ಚಿಕ್ಕೋಡಿ ಸಂಸದ ಪ್ರಕಾಶ್ ಹುಕ್ಕೇರಿ ಪರಿಚಯ
ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನದಿಂದ ಸಂಸದ ಸ್ಥಾನಕ್ಕೆ ಏರಿದ ಕಾಂಗ್ರೆಸ್ ನಾಯಕ ಪ್ರಕಾಶ್ ಹುಕ್ಕೇರಿ. ಚಿಕ್ಕೋಡಿ ಕ್ಷೇತ್ರದ ಹಾಲಿ ಸಂಸದರಾಗಿರುವ ಪ್ರಕಾಶ್ ಹುಕ್ಕೇರಿ ಅವರು 2019ರ ಚುನಾವಣೆಗೂ ಅಭ್ಯರ್ಥಿಯಾಗಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಚಿಕ್ಕೋಡಿ-ಸದಲಗಾ ಕ್ಷೇತ್ರದಿಂದ 2013ರ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿದ್ದ ಪ್ರಕಾಶ್ ಹುಕ್ಕೇರಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ, 2014ರ ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿದು ಸಂಸತ್ ಪ್ರವೇಶಿಸಿದರು.
ಲೋಕಸಭೆ ರಣಕಣ 2019: ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗಳು
ಐದು ಬಾರಿ ಶಾಸಕರಾಗಿ ಆಯ್ಕೆಯಾಗಿರುವ 71 ವರ್ಷದ ಪ್ರಕಾಶ್ ಹುಕ್ಕೇರಿ ಅವರು ಎರಡು ಬಾರಿ ರಾಜ್ಯದಲ್ಲಿ ಸಚಿವರಾಗಿ ಕೆಲಸ ಮಾಡಿದ್ದಾರೆ. ಒಲ್ಲದ ಮನಸ್ಸಿನಿಂದಲೇ ಕಳೆದ ಲೋಕಸಭಾ ಚುನಾವಣೆಯಲ್ಲಿ ಚಿಕ್ಕೋಡಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅವರು ಗೆಲುವು ಸಾಧಿಸಿದರು.
ಚಿಕ್ಕೋಡಿಯಲ್ಲಿ ಪ್ರತ್ಯೇಕ ಜಿಲ್ಲೆಯ ಕೂಗು, ಸಮಸ್ಯೆಗಳು ನೂರಾರು
ಪ್ರಕಾಶ್ ಹುಕ್ಕೇರಿ ಅವರು ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಸೇರಿದವರು. ಎಸ್ಎಸ್ಎಲ್ಸಿ ವ್ಯಾಸಂಗ ಮಾಡಿದ್ದಾರೆ. ಇವರ ಪುತ್ರ ಗಣೇಶ್ ಹುಕ್ಕೇರಿ ಅವರು ಸಹ ರಾಜಕೀಯದಲ್ಲಿದ್ದು, ಚಿಕ್ಕೋಡಿ-ಸದಲಗಾ ಕ್ಷೇತ್ರದ ಶಾಸಕರಾಗಿದ್ದಾರೆ.
ಗ್ರಾಮ ಪಂಚಾಯಿತಿ ಮೂಲಕ ರಾಜಕೀಯ ಪ್ರವೇಶ
1983ರಲ್ಲಿ ಯಕ್ಸಂಬಾ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಪ್ರಕಾಶ್ ಹುಕ್ಕೇರಿ ಅವರು ರಾಜಕೀಯ ಜೀವನ ಆರಂಭಿಸಿದರು. 2004ರಲ್ಲಿ ಧರಂಸಿಂಗ್ ಸಂಪುಟದಲ್ಲಿ, 2013ರ ಚುನಾವಣೆ ಗೆದ್ದ ಬಳಿಕ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿ ಕೆಲಸ ಮಾಡಿದ್ದಾರೆ.
ವಿಧಾನ ಪರಿಷತ್ ಸದಸ್ಯರಾಗಿದ್ದರು
1986ರಲ್ಲಿ ಬೆಳಗಾವಿ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ, 1988ರಿಂದ 1994ರ ತನಕ ವಿಧಾನ ಪರಿಷತ್ ಸದಸ್ಯರಾಗಿ. 1992ರಿಂದ 1994ರ ತನಕ ವಿಧಾನ ಪರಿಷತ್ ಮುಖ್ಯ ಸಚೇತರಕಾಗಿ. 2000 ದಿಂದ 2004ರ ತನಕ ಬೆಳಗಾವ ಕಾಡಾ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಹ್ಯಾಟ್ರಿಕ್ ಬಾರಿಸಿದ್ದಾರೆ
ಪ್ರಕಾಶ್ ಹುಕ್ಕೇರಿ ಅವರು 1994, 1999, 2004 ಸತತ ಮೂರು ಚುನಾವಣೆಗಳಲ್ಲಿ ಸದಲಗಾ ಕ್ಷೇತ್ರದಿಂದ ಗೆಲ್ಲುವ ಮೂಲಕ ಹ್ಯಾಟ್ರಿಕ್ ಬಾರಿಸಿದ್ದಾರೆ. 2004ರಲ್ಲಿ ಗೆದ್ದ ಬಳಿಕ ಧರಂಸಿಂಗ್ ಸರ್ಕಾರದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಇಲಾಖೆ ಸಚಿವರಾಗಿದ್ದರು.
ಸದಲಗಾ ಕ್ಷೇತ್ರದಿಂದ ಸತತವಾಗಿ ಗೆಲುವು ಸಾಧಿಸುತ್ತಿದ್ದ ಅವರು ಕ್ಷೇತ್ರ ಪುನರ್ ವಿಂಗಡನೆ ಬಳಿಕ 2008ರಲ್ಲಿ ಚಿಕ್ಕೋಡಿ-ಸದಲಗಾ ಕ್ಷೇತ್ರದಿಂದ ಕಣಕ್ಕಿಳಿದು ಗೆದ್ದರು. 2013ರ ಚುನಾವಣೆಯಲ್ಲಿಯೂ ಪುನಃ ಅದೇ ಕ್ಷೇತ್ರದಿಂದ ಗೆದ್ದರು.
ಸಕ್ಕರೆ ಸಚಿವರಾದರು
2013ರ ವಿಧಾನಸಭೆ ಚುನಾವಣೆಯಲ್ಲಿ ಗೆದ್ದ ಬಳಿಕ ಪ್ರಕಾಶ್ ಹುಕ್ಕೇರಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಲ್ಲಿ ಮುಜರಾಯಿ ಮತ್ತು ಸಕ್ಕರೆ ಖಾತೆ ಸಚಿವರಾಗಿದ್ದರು. ಆದರೆ, ಪಕ್ಷದ ಆದೇಶದಂತೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು 2014ರ ಮೇ ತಿಂಗಳಿನಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು.
2014ರ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗಳಿಸಬೇಕು ಎಂಬ ಉದ್ದೇಶದಿಂದ ಕಾಂಗ್ರೆಸ್ ಪಕ್ರಾಶ್ ಹುಕ್ಕೇರಿ ಅವರಿಗೆ ಚುನಾವಣೆಗೆ ಸ್ಪರ್ಧಿಸುವಂತೆ ಸೂಚಿಸಿತು. ಮೊದಲು ರಾಷ್ಟ್ರ ರಾಜಕಾರಣಕ್ಕೆ ಹೋಗಲು ಒಪ್ಪದ ಅವರು ಸಿದ್ದರಾಮಯ್ಯ ಅವರ ಮಾತಿಗೆ ಬೆಲೆ ಕೊಟ್ಟು ಶಾಸಕ, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು.
ಪುತ್ರನನ್ನು ಗೆಲ್ಲಿಸಿಕೊಂಡ ಬಂದರು
ಪ್ರಕಾಶ್ ಹುಕ್ಕೇರಿ ಅವರ ರಾಜೀನಾಮೆಯಿಂದ ತೆರವಾದ ಚಿಕ್ಕೋಡಿ-ಸದಲಗಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಿತು. ಆಗ ಕಾಂಗ್ರೆಸ್ ಪ್ರಕಾಶ್ ಹುಕ್ಕೇರಿ ಪುತ್ರ ಗಣೇಶ್ ಹುಕ್ಕೇರಿ ಅವರಿಗೆ ಟಿಕೆಟ್ ನೀಡಿತು. ಉಪ ಚುನಾವಣೆಯಲ್ಲಿ ಪುತ್ರನನ್ನು ಪ್ರಕಾಶ್ ಹುಕ್ಕೇರಿ ಗೆಲ್ಲಿಸಿಕೊಂಡು ಬಂದರು. 2018ರ ಚುನಾವಣೆಯಲ್ಲಿಯೂ ಗಣೇಶ್ ಹುಕ್ಕೇರಿ ಜಯಗಳಿಸಿದ್ದಾರೆ.