ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು: 1989ರ ಅಜಿತ್, ಮುಲಾಯಂ ನೆನಪಾದ್ರು
ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಸತತ ಎರಡನೆಯ ಬಾರಿಗೆ ಬಿಜೆಪಿಯ ದೇವೇಂದ್ರ ಫಡ್ನವಿಸ್ ಅಧಿಕಾರ ಸ್ವೀಕರಿಸಿದ್ದಾರೆ. ಇಂದು ಸಿಎಂ ಕಚೇರಿಯನ್ನು ಪ್ರವೇಶಿಸಿದ್ದಾರೆ. ಇವರ ಬೆನ್ನ ಹಿಂದೆ ರಾಷ್ಟ್ರೀಯವಾದಿ ಕಾಂಗ್ರೆಸ್(ಎನ್ಸಿಪಿ) ಪಕ್ಷದ ಅಜಿತ್ ಪವಾರ್ ಅವರು ಉಪ ಮುಖ್ಯಮಂತ್ರಿಯಾಗಿದ್ದಾರೆ. ಮಹಾರಾಷ್ಟ್ರದಲ್ಲಿ ಶನಿವಾರದಿಂದ ಇಲ್ಲಿ ತನಕ ನಡೆದ ಬೆಳವಣಿಗೆಯನ್ನು ಗಮನಿಸಿದರೆ 1989ರಲ್ಲಿ ಉತ್ತರಪ್ರದೇಶದಲ್ಲಿ ನಡೆದ ಘಟನಾವಳಿಗಳು ನೆನಪಾಗುತ್ತದೆ.
ಇನ್ನೊಂದೆಡೆ ಶರದ್ ಪವಾರ್ ಅವರು ಮಾಡಿದ ರಾಜಕಾರಣದ ಕರ್ಮ 41 ವರ್ಷಗಳ ಬಳಿಕ ಅವರಿಗೆ ತಿರುಗೇಟು ನೀಡಿದೆ ಎಂದು ಭಾವಿಸಲಾಗಿದೆ. ನಾಲ್ಕು ದಶಕಗಳ ಹಿಂದೆ ಇದೇ ಶರದ್ ಪವಾರ್, ಕಾಂಗ್ರೆಸ್ನ ಮೈತ್ರಿಕೂಟಕ್ಕೆ ಕೈಕೊಟ್ಟು ಜನಸಂಘ (ಈಗಿನ ಬಿಜೆಪಿ) ಜತೆ ಕೈಜೋಡಿಸಿ ಸಮ್ಮಿಶ್ರ ಸರ್ಕಾರ ರಚಿಸಿದ್ದಲ್ಲದೆ, ಮುಖ್ಯಮಂತ್ರಿಯೂ ಆಗಿದ್ದರು. ಈಗ ಅಜಿತ್ ಪವಾರ್ ಅವರು ರಾಜಕೀಯ ತಂತ್ರಗಳನ್ನು ಕಲಿಸಿಕೊಟ್ಟ ಸ್ವತಃ ಚಿಕ್ಕಪ್ಪ ಶರದ್ ಪವಾರ್ ಗೆ ಆಘಾತವಾಗುವಂತೆ ಮಾಡಿದ್ದಾರೆ.
1978ರಲ್ಲಿ ಶರದ್ ಪವಾರ್ ಮಾಡಿದ್ದೇನು?: 'ಕರ್ಮ' ವಾಪಸ್!
ಮಹಾರಾಷ್ಟ್ರದಲ್ಲಿ ಶಿವಸೇನಾ-ಎನ್ಸಿಪಿ-ಕಾಂಗ್ರೆಸ್ ತ್ರಿಪಕ್ಷೀಯ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬರುತ್ತದೆ ಎಂದೇ ಹೇಳುತ್ತಿರುವಾಗ ಅಜಿತ್ ಪವಾರ್ ನೇತೃತ್ವದಲ್ಲಿ ಎನ್ಸಿಪಿಯ ಒಂದು ತಂಡ ಬಿಜೆಪಿ ಜತೆ ರಾತ್ರೋರಾತ್ರಿ ಸೇರಿಕೊಂಡು ಬೆಳಕು ಹರಿಯುವ ವೇಳೆಗೆ ಪ್ರಮಾಣವಚನ ಸ್ವೀಕರಿಸಿರುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಈ ಘಟನಾವಳಿಗಳ ಬಗ್ಗೆ ಶೀವಸೇನಾ-ಕಾಂಗ್ರೆಸ್- ಎನ್ಸಿಪಿ ದೂರು ನೀಡಿದ್ದು, ಸುಪ್ರೀಂಕೋರ್ಟ್ ತನ್ನ ನಿರ್ಣಯವನ್ನು ನೀಡಲಿದೆ.
1978ರಲ್ಲಿ ವಿಧಾನಸಭೆ ಚುನಾವಣೆ, ಶರದ್ ಗೆ ಸಿಎಂ ಪಟ್ಟ
ಉದ್ಧವ್ ಠಾಕ್ರೆ ನೇತೃತ್ವದಲ್ಲಿ ಅಲ್ಲಿ ಸರ್ಕಾರ ರಚನೆಯಾಗುವುದರಲ್ಲಿತ್ತು. ಎರಡು ಡಿಸಿಎಂ ಹುದ್ದೆಗಳ ಪೈಕಿ ಒಂದು ಅಜಿತ್ ಪವಾರ್ಗೆ ದೊರಕಲಿದೆ ಎನ್ನುವುದು ಖಾತ್ರಿಯಾಗಿತ್ತು. ಆದರೆ, ಬಿಜೆಪಿ ಜೊತೆ ಎನ್ಸಿಪಿಯ ಅಜಿತ್ ಪವಾರ್ ಕೈಜೋಡಿಸಿ ಸರ್ಕಾರ ರಚನೆಯಾಗಿದೆ.
1978ರಲ್ಲಿ ವಿಧಾನಸಭೆ ಚುನಾವಣೆ ನಡೆದಾಗ ಪ್ರತ್ಯೇಕವಾಗಿ ಸ್ಪರ್ಧಿಸಿದ್ದ ಕಾಂಗ್ರೆಸ್ (ಯು) ಮತ್ತು ಕಾಂಗ್ರೆಸ್ (ಐ) ಪಕ್ಷಗಳು ವಸಂತ್ದಾದ ಪಾಟೀಲ್ ನೇತೃತ್ವದಲ್ಲಿ ಮೈತ್ರಿ ಸರ್ಕಾರ ರಚಿಸಿದವು. ಆಗ ಜನತಾಪಕ್ಷ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಸರ್ಕಾರ ರಚಿಸಲು ಅಗತ್ಯ ಬಹುಮತವಿರಲಿಲ್ಲ. ಪಾಟೀಲ್ ಸರ್ಕಾರದಲ್ಲಿ ಸಚಿವರಾಗಿದ್ದ ಶರದ್ ಪವಾರ್, 1978ರ ಜುಲೈನಲ್ಲಿ ಕಾಂಗ್ರೆಸ್ (ಯು) ಪಕ್ಷದಿಂದ ಹೊರಬಂದು ಜನತಾಪಾರ್ಟಿಯೊಂದಿಗೆ ಸೇರಿ ಸರ್ಕಾರ ರಚಿಸಿದರು. ಇದರಿಂದ ಕಾಂಗ್ರೆಸ್ನ ಎರಡು ಬಣಗಳ ಮೈತ್ರಿ ಸರ್ಕಾರ ಪತನಗೊಂಡಿತು. 38 ವರ್ಷದ ಪವಾರ್, ಮಹಾರಾಷ್ಟ್ರದ ಅತ್ಯಂತ ಕಿರಿಯ ಮುಖ್ಯಮಂತ್ರಿಯಾದರು.
ಹಿರಿಯ ರಾಜಕಾರಣಿ ಮುಲಾಯಂ ಸಿಂಗ್ ಯಾದವ್ ಆಸ್ತಿ ವಿವರ
1989ರಲ್ಲಿ ಸಿಎಂ ಆಗಲು ಸಜ್ಜಾಗಿದ್ದ ಅಜಿತ್ ಸಿಂಗ್
ಜನತಾ ಪಾರ್ಟಿ, ಜನ ಮೋರ್ಚಾ, ಲೋಕದಳ(ಎ) ಹಾಗೂ ಲೋಕದಳ (ಬಿ) ಸೇರಿದ ಜನತಾ ಪರಿವಾರಕ್ಕೆ ಅಧಿಕಾರ ಲಭಿಸಿತ್ತು. 1989ರಲ್ಲಿ ಉತ್ತರಪ್ರದೇಶದ ಸಿಎಂ ಆಗಲು ಸಜ್ಜಾಗಿದ್ದ ಚೌಧರಿ ಅಜಿತ್ ಸಿಂಗ್ ಸಜ್ಜಾಗಿದ್ದರು. ಜನತಾದಳದ ಸರ್ಕಾರ ಸ್ಥಾಪನೆಯಾಗಿತ್ತು. ಮುಲಾಯಂ ಸಿಂಗ್ ಯಾದವ್ ಗೆ ಡಿಸಿಎಂ ಸ್ಥಾನ ನೀಡಲಾಗಿತ್ತು. ಆದರೆ, ಡಿಸಿಎಂ ಸ್ಥಾನ ತಿರಸ್ಕರಿಸಿದ ಮುಲಾಯಂ ಅವರು ಮುಖ್ಯಮಂತ್ರಿ ಕುರ್ಚಿ ಏರಿದ್ದು ಈಗ ಇತಿಹಾಸ.
ಅಜಿತ್ ಸಿಎಂ ಎಂದಿದ್ದ ಪ್ರಧಾನಿ ವಿಪಿಸಿಂಗ್
1989ರಲ್ಲಿ ಜನತಾದಳ 208 ಸ್ಥಾನ ಗಳಿಸಿತ್ತು. ಆದರೆ ಬಹಮತಕ್ಕೆ 6 ಸ್ಥಾನಗಳ ಕೊರತೆ ಎದುರಾಗಿತ್ತು. ಆಗಿನ್ನು ಉತ್ತರಾಖಂಡ್ ರಾಜ್ಯ ಸ್ಥಾಪನೆಯಾಗಿರಲಿಲ್ಲ. ಹೀಗಾಗಿ, 425 ಸದಸ್ಯ ಬಲ ಹೊಂದಿದ್ದ ಗಜಗಾತ್ರದ ಸಂಪುಟ ಸ್ಥಾಪನೆಗೆ 213 ಮ್ಯಾಜಿಕ್ ನಂಬರ್ ಆಗಿತ್ತು. ಅಂದಿನ ಪ್ರಧಾನಿ ವಿಶ್ವನಾಥ್ ಪ್ರತಾಪ್ ಸಿಂಗ್ ಅವರು ಚೌಧರಿ ಅಜಿತ್ ಸಿಂಗ್ ಅವರಿಗೆ ಸಿಎಂ ಸ್ಥಾನ, ಮುಲಾಯಂ ಸಿಂಗ್ ಯಾದವ್ ಗೆ ಉಪ ಮುಖ್ಯಮಂತ್ರಿ ಸ್ಥಾನ ಎಂದು ನಿಗದಿಪಡಿಸಿದ್ದರು. ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಎಲ್ಲರೂ ಸಜ್ಜಾಗುತ್ತಿದ್ದರು.
ಸದ್ದಿಲ್ಲದೆ ನಿರ್ಗಮಿಸಿದ ಶಕ್ತ ರಾಜಕಾರಣಿ ವಿಪಿ ಸಿಂಗ್
ಡಿಸಿಎಂ ಪಟ್ಟ ಬೇಡ ಎಂದ ಮುಲಾಯಂ ಮಾಡಿದ್ದೇನು?
ಡಿಸಿಎಂ ಪಟ್ಟ ಬೇಡ ಎಂದ ಮುಲಾಯಂ ಸಿಂಗ್ ಅವರು ಸಿಎಂ ಪಟ್ಟ ಹೊಂದಲು ಅಗತ್ಯ ಸಂಖ್ಯಾಬಲ ಹೊಂದಿದ್ದೇನೆ ಎಂದು ಜನ ಮೋರ್ಚಾ ಬೆಂಬಲಿಗರನ್ನು ತೋರಿಸಿದರು.
ವಿಧಿಇಲ್ಲದೆ ಹಿರಿಯ ನಾಯಕರಾದ ಮಧು ದಂಡವತೆ, ಮುಫ್ತಿ ಮೊಹಮ್ಮದ್ ಸಯೀದ್, ಚಿಮ್ಮಂಭಾಯಿ ಪಟೇಲ್ ಅವರನ್ನು ಲಕ್ನೋಗೆ ಕಳಿಸಿದ ವಿಪಿ ಸಿಂಗ್, ಮುಲಾಯಂ ಮನ ಓಲೈಕೆಯಲ್ಲಿ ತೊಡಗಿದರು. ಗುಪ್ತಮತದಾನ ಮೂಲಕ ಸಿಎಂ ಆಯ್ಕೆ ಬಗ್ಗೆ ಯೋಚಿಸಲಾಯಿತು.
ಮಾಫಿಯಾ ಡಾನ್ ಡಿಪಿ ಯಾದವ್ ನೆರವು
ಮಾಫಿಯಾ ಡಾನ್ ಡಿಪಿ ಯಾದವ್ ನೆರವು ಪಡೆದ ಮುಲಾಯಂ ಸಿಂಗ್ ಯಾದವ್, ಅಜಿತ್ ಸಿಂಗ್ ನಿಷ್ಠಾವಂತರಾಗಿದ್ದ 11 ಶಾಸಕರನ್ನು ತಮ್ಮತ್ತ ಸೆಳೆದುಕೊಂಡರು. ಬೇನಿ ಪ್ರಸಾದ್ ವರ್ಮಾ ಕೂಡಾ ಪವರ್ ಗೇಮ್ ನಲ್ಲಿ ಸಕತ್ ಆಟ ತೋರಿಸಿದರು.
ಉತ್ತರಪ್ರದೇಶದ ವಿಧಾನಸಭೆಯ ಸೆಂಟ್ರಲ್ ಹಾಲ್ ನಲ್ಲಿ ಗುಪ್ತ ಮತದಾನ ನಡೆಸಲಾಯಿತು. ಅಜಿತ್ ವಿರುದ್ಧ ಮುಲಾಯಂಗೆ 5 ಮತಗಳ ಅಂತರದಲ್ಲಿ ಜಯ ಲಭಿಸಿತು. ಡಿಸೆಂಬರ್ 05, 1989ರಂದು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಮುಲಾಯಂ ಸಿಂಗ್ ಯಾದವ್ ಪ್ರಮಾಣ ವಚನ ಸ್ವೀಕರಿಸಿದರು.
ಅಜಿತ್ ಸಿಂಗ್ ತೆರೆ ಮರೆಗೆ, ಮುಲಾಯಂ ಮುಂಚೂಣಿಗೆ
ಮುಲಾಯಂ ಸಿಎಂ ಆಗುತ್ತಿದ್ದಂತೆ, ಉತ್ತರಪ್ರದೇಶದ ರಾಜಕೀಯ ಚಿತ್ರಣ ಬದಲಾಗಿ ಹೋಯಿತು. ಅಜಿತ್ ಸಿಂಗ್(ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಪುತ್ರ) ಅವರ ರಾಜಕೀಯ ಬದುಕಿನ ಅವಸಾನ ಆರಂಭವಾಯಿತು.
ಮೂಂದೆ ಮುಲಾಯಂ ಸಿಂಗ್ ಅವರು ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ಮಹತ್ವದ ಪಾತ್ರವಹಿಸತೊಡಗಿದರು. 1992ರಲ್ಲಿ ಜನತಾದಳದಿಂದ ಬೇರ್ಪಟ್ಟು ಸಮಾಜವಾದಿ ಪಕ್ಷ ಸ್ಥಾಪಿಸಿದರು. ಅಜಿತ್ ಸಿಂಗ್ ಅವರು 198ರಲ್ಲಿ ರಾಷ್ಟ್ರೀಯ ಲೋಕದಳ(ಆರ್ ಎಲ್ ಡಿ) ಸ್ಥಾಪಿಸಿದರು. ಎಸ್ಪಿ ಹಾಗೂ ಆರ್ ಎಲ್ ಡಿ ಕೆಲ ಚುನಾವಣೆಗಳಲ್ಲಿ ಅಲಿಖಿತ ಹೊಂದಾಣಿಕೆ ಹೊಂದಿದ್ದರೂ ಈ ಇಬ್ಬರು ನಾಯಕರ ನಡುವೆ ಹಳಸಿದ ಸಂಬಂಧ ಮತ್ತೆ ಸರಿ ಹೋಗಲೇ ಇಲ್ಲ.