ರಾಯಚೂರು ಕ್ಷೇತ್ರದ ಅಭ್ಯರ್ಥಿ ಬಿ.ವಿ ನಾಯಕ್ ಪರಿಚಯ
ರಾಜ್ಯಕ್ಕೆ ಬೆಳಕು ನೀಡುವ ಜಿಲ್ಲೆ, ಅನ್ನದ ನಾಡು, ಕೃಷ್ಣೆ, ತುಂಗೆಯರ ಬೀಡು 'ರಾಜನ ಊರು' ಎಂಬ ಅರ್ಥ ಹೊಂದಿರುವ ರಾಯಚೂರು ಲೋಕಸಭಾ ಕ್ಷೇತ್ರಕ್ಕೆ ಬಿ. ವಿ ನಾಯಕ್ ಅವರು ಸದ್ಯ ಹಾಲಿ ಸಂಸದರಾಗಿದ್ದಾರೆ. ಈ ಬಾರಿ ಇದೇ ಕ್ಷೇತ್ರದಿಂದ ಸಂಸತ್ತಿಗೆ ಪುನಾರಾಯ್ಕೆ ಬಯಸಿದ್ದಾರೆ. ಬಿ. ವಿ ನಾಯಕ್ ಅವರ ಎದುರಾಳಿಯಾಗಿ ಬಿಜೆಪಿ ಅಭ್ಯರ್ಥಿ ರಾಜ ಅಮರೇಶ ನಾಯಕ್ ಇದ್ದಾರೆ.
ರಾಯಚೂರು ಪರಿಶಿಷ್ಟ ಪಂಗಡ ಕ್ಷೇತ್ರವು ಕಾಂಗ್ರೆಸ್ ವಶದಲ್ಲಿದೆ, ಸಂಸದ ಬಿ.ವಿ.ನಾಯಕ್ ಅವರ ಅವಧಿಯಲ್ಲಿ ಈ ಕ್ಷೇತ್ರಕ್ಕೆ ಸಂಸದರ ನಿಧಿಯಿಂದ 15 ಕೋಟಿ ಅನುದಾನ ಸಿಕ್ಕಿತ್ತು. ಜಿಲ್ಲಾಡಳಿತ 14.67 ಕೋಟಿ ಅನುದಾನ ಬಿಡುಗಡೆ ಮಾಡಿತ್ತು. 12.27 ಕೋಟಿ ಅನುದಾನವನ್ನು ವಿವಿಧ ಯೋಜನೆಗಳಿಗೆ ಖರ್ಚು ಮಾಡಲಾಗಿದೆ.
ಸಂಸತ್ತಿನಲ್ಲಿ ಬಿ.ವಿ.ನಾಯಕ್ ಅವರು ಶೇ 61ರಷ್ಟು ಹಾಜರಾತಿ ಹೊಂದಿದ್ದಾರೆ. 11 ಚರ್ಚೆಗಳಲ್ಲಿ ಅವರು ಪಾಲ್ಗೊಂಡಿದ್ದಾರೆ. 676 ಪ್ರಶ್ನೆಗಳನ್ನು ಕೇಳಿದ್ದಾರೆ. 350 ರಾಜ್ಯಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಿದ್ದಾರೆ.
2014ರ ಚುನಾವಣೆಯಲ್ಲಿ ಬಿಜೆಪಿಯ ಶಿವನಗೌಡ ನಾಯಕ್ ಅವರು ಬಿ.ವಿ.ನಾಯಕ್ ಅವರಿಗೆ ಎದುರಾಳಿಯಾಗಿದ್ದರು. ಅಳಿಯ ಹಾಗೂ ಮಾವನ ಕದನದಲ್ಲಿ ಮಾವ ಬಿ.ವಿ ನಾಯಕ್ 4,43,659 ಮತಗಳನ್ನು ಪಡೆದರೆ, ಶಿವನಗೌಡ ನಾಯಕ್ 4,42,160 ಮತಗಳನ್ನು ಗಳಿಸಿ ಸೋಲು ಕಂಡಿದ್ದರು. 1980ರ ಚುನಾವಣೆ ಬಳಿಕ ಕಾಂಗ್ರೆಸ್ 8 ಬಾರಿ, ಬಿಜೆಪಿ ಕೇವಲ ಒಂದು ಬಾರಿ ಕ್ಷೇತ್ರದಲ್ಲಿ ಜಯಗಳಿಸಿದೆ. ಕಾಂಗ್ರೆಸ್ ನಿಷ್ಠಾವಂತ ಮಾಜಿ ಸಂಸದ ವೆಂಕಟೇಶ್ ನಾಯಕ್ ಪುತ್ರರಾದ ಬಿ.ವಿ ನಾಯಕ್, ಗೆಲುವಿನ ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿದ್ದಾರೆ.
ಲೋಕಸಭೆ ರಣಕಣ 2019: ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗಳು
ಅಂತಾರಾಜ್ಯ ನದಿ ನೀರಿನ ಸಮಸ್ಯೆ ಎದುರಾದಾಗ ಸಂಸದರಾಗಿ ಬಿ.ವಿ ನಾಯಕ್ ಅವರು ಸಂಸತ್ತಿನಲ್ಲಿ ದನಿಯೆತ್ತಿದ್ದರು. ಆದರೆ, ಈ ಭಾಗದಲ್ಲಿ ಕೃಷ್ಣ ಮತ್ತು ತುಂಗಭದ್ರ ನದಿ ಹರಿಯುತ್ತಿದ್ದರೂ ಜಿಲ್ಲೆಯಲ್ಲಿ ನೀರಾವರಿ ಸಮಸ್ಯೆ ಇದ್ದೇ ಇದೆ.
ಕರ್ನಾಟಕದಲ್ಲಿ ಐಐಟಿ ಸ್ಥಾಪನೆ ಬಗ್ಗೆ ಚರ್ಚೆಗಳು ಆರಂಭವಾದಾಗ ರಾಯಚೂರಿನ ಹೆಸರು ಕೇಳಿಬಂದಿತ್ತು. ಆದರೆ, ಅಂತಿಮವಾಗಿ ಐಐಟಿ ಧಾರವಾಡ ಜಿಲ್ಲೆಯ ಪಾಲಾಯಿತು. ಬಿವಿ ನಾಯಕ್ ಅವರು 2015ರಲ್ಲಿ ಐಐಟಿ, ಐಐಎಂ ಸ್ಥಾಪನೆ ವಿಷಯವಾಗಿ ಚರ್ಚೆಯಲ್ಲಿ ಭಾಗವಹಿಸಿದ್ದರು.
ರಾಯಚೂರಿನ ಶಕ್ತಿ ನಗರದಲ್ಲಿರುವ ಶಾಖೋತ್ಪನ್ನ ವಿದ್ಯುತ್ ಸ್ಥಾವರ ಕರ್ನಾಟಕಕ್ಕೆ ಬೆಳಕು ನೀಡುತ್ತದೆ. ಆದರೆ, ಈ ಕೇಂದ್ರದ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ. ಕಲ್ಲಿದ್ದಲು ಕೊರತೆ ವಿದ್ಯುತ್ ಸ್ಥಾವರವನ್ನು ಸದಾ ಕಾಡುತ್ತದೆ. ರಾಜ್ಯಕ್ಕೆ ಕೇಂದ್ರದಿಂದ ಸಿಗಬೇಕಾದ ಕಲ್ಲಿದ್ದಲು ಹಾಗೂ ವಿದ್ಯುತ್ ಹಂಚಿಕೆ ಪ್ರಮಾಣದ ಬಗ್ಗೆ ಸಂಸದರಾಗಿ ಬಿವಿ ನಾಯಕ್ ಹೆಚ್ಚಾಗಿ ದನಿ ಎತ್ತಿಲ್ಲ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ. ಆದರೆ, ಕಲ್ಲಿದ್ದಲು ಇಲಾಖೆಗೆ ಸಂಬಂಧಿಸಿದಂತೆ ಐದಾರು ಬಾರಿ ಪ್ರಶ್ನೆ ಕೇಳಿರುವುದು ಅಂಕಿ ಅಂಶದಿಂದ ತಿಳಿದು ಬಂದಿದೆ.
2019ರ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಈ ಬೆಳವಣಿಗೆ ಕಂಡು ಬಂದರೆ ಬಿವಿ ನಾಯಕ್ ಅವರು ಬಿಜೆಪಿ ಸೇರುವ ಸಾಧ್ಯತೆ ಹೆಚ್ಚಿದೆ ಎಂಬ ಸುದ್ದಿಯೂ ಹಬ್ಬಿತ್ತು. ಆದರೆ, ಮೈತ್ರಿ ಸರ್ಕಾರದ ಒಮ್ಮತದ ಅಭ್ಯರ್ಥಿಯಾಗಿ ಬಿ. ವಿ ನಾಯಕ್ ಅವರು ಕಣಕ್ಕಿಳಿದಿದ್ದಾರೆ.