ಅಂದು ಕರ್ನಾಟಕ, ಇಂದು ಮಹಾರಾಷ್ಟ್ರ: ವಿಶ್ವಾಸ ಗೆಲ್ಲುತ್ತಾರಾ ಫಡ್ನವೀಸ್?
ಬೆಂಗಳೂರು, ನವೆಂಬರ್.24: ಮಹಾರಾಷ್ಟ್ರ ರಾಜಕಾರಣದ ಹಾವು-ಏಣಿ ಆಟದಲ್ಲಿ ಇನ್ನೇನು ಗೆದ್ದಾಯ್ತು ಎಂದುಕೊಂಡಿದ್ದ ಶಿವಸೇನೆ ಪಾತಾಳಕ್ಕೆ ಕುಸಿದಿದೆ. ರಾತ್ರೋರಾತ್ರಿ ನಡೆದ ಕ್ಷಿಪ್ರ ರಾಜಕೀಯ ಬೆಳವಣಿಗೆ ಇಡೀ ದೇಶವೇ ಮಹಾರಾಷ್ಟ್ರದತ್ತ ತಿರುಗಿ ನೋಡುವಂತೆ ಮಾಡಿದೆ.
ರಾತ್ರೋರಾತ್ರಿ ನಡೆದ ಬೆಳವಣಿಗೆಯಲ್ಲಿ ಮಹಾಮೈತ್ರಿಗೆ ತದ್ವಿರುದ್ಧವಾದ ಫಲಿತಾಂಶ ಹೊರ ಬಿದ್ದಿದೆ. ಸಾಲು ಸಾಲು ಸಭೆ ನಡೆಸಿದ ಎನ್ ಸಿಪಿ ಉಲ್ಟಾ ಹೊಡೆದಿದೆ. ಶಿವಸೇನೆ ಕಾಂಗ್ರೆಸ್ ಬದಲು ಬಿಜೆಪಿ ಜೊತೆಗೆ ಸೇರಿಕೊಂಡು ಸರ್ಕಾರ ರಚಿಸಿದ್ದು ಆಗಿದೆ.
ಮಹಾರಾಷ್ಟ್ರದಲ್ಲಿ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಹೇಗೆ?
ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಬಿಜೆಪಿಯ ದೇವೇಂದ್ರ ಫಡ್ನವೀಸ್ ಹಾಗೂ ಉಪ ಮುಖ್ಯಮಂತ್ರಿಯಾಗಿ ಎನ್ ಸಿಪಿಪಿಯ ಅಜಿತ್ ಪವಾರ್ ಪ್ರಯಾಣ ವಚನ ಸ್ವೀಕರಿಸಿದ್ದಾರೆ. ಬೆಳಗ್ಗೆ 5.47ಕ್ಕೆ ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆ ವಾಪಸ್ ಪಡೆದಿದ್ದು, ಅದಾಗಿ ಎರಡೇ ಗಂಟೆಗಳಲ್ಲಿ ಅಂದ್ರೆ 7.30 ಹೊತ್ತಿಗೆ ಆಗಲೇ ನೂತನ ಮುಖ್ಯಮಂತ್ರಿಗಳ ಪ್ರಮಾಣ ವಚನ ಕಾರ್ಯಕ್ರಮಕ್ಕೆ ರಾಜ್ಯಪಾಲ ಭಗತ್ ಸಿಂಗ್ ಕೌಶಿಯಾರ್ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ರಾಜ್ಯಪಾಲದ ಈ ನಡುವಳಿಕೆ ವಿಪಕ್ಷಗಳ ಕಣ್ಣು ಕೆಂಪಾಗಿಸಿದ್ದು, ಸಾಂವಿಧಾನಿಕ ಹುದ್ದೆಯಲ್ಲಿರುವ ರಾಜ್ಯಪಾಲರೇ ಬಿಜೆಪಿ ಕಾರ್ಯಕರ್ತರಂತೆ ವರ್ತಿಸುತ್ತಿದ್ದಾರೆ ಎಂದು ವಿಪಕ್ಷ ನಾಯಕರು ಆರೋಪಿಸಿದ್ದಾರೆ.
LIVE: ನ.25ರಂದು ಮಹಾ ಸರ್ಕಾರ ಭವಿಷ್ಯ ಬಗ್ಗೆ ಸುಪ್ರೀಂ ತೀರ್ಪು
ರಾಜ್ಯಪಾಲರ ನಿರ್ಧಾರ ವಿರೋಧಿಸಿ ಶಿವಸೇನೆ, ಕಾಂಗ್ರೆಸ್ ಹಾಗೂ ಎನ್ ಸಿಪಿ ಸುಪ್ರೀಂಕೋರ್ಟ್ ಮೊರೆ ಹೋಗಿದೆ. ರಿಟ್ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸರ್ಕಾರಕ್ಕೆ ತಾತ್ಕಾಲಿಕ ರಿಲೀಫ್ ಕೊಟ್ಟಿದೆ. ತುರ್ತಾಗಿ ಬಹುಮತ ಸಾಬೀತುಪಡಿಸುವ ಅಗತ್ಯವಿಲ್ಲ ಎಂದು ಕೋರ್ಟ್ ಹೇಳಿದ್ದು, ನವೆಂಬರ್.25ಕ್ಕೆ ವಿಚಾರಣೆ ಮುಂದೂಡಿದೆ.
ರಿಟ್ ಅರ್ಜಿ ವಿಚಾರಣೆ ನಡೆಸಿದ ತ್ರಿಸದಸ್ಯ ಪೀಠ
ಬಿಜೆಪಿಗೆ ಸರ್ಕಾರ ರಚಿಸಲು ಅವಕಾಶ ನೀಡಿದ ರಾಜ್ಯಪಾಲ ಭಗತ್ ಸಿಂಗ್ ಕೌಶಿಯಾರ್ ಕ್ರಮವನ್ನು ವಿಪಕ್ಷಗಳು ವಿರೋಧಿಸಿವೆ. ಜೊತೆಗೆ ಆದಷ್ಟು ಬೇಗ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಬಹುಮತ ಸಾಬೀತು ಪಡಿಸಲು ಎಂದು ಸುಪ್ರೀಂಕೋರ್ಟ್ ಮೊರೆ ಹೋಗಿವೆ. ಈ ಹಿನ್ನೆಲೆ ಇಂದು ನ್ಯಾ.ಎನ್.ವಿ.ರಮಣ್, ಅಶೋಕ್ ಭೂಷಣ್, ಸಂಜೀವ್ ಖಾನ್ ರನ್ನೊಳಗೊಂಡ ಸುಪ್ರೀಂಕೋರ್ಟ್ ನ ತ್ರಿಸದಸ್ಯ ಪೀಠ ರಿಟ್ ಅರ್ಜಿ ವಿಚಾರಣೆ ನಡೆಸಿತು.
ಮಿತ್ರಪಕ್ಷ ಪರ ಹಿರಿಯ ವಕೀಲ ಕಪಿಲ್ ಸಿಬಲ್ ವಾದ
ಮಹಾರಾಷ್ಟ್ರದ 288 ವಿಧಾನಸಭಾ ಕ್ಷೇತ್ರಗಳ ಪೈಕಿ ಸರ್ಕಾರ ರಚಿಸಲು 145ರ ಸಂಖ್ಯೆ ಹೊಂದಿರಬೇಕು. 144 ಶಾಸಕರ ಬೆಂಬಲವಿರುವ ಶಿವಸೇನೆಗೆ ರಾಜ್ಯಪಾಲರು ಸರ್ಕಾರ ರಚಿಸಲು ಆಹ್ವಾನ ನೀಡಲಿಲ್ಲ. ಬದಲಿಗೆ ರಾತ್ರೋರಾತ್ರಿ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಬಿಜೆಪಿಯ ದೇವೇಂದ್ರ ಫಡ್ನವೀಸ್ ಅವರನ್ನು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ಅವಕಾಶ ನೀಡಿದ್ದಾರೆ. ಇದರ ಜೊತೆ ಎನ್ ಸಿಪಿ ಪಕ್ಷದ ಶಾಸಕಾಂಗ ಸಭೆ ನಾಯಕರಲ್ಲದ ಅಜಿತ್ ಪವಾರ್ ಅವರಿಗೆ ಹೇಗೆ ಡಿಸಿಎಂ ಸ್ಥಾನ ನೀಡಿದರು ಎಂದು ಮಿತ್ರಪಕ್ಷಗಳ ಪರ ವಕೀಲ ಕಪಿಲ್ ಸಿಬಲ್ ಪ್ರಶ್ನಿಸಿದ್ದಾರೆ.
1978ರಲ್ಲಿ ಶರದ್ ಪವಾರ್ ಮಾಡಿದ್ದೇನು?: 'ಕರ್ಮ' ವಾಪಸ್!
ಸರ್ಕಾರಕ್ಕೆ ಬಹುಮತವಿದ್ದರೆ ಸಾಬೀತು ಮಾಡಲಿ
ರಾಜ್ಯಪಾಲರ ನಿಲುವು ಪಕ್ಷಪಾತಿಯವಾಗಿದೆ. ಒಂದು ವೇಳೆ ಬಿಜೆಪಿ, ಸರ್ಕಾರ ರಚಿಸುವಷ್ಟು ಬಹುಮತ ಹೊಂದಿದ್ದರೆ ನವೆಂಬರ್.30ರವರೆಗೂ ಯಾಕೆ ಬಹುಮತ ಸಾಬೀತು ಪಡಿಸಲು ಅವಕಾಶ ನೀಡಬೇಕು ಎಂದು ಮಿತ್ರಪಕ್ಷಗಳ ಪರ ಮತ್ತೊಬ್ಬ ಹಿರಿಯ ವಕೀಲ ಮನು ಸಿಂಘ್ವಿ ವಾದ ಮಂಡಿಸಿದ್ದಾರೆ. ಜೊತೆೆ ನವೆಂಬರ್.25ರಂದೇ ಸಿಎಂ ಬಹುಮತ ಸಾಬೀತುಪಡಿಸುವಂತೆ ಸೂಚಿಸಲು ಮನವಿ ಮಾಡಿದ್ದಾರೆ.
ಅವತ್ತು ವಜೂಭಾಯ್, ಇವತ್ತು ಕೌಶಿಯಾರ್!
ಮಹಾರಾಷ್ಟ್ರ ರಾಜಕಾರಣಕ್ಕೂ ಕರ್ನಾಟಕದ ರಾಜಕಾರಣಕ್ಕೂ ಸಾಕಷ್ಟು ಸಾಮ್ಯತೆಗಳಿವೆ. ಈಗ ನೆರೆ ರಾಜ್ಯ ಮಹಾರಾಷ್ಟ್ರದಲ್ಲಿನ ರಾಜಕೀಯ ಬೆಳವಣಿಗೆಗಳು ಕರ್ನಾಟಕದ ಹಳೆಯ ಇತಿಹಾಸವನ್ನು ನೆನಪಿಸುತ್ತಿದೆ. ಅಂದು ಬಿಜೆಪಿ ಸರ್ಕಾರ ರಚಿಸುವಲ್ಲಿ ಬಿಎಸ್ ವೈ ಸಿಕ್ಕಂತೆ ಇಂದು ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡ್ನವೀಸ್ ಅವರಿಗೆ ಸಿಕ್ಕಿದೆ. ಕರ್ನಾಟಕದಲ್ಲಿ ಅಂದು ಸದ್ದು ಮಾಡಿದ್ದು, ರಾಜ್ಯಪಾಲರಾದ ವಜೂಭಾಯ್ ವಾಲಾ ಅವರ ನಿರ್ಧಾರ. ಇಂದು ದೇಶದಲ್ಲಿ ಸದ್ದು ಮಾಡುತ್ತಿರುವುದು ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೌಶಿಯಾರ್ ತೀರ್ಮಾನ.
ಮಹಾರಾಷ್ಟ್ರ ಸರ್ಕಾರ ಬಿಕ್ಕಟ್ಟು; ಅಂಕಿ-ಸಂಖ್ಯೆಗಳ ಲೆಕ್ಕ
2018ರಲ್ಲಿ ಕರ್ನಾಟಕದಲ್ಲೂ ಅತಂತ್ರ ಪರಿಸ್ಥಿತಿ!
ಮೇ 12ರಂದು ಕರ್ನಾಟಕ ವಿಧಾನಸಭೆಯ 222 ಕ್ಷೇತ್ರಗಳಿಗೆ ಮತದಾನ ನಡೆಯಿತು. ಮೇ 15ರಂದು ಫಲಿತಾಂಶ ಪ್ರಕಟವಾಯಿತು. ಬಿಜೆಪಿ 104, ಕಾಂಗ್ರೆಸ್ 76, ಜೆಡಿಎಸ್ 37 ಸ್ಥಾನಗಳಲ್ಲಿ ಗೆಲುವು ದಾಖಲಿಸಿದರೆ, 4 ಕಡೆಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ದಿಗ್ವಿಜಯ ಸಾಧಿಸಿದ್ದರು. ಇನ್ನು, ರಾಮನಗರ, ಚನ್ನಪಟ್ಟಣ ಎರಡು ಕ್ಷೇತ್ರಗಳಲ್ಲಿ ಎಚ್.ಡಿ.ಕುಮಾರಸ್ವಾಮಿ ಜಯ ಗಳಿಸಿದ್ದು, ಬಳಿಕ ರಾಮನಗರ ಕ್ಷೇತ್ರಕ್ಕೆ ರಾಜೀನಾಮೆ ನೀಡಿದರು. ರಾಮನಗರ ಉಪ ಚುನಾವಣೆಯಲ್ಲಿ ಅನಿತಾ ಕುಮಾರಸ್ವಾಮಿ ಗೆಲುವು ಸಾಧಿಸಿದರು.
ಅಂದು ಬಹುಮತ ಸಾಬೀತಿಗೆ 15 ದಿನ ಅವಕಾಶ
ಬಹುಮತವಿಲ್ಲದಿದ್ದರೂ ಬಿ.ಎಸ್.ಯಡಿಯೂರಪ್ಪ ಮೇ 17, 2018ರಂದು ಮುಖ್ಯಮಂತ್ರಿಯಾಗಿ ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. 15 ದಿನದಲ್ಲಿ ಬಹುಮತ ಸಾಬೀತಿಗೆ ರಾಜ್ಯಪಾಲ ವಜೂಭಾಯ್ ವಾಲಾ, ಬಿ.ಎಸ್.ಯಡಿಯೂರಪ್ಪ ಅವರಿಗೆ ಅವಕಾಶ ನೀಡಿದರು. ಆದರೆ, ಅಂದು ಯಾವುದೇ ಸಚಿವರು ಸಹ ಯಡಿಯೂರಪ್ಪ ಅವರ ಜೊತೆ ಪ್ರಮಾಣ ವಚನ ಸ್ವೀಕಾರ ಮಾಡಲಿಲ್ಲ.
ರಾತ್ರಿಯಿಂದ ಬೆಳಗಾಗುವುದರಲ್ಲಿ ಏನೇನಾಯ್ತು?: ಮಹಾರಾಷ್ಟ್ರ 'ಕ್ಷಿಪ್ರ ಕ್ರಾಂತಿ'ಯ ಟೈಮ್ಲೈನ್
ಅಂದೂ ನ್ಯಾ.ಅಶೋಕ್ ಭೂಷಣ್, ಇಂದೂ ನ್ಯಾ.ಅಶೋಕ್ ಭೂಷಣ್!
ಇದರ ಮಧ್ಯೆ ರಾಜ್ಯಪಾಲ ವಜೂಭಾಯ್ ವಾಲಾ ಅವರ ನಡೆಯನ್ನು ಪ್ರಶ್ನಿಸಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಸುಪ್ರೀಂಕೋರ್ಟ್ ಮೊರೆ ಹೋದವು. ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮೇ 19 ರಂದೇ ಮಧ್ಯಾಹ್ನ 4 ಗಂಟೆಗೆ ವಿಶ್ವಾಸಮತ ಸಾಬೀತುಪಡಿಸಲು ಸೂಚಿಸಿತ್ತು. ಈ ಹಿಂದೆ ಮಹತ್ವದ ತೀರ್ಪು ನೀಡಿದ ಸುಪ್ರೀಂಕೋರ್ಟ್ ನ್ಯಾಯಾಧೀಶರ ಪೀಠದಲ್ಲಿ ನ್ಯಾ.ಅಶೋಕ್ ಭೂಷಣ್ ಕೂಡಾ ಇದ್ದರು. ಸದ್ಯ ಮಹಾರಾಷ್ಟ್ರ ರಿಟ್ ಅರ್ಜಿ ವಿಚಾರಣೆ ನಡೆಸುತ್ತಿರುವ ತ್ರಿಸದಸ್ಯ ಪೀಠದಲ್ಲೂ ಅದೇ ನ್ಯಾ.ಅಶೋಕ್ ಭೂಷಣ್ ಒಬ್ಬರಾಗಿದ್ದಾರೆ.
ಕರ್ನಾಟಕದ ವಿಚಾರದಲ್ಲಿ ಸುಪ್ರೀಂ ನೀಡಿದ್ದ ತೀರ್ಪಿನಲ್ಲೇನಿತ್ತು?
ಮೇ.16, 2018ರಂದು ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಬಿ.ಎಸ್.ಯಡಿಯೂರಪ್ಪ ಪ್ರಮಾಣ ವಚನ ಸಮಾರಂಭಕ್ಕೆ ತಡೆ ನೀಡಲು ನಿರಾಕರಿಸಿತು. ಆದರೆ, 15 ದಿನಗಳ ಬದಲಿಗೆ ಮೂರೇ ದಿನಗಳಲ್ಲಿ ಅಂದರೆ ಮೇ.19ರಂದೇ ಬಹುಮತ ಸಾಬೀತುಪಡಿಸುವಂತೆ ಸುಪ್ರೀಂಕೋರ್ಟ್ ಸೂಚನೆ ನೀಡಿತ್ತು. ಹಾಗಾದರೆ ಅಂದು ಸುಪ್ರೀಂಕೋರ್ಟ್ ನೀಡಿದ ಆದೇಶದ ಪ್ರಮುಖ ಅಂಶಗಳು ಏನು ಅಂತಾ ನೋಡುವುದಾದರೆ.
- ಮೇ.19 ರಂದೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಹುಮತ ಸಾಬೀತುಪಡಿಸಬೇಕು
- ಮಧ್ಯಾಹ್ನ 4 ಗಂಟೆಯೊಳಗೆ ಬಹುಮತ ಸಾಬೀತು ಪ್ರಕ್ರಿಯೆ ಮುಗಿಯಬೇಕು
- ನಿಯಮ 346ರ ಅಡಿಯಲ್ಲಿ ಧ್ವನಿಮತದ ಮೂಲಕ ಮತಎಣಿಕೆ ಕಾರ್ಯ
- ಬಹುಮತ ಸಾಬೀತು ಪ್ರಕ್ರಿಯೆಯನ್ನು ನೇರಪ್ರಸಾರ ಮಾಡಲು ಸುಪ್ರೀಂಕೋರ್ಟ್ ಸೂಚನೆ
- ಸಿಸಿ ಕ್ಯಾಮರಾ ಕಣ್ಗಾವಲಿನಲ್ಲಿ ಬಹುಮತ ಸಾಬೀತುಪಡಿಸಲು ಸೂಚನೆ
- ಈ ಹಿಂದೆಯೂ ಗುಪ್ತ ಮತದಾನ ಪ್ರಕ್ರಿಯೆಯನ್ನು ತಿರಸ್ಕರಿಸಿದ್ದ ಸುಪ್ರೀಂಕೋರ್ಟ್
- ಬಹುಮತ ಸಾಬೀತಿಗೂ ಮುನ್ನ ಆಡಳಿತಾತ್ಮಕ ನಿರ್ಧಾರ ತೆಗೆದುಕೊಳ್ಳುವಂತಿಲ್ಲ
ಬಹುಮತ ಸಾಬೀತಿನಲ್ಲಿ ಸೋತಿದ್ದ ಯಡಿಯೂರಪ್ಪ
ಸುಪ್ರೀಂಕೋರ್ಟ್ ಆದೇಶದಂತೆ 2018, ಮೇ.19ರಂದು ಬಿ.ಎಸ್.ಯಡಿಯೂರಪ್ಪ ಬಹುಮತ ಸಾಬೀತುಪಡಿಸಲು ಮುಂದಾದರು. ಆದರೆ, ಸಂಖ್ಯಾಬಲದ ಕೊರತೆ ಬಗ್ಗೆ ಅರಿವಿಗೆ ಬರುತ್ತಿದ್ದಂತೆ ವಿಶ್ವಾಸಮತಯಾಚನೆಗೂ ಮೊದಲೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ವಿಧಾನಸಭೆಯಲ್ಲಿ ಘೋಷಿಸಿದರು. ಅಲ್ಲಿಗೆ ಮೊದಲ ಬಾರಿಗೆ 7 ದಿನ, ಎರಡನೇ ಬಾರಿ 39 ತಿಂಗಳ ಮುಖ್ಯಮಂತ್ರಿ ಆಗಿದ್ದ ಯಡಿಯೂರಪ್ಪ, ಮೂರನೇ ಬಾರಿ ಸಿಎಂ ಆಗಿ 55 ಗಂಟೆಗಳಲ್ಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.
ಅಗ್ನಿಪರೀಕ್ಷೆಯಲ್ಲಿ ಮಹಾ ಸಿಎಂಗೆ ಗೆಲುವಾ ಸೋಲಾ?
ಮಹಾರಾಷ್ಟ್ರದಲ್ಲಿ ರಚನೆಯಾಗಿರುವ ನೂತನ ಸರ್ಕಾರಕ್ಕೂ ಕೂಡಾ ಬಹುಮತ ಸಾಬೀತುಪಡಿಸುವ ಅಗ್ನಿಪರೀಕ್ಷೆ ಎದುರಾಗಿದೆ. ಆದರೆ, ಮುಖ್ಯಮಂತ್ರಿ ಪಟ್ಟಕ್ಕೆ ಏರಿರುವ ದೇವೇಂದ್ರ ಫಡ್ನವೀಸ್ ವಿಶ್ವಾಸಮತಯಾಚನೆಗೆ ದಿನಾಂಕ ಫಿಕ್ಸ್ ಆಗಬೇಕಿದೆ. ನವೆಂಬರ್.25ರಂದು ಅಂದರೆ ನಾಳೆ ಈ ಬಗ್ಗೆ ಸುಪ್ರೀಂಕೋರ್ಟ್ ತೀರ್ಪು ನೀಡುವುದಾಗಿ ಹೇಳಿದೆ. ಒಂದು ವೇಳೆ ತುರ್ತು ವಿಶ್ವಾಸಮತಯಾಚನೆಗೆ ಕೋರ್ಟ್ ಸೂಚನೆ ನೀಡಿದ್ದೇ ಆದರೆ, ದೇವೇಂದ್ರ ಫಡ್ನವೀಸ್ ಸರ್ಕಾರ ಈ ಅಗ್ನಿ ಪರೀಕ್ಷೆಯಲ್ಲಿ ಪಾಸ್ ಆಗುತ್ತಾ ಫೇಲ್ ಆಗುತ್ತಾ ಅನ್ನೋದು ಇದೀಗ ಸಾಕಷ್ಟು ಕುತೂಹಲ ಕೆರಳಿಸಿದೆ.