ಕೇರಳದಲ್ಲಿ ಬಿಜೆಪಿ ಅಧ್ಯಕ್ಷ ಸ್ಥಾನ ಬದಲು; ಸ್ಟಾರ್ ನಟನಿಗೆ ಮಣೆ?
ಕೊಚ್ಚಿ, ಸೆಪ್ಟೆಂಬರ್ 24: ಕೇರಳ ಬಿಜೆಪಿ ಅಧ್ಯಕ್ಷ ಸುರೇಂದ್ರನ್ ಮೇಲೆ ಸಾಲು ಸಾಲು ಆರೋಪಗಳು ಕೇಳಿ ಬಂದಿವೆ. ಹೀಗಾಗಿ, ರಾಜ್ಯಾಧ್ಯಕ್ಷರ ಬದಲಾವಣೆಗೆ ಬಿಜೆಪಿ ಹೈಕಮಾಂಡ್ ಮುಂದಾಗಿರುವ ಸುದ್ದಿ ಬಂದಿದೆ. ನಟ ಕಮ್ ಸಂಸದ ಸುರೇಶ್ ಗೋಪಿಗೆ ರಾಜ್ಯಾಧ್ಯಕ್ಷ ಪಟ್ಟ ಸಿಗುವ ಸಾಧ್ಯತೆ ದಟ್ಟವಾಗಿದೆ.
ಇದಲ್ಲದೆ, ಬೂತ್ ಮಟ್ಟದಿಂದ ಅಮೂಲಾಗ್ರ ಬದಲಾವಣೆಗೆ ಬಿಜೆಪಿ ಮುಂದಾಗಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಭಾರಿ ಮುಖಭಂಗ ಅನುಭವಿಸಿದ ಬಿಜೆಪಿ ಹೇಗಾದರೂ ಮಾಡಿ ಕೇರಳದಲ್ಲಿ ಕೇಸರಿ ಬಾವುಟ ಹಾರಿಸಲು ಪಣ ತೊಟ್ಟಿದೆ. ಚುನಾವಣೆ ಸೋಲಿನ ಬಗ್ಗೆ ಸುರೇಂದ್ರನ್ ನೀಡಿದ್ದ ವರದಿಯಿಂದ ಬಿಜೆಪಿ ವರಿಷ್ಠರು ಸಂತುಷ್ಟರಾಗಿಲ್ಲ. ಹೀಗಾಗಿ ಭಾರಿ ಬದಲಾವಣೆ ನಿರೀಕ್ಷಿಸಬಹುದು ಎಂಬ ಸುದ್ದಿ ಬಂದಿದೆ.
ಲಂಚ ಪ್ರಕರಣ: ವಿಚಾರಣೆಗೆ ಹಾಜರಾಗಲು ಬಿಜೆಪಿ ರಾಜ್ಯಾಧ್ಯಕ್ಷನಿಗೆ ನೋಟಿಸ್
ಆದರೆ, ನಾಯಕತ್ವ ಬದಲಾವಣೆ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ, ಇದೆಲ್ಲ ಗಾಳಿ ಸುದ್ದಿ ಎಂದು ಹಾಲಿ ಅಧ್ಯಕ್ಷ ಸುರೇಂದ್ರನ್ ಪ್ರತಿಕ್ರಿಯಿಸಿದ್ದಾರೆ. 2016ರಿಂದ ಬಿಜೆಪಿಯಲ್ಲಿರುವ ಸುರೇಶ್ ಗೋಪಿಗೆ ಸ್ಥಾನ ನೀಡುವ ಬಗ್ಗೆ ಬಗ್ಗೆ ಕೇಂದ್ರ ನಾಯಕರಿಗೂ ಒಲವಿದೆ. ಆದರೆ, ರಾಜ್ಯ ಬಿಜೆಪಿಯಲ್ಲಿನ ಆಂತರಿಕ ತಿಕ್ಕಾಟವನ್ನು ಬಗೆಹರಿಸಿಕೊಳ್ಳಬೇಕಿದೆ.
ಕೇಂದ್ರ ನಾಯಕರಿಗೂ ಒಲವಿದೆ
ಈ ಹಿಂದೆ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಸಿಕ್ಕರೂ, ಗೋಪಿ ಅವರು ಬಿಜೆಪಿ ಆಫರ್ ತಿರಸ್ಕರಿಸಿದ್ದರು. ಸ್ಟಾರ್ ಪ್ರಚಾರಕರಾಗಿ ಕಾರ್ಯ ನಿರ್ವಹಿಸಿದ್ದರು. 2016ರಲ್ಲಿ ರಾಜ್ಯಸಭಾ ಸದಸ್ಯರಾದರು. ಲೋಕಸಭಾ ಚುನಾವಣೆಯಲ್ಲಿ ತ್ರಿಸ್ಸೂರ್ ಕ್ಷೇತ್ರದಿಂದ ಸ್ಪರ್ಧಿಸಿ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟಿದ್ದರು.
ಸ್ಟಾರ್ ನಟ ಸುರೇಶ್ ಗೋಪಿ ಅವರನ್ನು ತಿಶ್ಶೂರ್ ಅಥವಾ ತಿರುವನಂತಪುರಂ ಕ್ಷೇತ್ರದಿಂದ ಕಣಕ್ಕಿಳಿಸಲು ಬಿಜೆಪಿ ವರಿಷ್ಠರು ಬಯಸಿದ್ದರು. ಆದರೆ, ಗೋಪಿ ಕಣಕ್ಕಿಳಿಯಲಿಲ್ಲ.
ಮಲೆಯಾಳಂ ಚಿತ್ರರಂಗದ ಟಾಪ್ ನಟ
ಮಲೆಯಾಳಂ ಚಿತ್ರರಂಗದ ಟಾಪ್ ನಟರಾದ ಮಮ್ಮೂಟಿ, ಮೋಹನ್ ಲಾಲ್, ದಿಲೀಪ್ ಸಮಾನಾಂತರವಾಗಿ ಸುರೇಶ್ ಗೋಪಿ ಕೇರಳದಲ್ಲಿ ಪ್ರಭಾವ ಹೊಂದಿದ್ದಾರೆ. ನಾಯರ್ ಕುಟುಂಬದ ಗೋಪಿ ಅವರು ಈ ಹಿಂದೆ ಬಿಜೆಪಿ ಸೇರಿಸಿಕೊಳ್ಳುವ ಯತ್ನ ಹಲವು ಬಾರಿ ಸಫಲವಾಗಿರಲಿಲ್ಲ. ಆದರೆ, ಮೋದಿ ಅವರನ್ನು ಭೇಟಿ ಮಾಡಿದ ಮೇಲೆ ಅವರ ತಾರಾ ಮೌಲ್ಯ ಹೆಚ್ಚಿತ್ತು. 'ಕೋಟ್ಯಧಿಪತಿ' ಕಾರ್ಯಕ್ರಮದ ಮಲೆಯಾಳಂ ಆವೃತ್ತಿಯ ನಿರೂಪಕರಾಗಿ ಮನೆ ಮಾತಾಗಿದ್ದಾರೆ ಕೂಡಾ. ಕನ್ನಡಿಗರಿಗೆ ನ್ಯೂಡೆಲ್ಲಿ ಚಿತ್ರದ ಮೂಲಕ ಪರಿಚಯ.
ಕೇರಳ ಚುನಾವಣೆ ಫಲಿತಾಂಶ 2021: ಗೆದ್ದವರು-ಸೋತವರ ಪಟ್ಟಿ
ಅಭಿವೃದ್ಧಿ ಪರ ದನಿಯೆತ್ತಿದ್ದ ಗೋಪಿ
ವಿಳಿಂಜಾಮ್ ಬಂದರು ಯೋಜನೆ, ತ್ರಿವೇಂಡ್ರಮ್ ನ ಹೈಕೋರ್ಟ್ ಬೆಂಚ್, ರೈಲ್ವೆ ಜಾಲ ನವೀಕರಣ ಮುಂತಾದ ಅಭಿವೃದ್ಧಿ ಪರ ವಿಷಯಗಳ ಬಗ್ಗೆ ಮೋದಿ ಜತೆ ಗೋಪಿ ಗಂಭೀರವಾದ ಚರ್ಚೆ ನಡೆಸಿದ್ದರು. ಮೊದಲ ಭೇಟಿ ನಂತರ ಮೋದಿ ಅವರು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮಾರಂಭದಲ್ಲೂ ಗೋಪಿ ಹಾಜರಿದ್ದರು. ಹೀಗಾಗಿ ಬಿಜೆಪಿ ಪರ ಪ್ರಚಾರ ಕೈಗೊಳ್ಳುವಂತೆ ಸೂಚಿಸಿದ್ದರು. ಅದರಂತೆ, ಕೇರಳದಲ್ಲಿ ಮಿತ್ರಪಕ್ಷ ಭಾರತ್ ಧರ್ಮ ಜನ ಸೇನಾ ಪಕ್ಷದ ಮೂಲಕ ಬಿಜೆಪಿ ಪರ ದನಿಯಾಗಿದ್ದರು.
ಕೆ ಸುರೇಂದ್ರನ್ ಸೋಲು
ಇನ್ನೊಂದೆಡೆ, ಕೇರಳ ವಿಧಾನಸಭಾ ಚುನಾವಣೆಯಲ್ಲಿ ಕಾಸರಗೋಡಿನ ಮಂಜೇಶ್ವರ ಕ್ಷೇತ್ರದಿಂದ ಕೆ ಸುರೇಂದ್ರನ್ ಸ್ಪರ್ಧಿಸಿದ್ದರು. ತಮ್ಮ ಎದುರಾಳಿಗಳಿಗೆ ನಾಮಪತ್ರ ಹಿಂತೆಗೆದುಕೊಳ್ಳಲು ಪ್ರಭಾವ ಬೀರಿ, ಲಂಚ ನೀಡಿದ ಆರೋಪ ಬಿಜೆಪಿ ರಾಜ್ಯಾಧ್ಯಕ್ಷ ಸುರೇಂದ್ರನ್ ಮೇಲಿದೆ. ಕಾಸರಗೋಡು ಪೊಲೀಸರು ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
2016 ರಲ್ಲಿ ಕೆ ಸುರೇಂದ್ರನ್ ಕೇವಲ 89 ಮತಗಳಿಂದ ಸೋಲು ಕಂಡಿದ್ದರು. ಈ ಬಾರಿ ಕೂಡಾ ಕಡಿಮೆ ಅಂತರದಲ್ಲಿ ಸೋಲು ಕಂಡಿದ್ದಾರೆ. ತಮ್ಮ ಹೆಸರಿಗೆ ಸಾಮ್ಯತೆ ಇರುವ ಇತರೆ ಸ್ಪರ್ಧಿಗಳಿಗೆ ಆಮಿಷವೊಡ್ಡಿ ಸ್ಪರ್ಧಾಕಣದಿಂದ ಹಿಂದೆ ಸರಿಯುವಂತೆ ಮಾಡಿದ್ದಾರೆ ಎಂದು ಇತರೆ ಪಕ್ಷಗಳು ಆರೋಪಿಸಿವೆ.