ಶ್ರವಣಬೆಳಗೊಳದಲ್ಲಿ ಮಹಾಮಸ್ತಕಾಭಿಷೇಕ: ಹಿನ್ನಲೆ, ಮಹತ್ವ
Recommended Video
ಶ್ರವಣಬೆಳಗೊಳ, ಫೆಬ್ರವರಿ 09: ರಾಜ್ಯ, ಸಂಪತ್ತು, ಅಧಿಕಾರ ಎಲ್ಲದರ ವ್ಯಾಮೋಹ ಬಿಟ್ಟು ವೈರಾಗ್ಯಮೂರ್ತಿಯಾಗಿ ನಿಂತ ಬಾಹುಬಲಿಗೆ ಪ್ರತಿ 12 ವರ್ಷಕ್ಕೊಮ್ಮೆ ಮಹಾಮಜ್ಜನ ನಡೆಯುವುದು ಜನಜನಿತ ಸಂಗತಿ.
ಈಗಾಗಲೇ(ಫೆ.7) ಹಾಸನದ ಶ್ರವಣಬೆಳಗೊಳದಲ್ಲಿ ಮಹಾಮಸ್ತಕಾಭಿಷೇಕ ಕಾರ್ಯಕ್ರಮಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ವಿಧ್ಯುಕ್ತ ಚಾಲನೆ ದೊರೆತಿದೆ. ಮಹಾಮಜ್ಜನ ಫೆ.17 ರಂದು ನಡೆಯಲಿದ್ದು, ದೇಶ ವಿದೇಶಗಳಿಂದ ಈ ಐತಿಹಾಸಿಕ ಕ್ಷಣವನ್ನು ಕಣ್ತುಂಬಿಸಿಕೊಳ್ಳಲು ಜನರು ಆಗಮಿಸುತ್ತಿದ್ದಾರೆ.
ಓ ಗೊಮ್ಮಟೇಶ್ವರನೆ, ನಗ್ನತೆಗೆ ನಾಚದಿಹೆ; ಬತ್ತಲೆಗೆ ಬೆದರದಿಹೆ
ಪ್ರತಿ 12 ವರ್ಷಗಳಿಗೊಮ್ಮೆ ನಡೆಯುವ ಈ ಮಹಾಮಸ್ತಕಾಭಿಷೇಕ ಜೈನರ ಪಾಲಿಗೆ ಅತ್ಯಂತ ದೊಡ್ಡ ಹಬ್ಬ. ಲಕ್ಷಾಂತರ ಸಂಖ್ಯೆಯಲ್ಲಿ ಜೈನರು ಆಗಮಿಸಿ ವೈರಾಗ್ಯ ಮೂರ್ತಿಯ ಮಹಾಮಜ್ಜನದ ಸಂಭ್ರಮವನ್ನು ಕಂಡು ಕೃತಾರ್ಥರಾಗುತ್ತಾರೆ.
In Pics: ಬಾಹುಬಲಿ ಮಹಾಮಜ್ಜನಕ್ಕೆ ರಾಷ್ಟ್ರಪತಿ ಕೋವಿಂದ್ ಚಾಲನೆ
ಫೆಬ್ರವರಿ 17 ರಿಂದ 25 ರವರೆಗೆ ನಡೆಯಲಿರುವ, 21 ನೇ ಶತನಮಾನದ ಎರಡನೇ(ಮೊದಲನೆಯದು 2006 ರಲ್ಲಿ ನಡೆದಿತ್ತು) ಮಹಾಮಸ್ತಕಾಭಿಷೇಕ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಮಹಾಮಸ್ತಕಾಭಿಷೇಕದ ಹಿನ್ನೆಲೆ ಮತ್ತು ಮಹತ್ವ ತಿಳಿಯುವುದು ಸಂದರ್ಭೋಚಿತ ಎನ್ನಿಸಿದೆ.
ಯಾರು ಈ ಬಾಹುಬಲಿ..?
ಮೊದಲ ಜೈನ ತೀರ್ಥಂಕರರಾದ ಭಗವಾನ್ ಋಷಭನಾಥರ 100 ಗಂಡು ಮಕ್ಕಳಲ್ಲಿ ಒಬ್ಬ ಬಾಹುಬಲಿ. ರಾಜಕುಟುಂಬದಲ್ಲಿ ಹುಟ್ಟಿದ್ದರಿಂದ ಸಹಜವಾಗಿಯೇ ಶೌರ್ಯ, ಧೈರ್ಯ ಮೈಗೂಡಿದ್ದ ವ್ಯಕ್ತಿತ್ವ. ಋಷಭನಾಥರಿಗೆ ವೈರಾಗ್ಯ ಬಂದು ತಮ್ಮ ರಾಜ್ಯವನ್ನು ನೂರು ಮಕ್ಕಳಿಗೂ ಹಂಚಿ ತಾವು ಜಪತಪದಲ್ಲಿ ತಲ್ಲೀನರಾದರು.
ಚಕ್ರರತ್ನವೂ ಶರಣಾಯ್ತು..!
ಈ ಸಂದರ್ಭದಲ್ಲಿ ಬಾಹುಬಲಿಯ ಸಹೋದರ ಭರತ ಭೂಲೋಕವನ್ನೆಲ್ಲ ಗೆದ್ದು ದಿಗ್ವಿಜಯನಾಗಿ ಬರುವಾಗ ಆತನ ಚಕ್ರರತ್ನ ಪುರಪ್ರವೇಶ ಮಾಡಲಿಲ್ಲ. ಭರತ ತನ್ನ ಸಹೋದರರನ್ನೂ ಗೆದ್ದರೆ ಮಾತ್ರವೇ ಆ ಚಕ್ರರತ್ನ ಪುರಪ್ರವೇಶ ಮಾಡುತ್ತದೆಂದು ತಿಳಿದಾಗ ಭರತ ತನ್ನೆಲ್ಲ ಸಹೋದರರಿಗೂ ವಿಷಯ ತಿಳಿಸುತ್ತಾನೆ. ಆದರೆ ಅಣ್ಣನೊಂದಿಗೆ ಹೊಡೆದಾಡಸಲು ಇಷ್ಟವಿಲ್ಲದ ತಮ್ಮಂದಿರೆಲ್ಲ ಆತನೆದುರು ಸೋಲೊಪ್ಪಿಕೊಂಡು ಸುಮ್ಮನಾಗುತ್ತಾರೆ. ಆದರೆ ಬಾಹುಬಲಿ ಮಾತ್ರ ಅಣ್ಣನೊಂದಿಗೆ ಯುದ್ಧಕ್ಕೆ ನಿಂತು ಜಯಶಾಲಿಯಾಗುತ್ತಾನೆ. ಈ ಸಂದರ್ಭದಲ್ಲಿ ಭರತ, ಬಾಹುಬಲಿಯ ಮೇಲೆ ಪ್ರಯೋಗಿಸಿದ ಚಕ್ರರತ್ನ ಬಾಹುಬಲಿಗೆ ಏನನ್ನೂ ಮಾಡದೆ ಅವನಿಗೆ ಪ್ರದಕ್ಷಿಣೆ ಹಾಕಿ ನಿಲ್ಲುತ್ತದೆ.
88ನೇ ಮಹಾಮಸ್ತಕಾಭಿಷೇಕಕ್ಕೆ ರಾಷ್ಟ್ರಪತಿ ವಿಧ್ಯುಕ್ತ ಚಾಲನೆ
ಪಶ್ಚಾತ್ತಾಪದ ಸುಳಿಯಲ್ಲಿ ಸಿಕ್ಕಿ...
ರಾಜ್ಯ, ಸಂಪತ್ತಿಗಾಗಿ ತನ್ನ ಒಡಹುಟ್ಟಿದ ಅಣ್ಣನೊಂದಿಗೇ ಯುದ್ಧಕ್ಕೆ ನಿಂತ ಬಾಹುಬಲಿಯ ನಡೆ ಸ್ವತಃ ಬಾಹುಬಲಿಯಲ್ಲೇ ಅಸಹ್ಯ ಹುಟ್ಟಿಸುತ್ತದೆ. ಪಶ್ಚಾತ್ತಾಪದ ಸುಳಿಯಲ್ಲಿ ಸಿಕ್ಕಿ ಒದ್ದಾಡುತ್ತಿದ್ದ ಬಾಹುಬಲಿ, ಬೇರೆ ದಾರಿ ಕಾಣದೆ ತನ್ನೆಲ್ಲ ಸಂಪತ್ತು, ರಾಜ್ಯವನ್ನೂ ಅಣ್ಣನ ಕೈಗೊಪ್ಪಿಸಿ ವೈರಾಗ್ಯವನ್ನಪ್ಪಿಕೊಳ್ಳುತ್ತಾನೆ.
ವಿರಾಗಿಯಾಗಿ ಬಾಹುಬಲಿ
ಈ ಘಟನೆಯ ನಂತರ ವಿಷಯ ಸುಖಗಳನ್ನೆಲ್ಲ ಗೆದ್ದು, ಪಾರಮಾರ್ಥಿಕ ಅನುಭಾವಕ್ಕಾಗಿ ಹಾತೊರೆಯತೊಡಗುತ್ತಾನೆ ಬಾಹುಬಲಿ. ತನ್ನ ತಂದೆ ಋಷಭನಾಥರಿಂದ ದೀಕ್ಷೆ ಪಡೆದು, ಕಟಿಣ ತಪವನ್ನಾಚರಿಸಿ, ಜ್ಞಾನ ಪಡೆಯುತ್ತಾನೆ. ಹೀಗೇ ರಾಜ್ಯ, ಸಂಪತ್ತು ಎಲ್ಲವನ್ನೂ ತೊರೆದು ಅಲೌಕಿಕ ಸುಖವೇ ಪರಮಸತ್ಯ ಎಂಬುದನ್ನು ಕಂಡುಕೊಂಡ ಬಾಹುಬಲಿಯ ಮಹೋನ್ನತ ವ್ಯಕ್ತಿತ್ವವನ್ನು ಆರಾಧಿಸುವುದಕ್ಕಾಗಿ, ಆತನ ಆದರ್ಶಗಳಲ್ಲಿ ಕೊಂಚವನ್ನಾದರೂ ಪಾಲಿಸುವ ಉದ್ದೇಶಕ್ಕಾಗಿ ಈ ಮಹಾಮಸ್ತಕಾಭಿಷೇಕ ನಡೆಯುತ್ತದೆ.
ಆಕಾಶದೆತ್ತರದ ವ್ಯಕ್ತಿತ್ವಕ್ಕೆ ಅಷ್ಟೇ ಎತ್ತರದ ಮೂರ್ತಿ!
ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಶ್ರಣಬೆಳಗೊಳದಲ್ಲಿ ಗಂಗ ವಂಶದ ಚಾವುಂಡರಾಯ ಕ್ರಿ.ಶ.981ರಲ್ಲಿ ಕಟ್ಟಿಸಿದ. ಈ ಮೂರ್ತಿ 57 ಅಡಿ ಎತ್ತರದಲ್ಲಿದ್ದು, ಏಕಶಿಲಾ ವಿಗ್ರಹ ಎಂಬುದು ಮತ್ತಷ್ಟು ವೈಶಿಷ್ಟ್ಯ ಸಂಗತಿ.
ಮಹಾಮಸ್ತಕಾಭಿಷೇಕ ಆರಂಭವಾಗಿದ್ದು ಯಾವಾಗ?
ಮಹಾಮಸ್ತಕಾಭಿಷೇಕವೂ ಮೂರ್ತಿ ನಿರ್ಮಾಣವಾದಾಗಿನಿಂದ ಅಂದರೆ ಕ್ರಿ.ಶ.981 ರಿಂದ ಪ್ರತಿ 12 ವರ್ಷಗಳಿಗೊಮ್ಮೆ ನಡೆಯುತ್ತಿದೆ ಎಂದು ಕೆಲವು ದಾಖಲೆಗಳು ಹೇಳುತ್ತವಾದರೂ, ಕ್ರಿ.ಶ.981 ರಿಂದಲೇ ಮಹಾಮಸ್ತಕಾಭಿಷೇಕ ನಡೆಯುತ್ತಿದೆಯಾ ಎಂಬ ಬಗ್ಗೆ ಸ್ಪಷ್ಟಮಾಹಿತಿ ಲಭ್ಯವಾಗಿಲ್ಲ. ಈ ಬಾರಿ ನಡೆಯುತ್ತಿರುವ ಮಹಾಮಸ್ತಕಾಭಿಷೇಕ 88ನೇಯದು.
ಈ ವರ್ಷ ಯಾವಾಗಿನಿಂದ ಆರಂಭ?
ಈ ವರ್ಷ ನಡೆಯುತ್ತಿರುವ 88 ನೇ ಮಹಾಮಸ್ತಕಾಭಿಷೇಕ ಶ್ರವಣಬೆಳಗೊಳದಲ್ಲಿ ಫೆಬ್ರವರಿ 17 ರಿಂದ 25 ರವರೆಗೆ ನಡೆಯಲಿದ್ದು, ಈಗಾಗಲೇ ಮಹಾಮಸ್ತಕಾಭಿಷೇಕದ ಕಾರ್ಯಕ್ರಮಗಳು ಫೆ.7 ರಿಂದ ಅಧಿಕೃತವಾಗಿ ಆರಂಭವಾಗಿದ್ದು, ರಾಷ್ಟ್ರಪತಿ ಕೋವಿಂದ್ ಅವರು ವಿಧ್ಯುಕ್ತ ಚಾಲನೆ ನೀಡಿದ್ದಾರೆ.