ಚುನಾವಣೆ ಗೆಲ್ಲೋಕೆ ಬೇಕಾಗಿರೋದು ಮೂರೇ ಮೂರು:ಜಾತಿ, ಜಾತಿ ಮತ್ತು ಜಾತಿ!
Recommended Video
ಮಂಡ್ಯ, ಏಪ್ರಿಲ್ 05: ಕರ್ನಾಟಕದಲ್ಲಿ ಚುನಾವಣೆ ಗೆಲ್ಲೋಕೆ ಬೇಕಾಗಿರೋದು ಮೂರೇ ಮುಖ್ಯವಾದ ಅಂಶ. ಒಂದು ಜಾತಿ, ಎರಡು ಜಾತಿ ಮತ್ತು ಮೂರು ಜಾತಿ!
ಹೌದು, ಕರ್ನಾಟಕದ ರಾಜಕೀಯ ನಿಂತಿರುವುದೇ ಜಾತಿಯ ಮೇಲೆ ಎಂದು ರಾಷ್ಟ್ರ ಮಟ್ಟದಲ್ಲೂ ಮಾತಿದೆ. ರಾಜ್ಯದಲ್ಲಿ ನಡೆದ ಚುನಾವಣೆಗಳು, ಸೋಲು-ಗೆಲುವುಗಳ ಲೆಕ್ಕಾಚಾರಕ್ಕೆ ನಿಂತರೆ ಆ ಮಾತು ಸತ್ಯ ಎಂಬುದಕ್ಕೆ ಬೇಕಷ್ಟು ಪುರಾವೆ ಸಿಗುತ್ತವೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಮಂಡ್ಯದಲ್ಲಿ ಜಾತಿ ಲೆಕ್ಕಾಚಾರಗಳು ಹೇಗೆಲ್ಲ ಕೆಲಸ ಮಾಡುತ್ತವೆ ಎಂಬುದು ಕಣ್ಣೆದುರಲ್ಲೇ ಕಾಣಿಸುತ್ತಿದೆ. ಜಾತಿ ಎಂಬುದು ಕರ್ನಾಟಕದ ಎಷ್ಟೋ ಸಮುದಾಯದ ಮಟ್ಟಿಗೆ ಒಂದು ಭಾವನಾತ್ಮಕ ವಿಷಯ. ಅದನ್ನು ಚೆನ್ನಾಗಿಯೇ ಬಲ್ಲ ರಾಜಕಾರಣಿಗಳು ಜಾತಿ ಎಂಬ ಅಸ್ತ್ರವನ್ನು ಬತ್ತಳಿಕೆಯಲ್ಲಿಟ್ಟುಕೊಂಡು ಮತದಾರರನ್ನು ಹೇಗೆಲ್ಲ ಆಟ ಆಡಿಸಬಹುದು ಎಂಬುದಕ್ಕೆ ತಾಜಾ ಉದಾಹರಣೆಯಾಗಿ ಮಂಡ್ಯ ಜಿಲ್ಲೆಯ ರಾಜಕಾರಣ ನಮ್ಮ ಮುಂದೆ ತೆರೆದುಕೊಂಡಿದೆ.
ಒಕ್ಕಲಿಗ ಸಮುದಾಯದ ಜನರೇ ಹೆಚ್ಚಿರುವ ಮಂಡ್ಯದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ತಮ್ಮ ಹಿಡಿತ ಸಾಧಿಸಿವೆ. ಬಿಜೆಪಿಗೆ ಇಲ್ಲಿ ಅಸ್ತಿತ್ವವಿಲ್ಲ. ಆದರೆ ಈ ಬಾರಿಯ ಚುನಾವಣೆ ಮತ್ತಷ್ಟು ಕುತೂಲ ಕೆರಳಿಸಿದ್ದಕ್ಕೆ ಕಾರಣ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯಾಗಿ ಟಿಕೆಟ್ ನೀಡದ ಕಾರಣಕ್ಕೆ ಬಂಡಾಯ ಎದ್ದು, ಮಂಡ್ಯದ ಮಾಜಿ ಸಂಸದ, ನಟ ಅಂಬರೀಶ್ ಅವರ ಪತ್ನಿ ಸುಮಲತಾ ಅಂಬರೀಶ್ ಅವರು ಈ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು.
ಸುಮಲತಾ ಜಾತಿ ಪ್ರಸ್ತಾಪಿಸಿದ ಶಿವರಾಮೇಗೌಡ ವಿರುದ್ಧ ಕ್ರಮ: ಎಚ್ ವಿಶ್ವನಾಥ್
ಅಷ್ಟೇ ಅಲ್ಲ, ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರು ಇಲ್ಲಿಂದ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಇದೀಗ ಚುನಾವಣೆಯ ಕಾವೇರಿದ ಮೇಲೆ ಅಭ್ಯರ್ಥಿಗಳ ಜಾತಿಯೇ ಚುನಾವಣಾ ಸ್ಪರ್ಧೆಗೆ ಬಹುಮುಖ್ಯ ಮಾನದಂಡವಾಗಿ ಪರಿಣಮಿಸಿದ್ದನ್ನು ಮಂಡ್ಯದ ದುರ್ವಿಧಿ ಎಂದರೆ ತಪ್ಪಾಗಲಾರದು!
ಸುಮಲತಾ ಮಂಡ್ಯದ ಗೌಡ್ತಿ ಅಲ್ಲ!
ಮಂಡ್ಯದ ಹಾಲಿ ಸಂಸದ, ಜೆಡಿಎಸ್ ಮುಖಂಡ ಎಲ್ ಆರ್ ಶಿವರಾಮೇ ಗೌಡರು, "ಸುಮಲತಾ ಅವರು ಮಂಡ್ಯದ ಗೌಡ್ತಿ ಅಲ್ಲ. ಅವರು ನಾಯ್ಡು ಸಮುದಾಯದವರು. ಅವರನ್ನು ಬೆಂಬಲಿಸುತ್ತಿರುವ ನಟ ದರ್ಶನ್ ಸಹ ನಾಯ್ಡು ಸಮುದಾಯದವರು" ಎಂಬ ಹೇಳಿಕೆ ನೀಡಿದ್ದರು. ಚುನಾವಣೆಯ ಸಮಯದಲ್ಲಿ ಇದು ಹೇಗೆಲ್ಲ ಕೆಲಸ ಮಾಡಬಹುದು ಎಂಬುದನ್ನು ಊಹಿಸುವುದಕ್ಕೂ ಸಾಧ್ಯವಿಲ್ಲ. ಏಕೆಂದರೆ ಇಡೀ ರಾಜ್ಯದ ಮತದಾರರಿಗಿಂತ ಮಂಡ್ಯದ ಮತದಾರನ ಮನಸ್ಥಿತಿ ಭಿನ್ನ. ಇದು ಸುಮಲತಾ ಅವರಿಗೆ ಮಾರಕವೂ ಆಗಬಹುದು, ಅಚ್ಚರಿ ಎಂಬಂತೆ ಪೂರಕವೂ ಆಗಬಹುದು.
ಶಿವರಾಮೇಗೌಡ ಕ್ಷಮೆಯಾಚಿಸಲಿ:ಮೈಸೂರು ಜಿಲ್ಲಾ ನಾಯ್ಡು ಸಮಾಜ ಆಗ್ರಹ
'ಜಾತ್ಯತೀತ' ಎಂದರೆ ಇದೇನಾ?
ಶಿವರಾಮೇ ಗೌಡರ ಮಾತಿಗೆ ಪ್ರತಿಕ್ರಿಯೆ ನೀಡಿದ್ದ ಸುಮಲತಾ, ತನ್ನ ಪಕ್ಷದ ಹೆಸರಿನಲ್ಲೇ 'ಜಾತ್ಯತೀತ' ಎಂಬ ಪದವನ್ನಿಟ್ಟುಕೊಂಡಿದ್ದರೂ ಹೀಗೆ ಜಾತಿಯನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುವುದು ಹೇಗೆ ಸರಿ? ನಾನು ಅವರ ಧರ್ಮಪತ್ನಿ, ಅಂಬರೀಶ್ ಅವರ ಮಗ ಅಭಿಷೇಕ್ 'ಗೌಡ'ನ ತಾಯಿ, ನಾನು ಈ ಮಂಡ್ಯ ನೆಲದ ಮಗಳು..." ಎಂಬೆಲ್ಲ ಭಾವನಾತ್ಮಕ ಮಾತುಗಳನ್ನಾಡಿ ಮಂಡ್ಯದ ಜನರ ಕಣ್ಣಲ್ಲಿ ನೀರು ಭರಿಸಿದರು.
ಇದೇ ಮೊದಲಲ್ಲ!
ಕರ್ನಾಟಕದಲ್ಲಿ ಜಾತಿ ರಾಜಕಾರಣ ಇದೇ ಮೊದಲಲ್ಲ. ಅದರಲ್ಲೂ ಮಂಡ್ಯದಲ್ಲಿ ರಾಜಕಾರಣ ನಡೆಯುವುದೇ ಜಾತಿಯ ಮೇಲೆ. 2013 ರ ಲೋಕಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಟಿ ರಮ್ಯಾ(ದಿವ್ಯ ಸ್ಪಂದನ) ಅವರ ವಿರುದ್ಧವೂ ಇದೇ ಜಾತಿ ಅಸ್ತ್ರವನ್ನು ಹೂಡಲಾಗಿತ್ತು. ಅವರು ಮಂಡ್ಯದ ಗೌಡ್ತಿ ಅಲ್ಲ ಎಂದು ಬೊಬ್ಬೆಹೊಡೆಯಲಾಗಿತ್ತು. ಆದರೆ ಜಾತಿ ಲೆಕ್ಕಾಚಾರ ಫಲಕೊಡದೆ ಅವರು ಚುನಾವಣೆಯಲ್ಲಿ ಗೆದ್ದರು! ಅಂದು ಪ್ರತಿಸ್ಪರ್ಧಿ ಜೆಡಿಎಸ್ ರಮ್ಯಾ ಅವರ ಜನ್ಮರಹಸ್ಯವನ್ನು ಭೇದಿಸಲು ಹೊರಟು, ಅವರ ಜಾತಿಯ ಜಾಡುಹುಡುಕಲು ಹೊರಟಿದ್ದೇ ರಮ್ಯಾ ಅವರ ಗೆಲುವಿಗೂ ಕಾರಣವಾಗಿತ್ತು. ಆದರೆ 2014 ರಲ್ಲಿ ಹಾಗಾಗಲಿಲ್ಲ. ಹಳೇ ಘಟನೆಗಳನ್ನೇ ಮನಸ್ಸಿನಲ್ಲಿಟ್ಟುಕೊಂಡು ಜನರ ಬಳಿ ಅನುಕಂಪದ ಮತ ಕೇಳಲು ಹೊರಟ ರಮ್ಯಾ ಅವರಿಗೆ ಇದೇ ಜಾತಿ ಲೆಕ್ಕಾಚಾರವೇ ಮುಳುವಾಗಿ, ಸೋಲುಣ್ಣುವಂತೆ ಮಾಡಿತ್ತು. ಜೆಡಿಎಸ್ ನ ಸಿಎಸ್ ಪುಟ್ಟರಾಜು ಗೆಲುವು ಸಾಧಿಸಿದ್ದರು.
ಒಕ್ಕಲಿಗ ಮತಗಳೇ ನಿರ್ಣಾಯಕ
ಮಂಡ್ಯದ ಒಟ್ಟು 20,58,426 ಜನಸಂಖ್ಯೆಯಲ್ಲಿ ಶೇ 83.8ರಷ್ಟು ಮಂದಿ ಗ್ರಾಮೀಣ ಭಾಗದಲ್ಲಿ ವಾಸವಾಗಿದ್ದರೆ, ಶೇ 16.72ರಷ್ಟು ನಗರ ಪ್ರದೇಶದಲ್ಲಿದ್ದಾರೆ. ಶೇ 14.73ರಷ್ಟು ಪರಿಶಿಷ್ಟ ಜಾತಿ ಹಾಗೂ ಶೇ 1.94ರಷ್ಟು ಪರಿಶಿಷ್ಟ ಪಂಗಡದವರಿದ್ದಾರೆ. ಎಂಟು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 16,69,262 ಮತದಾರರು ಮತದಾರರಿದ್ದಾರೆ. ಈ ಪೈಕಿ 8,39,052 ಪುರುಷರು, 8,30,210 ಮಹಿಳಾ ಮತದಾರರಿದ್ದಾರೆ. ಒಕ್ಕಲಿಗರ ಮತಗಳು ಇಲ್ಲಿ ನಿರ್ಣಾಯಕ. ಉಳಿದಂತೆ ಪರಿಶಿಷ್ಟ ಜಾತಿ, ಪಂಗಡ, ವೀರಶೈವ, ಕುರುಬ, ಮುಸ್ಲಿಮ್, ಬ್ರಾಹ್ಮಣ, ಕ್ರೈಸ್ತರ ಮತಗಳು ಕ್ರಮವಾಗಿ ಲೆಕ್ಕಕ್ಕೆ ಸಿಗಲಿದೆ.
ಜಾತಿಯೇ ಮಾನದಂಡ
ಚುನಾವಣೆಯಲ್ಲಿ ಸ್ಪರ್ಧಿಸೋಕೆ ಒಬ್ಬ ಅಭ್ಯರ್ಥಿಯ ಅರ್ಹತೆಗಳು ಮಾನದಂಡವಾಗಬೇಕಾ ಅಥವಾ ಜಾತಿಯಾ? ಒಬ್ಬ ಅಭ್ಯರ್ಥಿ ಅರ್ಹತೆ ಇದ್ದೂ, ಆ ಕ್ಷೇತ್ರದ ಬಹುಸಂಖ್ಯಾತ ಜಾತಿಗೆ ಸೇರದಿದ್ದರೆ ಸೋಲುವ ಅಪಾಯ ಹೆಚ್ಚು, ಅದೇ ಅರ್ಹತೆ ಹೆಚ್ಚಿಲ್ಲದಿದ್ದರೂ ಆ ಕ್ಷೇತ್ರದ ಬಹುಸಂಖ್ಯಾತ ಜಾತಿಗೆ ಸೇರಿದ್ದರೆ ಸುಲಭವಾಗಿ ಗೆಲ್ಲಬಹುದು. ಅಂದರೆ ಮತದಾರ ಮತಹಾಕುವುದು ಅರ್ಹತೆಗಲ್ಲ, ಜಾತಿಗೆ! ಇಂಥ ಪರಿಸ್ಥಿತಿಯಿಂದ ಹೊರಬಂದು, ಅಭ್ಯರ್ಥಿಯ ಅರ್ಹತೆಯನ್ನೇ ಆಯ್ಕೆಯ ಮಾನದಂಡವಾಗಿಸಿಕೊಳ್ಳುವ ಪ್ರಬುದ್ಧತೆಯನ್ನು ಮತದಾರ ಬೆಳೆಸಿಕೊಳ್ಳಬೇಕಾಗಿರುವುದು ಈ ಹೊತ್ತಿನ ಅಗತ್ಯ.