ಮತ್ತೆ ಸಕ್ರಿಯ ರಾಜಕೀಯಕ್ಕೆ ಉದ್ಯಮಿ ನಂದನ್ ನಿಲೇಕಣಿ?
ಬೆಂಗಳೂರು ದಕ್ಷಿಣಕ್ಕೆ ಅನಂತ್ ಕುಮಾರ್ ಉತ್ತರಾಧಿಕಾರಿ ಯಾರು ಎಂಬ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ. ಇದಕ್ಕೆ ಪೂರಕವಾಗಿ ಅನಂತ್ ಕುಮಾರ್ ಅವರ ಪತ್ನಿ ತೇಜಸ್ವಿನಿ ಅವರನ್ನು ರಾಜಕೀಯಕ್ಕೆ ಕರೆ ತರುವುದಾಗಿ ಮಾಜಿ ಡಿಸಿಎಂ ಆರ್ ಅಶೋಕ ಹೇಳಿದ್ದಾರೆ.
ಈ ನಡುವೆ ಉದ್ಯಮಿ ನಂದನ್ ನಿಲೇಕಣಿ ಅವರು ಮತ್ತೊಮ್ಮೆ ಸಕ್ರಿಯ ರಾಜಕೀಯಕ್ಕೆ ಮರಳುವ ಸಾಧ್ಯತೆ ಕಂಡು ಬಂದಿದೆ. ಕಾಂಗ್ರೆಸ್ ನಲ್ಲಿರುವ ನಂದನ್ ನಿಲೇಕಣಿ ಅವರು ಕಾಂಗ್ರೆಸ್ ನಿಂದಲೇ ಸ್ಪರ್ಧಿಸುತ್ತಾರೋ ಅಥವಾ ಅವರನ್ನು ಬಿಜೆಪಿಗೆ ಸೆಳೆಯಲು ಯತ್ನ ನಡೆದಿದೆಯೋ ಇನ್ನೂ ಸ್ಪಷ್ಟವಾಗಿಲ್ಲ. ಒಟ್ಟಾರೆ, ನಂದನ್ ನಿಲೇಕಣಿ ಸಕ್ರಿಯ ರಾಜಕೀಯಕ್ಕೆ ಮರಳಿ, ಮುಂದಿನ ಲೋಕಸಭೆ ಚುನಾವಣೆ ಸ್ಪರ್ಧಿಸುವ ಸುಳಿವು ಸಿಕ್ಕಿದೆ.
ಸಾಮಾಜಿಕ ಸೇವೆಯ ಜವಾಬ್ದಾರಿಗಳೇ ಸಾಕಷ್ಟಿರುವಾಗ ರಾಜಕೀಯ ಪ್ರವೇಶಕ್ಕೆ ಅವರು ಮನಸ್ಸು ಮಾಡುತ್ತಾರಾ ಎಂಬ ಪ್ರಶ್ನೆಯೂ ಇದೆ. ಅನಂತ್ ಕುಮಾರ್ ಅವರಿಗೆ ತೇಜಸ್ವಿನಿ ಅವರು ರಾಜಕೀಯಕ್ಕೆ ಬರುವುದು ಇಷ್ಟವಿರಲಿಲ್ಲ ಎಂಬ ಸುದ್ದಿಯೂ ಇದೆ.
ಆದರೆ, 26 ವರ್ಷಗಳ ಕಾಲ ಸೋಲಿಲ್ಲದ ಸರದಾರರಾಗಿದ್ದ ಅನಂತ್ ಕುಮಾರ್ ಅವರ ಅಕಾಲಿಕ ನಿಧನದಿಂದಾಗಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರವನ್ನು ಬಿಜೆಪಿ ಉಳಿಸಿಕೊಳ್ಳಬೇಕಿದೆ. ಜಯನಗರ ವಿಧಾನಸಭೆ ಕ್ಷೇತ್ರವನ್ನು ಈಗಾಗಲೇ ಬಿಜೆಪಿ ಕಳೆದುಕೊಂಡಿದೆ. ವಿಜಯ್ ಕುಮಾರ್, ಅನಂತ್ ಕುಮಾರ್ ನಿಧನದಿಂದ ಜಯನಗರದಲ್ಲಿ ಸೂತಕ ಆವರಿಸಿದೆ.
ಇನ್ಫೋಸಿಸ್ ಗೆ ಮರಳಿರುವ ನಂದನ್ ನಿಲೇಕಣಿ
ಇನ್ಫೋಸಿಸ್ ಸಹಸ್ಥಾಪಕ, ಆಧಾರ್ ಕಾರ್ಡ್ ರುವಾರಿ ನಂದನ್ ನಿಲೇಕಣಿ ಅವರು ಈಗ ಭಾರತೀಯ ಕನಸುಗಾರಿಕೆಗೆ ದಿಕ್ಸೂಚಿ ನೀಡಲು ಚುನಾವಣಾ ರಂಗಕ್ಕೆ ಇಳಿದಿದ್ದಾರೆ. ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ನಿಲೇಕಣಿ ಎಂಬ ಪುಟ್ಟ ಊರಿನ ನಂದನ್ ಅವರು ಜನಪ್ರತಿನಿಧಿಯಾಗುವ ಕನಸು ಕಂಡಿದ್ದರು. ಆದರೆ, 2014ರ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋಲು ಕಂಡರು. 2015ರ ನಂತರ ಸಕ್ರಿಯ ರಾಜಕೀಯದಿಂದ ದೂರ ಉಳಿದಿದರು. 2017ರಲ್ಲಿ ಇನ್ಫೋಸಿಸ್ ನ ನಾನ್ ಎಕ್ಸಿಕ್ಯೂಟಿವ್ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ನಂದನ್ ಯಶಸ್ಸಿನ ಹಿಂದಿನ ಪ್ರೇರಕ ಶಕ್ತಿ, ಮಹಾದಾನಿ ರೋಹಿಣಿ
ಸೋಲಿಲ್ಲದ ಸರದಾರನಾಗಿದ್ದ ಅನಂತ್ ಕುಮಾರ್
ಶ್ವಾಸಕೋಶದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಕೇಂದ್ರ ಸಚಿವ ಮತ್ತು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ಅನಂತ್ ಕುಮಾರ್ ಅವರು ನವೆಂಬರ್ 12 ರಂದು ಚಿಕಿತ್ಸೆ ಫಲಕಾರಿಯಾಗದೆ ವಿಧಿವಶರಾದರು. 1996 ರಿಂದ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಸೋಲಿಲ್ಲದ ಸರದಾರನಾಗಿ ಸತತ ಆರು ಬಾರಿ ಗೆದ್ದ ಅನಂತ್ ಕುಮಾರ್ ಈ ಭಾಗದ ಜನರಿಗೆ ಅಚ್ಚುಮೆಚ್ಚಿನ ನಾಯಕ ಎನ್ನಿಸಿದ್ದರು. ಮಧ್ಯಮ ವರ್ಗದ ಹಿಂದು ಮತಗಳೇ ಹೆಚ್ಚಿರುವ ಬೆಂಗಳೂರು ದಕ್ಷಿಣ ಭಾಗದಲ್ಲಿ ಅನಂತ್ ಕುಮಾರ್ ಅವರ ದಾಖಲೆಯನ್ನು ಬಿಜೆಪಿ ಉಳಿಸಿಕೊಂಡು ಹೋಗುತ್ತದೆಯೇ, ಅಥವಾ ಈ ದಾಖಲೆಯನ್ನು ಕಾಂಗ್ರೆಸ್ ಮುರಿಯುತ್ತದೆಯೇ ಎಂಬುದನ್ನು ಲೋಕಸಭಾ ಚುನಾವಣೆಯವರೆಗೆ ಕಾದು ನೋಡಬೇಕಿದೆ.
ಬಿಜೆಪಿಯಿಂದ ಯಾರು ಎಂಬುದು ಪ್ರಶ್ನೆ
ಬೆಂಗಳೂರಿನ ಬಸವನಗುಡಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಸದಸ್ಯ ರವಿ ಸುಬ್ರಹ್ಮಣ್ಯ ಅವರ ಹೆಸರೂ ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ಕೇಳಿಬರುತ್ತಿದೆ. ತೇಜಸ್ವಿನಿ ಅವರು ಸ್ಪರ್ಧೆಗೆ ಒಲ್ಲೆ ಎಂದರೆ ರವಿ ಸುಬ್ರಹ್ಮಣ್ಯ ಅವರು ನನ್ನ ಎರಡನೇ ಆಯ್ಕೆ ಎಂದು ಆರ್ ಅಶೋಕ್ ಹೇಳಿದ್ದಾರೆ. ಸದ್ಯಕ್ಕೆ ಬಿಜೆಪಿಯ ಗುರಿ ರಾಜಸ್ಥಾನ, ಮಧ್ಯಪ್ರದೇಶ ಸೇರಿದಂತೆ ಐದು ರಾಜ್ಯಗಳ ಚುನಾವಣೆಯಲ್ಲಿ ಗೆಲುವು ಸಾಧಿಸುವುದಾಗಿದ್ದು, ನಂತರ ಈ ಬಗ್ಗೆ ಯೋಚಿಸುವುದಾಗಿ ಆರ್ ಅಶೋಕ್ ಹೇಳಿದ್ದಾರೆ.
ತೇಜಸ್ವಿನಿ ಅನಂತ್ ಕುಮಾರ್ ಆಯ್ಕೆಗೆ ಒತ್ತು
ತೇಜಸ್ವಿನಿ ಅನಂತ್ ಕುಮಾರ್ ಅವರ ಮನವೊಲಿಸಲು ನಾವು ಪ್ರಯತ್ನಿಸುತ್ತೇವೆ. ಅನಂತ್ ಕುಮಾರ್ ವಿಧಿವಶರಾದರೆ ಮೇಲೆ ಅವರ ಸ್ಥಾನಕ್ಕೆ ಸಹಜವಾಗಿ ಕೇಳಿಬರುವ ಆಯ್ಕೆ ಅವರ ಪತ್ನಿಯ ಹೆಸರು. ಆದರೆ ಅವರೊಂದಿಗೆ ರಾಜಕೀಯದ ಬಗ್ಗೆ ಮಾತನಾಡುವುದಕ್ಕೆ ಇದು ಸರಿಯಾದ ಸಮಯವಲ್ಲ. ಕೆಲದಿನಗಳ ಬಳಿಕ ಅವರ ಮನವೊಲಿಕೆಗೆ ಪ್ರಯತ್ನಿಸುತ್ತೇವೆ. ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಅನಂತ್ ಕುಮಾರ್ ಅವರ ಪರಂಪರೆಯನ್ನು ತೇಜಸ್ವಿನಿ ಅವರು ಮಾತ್ರವೇ ಸಮರ್ಥವಾಗಿ ಉಳಿಸಿಕೊಂಡು ಹೋಗಬಲ್ಲರು ಎಂದು ಬಿಜೆಪಿ ಮುಖಂಡ ಮತ್ತು ಮಾಜಿ ಉಪಮುಖ್ಯಮಂತ್ರಿ ಆರ್ ಅಶೋಕ್ ಹೇಳಿದ್ದಾರೆ.
2014ರ ಚುನಾವಣೆ ಫಲಿತಾಂಶ
ಮೇ 16, 2014ರಂದು ನಡೆದ ಮತಎಣಿಕೆಯಲ್ಲಿ ಅನಂತ್ ಕುಮಾರ್ ಅವರು 6 ಲಕ್ಷಕ್ಕೂ ಹೆಚ್ಚು ಮತ (6,33,816 ಮತಗಳು, 56.88% ಮತಗಳು) ಪಡೆದು ಬೆಂಗಳೂರು ದಕ್ಷಿಣದಲ್ಲಿ ತಾವೇ ಕಿಂಗ್ ಎಂದು ಮತ್ತೆ ಸಾಬೀತುಪಡಿಸಿದ್ದರು. ನಾಲ್ಕು ಲಕ್ಷಕ್ಕೂ ಹೆಚ್ಚು ಮತ (4,05,241, 36.37%) ಗಳಿಸಿದ ನಂದನ್ ನಿಲೇಕಣಿ ಕೂಡ ಅಭಿನಂದನಾರ್ಹರಾಗಿದ್ದರು.