ಇಂಡಿಯಾ ಟಿವಿ-ಸಿಎನ್ಎಕ್ಸ್ ಎಕ್ಸಿಟ್ ಪೋಲ್ : ಕರ್ನಾಟಕ ಸೇರಿದಂತೆ ಎಲ್ಲೆಡೆ ಬಿಜೆಪಿ ಮುನ್ನಡೆ
Recommended Video
ನವದೆಹಲಿ, ಮೇ 19 : ಇಡೀ ದೇಶದ ಎದೆ ಢವಗುಟ್ಟಿಸುವಂಥ ಚುನಾವಣೋತ್ತರ ಸಮೀಕ್ಷೆಗಳು ಹೊರಬೀಳುತ್ತಿವೆ. ಯಾವ ಮೈತ್ರಿ ಕೂಟಕ್ಕೆ ಬಹುಮತ ಬರಲಿದೆ, ಯಾರು ಪ್ರಧಾನಿ ಹುದ್ದೆಯನ್ನು ಅಲಂಕರಿಸಲಿದ್ದಾರೆ ಎಂಬುದರ ಬಗ್ಗೆ, ಸ್ಪಷ್ಟ ಅಲ್ಲದಿದ್ದರೂ ಸ್ಥೂಲ ಚಿತ್ರಣ ಈ ಎಕ್ಸಿಟ್ ಪೋಲ್ ನಿಂದ ಸಿಗಲಿದೆ.
ಇಂಡಿಯಾ ಟಿವಿ-ಸಿಎನ್ಎಕ್ಸ್ ಜಂಟಿಯಾಗಿ ಚುನಾವಣೋತ್ತರ ಸಮೀಕ್ಷೆ ನಡೆಸಿದ್ದು, ನರೇಂದ್ರ ಮೋದಿಯವರೇ ಅಧಿಕಾರ ಉಳಿಸಿಕೊಳ್ಳುತ್ತಾರಾ? ಅಥವಾ ವಿರೋಧಿಗಳು ಆಡಳಿತ ಚುಕ್ಕಾಣಿ ಹಿಡಿಯುತ್ತಾರಾ ಎಂಬುದು ಮೇ 23ರಂದು ತಿಳಿದುಬರಲಿದೆ.
2014ರಲ್ಲಿ ಇಂಡಿಯಾ ಟಿವಿ ಸಿವೋಟರ್ ಜೊತೆ ಜಂಟಿಯಾಗಿ ಚುನಾವಣೋತ್ತರ ಸಮೀಕ್ಷೆ ನಡೆಸಿತ್ತು. ಅದರ ಪ್ರಕಾರ, ಎನ್ಡಿಎಗೆ 289, ಯುಪಿಎಗೆ 101 ಸ್ಥಾನ ಗಳಿಸುತ್ತವೆಂದು ಸಮೀಕ್ಷೆ ಹೇಳಿತ್ತು. ಅದರ ಸಮೀಕ್ಷೆಯಂತೆ ಎನ್ಡಿಎ ಸುಲಭವಾಗಿ ಬಹುಮತ ಗಳಿಸಿತ್ತು. ಈ ನಿಟ್ಟಿನಲ್ಲಿ ಇಂಡಿಯಾ ಟಿವಿಯ ಸಮೀಕ್ಷೆ ಭಾರೀ ಕುತೂಹಲ ಕೆರಳಿಸಿದೆ.
ಕರ್ನಾಟಕದಲ್ಲಿ ನಗೆಬೀರಲಿದ್ದಾರೆ ಯಡಿಯೂರಪ್ಪ
ಕರ್ನಾಟಕದಲ್ಲಿ ಹೆಚ್ಚೂ ಕಡಿಮೆ 2014ರಲ್ಲಿ ಬಂದಂತಹ ಫಲಿತಾಂಶವೇ ಬರಲಿದೆ ಎಂದು ಇಂಡಿಯಾ ಟಿವಿ-ಸಿಎನ್ಎಕ್ಸ್ ಸಮೀಕ್ಷೆ ಹೇಳುತ್ತಿದೆ. ಬಿಜೆಪಿ 17 ಕ್ಷೇತ್ರಗಳಲ್ಲಿ ಜಯ ಗಳಿಸಲಿದ್ದರೆ, ಕಾಂಗ್ರೆಸ್ 8ರಲ್ಲಿ, ಜೆಡಿಎಸ್ 3ರಲ್ಲಿ ಜಯ ಸಾಧಿಸಲಿವೆ. ಇದರ ಪ್ರಕಾರ ಮಂಡ್ಯದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸುಮಲತಾ ಅವರಿಗೆ ಸೋಲು ಗ್ಯಾರಂಟಿ.
ಬಿಜೆಪಿ - 17
ಕಾಂಗ್ರೆಸ್ - 8
ಜೆಡಿಎಸ್ - 3
ದೆಹಲಿಯಲ್ಲಿ ಬಿಜೆಪಿ ಜಯಭೇರಿ, ಕೇಜ್ರಿಗೆ ಮುಖಭಂಗ
ಆರಂಭದ ಅಂಕಿಅಂಶಗಳ ಪ್ರಕಾರ, ಭಾರತೀಯ ಜನತಾ ಪಕ್ಷ ದೆಹಲಿಯಲ್ಲಿ ಎಲ್ಲ 7 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಲಿದೆ. ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್ ಅವರು ಭಾರೀ ಮುಖಭಂಗ ಅನುಭವಿಸುವುದು ಗ್ಯಾರಂಟಿಯಾಗಿದೆ. ಬಿಜೆಪಿ ಶೇ.52ರಷ್ಟು ಮತಗಳನ್ನು ಕಬಳಿಸಿದ್ದರೆ, ಕಾಂಗ್ರೆಸ್ ಶೇ.26ರಷ್ಟು ಮತ್ತು ಅಧಿಕಾರದಲ್ಲಿರುವ ಎಎಪಿ ಕೇವಲ ಶೇ.19ರಷ್ಟು ಮಾತ್ರ ಮತ ಗಳಿಸಲಿವೆ.
ಉತ್ತರ ಪ್ರದೇಶದಲ್ಲಿ ಮತ್ತೆ ಕೇಸರಿ ಕಲರವ
ಲೋಕಸಭೆಯಲ್ಲಿ ನಿರ್ಣಾಯಕವಾಗಿರುವ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಸೇರಿದಂತೆ ಮಹಾಮೈತ್ರಿಕೂಟವನ್ನು ಜನರು ತಿರಸ್ಕರಿಸಿದ್ದಾರೆ ಮತ್ತು ಬಿಜೆಪಿಯ ಮೇಲೆ ನಂಬಿಕೆ ಮತ್ತೆ ವ್ಯಕ್ತಪಡಿಸಿದ್ದಾರೆ. ನಿರೀಕ್ಷೆಗೂ ಮೀರಿ ಬಿಜೆಪಿ 50ರಲ್ಲಿ ಜಯ ಗಳಿಸಲಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿ 71ರಲ್ಲಿ ಜಯಗಳಿಸಿತ್ತು. ಈ ಬಾರಿ ಸಮಾಜವಾದಿ ಪಕ್ಷ 14 ಮತ್ತು ಬಹುಜನ ಸಮಾಜ ಪಕ್ಷ 13ರಲ್ಲಿ, ಕಾಂಗ್ರೆಸ್ ಕೇವಲ 2ರಲ್ಲಿ ಮತ್ತು ಆರ್ ಎಲ್ ಡಿ 1ರಲ್ಲಿ ಜಯ ಗಳಿಸಲಿದೆ.
ಬಿಜೆಪಿ+ - 50
ಕಾಂಗ್ರೆಸ್ - 2
ಎಸ್ ಪಿ - 14
ಬಿಎಸ್ ಪಿ - 13
ಆರ್ ಎಲ್ ಡಿ - 1
ಗುಜರಾತ್ ನಲ್ಲಿ ಮೋದಿ ಕೈಮೇಲು
ಗುಜರಾತ್ ನಲ್ಲಿ ಕಾಂಗ್ರೆಸ್ ಪಕ್ಷದ ಎಲ್ಲ ಲೆಕ್ಕಾಚಾರಗಳನ್ನು ಫಲಿತಾಂಶ ಬುಡಮೇಲು ಮಾಡಲಿದೆ ಎಂದು ಈ ಸಮೀಕ್ಷೆ ಹೇಳಲಿದೆ. 26 ಕ್ಷೇತ್ರಗಳಲ್ಲಿ ಬಿಜೆಪಿ 22ರಲ್ಲಿ ಜಯಭೇರಿ ಬಾರಿಸಲಿದ್ದರೆ, ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದ ಕಾಂಗ್ರೆಸ್ ಕೇವಲ 4 ಕ್ಷೇತ್ರಗಳಲ್ಲಿ ಜಯಶಾಲಿಯಾಗಲಿದೆ.
ಬಿಜೆಪಿ - 22
ಕಾಂಗ್ರೆಸ್ - 4
ಒಟ್ಟು ಕ್ಷೇತ್ರಗಳು 26
ಹರ್ಯಾಣದಲ್ಲಿ ಅರಳಲಿದೆ ಕಮಲ
ಹರ್ಯಾಣದಲ್ಲಿ ಬಿಜೆಪಿ 9 ಸೀಟುಗಳನ್ನು ಕಬಳಿಸಲಿದೆ. ಕಾಂಗ್ರೆಸ್ ಕೇವಲ 1 ಸೀಟು ಮಾತ್ರ ಗೆಲ್ಲಲಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಜೆಪಿ 2ರಲ್ಲಿ, ಕಾಂಗ್ರೆಸ್ 1ರಲ್ಲಿ ಮತ್ತು ಜೆಕೆ ಎನ್ ಸಿ 3 ಕ್ಷೇತ್ರಗಳಲ್ಲಿ ಜಯ ಗಳಿಸಲಿದೆ.
ಕೇರಳದಲ್ಲಿ ಎನ್ ಡಿಎ ಶುಭಾರಂಭ
ಕೇರಳದಲ್ಲಿ ಎನ್ಡಿಎ ಪ್ರಥಮ ಬಾರಿಗೆ ಖಾತೆ ತೆರೆಯಲಿದೆ. ಯುಡಿಎಫ್ ಹೆಚ್ಚಿನ ಪಾಲು ಪಡೆಯಲಿದ್ದು, 14 ಸ್ಥಾನಗಳಲ್ಲಿ ಗೆಲ್ಲಲಿದೆ. ಎಲ್ ಡಿಎಫ್ 5 ಕ್ಷೇತ್ರಗಳಲ್ಲಿ ಜಯ ಗಳಿಸಲಿವೆ.
ಕೆಸಿಆರ್ ಯಾವ ಕಡೆ ಹೊರಳಲಿದ್ದಾರೆ?
ತೆಲಂಗಾಣದಲ್ಲಿ ನಿರೀಕ್ಷೆಯಂತೆ ತೆಲಂಗಾಣ ರಾಷ್ಟ್ರೀಯ ಸಮಿತಿ 14 ರಲ್ಲಿ ಜಯಶಾಲಿಯಾಗಲಿದೆ. ಅಸ್ತಿತ್ವದಲ್ಲಿ ಇಲ್ಲದ ಕಾಂಗ್ರೆಸ್ ಕೇವಲ 2 ಮತ್ತು ಎಐಎಂಐಎಂ ಕೇವಲ 1ರಲ್ಲಿ ಮಾತ್ರ ಜಯ ಗಳಿಸಲಿದೆ. ದೇಶದೆಲ್ಲೆಡೆ ಬಿಜೆಪಿ ನೇತೃತ್ವದ ಎನ್ ಡಿಎ ಜಯಭೇರಿ ಬಾರಿಸಲಿರುವುದರಿಂದ ಕೆ ಚಂದ್ರಶೇಖರ ರಾವ್ ಯಾವ ಕಡೆ ಹೊರಳಲಿದ್ದಾರೆ ಎಂದು ಕುತೂಹಲದ ಸಂಗತಿಯಾಗಿದೆ. ಏಕೆಂದರೆ, ಅವರ ಬದ್ಧವೈರಿ ಚಂದ್ರಬಾಬು ನಾಯ್ಡು ಮಹಾಘಟಬಂಧನದ ನೇತೃತ್ವ ವಹಿಸಿಕೊಂಡಿದ್ದಾರೆ.
ರಾಜಸ್ಥಾನದಲ್ಲಿ ಕಾಂಗ್ರೆಸ್ಸಿಗೆ ಹಿನ್ನಡೆ
ರಾಜಸ್ಥಾನದಲ್ಲಿ ಆಡಳಿತ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಹೀನಾಯ ಸೋಲು ಕಾಣಲಿದೆ. ಇರುವ 25 ಕ್ಷೇತ್ರಗಳಲ್ಲಿ ಭಾರತೀಯ ಜನತಾ ಪಕ್ಷ 21 ಕ್ಷೇತ್ರಗಳನ್ನು ಬಾಚಿಕೊಳ್ಳಲಿದ್ದರೆ, ಕಾಂಗ್ರೆಸ್ 4 ಕ್ಷೇತ್ರಗಳಿಗೆ ಸಮಾಧಾನಪಟ್ಟುಕೊಳ್ಳಬೇಕಿದೆ. ಇದು ವಿಧಾನಸಭೆ ಚುನಾವಣೆಯ ನಂತರ ಬಿಜೆಪಿಗೆ ಸಿಕ್ಕ ಬಹುದೊಡ್ಡ ಜಯವಾಗಲಿದೆ.
ಒಟ್ಟು ಕ್ಷೇತ್ರಗಳು - 25
ಬಿಜೆಪಿ - 21
ಕಾಂಗ್ರೆಸ್ - 4
ತಮಿಳುನಾಡಿನಲ್ಲಿ ಬಿಜೆಪಿಗೆ ಹಿನ್ನಡೆ
ತಮಿಳುನಾಡಿನಲ್ಲಿ ಕಾಂಗ್ರೆಸ್ ಕೈಹಿಡಿದಿರುವ ಡಿಎಂಕೆ ಮಿತ್ರಪಕ್ಷಗಳು 17 ಸೀಟುಗಳನ್ನು ಬಾಚಿಕೊಳ್ಳಲಿದೆ. ಎಐಎಡಿಎಂಕೆ 8 ಕ್ಷೇತ್ರಗಳಲ್ಲಿ, ಕಾಂಗ್ರೆಸ್ 6, ಬಿಜೆಪಿ 2, ಪಿಎಂಕೆ 2 ಮತ್ತು ಇತರರಿಗೆ 3 ಸ್ಥಾನಗಳು ಲಭಿಸಲಿವೆ. ಈ ಫಲಿತಾಂಶ ನೋಡಿದರೆ, ಭಾರತೀಯ ಜನತಾ ಪಕ್ಷಕ್ಕೆ ಸ್ವಲ್ಪ ಹಿನ್ನಡೆ ಎಂದೇ ಹೇಳಬಹುದು. ದಕ್ಷಿಣ ಭಾರತದಲ್ಲಿ ತನ್ನ ಸ್ಥಾನ ಬಲಪಡಿಸಿಕೊಳ್ಳಲು ಯತ್ನಿಸುತ್ತಿರುವ ಬಿಜೆಪಿಗೆ ಇದು ಹಿನ್ನಡೆಯೆಂದೇ ಹೇಳಬಹುದು.
ಮಹಾರಾಷ್ಟ್ರದಲ್ಲಿ ಬಿಜೆಪಿ ಗಣಪತಿ ಬಪ್ಪಾ ಮೋರಯಾ
ದೇಶದಲ್ಲಿ ಉತ್ತರ ಪ್ರದೇಶ ಬಿಟ್ಟರೆ ಹೆಚ್ಚು ಸಂಸದರನ್ನು ಕಳಿಸುವ ಮಹಾರಾಷ್ಟ್ರದಲ್ಲಿ ಭಾರತೀಯ ಜನತಾ ಪಕ್ಷ ಮತ್ತು ಅದರ ಅಂಗ ಪಕ್ಷವಾದ ಶಿವಸೇನೆಗೆ ಗುಡ್ ನ್ಯೂಸ್. 48 ಕ್ಷೇತ್ರಗಳಲ್ಲಿ ಬಿಜೆಪಿ 20ರಲ್ಲಿ ಜಯಭೇರಿ ಬಾರಿಸಲಿದೆ, ಶಿವಸೇನೆ 14. ಎರಡೂ ಸೇರಿ 34 ಸ್ಥಾನಗಳನ್ನು ಗಳಿಸಲಿವೆ. ಇನ್ನು ಕಾಂಗ್ರೆಸ್ 8 ಮತ್ತು ಅದರ ಮೈತ್ರಿ ಮಾಡಿಕೊಂಡಿರುವ ಎನ್ ಸಿಪಿ 6ರಲ್ಲಿ ಜಯ ಗಳಿಸಲಿದೆ.
ಬಿಜೆಪಿ - 20
ಶಿವಸೇನೆ - 14
ಕಾಂಗ್ರೆಸ್ - 8
ಎನ್ ಸಿಪಿ - 6
ಮಮತಾ ಬಾಯಿ ಬಂದ್ ಮಾಡಿದ ಮತದಾರರು
ಹಿಂಸಾಚಾರಗಳಿಗೆ, ಅಬ್ಬರದ ಪ್ರಚಾರಗಳಿಗೆ, ದ್ವೇಷದ ಕಿಡಿಗಳಿಗೆ ಸಾಕ್ಷಿಯಾಗಿದ್ದ ಪಶ್ಚಿಮ ಬಂಗಾಳದಲ್ಲಿ ಪ್ರಥಮ ಬಾರಿ ಕಮಲ ದೊಡ್ಡ ಪ್ರಮಾಣದಲ್ಲಿ ಅರಳಲಿದೆ. ಕಳೆದ ಚುನಾವಣೆಯಲ್ಲಿ ಕೇವಲ 2 ಸ್ಥಾನ ಗೆದ್ದಿದ್ದ ಬಿಜೆಪಿ ಈ ಬಾರಿ 12 ಸ್ಥಾನಗಳನ್ನು ತನ್ನು ಬುಟ್ಟಿಗೆ ಹಾಕಿಕೊಳ್ಳಲಿದೆ. ತೃಣಮೂಲ ಕಾಂಗ್ರೆಸ್ 29, ಕಾಂಗ್ರೆಸ್ 1 ಸ್ಥಾನ ಗೆಲ್ಲಲಿವೆ. ತೃಣಮೂಲ ಕಾಂಗ್ರೆಸ್ ಮತ್ತು ಕಾಂಗ್ರೆಸ್ ಪಕ್ಷಗಳೆರಡೂ ಭಾರೀ ಹಿನ್ನಡೆ ಕಾಣಲಿವೆ. ಎಡ ಪಕ್ಷಗಳು ಒಂದೂ ಸ್ಥಾನ ಗೆಲ್ಲುವುದಿಲ್ಲ ಎಂದು ಹೇಳಿದೆ ಎಕ್ಸಿಟ್ ಪೋಲ್.
ಬಿಹಾರದಲ್ಲಿ ಯಾಕೋ ಮಂಕಾದ ಬಿಜೆಪಿ
ಬಿಹಾರದಲ್ಲಿ ಭಾರತೀಯ ಜನತಾ ಪಕ್ಷ ಈಬಾರಿ ಭಾರೀ ಹಿನ್ನಡೆ ಕಾಣಲಿದೆ ಎಂದು ಎಕ್ಸಿಟ್ ಪೋಲ್ ಹೇಳಿದೆ. ಕಳೆದ ಬಾರಿ 22 ಸ್ಥಾನ ಗೆದ್ದಿದ್ದ ಬಿಜೆಪಿ, ಈಬಾರಿ ಕೇವಲ 15ರಲ್ಲಿ ಗೆಲ್ಲಲಿದೆ. ಜೆಡಿಯು 13, ಆರ್ ಎಲ್ ಡಿ 5, ಕಾಂಗ್ರೆಸ್ 2, ಎಲ್ ಜೆಪಿ 4, ಆರ್ ಎಲ್ ಎಸ್ ಪಿ 1 ಕ್ಷೇತ್ರಗಳಲ್ಲಿ ಜಯಗಳಿಸಲಿವೆ. ಬಿಜೆಪಿ ಮೈತ್ರಿ ಪಕ್ಷವಾಗಿರುವ ಜೆಡಿಯು 11 ಸ್ಥಾನಗಳನ್ನು ಹೆಚ್ಚಿಸಿಕೊಂಡಿರುವುದು ಬಿಜೆಪಿಗೆ ವರದಾನವೂ ಹೌದು, ಶಾಪವೂ ಹೌದು.
ಎನ್ ಡಿಎ ಮತ್ತೆ ಚುಕ್ಕಾಣಿ ಹಿಡಿಯಲಿದೆಯಾದರೂ...
ಒಟ್ಟಾರೆಯಾಗಿ ಎನ್ ಡಿಎ ಈ ಬಾರಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದರೂ 2014ಕ್ಕೆ ಹೋಲಿಸಿದರೆ ಕಡಿಮೆ ಸ್ಥಾನಗಳನ್ನು ಗಳಿಸಲಿದೆ. ಇದು ಒಂದು ರೀತಿ ಎನ್ ಡಿಎಗೆ ಹಿನ್ನಡೆಯೆ. ಯುಪಿಎ ಕಳೆದ ಬಾರಿಗಿಂತ ಉತ್ತಮ ಸಾಧನೆ ತೋರಿದರೂ ಅಧಿಕಾರ ಸ್ಥಾಪಿಸಲು ಬೇಕಾಗಿರುವ ಸಂಖ್ಯೆ ಗೆಲ್ಲಲು ವಿಫಲವಾಗಿದೆ. ಇನ್ನು ಇತರ ಪಕ್ಷಗಳು ನೂರರ ಆಸುಪಾಸಿನಲ್ಲಿ ಸ್ಥಾನ ಗೆಲ್ಲಲಿವೆ.
ಎನ್ ಡಿಎ - 290-310
ಯುಪಿಎ - 115-125
ಇತರರು - 116-128
ಇಂಡಿಯಾ ಟಿವಿಗಾಗಿ ದೆಹಲಿ ಮೂಲಕ ಸಿಎನ್ಎಕ್ಸ್ ಸಂಸ್ಥೆ ಸಮೀಕ್ಷೆಯನ್ನು ನಡೆಸಿತ್ತು. ಇರುವ 543 ಕ್ಷೇತ್ರಗಳ ಪೈಕಿ 542 ಕ್ಷೇತ್ರಗಳಲ್ಲಿ, ಮತ ಹಾಕಿದ ಜನರನ್ನು ಭೇಟಿ ಮಾಡಿ ಸಿಎನ್ಎಕ್ಸ್ ಸಮೀಕ್ಷೆ ನಡೆಸಿದೆ. ಸಮೀಕ್ಷೆಯಲ್ಲಿ 1 ಲಕ್ಷ 35 ಸಾವಿರ ಪುರುಷರು ಮತ್ತು ಸ್ತ್ರೀಯರನ್ನು ಭೇಟಿಯಾಗಿ ಉತ್ತರಗಳನ್ನು ಪಡೆದುಕೊಳ್ಳಲಾಗಿದೆ. ಈ ಬಾರಿಯ ಎಕ್ಸಿಟ್ ಪೋಲ್ ಫಲಿತಾಂಶ ಕೆಳಗಿನಂತಿರಲಿದೆ.