ಜನರ ಖಾತೆಗಳಿಗೆ 15 ಲಕ್ಷ ಬರುತ್ತದೆ ಎಂದು ಹೇಳಿಯೇ ಇಲ್ಲ; ರಾಜನಾಥ್ ಸಿಂಗ್
ನವದೆಹಲಿ, ಏಪ್ರಿಲ್ 9: ಜನರ ಬ್ಯಾಂಕ್ ಖಾತೆಗಳಿಗೆ 15 ಲಕ್ಷ ರೂಪಾಯಿ ವರ್ಗಾವಣೆ ಮಾಡಲಾಗುತ್ತದೆ ಎಂದು 2014ರ ಚುನಾವಣಾ ಪ್ರಚಾರದ ವೇಳೆ ಬಿಜೆಪಿ ಯಾವ ಭರವಸೆಯನ್ನೂ ನೀಡಿರಲಿಲ್ಲ ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಸ್ಪಷ್ಟನೆ ನೀಡಿದ್ದಾರೆ.
ಜನರ ಖಾತೆಗೆ 15 ಲಕ್ಷ ಬರುತ್ತದೆ ಎಂದು ಹೇಳಿಲ್ಲ. ಎಂದಿಗೂ ಹೇಳಿಯೇ ಇಲ್ಲ. ನಾವು ಕಪ್ಪು ಹಣದ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದೆವು. ಕಪ್ಪು ಹಣದ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಕಪ್ಪು ಹಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಸ್ಥಾಪಿಸಿರುವುದು ನಮ್ಮದೇ ಸರ್ಕಾರ ಎಂದು ರಾಜನಾಥ್ ಸಿಂಗ್ ಅವರು ಎಎನ್ಐ ಸುದ್ದಿ ಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.
15 ಲಕ್ಷ ರು. ನೀಡುತ್ತೇನೆಂದು ಮೋದಿ ನಿಜಕ್ಕೂ ಪ್ರಾಮಿಸ್ ಮಾಡಿದ್ದರೆ?
2014ರ ಚುನಾವಣಾ ಪ್ರಚಾರದ ವೇಳೆಗೆ ಬಿಜೆಪಿಯು ವಿದೇಶಗಳಲ್ಲಿರುವ ಕಪ್ಪು ಹಣವನ್ನು ತಂದು ಜನರ ಬ್ಯಾಂಕ್ ಖಾತೆಗಳಿಗೆ 15 ಲಕ್ಷ ರೂಪಾಯಿ ಹಾಕುವುದಾಗಿ ಭರವಸೆ ನೀಡಿತ್ತು. ಆದರೆ, ಆ ಭರವಸೆಯನ್ನು ಈಡೇರಿಸಿಲ್ಲ. ಜನರ ಬ್ಯಾಂಕ್ ಖಾತೆಗಳಲ್ಲಿ 15 ಲಕ್ಷ ರೂಪಾಯಿ ಎಲ್ಲಿದೆ? ನಮ್ಮ ಖಾತೆಗೆ ಹಣ ಬಂದಿಲ್ಲ ಎಂದು ವಿರೋಧ ಪಕ್ಷಗಳು ಟೀಕಾಪ್ರಹಾರ ನಡೆಸಿವೆ. ಜನರ ಮತಗಳನ್ನು ಸೆಳೆಯಲು ಬಿಜೆಪಿ ಸುಳ್ಳು ಆಮಿಷ ಒಡ್ಡಿತ್ತು ಎಂದು ಆರೋಪಿಸಿವೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ದೇಶದ ಗೃಹಸಚಿವನಾಗಿ ಭರವಸೆ ನೀಡಲು ಬಯಸುತ್ತೇನೆ, ಭಾರತದಲ್ಲಿ ಯಾರೂ ಸುರಕ್ಷಿತರೆಂದು ಭಾವಿಸುವುದು ಬೇಡ. ಹಿಂಸೆಗೆ ಪ್ರಚೋದನೆ ನೀಡುವವರ ವಿರುದ್ಧ ಧರ್ಮಾತೀತವಾಗಿ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ದೇಶದ ಯಾವುದೇ ಭಾಗದಲ್ಲಿ ಓದುತ್ತಿರುವ ಅಥವಾ ವಾಸಿಸುತ್ತಿರುವ ಕಾಶ್ಮೀರಿಗಳ ಸುರಕ್ಷತೆ ಎಲ್ಲ ನಾಗರಿಕರ ಜವಾಬ್ದಾರಿ. ಇದಕ್ಕೆ ಸಂಬಂಧಿಸಿದಂತೆ ರಾಜ್ಯಗಳಿಗೆ ಸೂಚನೆಯನ್ನೂ ನೀಡಲಾಗಿದೆ ಎಂದು ರಾಜನಾಥ್ ಸಿಂಗ್ ಹೇಳಿದರು.
ಐಟಿ, ಇಡಿ ದಾಳಿ ರಾಜಕೀಯವಲ್ಲ
ಆದಾಯ ತೆರಿಗೆ ಇಲಾಖೆ ಮತ್ತು ಜಾರಿ ನಿರ್ದೇಶನಾಲಯಗಳು ಸ್ವತಂತ್ರ ಸಂಸ್ಥೆಗಳಾಗಿದ್ದು, ತಮಗೆ ಬರುವ ಮಾಹಿತಿ ಆಧಾರದಲ್ಲಿ ಕ್ರಮ ತೆಗೆದುಕೊಳ್ಳುತ್ತವೆ. ಚುನಾವಣಾ ನೀತಿ ಸಂಹಿತೆ ಈ ಸಂಸ್ಥೆಗಳಿಗೆ ಅನ್ವಯ ಆಗುವುದಿಲ್ಲ. ನಾವು ಹೇಗೆ ಅವರನ್ನು ತಡೆಯಲು ಸಾಧ್ಯ?
ಐಟಿ ಮತ್ತು ಇಡಿ ದಾಳಿಗಳಿಗೆ ಸರ್ಕಾರವನ್ನು ಹೊಣೆಗೇಡಿಯನ್ನಾಗಿಸುವುದು ನ್ಯಾಯೋಚಿತವಲ್ಲ. ಇದು ನಿರಂತರ ನಡೆಯುವ ಪ್ರಕ್ರಿಯೆ. ಸಂಸ್ಥೆಗಳಿಗೆ ಅವರದ್ದೇ ಆದ ಬೇಹುಗಾರಿಕಾ ಮಾಹಿತಿಗಳಿರುತ್ತವೆ.
ವಿರೋಧಪಕ್ಷಗಳ ಮುಖಂಡರ ಮೇಲಿನ ಐಟಿ, ಇಡಿ ದಾಳಿಗೆ ಸರ್ಕಾರವನ್ನು ದೂಷಿಸುವುದು ತಪ್ಪು. ಇದು ವರ್ಷಗಳಿಂದ ನಡೆಯುತ್ತಾ ಬಂದಿದೆ. ಇಂದು ಶುರುವಾಗಿರುವುದಲ್ಲ. ಯಾರದ್ದೋ ಸೂಚನೆ ಮೇರೆಗೆ ನಡೆಯುತ್ತದೆ ಎನ್ನುವುದು ಸರಿಯಲ್ಲ. ಚುನಾವಣಾ ಆಯೋಗ ಪಡೆಗಳನ್ನು ಕೇಳುತ್ತದೆ, ನಾವು ಒದಗಿಸುತ್ತೇವೆ. ಚುನಾವಣಾ ಆಯೋಗದ ಆದೇಶದಂತೆ ನಿಯೋಜನೆಗಳು ನಡೆಯುತ್ತವೆಯೇ ವಿನಾ, ಕೇಂದ್ರ ಸರ್ಕಾರದಿಂದಲ್ಲ.
ಸಾಕ್ಷ್ಯ ಏಕೆ ಕೇಳಬೇಕು?
ಭಾರತೀಯ ವಾಯು ಪಡೆ ಉಗ್ರರ ನೆಲೆಗಳ ಮೇಲೆ ಮಾತ್ರ ದಾಳಿ ಮಾಡಿದೆ. ಈ ಸಂದರ್ಭದಲ್ಲಿ ಪಾಕಿಸ್ತಾನದ ಸಾರ್ವಭೌಮತೆ ಮತ್ತು ಸಮಗ್ರತೆ ಮೇಲೆ ದಾಳಿಯಾಗದಂತೆ ನೋಡಿಕೊಂಡಿದ್ದೇವೆ. ನಮ್ಮ ದಾಳಿಗಳಲ್ಲಿ ಯಾವುದೇ ಅಮಾಯಕರನ್ನು ನಾವು ಕೊಂದಿಲ್ಲ. ನಾವು ಉಗ್ರರ ತರಬೇತಿ ನೆಲೆಗಳ ಮೇಲೆ ಮಾತ್ರ ದಾಳಿ ನಡೆಸಿದ್ದೇವೆ.
ಐಎಎಫ್ನಿಂದ ಯಾರು ಏಕೆ ಸಾಕ್ಷ್ಯ ಕೇಳಬೇಕು? ಅವರು ಉಗ್ರರ ಕೇಂದ್ರಗಳ ಮೇಲೆ ದಾಳಿ ಮಾಡಿರುವುದಷ್ಟೇ. ಅವರು ಮೃತದೇಹಗಳನ್ನು ಲೆಕ್ಕ ಮಾಡಿ ಸಾಕ್ಷ್ಯ ಕೊಡಬೇಕೇ? ದೇಶದ ಗೃಹ ಸಚಿವನಾಗಿ ಹೇಳುತ್ತೇನೆ, ಬಾಲಕೋಟ್ ಕಾರ್ಯಾಚರಣೆಯು ನಂಬಲರ್ಹ ಗುಪ್ತಚರ ಮಾಹಿತಿಗಳನ್ನು ಆಧರಿಸಿ ನಡೆದಿದೆ.
15 ಲಕ್ಷ ರೂಪಾಯಿ ನಿಮ್ಮ ಖಾತೆಗೆ ಜಮೆ ಆಗಿದೆಯಾ?: ಪ್ರಿಯಾಂಕಾ ಪ್ರಶ್ನೆ
ಗಂಭೀರವಾಗಿ ತೆಗೆದುಕೊಳ್ಳಬೇಡಿ
ಬಿಜೆಪಿಯ ಪ್ರಣಾಳಿಕೆ ಒಂಟಿ ಮನುಷ್ಯನ ಧ್ವನಿ' ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ. ಭಾರತದ ರಾಜಕೀಯ ಇತಿಹಾಸದಲ್ಲಿ ಪ್ರಣಾಳಿಕೆ ತಯಾರಿಸುವ ಪ್ರಕ್ರಿಯೆಯಲ್ಲಿ ಅನೇಕ ಜನರು ಸೇರಿಕೊಳ್ಳುತ್ತಿದ್ದರು ಎಂದು ನನಗೆ ಅನಿಸುವುದಿಲ್ಲ. ಹೀಗಾಗಿ ರಾಹುಲ್ ಹೇಳಿಕೆ ಆಧಾರರಹಿತ. ಅವರು ಅಂತಹ ಹೇಳಿಕೆಗಳನ್ನು ನೀಡುತ್ತಾ ಇರುತ್ತಾರೆ. ಅದನ್ನು ಗಂಭೀರವಾಗಿ ತೆಗೆದುಕೊಳ್ಳಬೇಡಿ.
35ಎ ವಿಧಿ ರದ್ದುಗೊಳಿಸುತ್ತೇವೆ
370 ಮತ್ತು 35ಎ ವಿಧಿಗಳನ್ನು ರದ್ದುಗೊಳಿಸಿದರೆ ಕಾಶ್ಮೀರವು ಭಾರತದಿಂದ ಬೇರ್ಪಡುವ ಸಾಧ್ಯತೆ ಇದೆ. ಒಂದು ವೇಳೆ ರದ್ದುಗೊಳಿಸಿದರೆ ವಾಜಿರ್ ಇ ಅಜಂ, ಸಾದರ್ ಇ ರಿಯಾಸತ್ ಹುದ್ದೆಗಳನ್ನು ಮರಳಿ ತರಲಾಗುವುದು ಎಂದು ಫಾರೂಕ್ ಅಬ್ದುಲ್ಲಾ ಮತ್ತು ಉಮರ್ ಅಬ್ದುಲ್ಲಾ ಎಂಬ ಹೇಳಿಕೆಗೆ, 'ಭಾರತದಿಂದ ಕಾಶ್ಮೀರ ಪ್ರತ್ಯೇಕವಾಗುವುದಿಲ್ಲ. ಯಾವುದೇ ಶಕ್ತಿಗೂ ಕಾಶ್ಮೀರವನ್ನು ಭಾರತದಿಂದ ಬೇರ್ಪಡಿಸಲಾಗದು. ನಾವು ಅಧಿಕಾರಕ್ಕೆ ಮತ್ತೆ ಬಂದರೆ 35ಎ ವಿಧಿಯನ್ನು ರದ್ದುಗೊಳಿಸಲಾಗುವುದು ಎಂದು ನಮ್ಮ ಪ್ರಣಾಳಿಕೆಯಲ್ಲಿ ಸ್ಪಷ್ಟವಾಗಿ ತಿಳಿಸಿದ್ದೇವೆ. ಭಾರತಕ್ಕೆ ಇಬ್ಬರು ರಾಷ್ಟ್ರಪತಿ ಮತ್ತು ಪ್ರಧಾನಿಗಳಿರುವ ಪ್ರಶ್ನೆಯೇ ಇಲ್ಲ' ಎಂದು ರಾಜನಾಥ್ ಹೇಳಿದರು.
35ಎ ವಿಧಿಯನ್ನು ರದ್ದುಗೊಳಿಸಿದರೆ ಕಾಶ್ಮೀರ ಮಾತ್ರವಲ್ಲ, ಭಾರತವೂ ಸುಟ್ಟುಹೋಗುತ್ತದೆ ಎಂಬ ಮೆಹಬೂಬಾ ಮುಫ್ತಿ ಹೇಳಿಕೆಗೆ, ಇದು ಹತಾಶೆಯಲ್ಲದೇ ಬೇರೇನೂ ಅಲ್ಲ. ಅವರು ಏನು ಬೇಕಾದರೂ ಹೇಳಬಹುದು. ಆದರೆ, ನಾವು ನಿರ್ಧರಿಸಿದ್ದನ್ನು ಮಾಡಿಯೇ ಮಾಡುತ್ತೇವೆ ಎಂದು ಪ್ರತಿಕ್ರಿಯೆ ನೀಡಿದರು.
'15 ಲಕ್ಷ ರೂ. ಎಲ್ಲರ ಖಾತೆಗೂ ಬರುತ್ತದೆ, ಆದರೆ ಸ್ವಲ್ಪ ತಡವಾಗಿ!'
ಏಕ ವ್ಯಕ್ತಿ ಪ್ರದರ್ಶನವಲ್ಲ
ಬಿಜೆಪಿ ಇಬ್ಬರೇ ವ್ಯಕ್ತಿಗಳ ತಂಡವಲ್ಲ, ಏಕ ವ್ಯಕ್ತಿ ಪ್ರದರ್ಶನವೂ ಅಲ್ಲ. ಈ ಟೀಕೆಗಳೆಲ್ಲ ಆಧಾರರಹಿತ. ಪಕ್ಷದ ಅಧ್ಯಕ್ಷರು ಮತ್ತು ಪ್ರಧಾನಿ ಪ್ರಮುಖರಾಗಿರುವುದು ಸಹಜ. ನಾನು ಅಧ್ಯಕ್ಷನಾಗಿದ್ದಾಗ, ಮೋದಿ ಅವರು ಪ್ರಧಾನಿ ಅಭ್ಯರ್ಥಿಯಾಗಿದ್ದಾಗ ನಮ್ಮಿಬ್ಬರ ಹೆಸರನ್ನು ತೆಗೆದುಕೊಳ್ಳುತ್ತಿದ್ದರು. ಇದು ಸಹಜ.
ಅನುಮಾನ ಬೇಡ, ಮೋದಿಯೇ ಪ್ರಧಾನಿ
ಬಿಜೆಪಿಗೆ ಬಹುಮತ ಸಿಗದೆ ಮಿತ್ರ ಪಕ್ಷಗಳ ನೆರವಿನಿಂದ ಸರ್ಕಾರ ರಚಿಸಿದರೆ ಮೋದಿ ಬದಲು ಗಡ್ಕರಿ ಪ್ರಧಾನಿ ಆಗುತ್ತಾರೆ ಎನ್ನುವುದು ಕಾಲ್ಪನಿಕ ಕಥೆ. ಇದು ಖಾಲಿ ಪಲಾವು ಇದ್ದಂತೆ ಅಷ್ಟೇ. ನಾವು ಸ್ಪಷ್ಟ ಬಹುಮತ ಪಡೆಯುತ್ತೇವೆ ಅಥವಾ ಮೂರನೇ ಎರಡರಷ್ಟು ಬಂದರೂ ಮೋದಿ ಅವರೇ ಪ್ರಧಾನಿ ಆಗುತ್ತಾರೆ. ಅದರಲ್ಲಿ ಅನುಮಾನವೇ ಇಲ್ಲ.