ಕೇರಳದ ತಿರುವನಂತಪುರಂ ಲೋಕಸಭಾ ಕ್ಷೇತ್ರ ಪರಿಚಯ
ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕೇರಳದ ಮೇಲೆ ದೇಶದ ಕಣ್ಣಿದೆ, ಕೇರಳದಲ್ಲಿ ತಿರುವನಂತಪುರಂ ಕ್ಷೇತ್ರದ ಮೇಲೆ ವಿಶೇಷ ಗಮನ ಕೇಂದ್ರೀಕೃತವಾಗಿದೆ.
ಸಿಪಿಐ ಆಡಳಿತದಲ್ಲಿರುವ ಕೇರಳದಲ್ಲಿ ಬಿಜೆಪಿ ತೀವ್ರಗತಿಯಲ್ಲಿ ತನ್ನ ಪ್ರಭಾವ ಹೆಚ್ಚಿಸಿಕೊಳ್ಳುತ್ತಿದ್ದು, ಈ ಲೋಕಸಭೆ ಚುನಾವಣೆಯಲ್ಲಿ ಕೇರಳದಲ್ಲಿ ಬಿಜೆಪಿ ಪ್ರಬಲ ಛಾಪು ಮೂಡಿಸಲಿದೆ ಎಂದು ರಾಜಕೀಯ ಪಂಡಿತರು ಲೆಕ್ಕಾಚಾರ ಹಾಕುತ್ತಿದ್ದಾರೆ. ಈ ಅಶ್ವಮೇಧ ಯಾಗಕ್ಕೆ ಕೇರಳದಲ್ಲಿ ತಿರುವನಂತಪುರಂ ನಿಂದಲೇ ಶ್ರೀಕಾರ ಹಾಕಲು ಬಿಜೆಪಿ ಪ್ರಯತ್ನ ಪ್ರಾರಂಭಿಸಿದೆ. ಇತರ ಪಕ್ಷಗಳು ಇದಕ್ಕೆ ಪ್ರತಿತಂತ್ರಗಳನ್ನು ರೂಪಿಸುತ್ತಿವೆ. ಒಟ್ಟಾರೆ ತಿರುವನಂತಪುರ ಈ ಚುನಾವಣೆಯಲ್ಲಿ ಗಮನವಿಟ್ಟು ನೋಡಬೇಕಾದ ಕ್ಷೇತ್ರಗಳಲ್ಲಿ ಒಂದು.
ತೆಲಂಗಾಣದ ಮೆಹಬೂಬಾನಗರ ಲೋಕಸಭಾ ಕ್ಷೇತ್ರ ಪರಿಚಯ
ತಿರುವನಂತಪುರಂ ಲೋಕಸಭಾ ಕ್ಷೇತ್ರ ಪ್ರಸ್ತುತ ಕಾಂಗ್ರೆಸ್ನ ಸುಪರ್ಧಿಯಲ್ಲಿದೆ. ಕಾಂಗ್ರೆಸ್ನ 'ಥಿಂಕರ್ ಟ್ಯಾಂಕ್'ಗಳಲ್ಲಿ ಮೊದಲಿಗರು ಎನಿಸಿಕೊಳ್ಳುವ ಶಶಿ ತರೂರ್ ಅವರು ಇಲ್ಲಿನ ಸಂಸದರು. ಕೇಂದ್ರ ಸರ್ಕಾರದಲ್ಲಿ ಉನ್ನತ ಹುದ್ದೆಗಳನ್ನು ನಿಭಾಯಿಸಿರುವ ಅನುಭವ ಇರುವ ಕಾಂಗ್ರೆಸ್ನ ಅತಿ ಪ್ರಮುಖ ಮುಖಂಡರಲ್ಲಿ ಒಬ್ಬರು.
62 ವರ್ಷದ ಶಶಿ ತರೂರ್ ಅವರು ಶೈಕ್ಷಣಿಕವಾಗಿ ಅತ್ಯಂತ ಪ್ರಬಲರು. ಅವರು ವಿದೇಶದಲ್ಲಿ ವ್ಯಾಸಂಗ ಮಾಡಿದ ಅನುಭವದ ಜೊತೆಗೆ ಸಂಶೋಧನೆ ಮಾಡಿದ ಅನುಭವವೂ ಇದೆ. ಪಿಎಚ್ಡಿ. ಗೌರವ ಡಿ.ಲಿಟ್, ಬಿಎ, ಎಂಎಎಲ್ಡಿ, ಶಿಕ್ಷಣವನ್ನು ಅವರು ಪ್ರತಿಷ್ಠಿತ ವಿವಿಗಳಲ್ಲಿ ಪಡೆದಿದ್ದಾರೆ. ತರೂರ್ ಅವರು ಸಾಹಿತಿಯಾಗಿ, ಅಂಕಣಕಾರರಾಗಿಯೂ ಬಹು ಪ್ರಸಿದ್ಧರು, ನ್ಯೂಯಾರ್ಕ್ಟೈಮ್ಸ್, ಟೈಮ್ಸ್, ದಿ ಹಿಂದೂ, ಡೆಕನ್ ಕ್ರಾನಿಕಲ್ ಇನ್ನೂ ಹಲವು ಪತ್ರಿಕೆಗಳಲ್ಲಿ ಅವರ ಅಂಕಣಗಳು ಪ್ರಕಟಗೊಂಡಿವೆ.
ಮುತ್ತಿನ ನಗರಿ ಹೈದರಾಬಾದ್: ಲೋಕಸಭಾ ಕ್ಷೇತ್ರ ಪರಿಚಯ
ವಿಚಾರವಂತ ವಾಗ್ಮಿಗಳಾಗಿರುವ ತರೂರ್ ಅತ್ಯತ್ತಮ ಸಂಸದ್ಪಟು, ಅವರು ಸಂಸತ್ನಲ್ಲಿ ಮಂಡಿಸಿದ ವಿಚಾರಗಳು ಸಂಸತ್ನ ಹೊರಗು ಚರ್ಚೆಗಳಾಗಿರುವ ಉದಾಹರಣೆಗಳಿವೆ. ಈ ಬಾರಿ ಸಂಸತ್ನಲ್ಲಿ ಅವರು ಕಳೆದ ಡಿಸೆಂಬರ್ 20 ರವರೆಗೆ 80 ಚರ್ಚೆಗಳಲ್ಲಿ ಭಾಗವಹಿಸಿದ್ದಾರೆ. ತಮ್ಮ ರಾಜ್ಯಕ್ಕೆ ಸಂಬಂಧಿಸಿದ 135 ಚರ್ಚೆಗಳಲ್ಲಿ ತರೂರ್ ದನಿಗೂಡಿಸಿದ್ದಾರೆ.
ತರೂರ್ ಅವರು ಸದನದಲ್ಲಿ 446 ಪ್ರಶ್ನೆಗಳನ್ನು ಕೇಳಿದ್ದಾರೆ. ರಾಜ್ಯಕ್ಕೆ ಸಂಬಂಧಿಸಿ 398 ಪ್ರಶ್ನೆಗಳನ್ನು ಅವರು ಕೇಳಿದ್ದಾರೆ. ದೇಶಕ್ಕೆ ಸಂಬಂಧಿಸಿದಂತೆ ಸರಾಸರಿ 273 ಪ್ರಶ್ನೆಗಳನ್ನು ಅವರು ಕೇಳಿದ್ದಾರೆ. ತರೂರ್ ಅವರ ಸದನದ ಹಾಜರಾತಿ 88% ಇದೆ. ರಾಜ್ಯದ ಕುರಿತು ನಡೆವ ಚರ್ಚೆಯ ಸಮಯದಲ್ಲಿ 77% ಹಾಜರಾತಿ ಇದೆ. ತರೂರ್ ಅವರು ಸದನವನ್ನು ತಪ್ಪಿಸಿಕೊಳ್ಳುವುದು ಅಪರೂಪವೇ.
ಕೇರಳ ರಾಜ್ಯದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಜಿಲ್ಲೆ ತಿರುವನಂತಪುರಂ. 2014ರ ಗಣತಿಯ ಪ್ರಕಾರ ಈ ಕ್ಷೇತ್ರದಲ್ಲಿ ಒಟ್ಟು ಮತದಾರರ ಸಂಖ್ಯೆ 12,27,748. ಕ್ಷೇತ್ರದ ವಿಶೇಷವೆಂದರೆ ಇಲ್ಲಿ ಪುರುಷರ ಮತದಾರರಿಗಿಂತಲೂ ಮಹಿಳಾ ಮತದಾರರ ಸಂಖ್ಯೆಯೇ ಹೆಚ್ಚಿದೆ. ಪುರುಷ ಮತದಾರರ ಸಂಖ್ಯೆ 6,14,438 ಇದ್ದರೆ ಮಹಿಳಾ ಮತದಾರರು 6,58,310 ಇದ್ದಾರೆ.
ಕನೌಜ್ ಲೋಕಸಭಾ ಕ್ಷೇತ್ರ: ಈ ಬಾರಿ ಗೆಲುವು ಯಾರಿಗೆ?
ತಿರುವನಂತಪುರಂ ಲೋಕಸಭಾ ಕ್ಷೇತ್ರಕ್ಕೆ ಈ ವರೆಗೆ 16 ಸಾರ್ವತ್ರಿಕ ಚುನಾವಣೆಗಳು ನಡೆದಿವೆ. ಅದರಲ್ಲಿ ಎಂಟು ಬಾರಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಿದ್ದರೆ. ಸಿಪಿಐ ನಾಲ್ಕು ಬಾರಿ ಗೆದ್ದಿದೆ, ಒಂದು ಬಾರಿ ಸಂಯುಕ್ತ ಸಮಾಜವಾದಿ ಪಕ್ಷ ಒಮ್ಮೆ, ಕಾಂಗ್ರೆಸ್ (ಐ) ಒಮ್ಮೆ ಹಾಗೂ ಪಕ್ಷೇತರ ಅಭ್ಯರ್ಥಿ ಒಮ್ಮೆ ಗೆದ್ದಿದ್ದಾರೆ. ಶಶಿ ತರೂರ್ ಸತತವಾಗಿ ಎರಡು ಬಾರಿ ಇದೇ ಕ್ಷೇತ್ರದಿಂದ ಸಂಸದರಾಗಿ ಆಯ್ಕೆ ಆಗಿ ಈಗ ಮೂರನೇ ಬಾರಿ ಚುನಾವಣೆ ಎದುರಿಸಲು ಸಜ್ಜಾಗಿದ್ದಾರೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ತಿರುವನಂತಪುರಂ ಕ್ಷೇತ್ರದಲ್ಲಿ 8,73,439 ಮಂದಿ ಮತಚಲಾಯಿಸಿದ್ದರು. ಗೆದ್ದ ಅಭ್ಯರ್ಥಿ ಶಶಿ ತರೂರ್ ಅವರು 2,97,806 ಮತಗಳಿಸಿದ್ದರೆ, ಸೋತ ಅಭ್ಯರ್ಥಿ ಬಿಜೆಪಿಯ ಓ ರಾಜಗೋಪಾಲ್ 2,82,336 ಮತಗಳನ್ನು ಗಳಿಸಿದ್ದರು. ತರೂರ್ ಅವರು ಕೇವಲ 15,470 ಮತಗಳ ಅಂತರದಿಂದಷ್ಟೆ ಗೆಲುವು ಸಾಧಿಸಿದ್ದರು. ಬಿಜೆಪಿಯು ಗೆಲುವಿನ ಸನಿಹಕ್ಕೆ ಬಂದು ಸೋತಿತ್ತು. ಸಿಪಿಐ ಅಭ್ಯರ್ಥಿ ಸಹ ಇಲ್ಲಿ ಭಾರಿ ಪೈಪೋಟಿ ನೀಡಿ 2.48 ಲಕ್ಷ ಮತಗಳನ್ನು ಪಡೆದಿದ್ದರು.
ಕ್ಷೇತ್ರ ಪರಿಚಯ: ಕೃಷ್ಣಾ ನದಿ ತಟದ ಕ್ಷೇತ್ರ ವಿಜಯವಾಡ
ಈ ಬಾರಿ ತರೂರ್ ಅವರ ಸಂಸತ್ ಪ್ರವೇಶವನ್ನು ತಡೆಯಬೇಕೆಂದು ಬಿಜೆಪಿ ನಿಶ್ಚಯಿಸಿದ್ದು, ತಿರುವನಂತಪುರಂ ನಿಂದ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಕಣಕ್ಕಿಳಿಸಲು ಯೋಜನೆ ರೂಪಿಸಿದೆ. ನಿರ್ಮಲಾ ಸೀತಾರಾಮನ್ ಅವರು ಅಭ್ಯರ್ಥಿ ಆದರೆ ತರೂರ್ ಅವರ ಗೆಲುವು ಕಷ್ಟವಾಗಲಿದೆ. ಸಿಪಿಐ ಪಕ್ಷ ಸಹ ಈ ಕ್ಷೇತ್ರದಲ್ಲಿ ಪ್ರಬಲವಾಗಿದ್ದು, ತ್ರಿಕೋನ ಸ್ಪರ್ಧೆ ಇಲ್ಲಿ ಏರ್ಪಡಲಿದೆ.
ಶಬರಿಮಲೆ ವಿವಾದದಲ್ಲಿ ಬಿಜೆಪಿಯು ಭಕ್ತರ ಪರ ನಿಂತಿದೆ. ಶಬರಿಮಲೆ ವಿವಾದವೇ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕೇರಳದಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ. ಇದರ ಪರಿಣಾಮವೇ ತಿರುವನಂತಪುರಂ ಕ್ಷೇತ್ರದ ಮೇಲೆಯೂ ಪ್ರಭಾವ ಬೀರಲಿದೆ. ಶಬರಿಮಲೆ ವಿವಾದ ವಿಷಯದಲ್ಲಿ ಕಾಂಗ್ರೆಸ್ ತಟಸ್ಥ ನೀತಿ ಅನುಸರಿಸಿದೆ ಆದರೆ ಅದು ಎಷ್ಟರ ಮಟ್ಟಿಗೆ ಸಫಲವಾಗಲಿದೆ ಎಂಬುದು ಚುನಾವಣಾ ಫಲಿತಾಂಶ ಬಂದ ನಂತರವಷ್ಟೆ ಗೊತ್ತಾಗಲಿದೆ.