ಇಂದು ಸೇನಾ ದಿನ: ಕಾಡುತ್ತಿದೆ ಈ ಸೈನಿಕನ ಕಣ್ಣೀರ ವಿದಾಯದ ಪ್ರೇಮ ಕಥೆ
ನವದೆಹಲಿ, ಜನವರಿ 15: ಇಂದು ರಾಷ್ಟ್ರೀಯ ಸೇನಾ ದಿನ. ದಿನವಿಡೀ ಗಡಿ, ರಾಜ್ಯಗಳಲ್ಲಿ ಶತ್ರುಗಳನ್ನು ಎದುರಿಸಿ ರಕ್ಷಣೆ ಪ್ರಜೆಗಳನ್ನು ರಕ್ಷಿಸುವ, ಇನ್ಯಾವುದೋ ಸಂಕಷ್ಟದಲ್ಲಿ ಸಿಲುಕಿರುವ ಜನರನ್ನು ಪ್ರಾಣದ ಹಂಗು ತೊರೆದು ಕಾಪಾಡುವ ಸೈನಿಕರಿಗೆ ತಮ್ಮದೆಂದು ಹೇಳಿಕೊಂಡು ಸಂಭ್ರಮಿಸುವ ದಿನವಿದು. ಆದರೆ, ಮೇಜರ್ ನಾಯರ್ ಅವರ ಕುಟುಂಬದಲ್ಲಿ ಆ ಸಂಭ್ರಮವಿಲ್ಲ.
ಪುಣೆಯ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಭಾನುವಾರ ಅಪಾರ ಪ್ರಮಾಣದ ಜನರು ನೆರೆದಿದ್ದರು. ಮೇಜರ್ ಶಶಿಧರ್ ನಾಯರ್ ಅವರ ಗೆಳೆಯರು, ಕುಟುಂಬವರ್ಗ ಮಾತ್ರವಲ್ಲ, ಅವರಿಗೆ ಪರಿಚಿತರಲ್ಲದವರೂ ಅಂತಿಮ ನಮನ ಸಲ್ಲಿಸಲು ಬಂದಿದ್ದರು.
ಚಿಗುರಿದ ಕನಸು! ಹಳ್ಳಿಯ ಬರದ ಬವಣೆ ನೀಗಿಸಿದ ಎಂಜಿನಿಯರ್ ಯುವಕನ ಯಶೋಗಾಥೆ
ಗಡಿ ನಿಯಂತ್ರಣ ರೇಖೆ (ಎಲ್ಓಸಿ) ಬಳಿಯ ನೌಶೆರಾದಲ್ಲಿ ಉಗ್ರರು ಸ್ಫೋಟಿಸಿದ ಸುಧಾರಿತ ಸ್ಫೋಟಕವು ಸಮೀಪದಲ್ಲಿಯೇ ಸಾಗುತ್ತಿದ್ದ ಗಸ್ತುಪಡೆಯ 33 ವರ್ಷದ ಮೇಜರ್ ನಾಯರ್ ಅವರನ್ನು ಬಲಿ ತೆಗೆದುಕೊಂಡಿತು. ಕರ್ತವ್ಯದಲ್ಲಿದ್ದಾಗಲೇ ನಾಯರ್ ಹುತಾತ್ಮರಾದರು.
ಇದು ಭಯೋತ್ಪಾದನಾ ಕೃತ್ಯಗಳಿಗೆ ಬಲಿಯಾಗುವ ಸೈನಿಕರ ಎಂದಿನ ಕಥೆಯಲ್ಲ. ಈ ದಿನ ನಾಯರ್ ಅವರನ್ನು ಭಾರವಾಗುವ ಕಣ್ಣಾಲಿಗಳೊಂದಿಗೆ ನೆನಪಿಸಿಕೊಳ್ಳಲು ಕಾರಣವಿದೆ. ಏಕೆಂದರೆ, ಅವರ ಬದುಕಿನಲ್ಲೊಂದು ಮಹಾತ್ಯಾಗದ, ಕರುಣಾಜನಕ ಕಥೆಯೊಂದಿದೆ.
ಮೇಜರ್ ನಾಯರ್ ಅವರ ದೇಹ ಚಿತಾಗಾರದಲ್ಲಿ ಸಂಪೂರ್ಣ ಸೇನಾ ಗೌರವಗಳೊಂದಿಗೆ ಮಲಗಿದ್ದರೆ, ಅವರ ಪತ್ನಿ ತೃಪ್ತಿ ನಿಷ್ಟೇಷ್ಟಿತರಾಗಿ ಗಾಲಿ ಕುರ್ಚಿಯ ಮೇಲೆ ಕುಳಿತಿದ್ದರು. ಒಂದು ತಿಂಗಳ ರಜೆ ಹಾಕಿ ಪುಣೆಯಲ್ಲಿ ಕುಟುಂಬದವರೊಂದಿಗೆ ಕಾಲ ಕಳೆದಿದ್ದ ಮೇಜರ್ ಶಶಿಧರ್ ನಾಯರ್, ಕಾಶ್ಮೀರಕ್ಕೆ ಮರಳಿ 10 ದಿನಗಳಾಗಿತ್ತಷ್ಟೇ.
ಚಿರತೆ ಮರಿಯನ್ನು 'ದತ್ತು' ತೆಗೆದುಕೊಂಡು ಹಾಲುಣಿಸಿದ ಸಿಂಹಿಣಿ
ತೃಪ್ತಿ ಮತ್ತು ಶಶಿ ಮದುವೆಯಾಗಿ ಮೂರುವರ್ಷಗಳಷ್ಟೇ ಆಗಿದ್ದು. ಆದರೆ, ಅವರ ಪ್ರೇಮಕಥೆ ಸಂಪೂರ್ಣ ಸೇನಾ ವಲಯದಲ್ಲಿ ಪ್ರಸಿದ್ಧಿ ಪಡೆದಿತ್ತು. ಪುಣೆಯಲ್ಲಿ ಪರಸ್ಪರ ಸ್ನೇಹಿತರ ಮೂಲಕ ಅವರಿಬ್ಬರೂ ಪರಿಚಿತರಾದವರು. ಆಗ ನಾಯರ್ 27 ವರ್ಷದ ಕ್ಯಾಪ್ಟನ್ ಆಗಿದ್ದರೆ, 26 ವರ್ಷದ ತೃಪ್ತಿ ಕಂಪ್ಯೂಟರ್ ಅಪ್ಲಿಕೇಷನ್ ಪದವೀಧರೆ. ಇಬ್ಬರದೂ ಮೊದಲ ನೋಟದ ಪ್ರೀತಿ. ಆರು ತಿಂಗಳಿನಲ್ಲಿಯೇ ಇಬ್ಬರ ನಿಶ್ಚಿತಾರ್ಥವಾಯಿತು.
ಆದರೆ, ಅಲ್ಲಿಂದ ಅವರ ಬದುಕಿನಲ್ಲಿ ಸವಾಲುಗಳು ಎದುರಾಗತೊಡಗಿದವು. ಇಬ್ಬರ ಉತ್ಕಟ ಪ್ರೀತಿ ಆ ಸವಾಲುಗಳನ್ನು ಎದುರಿಸುವ ಛಾತಿಯನ್ನು ಬೆಳೆಸಿತ್ತು.
ಅವರ ನಿಶ್ಚಿತಾರ್ಥವಾಗಿ ಎಂಟು ತಿಂಗಳ ಬಳಿಕ ತೃಪ್ತಿ ಅವರ ಹೃದಯದ ಅಪಧಮನಿಯನ್ನು ಸಂಕುಚಿತಗೊಳಿಸುವ ಕಾಯಿಲೆ ಕಂಡುಬಂದಿತು. ಇದರಿಂದ ಅವರ ಓಡಾಡುವ ಸಾಮರ್ಥ್ಯವೂ ಕುಂಠಿತಗೊಂಡಿತು. ಕೊನೆಗೆ ಗಾಲಿಕುರ್ಚಿಯನ್ನು ಆಶ್ರಯಿಸಬೇಕಾಯಿತು. ಕೆಲವು ಆಪ್ತರು ನಿಶ್ಚಿತಾರ್ಥವನ್ನು ಮುರಿದುಕೊಳ್ಳುವಂತೆ ಮೇಜರ್ ನಾಯರ್ ಅವರಿಗೆ ಸಲಹೆ ನೀಡಿದರು. ಆದರೆ, ಪ್ರೀತಿಗೆ ಬದ್ಧರಾಗಿದ್ದ ನಾಯರ್ ಅದನ್ನು ನಿರಾಕರಿಸಿದರು. ಆ ಸ್ಥಿತಿಯಲ್ಲಿಯೇ ತೃಪ್ತಿ ಅವರನ್ನು 2012ರಲ್ಲಿ ಮದುವೆಯಾದರು.
ಸರ್ಕಾರಿ ಶಾಲೆಯೇ ಸಾಕು: ಮಾದರಿಯಾದರು ಈ ಮಹಿಳಾ ಜಿಲ್ಲಾಧಿಕಾರಿ
ಮದುವೆಯಾದ ಬಳಿಕವೂ ಎಲ್ಲವೂ ಸುಗಮವಾಗಿರಲಿಲ್ಲ. ತೃಪ್ತಿ ಮತ್ತೊಂದು ಪಾರ್ಶ್ವವಾಯುವಿಗೆ ತುತ್ತಾದರು. ಅವರ ಸೊಂಟದ ಕೆಳಭಾಗಕ್ಕೆ ಹೊಡೆತ ಬಿದ್ದಿತು. ಗಾಂಧಿನಗರ, ಪುಣೆ ಎಲ್ಲ ಕಡೆಯ ಕಾರ್ಯಕ್ರಮ, ಕೆಲಸಗಳಿಗೂ ಪತ್ನಿಯನ್ನು ಗಾಲಿಕುರ್ಚಿಯಲ್ಲಿ ತಳ್ಳಿಕೊಂಡು ತೆರಳತೊಡಗಿದರು. ಸೇನೆಯೂ ಅವರನ್ನು ತಮ್ಮ ಕುಟುಂಬವನ್ನಾಗಿಸಿಕೊಂಡಿತು.
ಆದರೆ, ನಾಯರ್ ಅವರನ್ನು ಕಾಶ್ಮೀರಕ್ಕೆ ನಿಯೋಜಿಸಿದ್ದು ತೃಪ್ತಿ ಅವರ ನಿರಂತರ ಕಳವಳಕ್ಕೆ ಕಾರಣವಾಗಿತ್ತು. ಪ್ರತಿ ಬಾರಿ ಮಾತನಾಡುವಾಗಲೂ ಕಾಶ್ಮೀರದಿಂದ ಬೇಗನೆ ಬರುತ್ತೇನೆ ಎಂದು ನಾಯರ್ ಭರವಸೆ ನೀಡುತ್ತಿದ್ದರು. ಮಾರ್ಚ್ನಲ್ಲಿ ನಾಯರ್ ಲೆಫ್ಟಿನೆಂಟ್ ಕರ್ನಲ್ ಆಗಿ ಬಡ್ತಿ ಪಡೆದರು. ಸೆಪ್ಟೆಂಬರ್ನಲ್ಲಿ ಸ್ಟಾಫ್ ಕಾಲೇಜ್ ಪರೀಕ್ಷೆ ಬರೆದರು. ಅಕ್ಟೋಬರ್ನಲ್ಲಿ ಅವರು ಮತ್ತು ತೃಪ್ತಿ ಬಿನಗುರಿಯ ಘಟಕಕ್ಕೆ ವಾಸ್ತವ್ಯ ಬದಲಿಸಿಕೊಂಡರು.
ಜನವರಿ 2ರಂದು ತೃಪ್ತಿ ಅವರಿಗೆ ಗುಡ್ ಬೈ ಹೇಳಿ ಬೇಗ ವಾಪಸ್ ಬರುವ ಭರವಸೆಯೊಂದಿಗೆ ಮನೆಯಿಂದ ಹೊರಟಿದ್ದರು. ಅವರು ತಮ್ಮ ಭರವಸೆಯನ್ನು ಉಳಿಸಿಕೊಂಡರು. ಆದರೆ, ತೃಪ್ತಿ ಊಹಿಸಿದ್ದಂತಲ್ಲ. ನಾಯರ್ ಮರಳಿ ಬರುವಾಗ ತ್ರಿವರ್ಣ ಧ್ವಜವನ್ನು ಹೊದ್ದುಕೊಂಡಿದ್ದರು. ತನ್ನನ್ನು ಅತಿಯಾಗಿ ಪ್ರೀತಿಸುತ್ತಿದ್ದ ಪತಿಯ ದೇಹದ ಮುಂದೆ ತೃಪ್ತಿ ಮೂಕರಾಗಿ ಕುಳಿತಿದ್ದರು.