ಇಲ್ಲಿ ಗೆದ್ದ ಪಕ್ಷವೇ ಕೇಂದ್ರದಲ್ಲಿ ಸರ್ಕಾರ ರಚಿಸುವುದು ಗ್ಯಾರಂಟಿ!
ನವದೆಹಲಿ, ಮೇ 11: ಈ ಲೋಕಸಭಾ ಚುನಾವಣೆಯಲ್ಲಿ ದೆಹಲಿಯ ಫಲಿತಾಂಶದ ಬಗ್ಗೆ ಎಲ್ಲ ಪಕ್ಷಗಳು ಹೆಚ್ಚು ಕಣ್ಣಿಟ್ಟಿವೆ. ಇಲ್ಲಿರುವುದು ಏಳೇ ಕ್ಷೇತ್ರ. ಆದರೆ, ಕೇಂದ್ರದಲ್ಲಿ ಚುಕ್ಕಾಣಿ ಹಿಡಿಯುವುದು ಯಾರು ಎಂಬುದನ್ನು ಈ ರಾಜ್ಯದ ಕ್ಷೇತ್ರಗಳೇ ನಿರ್ಧರಿಸುತ್ತವೆ. ಇತ್ತೀಚಿನ ಇತಿಹಾಸ ಇದನ್ನೇ ಹೇಳಿದೆ. ಅದು ಬದಲಾಗುತ್ತದೆಯೇ ಅಥವಾ ದಿಟವಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕು.
ಕಳೆದ ಲೋಕಸಭಾ ಚುನಾವಣೆಯಲ್ಲಿ ದೆಹಲಿಯಲ್ಲಿ ಇರುವ ಎಲ್ಲ ಏಳೂ ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡಿತ್ತು. ಆದರೆ, ಮರುವರ್ಷವೇ ನಡೆದ ವಿಧಾನಸಭೆ ಚುನಾವಣೆಯಲ್ಲಿ ಅದೇ ಉತ್ಸಾಹದೊಂದಿಗೆ ಅಖಾಡಕ್ಕಿಳಿದ ಬಿಜೆಪಿಗೆ ತೀವ್ರ ಮುಖಭಂಗವಾಗಿತ್ತು. ಕಾಂಗ್ರೆಸ್ ಅಂತೂ ತನಗಿಲ್ಲಿ ನೆಲೆಯೇ ಇಲ್ಲ ಎಂಬ ಸ್ಥಿತಿಗೆ ಬಂದಿತ್ತು. ಏಕೆಂದರೆ 2015ರ ವಿಧಾನಸಭೆ ಚುನಾವಣೆಯಲ್ಲಿ 70 ಕ್ಷೇತ್ರಗಳ ಪೈಕಿ 67ರಲ್ಲಿ ಎಎಪಿ ಜಯಭೇರಿ ಭಾರಿಸಿದ್ದರೆ ಉಳಿದ ಮೂರು ಸ್ಥಾನಗಳು ಮಾತ್ರ ಬಿಜೆಪಿ ಪಾಲಾಗಿದ್ದವು.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ದೆಹಲಿ ಲೋಕಸಭಾ ಚುನಾವಣೆ ಮಹತ್ವದ್ದೆನಿಸಿದೆ. ಇಲ್ಲಿ ಇರುವುದು ಏಳೇ ಕ್ಷೇತ್ರವಾದರೂ ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂಬುದು ಇಲ್ಲಿನ ಫಲಿತಾಂಶದ ಮೇಲೆ ನಿರ್ಧಾರವಾಗುತ್ತದೆ. ಇತ್ತೀಚಿನ ಕೆಲವು ಚುನಾವಣೆಗಳಲ್ಲಿ ನಡೆದಿರುವುದೇ ಹೀಗೆ. ದೆಹಲಿಯಲ್ಲಿ ಅಧಿಕ ಸ್ಥಾನಗಳನ್ನು ಗೆದ್ದ ಪಕ್ಷವೇ ಅಧಿಕಾರಕ್ಕೆ ಬರುತ್ತದೆ.
ಈ ಅಂಕಿ ಅಂಶಗಳನ್ನು ಗಮನಿಸಿದಾಗ ದೇಶದ ಒಟ್ಟಾರೆ ಜನಾಭಿಪ್ರಾಯವನ್ನು ದೆಹಲಿ ಪ್ರತಿಫಲಿಸುತ್ತದೆ ಎನ್ನಬಹುದು. 2014ರ ಲೋಕಸಭೆ ಚುನಾವಣೆಯನ್ನೇ ತೆಗೆದುಕೊಳ್ಳಿ. ಇಲ್ಲಿ ಬಿಜೆಪಿ ಎಲ್ಲ ಏಳೂ ಸ್ಥಾನಗಳನ್ನು ಗೆದ್ದುಕೊಂಡಿತ್ತು. ಶೇ 46.40ರಷ್ಟು ಮತಗಳನ್ನು ಅದು ಪಡೆದುಕೊಂಡಿತ್ತು. ಬಿಜೆಪಿ ಭಾರಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿತು. ಇದೇ ದೆಹಲಿಯಲ್ಲಿ ಕಾಂಗ್ರೆಸ್, ಶೀಲಾ ದೀಕ್ಷಿತ್ ನೇತೃತ್ವದಲ್ಲಿ 1998-2013ರವರೆಗೆ ಸತತ ಮೂರು ಬಾರಿ ಅಧಿಕಾರ ನಡೆಸಿತ್ತು ಎನ್ನುವುದನ್ನು ಮರೆಯುವಂತಿಲ್ಲ. ಅದೇ ಕಾಂಗ್ರೆಸ್ 2015ರ ಚುನಾವಣೆಯಲ್ಲಿ ಮಾಡಿದ ಸಾಧನೆ 'ಶೂನ್ಯ'.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ತ್ರಿಕೋನ ಸ್ಪರ್ಧೆ, ಅಭ್ಯರ್ಥಿಗಳ ಸವಿವರ
ದೆಹಲಿಯಲ್ಲಿ ಮತದಾರರ ಒಲವು ನಿರಂತರ ಬದಲಾಗುತ್ತಿದೆ. ಈ ಬಾರಿ ರಾಜಧಾನಿಯಲ್ಲಿ ಎಎಪಿ ಮತ್ತು ಬಿಜೆಪಿಗಳ ನಡುವೆ ನೇರ ಹಣಾಹಣಿ ಇದೆ. ಕಾಂಗ್ರೆಸ್ ಕೂಡ ಅಖಾಡಕ್ಕೆ ಇಳಿದಿದ್ದರೂ ಎಎಪಿ ಪ್ರಾಬಲ್ಯದಲ್ಲಿ ಅದು ಮಸುಕಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಅಸ್ತಿತ್ವಕ್ಕೆ ಬಂದ ಎಎಪಿ
ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಮತ್ತು ಅನೇಕ ಸಂಘಟನೆಗಳು ನಡೆಸಿದ ಲೋಕಪಾಲ್ ಚಳವಳಿಯಲ್ಲಿ ಅನೇಕ ಮುಖಂಡರು ಮುಖ್ಯವಾಹಿನಿಗೆ ಬಂದರು. ಅವರಲ್ಲಿ ಕೆಲವರು ಜತೆಗೂಡಿ ಆಮ್ ಆದ್ಮಿ ಪಕ್ಷ ಸ್ಥಾಪಿಸಿದರು. ಆರ್ಟಿಐ ಕಾರ್ಯಕರ್ತ ಅರವಿಂದ್ ಕೇಜ್ರಿವಾಲ್ ಮುಂಚೂಣಿಗೆ ಬಂದರು. 2013ರ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಎಎಪಿ ಶೇ 29.49ರಷ್ಟು ಮತಗಳನ್ನು ಪಡೆದುಕೊಂಡಿತ್ತು. 2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಏಳೂ ಸ್ಥಾನಗಳಲ್ಲಿ ಗೆದ್ದಾಗ ಎಎಪಿ ಶೇ 32.09 ಮತಗಳನ್ನು ಗಳಿಸಿತ್ತು.
ಆದರೆ, ಕಾಂಗ್ರೆಸ್ 2009ರ ಲೋಕಸಭೆ ಚುನಾವಣೆಗೆ ಹೋಲಿಸಿದರೆ 2014ರ ಲೋಕಸಭೆ ಚುನಾವಣೆಯಲ್ಲಿ ಶೇ 42ರಷ್ಟು ಮತಗಳನ್ನು ಕಳೆದುಕೊಂಡಿತ್ತು. 2009ರಲ್ಲಿ ಏಳೂ ಸ್ಥಾನಗಳಲ್ಲಿ ಕಾಂಗ್ರೆಸ್ ಜಯಭೇರಿ ಭಾರಿಸಿತ್ತು.
ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಅದಕ್ಕೆ ರಾಹುಲ್ ಗಾಂಧಿ ಕಾರಣ: ಕೇಜ್ರಿವಾಲ್
ರಾಜಧಾನಿಯಲ್ಲಿ ಗೆದ್ದವರದೇ ಸರ್ಕಾರ
1998ರಿಂದ ಇಲ್ಲಿಯವರೆಗಿನ ಇತಿಹಾಸ ನೋಡಿದಾಗ ದೆಹಲಿಯಲ್ಲಿ ಹೆಚ್ಚು ಸೀಟುಗಳನ್ನು ಗೆದ್ದ ಪಕ್ಷವೇ ಕೇಂದ್ರದಲ್ಲಿ ಅಧಿಕಾರಕ್ಕೆ ಬರುತ್ತಿರುವುದನ್ನು ಗಮನಿಸಬಹುದು. 1998ರ ಚುನಾವಣೆಯಲ್ಲಿ ಬಿಜೆಪಿ ಇಲ್ಲಿನ ಏಳರಲ್ಲಿ ಆರು ಸೀಟುಗಳಲ್ಲಿ ಗೆಲುವು ಕಂಡಿತ್ತು. ಹಾಗೆಯೇ ಕೇಂದ್ರದಲ್ಲಿ ಎನ್ಡಿಎ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು. ಆದರೆ, ಆಗಿನ ವಾಜಪೇಯಿ ಸರ್ಕಾರ 13 ತಿಂಗಳಲ್ಲಿ ಪತನಗೊಂಡಿತ್ತು.
ಇದಕ್ಕೂ ಮೊದಲು 1996ರ ಚುನಾವಣೆಯಲ್ಲಿ ಬಿಜೆಪಿ ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆಗಲೂ ರಾಜಧಾನಿಯ ಆರು ಸೀಟುಗಳಲ್ಲಿ ಬಿಜೆಪಿ ಗೆಲುವಿನ ನಗೆ ಬೀರಿತ್ತು. ಆದರೆ, ಆಗಿನ ವಾಜಪೇಯಿ ಸರ್ಕಾರ ಅಧಿಕಾರದಲ್ಲಿ ಇದ್ದದ್ದು ಕೇವಲ 13ದಿನ.
1999ರಲ್ಲಿ ಬಿಜೆಪಿ ದೆಹಲಿಯ ಏಳೂ ಸ್ಥಾನಗಳನ್ನು ಗೆದ್ದುಕೊಂಡಿತು. ಆಗ ವಾಜಪೇಯಿ ಸರ್ಕಾರ ಸಂಪೂರ್ಣ ಬಹುಮತದೊಂದಿಗೆ ಅಸ್ತಿತ್ವಕ್ಕೆ ಬಂದಿತ್ತು.
ಬಿಜೆಪಿ ಎದುರು ಪ್ರಿಯಾಂಕಾ, ರಾಹುಲ್ ಪ್ರಚಾರವನ್ನೇ ಮಾಡುತ್ತಿಲ್ಲ: ಕೇಜ್ರಿವಾಲ್ ಆರೋಪ
ಕಾಂಗ್ರೆಸ್ ಪರ ದೆಹಲಿ ಒಲವು
2004ರಲ್ಲಿ ದೆಹಲಿ ಮತ್ತು ದೇಶದ ಮತದಾರರ ಅಭಿಪ್ರಾಯ ಬದಲಾಗಿತ್ತು. ದೆಹಲಿಯಲ್ಲಿ ಕಾಂಗ್ರೆಸ್ ಆರು ಕ್ಷೇತ್ರಗಳಲ್ಲಿ ಜಯಶಾಲಿಯಾದರೆ, ಬಿಜೆಪಿ ಒಂದು ಕ್ಷೇತ್ರಕ್ಕೆ ಸಮಾಧಾನಪಟ್ಟುಕೊಳ್ಳುವಂತಾಯಿತು. ಆಗ ಅಸ್ತಿತ್ವಕ್ಕೆ ಬಂದಿದ್ದು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ. ಮನಮೋಹನ್ ಸಿಂಗ್ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ರಚಿಸಿತ್ತು.
2009ರ ಚುನಾವಣೆಯಲ್ಲಿ ಸಹ ದೆಹಲಿಯು ಕಾಂಗ್ರೆಸ್ನ ಕೈ ಹಿಡಿದಿತ್ತು. ಎಲ್ಲ ಏಳೂ ಕ್ಷೇತ್ರಗಳು ಕಾಂಗ್ರೆಸ್ ಪಾಲಾಗಿದ್ದವು. 1977ರಲ್ಲಿ ಇಂದಿರಾ ಗಾಂಧಿ ಅವರ ಬಳಿಕ ಸತತ 10 ವರ್ಷಗಳವರೆಗೆ ಪ್ರಧಾನಿಯಾಗಿದ್ದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಮನಮೋಹನ್ ಸಿಂಗ್ ಪಾತ್ರರಾದರು.
ದೆಹಲಿಯಲ್ಲಿ ಬೆಳೆದ ಎಎಪಿ
ದೇಶದ ಆಡಳಿತ ದೆಹಲಿಯಿಂದ ನಡೆಯುವಂತೆ, ದೇಶವನ್ನು ಆಳುವವರು ಯಾರು ಎಂಬುದನ್ನು ಕೂಡ ದೆಹಲಿಯೇ ನಿರ್ಧರಿಸುತ್ತದೆ ಎಂದು ವ್ಯಾಖ್ಯಾನಿಸಬಹುದು. ಇದು ಲೋಕಸಭೆಯ ಚಿತ್ರಣ. ಆದರೆ, ದೆಹಲಿಯ ಆಂತರಿಕ ಚಿತ್ರಣ ಬೇರೆಯೇ ಇರುತ್ತದೆ.
2013ರ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 31 ಕ್ಷೇತ್ರಗಳಲ್ಲಿ ಗೆದ್ದು ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. 2009ರ ಲೋಕಸಭೆ ಚುನಾವಣೆಯಲ್ಲಿನ ಹೀನಾಯ ಸೋಲನ್ನು ಹೋಲಿಸಿದರೆ ಇದು ಬೃಹತ್ ಗೆಲುವಾಗಿತ್ತು. ಆದರೆ, 70 ಕ್ಷೇತ್ರಗಳ ವಿಧಾನಸಭೆಯಲ್ಲಿ 28 ಸದಸ್ಯರನ್ನು ಹೊಂದಿದ್ದ ಎಎಪಿ, ಎಂಟು ಸ್ಥಾನಗಳಲ್ಲಿ ಗೆದ್ದಿದ್ದ ಕಾಂಗ್ರೆಸ್ ಬೆಂಬಲದೊಂದಿಗೆ ಸರ್ಕಾರ ರಚಿಸಿತು. ಈ ಚುನಾವಣೆಯಲ್ಲಿ ಎಎಪಿ ಬಿಜೆಪಿಗಿಂತಲೂ ಕಾಂಗ್ರೆಸ್ ವಿರುದ್ಧವೇ ಸ್ಪರ್ಧಿಸಿತ್ತು. ಆದರೆ, ಈ ಸರ್ಕಾರ ಕೊನೆಯವರೆಗೂ ಉಳಿಯಲಿಲ್ಲ.
ದೆಹಲಿ ಕಳೆದುಕೊಂಡ ಕಾಂಗ್ರೆಸ್
2015ರಲ್ಲಿ ದೆಹಲಿ ಚಿತ್ರಣವೇ ಬದಲಾಗಿತ್ತು. 70ರಲ್ಲಿ ಬರೋಬ್ಬರಿ 67 ಕ್ಷೇತ್ರಗಳು ಎಎಪಿ ಪಾಲಾಗಿದ್ದವು. ಬಿಜೆಪಿ ದಕ್ಕಿದ್ದು ಮೂರೇ ಮೂರು. ಇನ್ನು ಕಾಂಗ್ರೆಸ್ ಹೇಳ ಹೆಸರಿಲ್ಲದಂತೆ ಮಾಯವಾಗಿತ್ತು. 2015ರಲ್ಲಿ ಎಎಪಿ ಪಡೆದ ಮತ ಪ್ರಮಾಣ ಶೇ 54.2ರಷ್ಟು.
2014ರ ಲೋಕಸಭೆ ಚುನಾವಣೆಗೆ ಹೋಲಿಸಿದಾಗ ಬಿಜೆಪಿ ಶೇ 14ರಷ್ಟು ಮತಗಳನ್ನು ಕಲೆದುಕೊಂಡಿತ್ತು. ಆದರೆ, 2013ರ ವಿಧಾನಸಭೆ ಚುನಾವಣೆಗೆ ಹೋಲಿಸಿದರೆ ಅದು ಕಳೆದುಕೊಂಡ ಮತಗಳ ಪ್ರಮಾಣ ಶೇ 1ರಷ್ಟು ಮಾತ್ರ.
2013ರಲ್ಲಿ ಶೇ 24.60ರಷ್ಟು ಮತಗಳಿಸಿದ್ದ ಕಾಂಗ್ರೆಸ್ 2015ರ ವಿಧಾನಸಭೆ ಚುನಾವಣೆಯಲ್ಲಿ ಗಳಿಸಿದ್ದು ಶೇ 9.70ರಷ್ಟು ಮತಗಳನ್ನು ಮಾತ್ರ. ಅದರ ನಷ್ಟದ ಲಾಭವನ್ನು ಎಎಪಿ ಮತ್ತು ಬಿಜೆಪಿ ಎರಡೂ ಪಡೆದುಕೊಂಡಿದ್ದವು.
ಪಶ್ಚಿಮ ದೆಹಲಿಯಲ್ಲಿ ಗೆದ್ದರೆ ಸಾಕು!
ದೆಹಲಿಯಲ್ಲಿಯೂ ಎಲ್ಲ ಪಕ್ಷಗಳು ಕಣ್ಣಿಟ್ಟಿರುವ ಒಂದು ಕ್ಷೇತ್ರವಿದೆ. ಅದು ಪಶ್ಚಿಮ ದೆಹಲಿ ಕ್ಷೇತ್ರ. 1977ರಿಂದ ಇಲ್ಲಿಯವರೆಗೆ 11 ಸಂಸತ್ ಚುನಾವಣೆಗಳಲ್ಲಿ ಪಶ್ಚಿಮ ದೆಹಲಿಯಲ್ಲಿ ಯಾವ ಪಕ್ಷದ ಅಭ್ಯರ್ಥಿ ಗೆದ್ದಿದ್ದಾರೋ, ಆ ಪಕ್ಷವೇ ಕೇಂದ್ರದಲ್ಲಿ ಸರ್ಕಾರ ರಚಿಸಿದೆ. ಇಲ್ಲಿ ಈ ಬಾರಿ ಬಿಜೆಪಿಯ ಹಾಲಿ ಸಂಸದ ಪರ್ವೇಶ್ ಸಾಹಿಬ್ ಸಿಂಗ್ ವರ್ಮಾ, ಎಎಪಿಯ ಬಲಬೀರ್ ಸಿಂಗ್ ಜಖಾರ್ ಮತ್ತು ಕಾಂಗ್ರೆಸ್ನ ಮಹಾಬಲ ಮಿಶ್ರಾ ನಡುವೆ ಪೈಪೋಟಿ ಇದೆ.
ದೇಶದ 543 ಲೋಕಸಭೆ ಕ್ಷೇತ್ರಗಳ ಪೈಕಿ ಈ ರೀತಿಯ ದಾಖಲೆಯನ್ನು ಹೊಂದಿರುವುದು ಪಶ್ಚಿಮ ದೆಹಲಿ ಹೊರತುಪಡಿಸಿದರೆ ಗುಜರಾತ್ನ ವಲ್ಸದ್ ಲೋಕಸಭೆ ಕ್ಷೇತ್ರ ಮಾತ್ರ. ಅದೇ ರೀತಿ ವಾಯವ್ಯ ದೆಹಲಿಯಲ್ಲಿ 11 ಚುನಾವಣೆಗಳ ಪೈಕಿ 10 ಚುನಾವಣೆಗಳಲ್ಲಿ ಗೆದ್ದ ಪಕ್ಷವೇ ಅಧಿಕಾರಕ್ಕೆ ಬಂದಿದೆ. ಇನ್ನು ಮಾಜಿ ಕ್ರಿಕೆಟಿಗ, ಬಿಜೆಪಿ ಅಭ್ಯರ್ಥಿ ಗೌತಮ್ ಗಂಭೀರ್ ಸ್ಪರ್ಧಿಸುತ್ತಿರುವ ಪೂರ್ವ ದೆಹಲಿಯಲ್ಲಿ 11ರಲ್ಲಿ 9 ಬಾರಿ ಆ ಪಕ್ಷ ಅಧಿಕಾರಕ್ಕೆ ಬಂದಿದೆ.