ಫಲಿತಾಂಶಕ್ಕೆ ಒಂದೇ ದಿನ ಬಾಕಿ, ವಿಪಕ್ಷಗಳಿಂದ ಕೊನೆಯ ಪ್ರಯತ್ನ!
ಹೈದರಾಬಾದ್, ಮೇ 22: ಲೋಕಸಭೆ ಚುನಾವಣೆ ಫಲಿತಾಂಶಕ್ಕೆ ಇನ್ನೊಂದೇ ಒಂದು ದಿನ ಬಾಕಿ ಇರುವಾಗ ವಿಪಕ್ಷಗಳಿಂದ ಕೊನೆಯ ಪ್ರಯತ್ನ ಎಂಬಂತೆ ಬಿರುಸಿನ ಚಟುವಟಿಕೆ ಆರಂಭವಾಗಿದೆ.
ಎನ್ ಸಿಪಿ ನಾಯಕ ಶರದ್ ಪವಾರ್ ಅವರು ಅಖಾಡಕ್ಕಿಳಿದಿದ್ದು, ವಿರೋಧ ಪಕ್ಷಗಳೆಲ್ಲವನ್ನೂ ಒಂದೆಡೆ ತರುವ ಪ್ರಯತ್ನದಲ್ಲಿದ್ದಾರೆ. ಮುಖ್ಯವಾಗಿ ತೆಲಂಗಾಣ ರಾಷ್ಟ್ರ ಸಮಿತಿಯ ಚಂದ್ರಶೇಖರ್ ರಾವ್ ಮತ್ತು ವೈಎಸ್ ಆರ್ ಕಾಂಗ್ರೆಸ್ ನ ಜಗನ್ಮೋಹನ್ ರೆಡ್ಡಿ ಅವರನ್ನು ಸೆಳೆಯುವುದು ಮಹಾಘಟಬಂಧನಕ್ಕೆ ಭಾರೀ ದೊಡ್ಡ ಸವಾಲಾಗಿದೆ.
ಕೆಸಿಆರ್ ಗೂ ಸ್ವಾಗತ: ಬಿಜೆಪಿ ನಿದ್ದೆ ಕೆಡಿಸಿದ ನಾಯ್ಡು ಶಾಕಿಂಗ್ ಹೇಳಿಕೆ
ಚುನಾವಣೋತ್ತರ ಸಮೀಕ್ಷೆ ಫಲಿತಾಂಶವು ಎನ್ ಡಿಎ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತದೆ ಎಂದಿದ್ದು ವಿಪಕ್ಷಗಳೆಲ್ಲವನ್ನೂ ಒಂದಾಗಿಸಿದೆ. ಕಾಂಗ್ರೆಸ್ ಜೊತೆಗೆ ಕೈಜೋಡಿಸುವುದಕ್ಕೆ ಒಲ್ಲೆ ಎಂದಿದ್ದ ಬಿಎಸ್ಪಿ ನಾಯಕಿ ಮಾಯಾವತಿ, ಟಿಎಂಸಿ ಮಮಮತಾ ಬ್ಯಾನರ್ಜಿ ಮುಂತಾದವರೂ ಇದೀಗ ಕಾಂಗ್ರೆಸ್ ನೇತೃತ್ವದ ಮಹಾಘಟಬಂಧನಕ್ಕೆ ಬೆಂಬಲ ನೀಡುವುದು ಅನಿವಾರ್ಯವಾಗಿದೆ.
ಆದರೆ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಮತ್ತು ವೈಎಸ್ ಆರ್ ಕಾಂಗ್ರೆಸ್ ಮುಖಂಡ ಜಗನ್ಮೋಹನ್ ರೆಡ್ಡಿ ಅವರು ಚುನಾವಣೋತ್ತರ ಸಮೀಕ್ಷೆಯ ಫಲಿತಾಂಶದ ನಂತರ ತಟಸ್ಥವಾಗಿದ್ದಾರೆ. ತೃತೀಯ ರಂಗದ ಓಡಾಟವನ್ನೂ ಕೆಸಿಆರ್ ಸದ್ಯಕ್ಕೆ ನಿಲ್ಲಿಸಿದ್ದಾರೆ.
ಈ ಎಲ್ಲಾ ಬೆಳವಣಿಗೆಯಿಂದಾಗಿ ಕೊನೆಯ ಕ್ಷಣದಲ್ಲಿ ಕೆಸಿಆರ್ ಮತ್ತು ವೈಎಸ್ ಆರ್ ಕಾಂಗ್ರೆಸ್ ತಮ್ಮ ಬೆಂಬಲವನ್ನು ಎನ್ ಡಿಎ ಗೆ ಘೋಷಿಸುವ ಸಾಧ್ಯತೆಯೂ ಇರುವುದರಿಂದ ಮಹಾಘಟಬಂಧನದ ನಾಯಕರು ಆತಂಕಗೊಂಡಿದ್ದಾರೆ.
ಮಹಾಘಟಬಂಧನಕ್ಕೆ ಜಗನ್ ರೆಡ್ಡಿ, ಕೆಸಿಆರ್: ಮಾತುಕತೆಗೆ ಕಮಲ್ ನಾಥ್
ಆದರೆ ಚುನಾವಣೋತ್ತರ ಸಮೀಕ್ಷೆಗಳ ಫಲಿತಾಂಶದಂತೆಯೇ ಎನ್ ಡಿಎ ಪೂರ್ಣ ಬಹುಮತ ಪಡೆದು ಅಧಿಕಾರಕ್ಕೆ ಬಂದರೆ ವಿಪಕ್ಷಗಳ ಯಾವ ಸ್ಟ್ರಾಟಜಿಯೂ ಫಲ ನೀಡುವುದಿಲ್ಲ. ಆದರೆ ಎನ್ ಡಿಎ ಅಲ್ಪ ಮತಕ್ಕೇನಾದರೂ ಕುಸಿದರೆ ಆಗ ಮಹಾಘಟಬಂಧನಕ್ಕೆ ಎಲ್ಲಾ ಪ್ರಾದೇಶಿಕ ಪಕ್ಷಗಳ ನಾಯಕರೂ ಬೆಂಬಲ ನೀಡಿದರೆ ಅಚ್ಚರಿಯೇನಿಲ್ಲ.