ಕೃಷ್ಣ ಜನ್ಮಭೂಮಿ ಮಥುರಾ: ಲೋಕಸಭಾ ಕ್ಷೇತ್ರ ಪರಿಚಯ
ಉತ್ತರ ಪ್ರದೇಶದ 80 ಲೋಕಸಭಾ ಕ್ಷೇತ್ರಗಳಲ್ಲಿ ಮಥುರಾ ಅತ್ಯಂತ ಪ್ರಮುಖವಾದುದು. ಶ್ರೀಕೃಷ್ಣನ ಜನ್ಮತಾಣವಾದ ಮಥುರಾ ಪ್ರವಾಸೋದ್ಯಮ ಕ್ಷೇತ್ರವಾಗಿಯೂ, ಐತಿಹಾಸಿಕ, ಪೌರಾಣಿಕ ತಾಣವಾಗಿಯೂ ಪ್ರಸಿದ್ಧಿ ಪಡೆದಿದೆ.
ಈ ಕ್ಷೇತ್ರವನ್ನು ಪ್ರಸ್ತುತ ಬಿಜೆಪಿಯ ಹೇಮಾಮಾಲಿನಿ ಪ್ರತಿನಿಧಿಸುತ್ತಿದ್ದಾರೆ. ಬಾಲಿವುಡ್ ನಟಿ ಹೇಮಾ ಮಾಲಿನಿ ಅವರು 2003 ರಲ್ಲಿ ಸಂಸತ್ತಿಗೆ ಪ್ರವೇಶಿಸಿದ್ದರು. 2003 ರಲ್ಲಿ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಹೇಮಾ ಮಾಲಿನಿ ಅವರನ್ನು ರಾಜ್ಯ ಸಭೆ ಸದಸ್ಯರನ್ನಾಗಿ ನೇಮಿಸಿದ್ದರು. ನಂತರ 2004 ರಲ್ಲಿ ಅಧಿಕೃತವಾಗಿ ಬಿಜೆಪಿಗೆ ಸೇರಿ, 2010 ರಲ್ಲಿ ಬಿಜೆಪಿಯ ಪ್ರಧಾನಿ ಕಾರ್ಯದರ್ಶಿಯಾಗಿ ಆಯ್ಕೆಯಾದರು. 2014 ರಲ್ಲಿ ಕ್ಷೇತ್ರದಿಂದ ಸ್ಪರ್ಧಿಸಿ ರಾಷ್ಟ್ರೀಯ ಲೋಕದಳದ ಅಜಿತ್ ಸಿಂಗ್ ಅವರ ಪುತ್ರ ಜಯಂತ್ ಚೌಧರಿ ಅವರನ್ನು ಸೋಲಿಸಿದ್ದರು.
ಕ್ಷೇತ್ರ ಪರಿಚಯ: ಕೃಷ್ಣಾ ನದಿ ತಟದ ಕ್ಷೇತ್ರ ವಿಜಯವಾಡ
ಮಥುರಾ ಕ್ಷೇತ್ರದಿಂದ ಮಾಜಿ ಕೇಂದ್ರ ಸಚಿವ ನಟ್ವರ್ ಸಿಂಗ್ ಅವರ ಪುತ್ರ ಜಗತ್ ಸಿಂಗ್ ಅವರನ್ನು ಕಣಕ್ಕಿಳಿಸಲು ಆರ್ ಎಲ್ ಡಿ ಚಿಂತನೆ ನಡೆಸುತ್ತಿದೆ. ಚುನಾವಣಾ ಆಯೋಗದ ಮಾಹಿತಿ ಪ್ರಕಾರ ಈ ಕ್ಷೇತ್ರದಲ್ಲಿ ಒಟ್ಟು 1,682,260 ಮತದಾರರಿದ್ದಾರೆ. ಅವರಲ್ಲಿ 9,31,615 ಪುರುಷರು ಮತ್ತು 750,645 ಮಹಿಳೆಯರು.
1999 ರಲ್ಲಿ ಪಂಜಾಬಿನ ಗುರ್ದಾಸ್ಪುರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಲೋಕಸಭೆಗೆ ಸ್ಪರ್ಧಿಸಿದ್ದ ವಿನೋದ್ ಖನ್ನಾ ಪರವಾಗಿ ಪ್ರಚಾರ ಮಾಡುವ ಮೂಲಕ ಈ ಕ್ಷೇತ್ರದ ಹಾಲಿ ಸಂಸದೆ ಹೇಮಾ ಮಾಲಿನಿ ರಾಜಕೀಯ ಅಖಾಡಕ್ಕಿಳಿದಿದ್ದರು. ನಂತರ 2004 ರಲ್ಲಿ ಅಧಿಕೃತವಾಗಿ ಬಿಜೆಪಿಗೆ ಸೇರಿದರು. 2003-2009 ರವರೆಗೆ ರಾಜ್ಯ ಸಭೆ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದ ಹೇಮಾಮಾಲಿನಿ ಅವರಿಗೆ 2014 ರಲ್ಲಿ ಬಿಜೆಪಿ ಟಿಕೆಟ್ ನೀಡಿತ್ತು. ತಮ್ಮ ತಾರಾ ಜನಪ್ರಿಯತೆ ಮತ್ತು ಕೆಲವು ಸಾಮಾಜಿಕ ಸೇವೆಗಳಿಂದಾಗಿ ಹೇಮಾ ಮಾಲಿನಿ ಸುಲಭವಾಗಿ ಗೆಲುವು ಸಾಧಿಸಿದರು.
ರಾಷ್ಟ್ರೀಯ ಲೋಕ ದಳದ ಅಭ್ಯರ್ಥಿ ಜಯಂತ್ ಚೌಧರಿ ಅವರನ್ನು 3,30,743 ಮತಗಳಿಂದ ಸೋಲಿಸುವ ಮೂಲಕ ಹೇಮಾಮಾಲಿನಿ ದಾಖಲೆ ಬರೆದಿದ್ದರು. ಮಥುರಾ ಒಟ್ಟು 5 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ. ಛಾಟ, ಮಂತ್, ಗೋವರ್ಧನ್, ಮಥುರಾ ಮತ್ತು ಬಲ್ದೇವ್ ಇವು ಮಥುರಾ ಲೋಕಸಭಾ ಕ್ಷೇತ್ರದಲ್ಲಿ ಬರುವ ಐದು ವಿಧಾನಸಭಾ ಕ್ಷೇತ್ರಗಳಾಗಿವೆ.
ಭಾರತದ ಅತ್ಯಂತ ಪುರಾತನ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮಥುರಾ, ಯದುವಂಶಸ್ಥರ ನೆಲೆಯೂ ಹೌದು. ಆಗ್ರಾದಿಂದ 50 ಕಿಮೀ. ಮತ್ತು ದೆಹಲಿಯಿಂದ 150 ಕಿಮೀ ದೂರದಲ್ಲಿರುವ ಮಥುರಾವನ್ನು ದೇವಾಲಯಗಳ ನಗರಿ ಎಂದರೂ ತಪ್ಪಿಲ್ಲ. ಹಲವು ಮಂದಿರ, ಮಸೀದಿಗಳನ್ನು ಹೊಂದಿರುವ ಮಥುರಾದ ಮೊದಲ ಹೆಸರು ಮಧುವನ. ನಂತರ ಅದು ಜನರ ಮಾತಲ್ಲಿ ಮಧುಪುರ ಆಗಿ ನಂತರ ಮಥುರಾ ಆಗಿ ಬದಲಾಗಿದೆ.
ಪ್ರವಾಸೋದ್ಯಮ ಇಲ್ಲಿನ ಪ್ರಮುಖ ಆದಾಯ ಮೂಲ. ಆದರೆ ಶ್ರೀಕೃಷ್ಣನ ಜನ್ಮಸ್ಥಳವಾಗಿ, ಪೌರಾಣಿಕ, ಧಾರ್ಮಿಕ, ಐತಿಹಾಸಿಕ ಮಹತ್ವವನ್ನು ಪಡೆದ ಮಥುರಾದಲ್ಲಿ ಪ್ರವಾಸೋದ್ಯಮ ಬೆಳೆಸುವ ನಿಟ್ಟಿನಲ್ಲಿ ಮೂಲಸೌಕರ್ಯಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ರಸ್ತೆಗಳು ಅಭಿವೃದ್ಧಿ ಹೊಂದಬೇಕಿದೆ, ಸಾರಿಗೆ ಸಂಪರ್ಕ ಸುಧಾರಿಸಬೇಕಿದೆ.
ಕನ್ಯಾಕುಮಾರಿ ಲೋಕಸಭಾ ಕ್ಷೇತ್ರದ ಪರಿಚಯ
ಮಥುರಾ ಮಾತ್, ಛತ್ ಸದಾಬಾದ್ ತಾಲ್ಲೂಕುಗಳಿಂದ ಕೂಡಿದ ಈ ಜಿಲ್ಲೆಯ ವಿಸ್ತೀರ್ಣ 3317.2 ಚ.ಕಿ.ಮೀ ಜನಸಂಖ್ಯೆ 1560447 (1981). ಜಿಲ್ಲೆಯಲ್ಲಿ ಮಳೆ ಕಡಿಮೆಯಾದರೂ ನೀರಾವರಿ ಸೌಕರ್ಯ ಚೆನ್ನಾಗಿದೆ. ಗೋಧಿ, ಜೋಳ, ಕಡಲೆ ಮುಖ್ಯ ಬೆಳೆಗಳು. ಗ್ರಾಮ ಕೈಗಾರಿಕೆ ಹಾಗೂ ಸಣ್ಣ ಉದ್ಯಮಗಳು ಹಲವಿವೆ. ಕೋಳಿಸಾಕಣೆಗೆ ಹೆಸರಾಗಿದೆ. ರತ್ನಗಂಬಳಿ ಮತ್ತು ಜಮಖಾನ ತಯಾರಿಕೆ ಇಲ್ಲಿಯ ಜನರ ಪ್ರಧಾನ ಕಸಬುಗಳಲ್ಲೊಂದು.
ಕ್ರಿ . ಪೂ. 2-1ನೆಯ ಶತಮಾನದಲ್ಲಿ ಶುಂಗವಂಶದ ಅರಸರು ಅಳುತ್ತಿದ್ದಾಗ ಮಥುರೆಗೆ ಹೆಚ್ಚಿನ ಮಹತ್ತ್ವ ಬಂತು; ಇದು ಪಶ್ಚಿಮ ಭಾಗದ ರಾಜಧಾನಿಯಾಗಿತ್ತು. ಇದೇ ಅವಧಿಯಲ್ಲಿ ಯವನರಾಜ ಡೆಮಿಟ್ಟ್ರಿಯಸ್ ಮಥುರೆಯನ್ನು ಕೆಲಕಾಲ ರಾಜಧಾನಿಯನ್ನಾಗಿ ಮಾಡಿಕೊಡಿದ್ದ. ಮುಸಲ್ಮಾನ ಸುಲ್ತಾನರ ಕಾಲದಲ್ಲಿ ಈ ನಗರಕ್ಕೆ ಮೊದಲಿನ ಪ್ರಾಶಸ್ತ್ಯ ವಿರಲಿಲ್ಲ. ಅಕ್ಬರ್ ಹಾಗೂ ಜಹಾಂಗೀರರ ಕಾಲದಲ್ಲಿ ಕೆಲವಾರು ಕಟ್ಟಡಗಳು ನಿರ್ಮಿತವಾದುವು. 17ನೆಯ ಶತಮಾನದ ಉತ್ತರಾರ್ಧದಲ್ಲಿ ಔರಂಗಜೇಬನ ಅಧಿಕಾರಿಗಳಲ್ಲೊಬ್ಬನಾದ ಅಬ್ದುಲ್ನಬಿ ಸ್ಥಳೀಯ ದಂಗೆಯಲ್ಲಿ ಮೃತನಾದಾಗ ಅದನ್ನೇ ನೆಪಮಾಡಿಕೊಂಡ ಸುಲ್ತಾನ ಮಥುರೆಯ ಎಲ್ಲ ಪ್ರಮುಖ ದೇವಾಲಯಗಳನ್ನೂ ಹಾಳುಮಾಡಿದ. ಪ್ರಸಿದ್ಧ ಕೃಷ್ಣದೇಗುಲವನ್ನು ಕೆಡವಿ ಈಗಿನ ಮಸೀದಿಯನ್ನು ನಿರ್ಮಿಸಿದ. ಮಥುರೆಗೆ ಇಸ್ಲಾಮಾಬಾದ್ ಎಂದು ಹೊಸ ಹೆಸರನ್ನಿಟ್ಟ. ಆದರೆ ಅದು ಹೆಚ್ಚುಕಾಲ ಚಲಾವಣೆಯಲ್ಲಿ ಉಳಿಯಲಿಲ್ಲ ಎಂದು ಇತಿಹಾಸಗಳು ಹೇಳುತ್ತವೆ.
ಕನೌಜ್ ಲೋಕಸಭಾ ಕ್ಷೇತ್ರ: ಈ ಬಾರಿ ಗೆಲುವು ಯಾರಿಗೆ?
ಇಲ್ಲಿನ ಕೇಶವ ದೇವ ಮಂದಿರ, ದ್ವಾರಕಾಧೀಶ ದೇವಾಲಯ, ವಿಶ್ರಾಮ ಘಾಟ್, ಕೃಷ್ಣ ಬಲರಾಮ ಮಂದಿರ, ವೃಂದಾವನದ ಪ್ರೇಮ ಮಂದಿರ, ಗೋವರ್ಧನದ ಕುಸುಮ ಸರೋವರ್ ಸೇರಿದಂತೆ ಮಾರಿಗೊಂದು ಮಂದಿರಗಳು ಮಥುರಾದ ಪೌರಾಣಿಕ ಶ್ರೀಮಂತಿಕೆಯನ್ನು ಇಂದಿಗೂ ಉಳಿಸಿವೆ.