ಸಿಯಾಚಿನ್ ಗೆ ಹೊಂದಿಕೊಂಡಂತೆ ಇರುವ ಕಾರಕೊರಂ ವನ್ಯಜೀವಿ ಅಭಯಾರಣ್ಯ(ಸುಮಾರು 973,845 ಹೆಕ್ಟೇರು, ವಿಶ್ವದ ಎರಡನೇ ಅತಿ ಎತ್ತರ ಕೆ2 ಪರ್ವತವೂ ಸೇರಿದೆ) ವನ್ನು ಭಾರತ ಹಾಗೂ ಪಾಕಿಸ್ತಾನಗಳೆರಡು ರಾಷ್ಟ್ರೀಯ ಉದ್ಯಾನವನ್ನಾಗಿ ಘೋಷಿಸಿಕೊಂಡಿವೆ.
ವಿಶ್ವಸಂಸ್ಥೆಗೆ ಹೊಂದಿಕೊಂಡಂತೆ ಕಾರ್ಯ ನಿರ್ವಹಿಸುವ UNEP, UNDP, FAO, IUCN, ಆಗಾ ಖಾನ್ ಫೌಂಡೇಶನ್, WWF, ಬರ್ಡ್ ಲೈಫ್ ಇಂಟರ್ ನ್ಯಾಷನಲ್ ಅಲ್ಲದೆ ಇಟಲಿಯ ಎನ್ ಜಿಒ CESVI ಎಲ್ಲವೂ ಈ ಪ್ರದೇಶವನ್ನು ಕಾಯಲು ಸಿದ್ಧವಾಗಿವೆ.