ಬಿಜೆಪಿ ಶಿಕಾರಿ ಮಾಡುವುದೇ ಗುರಿ, ಕಾಂಗ್ರೆಸ್ ನಿಂದ ಹತ್ಯಾರ ತಯಾರಿ
"ಲೋಕಸಭೆ ಚುನಾವಣೆ ಈ ವರ್ಷದ ಕೊನೆ ಅಂದರೆ ಡಿಸೆಂಬರ್ ಹೊತ್ತಿಗೆ ನಡೆಯಬಹುದು. ಅಕ್ಟೋಬರ್ ಗೆ ಅಧಿಸೂಚನೆ ಹೊರಡಿಸಬಹುದು" ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಅಲ್ಲಿಗೆ ಇನ್ನು ಮೂರು ತಿಂಗಳಿಗೆ ಲೋಕಸಮರಕ್ಕೆ ವಾತಾವರಣ, ಸನ್ನಿವೇಶ ಸಿದ್ಧಗೊಳ್ಳುವುದು ಖಚಿತ ಎಂಬಂತಿದೆ ದಿನೇಶ್ ಅವರ ಮಾತು.
ಈ ಮಾತಿಗೆ ಪುಷ್ಟಿ ಕೊಡುವಂತೆ ಕರ್ನಾಟಕ ಕಾಂಗ್ರೆಸ್ ನ ಹಿರಿಯ ನಾಯಕರು ಪಕ್ಷದ ಕಾರ್ಯಕರ್ತರಿಗೆ ಲೋಕಸಭೆ ಚುನಾವಣೆಗೆ ಸಿದ್ಧರಾಗುವಂತೆ ಸಂದೇಶ ರವಾನಿಸಿದ್ದಾರೆ. ದಿನೇಶ್ ಅವರೇ ಹೇಳಿರುವಂತೆ, ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಪರಮೇಶ್ವರ್, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಆಗಸ್ಟ್ ಮೂರರಂದು ಸಭೆ ನಡೆಸಲಿದ್ದಾರೆ.
ಲೋಕಸಭೆ ಚುನಾವಣೆ : ಕರ್ನಾಟಕ ಕಾಂಗ್ರೆಸ್ ತೆಗೆದುಕೊಂಡ ನಿರ್ಧಾರಗಳು
ರಾಜ್ಯದ ಇಪ್ಪತ್ತೆಂಟು ಲೋಕಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಚುನಾವಣೆ ಕೆಲಸಗಳನ್ನು ಪರಾಮರ್ಶೆ ಮಾಡಲಿದ್ದಾರೆ. ಇನ್ನು ಕಾಂಗ್ರೆಸ್ ಜಿಲ್ಲಾ ಸಮಿತಿ ಹಾಗೂ ಬ್ಲಾಕ್ ಮಟ್ಟದಲ್ಲಿ ಹೆಚ್ಚು ಸಮರ್ಥರ ನೇತೃತ್ವಕ್ಕೆ ನೇಮಕ ಮಾಡುವ ಪ್ರಕ್ರಿಯೆ ನಡೆಯಲಿದೆ. ಅದರರ್ಥ ಸಂಘಟನೆಯಲ್ಲಿ ಭಾರೀ ಬದಲಾವಣೆ ನಿರೀಕ್ಷಿಸಬಹುದು.
ಬಿಜೆಪಿಯನ್ನು ಮಣಿಸುವುದಷ್ಟೇ ಗುರಿ
ಇನ್ನು ಸಿದ್ದರಾಮಯ್ಯ ಅವರೇ ಪಕ್ಷದ ಕಾರ್ಯಕರ್ತರಿಗೆ ಕೆಲವು ಸಲಹೆಗಳನ್ನು ನೀಡಿದ್ದಾರೆ. "ಒಳ್ಳೆ ಕೆಲಸ ಮಾಡಿದ ಹೊರತಾಗಿಯೂ ವಿಧಾನಸಭೆ ಚುನಾವಣೆಯಲ್ಲಿ ಸೋಲಬೇಕಾಯಿತು. ಹಿಂದುತ್ವದ ಆಧಾರದಲ್ಲಿ ಚುನಾವಣೆ ಪ್ರಚಾರ ಮಾಡಿದ ಬಿಜೆಪಿ ಅದರಲ್ಲಿ ಯಶಸ್ಸು ಪಡೆಯಿತು. ಆದ್ದರಿಂದ ಲೋಕಸಭೆ ಚುನಾವಣೆಗೆ ರಣತಂತ್ರ ಹೇಗಿರಬೇಕು ಅನ್ನೋದನ್ನು ತೀರ್ಮಾನ ಮಾಡಬೇಕಿದೆ. ಈಗ ನಮ್ಮ ಗುರಿ ಏನಿದ್ದರೂ ಬಿಜೆಪಿಯನ್ನು ಮಣಿಸುವುದಷ್ಟೇ. ಅದೇ ಗುರಿಯಿಟ್ಟುಕೊಂಡು ಮುಂದೆ ಸಾಗೋಣ" ಎಂದು ಹೇಳಿದ್ದಾರೆ. ಎಂಬ ಮಾತು ಪಕ್ಷದ ಒಳಗಿನ ಮೂಲಗಳೇ ಹೇಳುತ್ತಿವೆ.
ಮತ ಗಳಿಕೆ ಪ್ರಮಾಣದಲ್ಲಿ ಕಾಂಗ್ರೆಸ್ ಮುಂದೆ
ಆದರೆ, ದಿನೇಶ್ ಗುಂಡೂರಾವ್ ಮಾತು ಬೇರೆ ರೀತಿಯಲ್ಲಿದೆ. ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ ಗಳಿಕೆ ಪ್ರಮಾಣ ಹೆಚ್ಚಿದೆ. ಅಂದರೆ ಜನರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದಾರೆ. ಪಕ್ಷದ ನಾಯಕರು ಈಗ ಬಿಜೆಪಿಯ ಸುಳ್ಳು ಆರೋಪಗಳನ್ನು ಜನರ ಮುಂದೆ ಇಡಬೇಕು ಹಾಗೂ ಕಾಂಗ್ರೆಸ್ ಪಕ್ಷವು ಎಲ್ಲ ಜಾತಿ- ಧರ್ಮದವರಿಗೆ ಸೇರಿದ್ದು ಎಂಬುದನ್ನು ಮನದಟ್ಟು ಮಾಡಿಸಬೇಕು ಎಂಬ ಕಡೆಗೆ ಚಿಂತನೆ ಶುರುವಾಗಿದೆ.
ಲೋಕಸಭೆ ಚುನಾವಣೆಗೆ ಯುವ ಪಡೆ ಕಟ್ಟುತ್ತಿದ್ದಾರೆ ದಿನೇಶ್ ಗುಂಡೂರಾವ್
'ಕೈ' ಕಾರ್ಯಕರ್ತರಲ್ಲಿ ಅಸಮಾಧಾನ
ಇನ್ನು ಇತ್ತೀಚಿನ ರಾಜಕೀಯ ಬೆಳವಣಿಗೆಯಲ್ಲಿ ಕಾಂಗ್ರೆಸ್ ಪಕ್ಷವು ಕರ್ನಾಟಕದಲ್ಲಿ ಜೆಡಿಎಸ್ ಗೆ ಬೆಂಬಲ ನೀಡಿ, ಕುಮಾರಸ್ವಾಮಿ ಮುಖ್ಯಮಂತ್ರಿ ಆಗುವುದಕ್ಕೆ ಒಪ್ಪಿಗೆ ನೀಡಿದ್ದ ಬಗ್ಗೆ ಪಕ್ಷದ ಕಾರ್ಯಕರ್ತರಲ್ಲಿ ಅಸಮಾಧಾನವಿದೆ. ಇದು ಪಕ್ಷದ ಹೈಕಮಾಂಡ್ ನಿರ್ಧಾರ. ಸದ್ಯದ ಪರಿಸ್ಥಿತಿಯಲ್ಲಿ ಜಾತ್ಯತೀತ ಪಕ್ಷಗಳು ಒಟ್ಟಾಗಿರುವುದು ಬಹಳ ಮುಖ್ಯ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಸಮರ್ಥನೆ ಕೂಡ ಮಾಡಿಕೊಂಡಿದ್ದಾರೆ. ಲೋಕಸಭೆ ಚುನಾವಣೆಗೆ ಹೋಗುವಾಗ ಈ ಅಂಶ ಹೇಗೆ ಪರಿಣಾಮ ಬೀರಬಹುದು ಎಂಬ ಪ್ರಶ್ನೆಗೆ ಅವರು ಹೀಗೆ ಉತ್ತರಿಸಿದ್ದಾರೆ.
ಮೈತ್ರಿ ಮುಂದುವರಿಯಬಹುದಾ?
ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಎಪ್ಪತ್ತೊಂಬತ್ತು ಸ್ಥಾನಗಳನ್ನು ಗಳಿಸಿತ್ತು. ಬಿಜೆಪಿಗೆ ನೂರಾ ನಾಲ್ಕು ಸ್ಥಾನಗಳು ಬಂದಿದ್ದವು. ಆ ನಂತರ ಮೂವತ್ತಾರು ಸ್ಥಾನ ಪಡೆದಿದ್ದ ಜೆಡಿಎಸ್ ಜತೆಗೆ ಸೇರಿ ಕಾಂಗ್ರೆಸ್ ಮೈತ್ರಿ ಸರಕಾರ ರಚನೆ ಮಾಡಲಾಗಿತ್ತು. ಅದರಲ್ಲೂ ಮೈತ್ರಿ ಸರಕಾರದ ನೇತೃತ್ವವನ್ನು ಜೆಡಿಎಸ್ ಗೆ ಬಿಟ್ಟುಕೊಟ್ಟು, ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿ, ಕಾಂಗ್ರೆಸ್ ಉಪಮುಖ್ಯಮಂತ್ರಿ ಸ್ಥಾನವನ್ನು ಉಳಿಸಿಕೊಂಡಿತ್ತು. ಲೋಕಸಭೆ ಚುನಾವಣೆಗೆ ಈ ಎರಡೂ ಪಕ್ಷಗಳ ಮೈತ್ರಿ ಮುದುವರಿಯುತ್ತದಾ ಎಂಬ ಪ್ರಶ್ನೆಗೆ, ಸಿದ್ದರಾಮಯ್ಯ 'ಹೌದು' ಎಂಬ ಉತ್ತರ ನೀಡಿದ್ದಾರೆ. ಆದರೆ ಲೋಕ ಸಮರಕ್ಕೆ ಇನ್ನೂ ಸಮಯ ಇರುವುದರಿಂದ ಏನಾಗುತ್ತದೋ ಕಾದುನೋಡಬೇಕಿದೆ.