ಬಾರಾಮತಿ: ಅಪ್ಪನ ಪ್ರಭಾವಳಿಯ ಕ್ಷೇತ್ರದಲ್ಲಿ ಸುಪ್ರಿಯಾ ಪಾರುಪತ್ಯ
Recommended Video
ಪುಣೆಯ ಬಾರಾಮತಿ ಲೋಕಸಭಾ ಕ್ಷೇತ್ರದ ಸಂಸದೆಯಾಗಿರುವ ಸುಪ್ರಿಯಾ ಸುಳೆ, ಯುವ ಪ್ರಭಾವಿ ನಾಯಕಿಯಾಗಿ ಬೆಳೆದವರು. ಅವರ ರಾಜಕಾರಣದ ಹಾದಿ ತೀರಾ ಕಷ್ಟದಾಯಕದ್ದೇನಲ್ಲ. ಏಕೆಂದರೆ ರಾಜಕೀಯದಲ್ಲಿ ನುರಿತಿರುವ ಅಪ್ಪ ಮಗಳ ರಾಜಕಾರಣ ಪ್ರವೇಶಕ್ಕೆ ಗಟ್ಟಿಯಾದ ವೇದಿಕೆ ಸಿದ್ಧಮಾಡಿಕೊಟ್ಟಿದ್ದರು. ಯಾವ ಸವಾಲುಗಳು ಇಲ್ಲದೆಯೇ ಸುಪ್ರಿಯಾ ರಾಜಕೀಯದ ಯಾನ ಆರಂಭಿಸಿದರು.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ಸಂಸದೆಯಾಗಿರುವ ಸುಪ್ರಿಯಾ, ಹಿರಿಯ ರಾಜಕಾರಣ, ಎನ್ಸಿಪಿ ಸ್ಥಾಪಕ ಶರದ್ ಪವಾರ್ ಅವರ ಪುತ್ರಿ. 2009ರಲ್ಲಿ ಬಾರಾಮತಿ ಲೋಕಸಭೆ ಕ್ಷೇತ್ರದಿಂದ ಮೊದಲ ಬಾರಿ ಸ್ಪರ್ಧಿಸಿದ ಅವರು ಪ್ರಥಮ ಪ್ರಯತ್ನದಲ್ಲಿಯೇ ಗೆಲುವಿನ ಸಿಹಿ ಕಂಡರು. ಬಾರಾಮತಿ ಶರದ್ ಪವಾರ್ ಅವರ ಹಳೆಯ ಕ್ಷೇತ್ರ. ತಮ್ಮ ಪ್ರಾಬಲ್ಯವಿರುವ ಕ್ಷೇತ್ರವನ್ನು ಪವಾರ್, ಮಗಳಿಗೆ ಬಿಟ್ಟುಕೊಟ್ಟಿದ್ದರು. ಹೀಗಾಗಿ ಸುಪ್ರಿಯಾ ಅವರ ಗೆಲುವು ಸುಲಭವಾಗಿತ್ತು.
ವ್ಯಕ್ತಿ ಚಿತ್ರ: ಬೆಂಗಳೂರು ದಕ್ಷಿಣ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ
ಹೆಣ್ಣುಭ್ರೂಣ ಹತ್ಯೆಯ ವಿರುದ್ಧ ಅವರು 2011ರಲ್ಲಿ ರಾಜ್ಯವ್ಯಾಪಿ ಆಂದೋಲನ ನಡೆಸಿದ್ದರು. ಅದರ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಸಾಕಷ್ಟು ಪ್ರಯತ್ನ ನಡೆಸಿದ್ದರು. ಅವರ ಸಾಮಾಜಿಕ ಕ್ಷೇತ್ರದ ಸೇವೆಯನ್ನು ಪರಿಗಣಿಸಿ ಆಲ್ ಲೇಡೀಸ್ ಲೀಗ್ ದಶಕದ ಸಾಧಕಿಯರ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಸುಪ್ರಿಯಾ ಬದುಕು
ಸುಪ್ರಿಯಾ ಸುಳೆ ಅವರು ಶರದ್ ಪವಾರ್ ಮತ್ತು ಪ್ರತಿಭಾ ಶರದ್ಚಂದ್ರ ಪವಾರ್ ಅವರ ಮಗಳು. ಅವರು ಪುಣೆಯಲ್ಲಿ 1969ರ ಜೂನ್ 30ರಂದು ಜನಿಸಿದರು. ಮುಂಬೈನ ಜೈ ಹಿಂದ್ ಕಾಲೇಜ್ನಲ್ಲಿ ಶಿಕ್ಷಣ ಪಡೆದುಕೊಂಡರು. ಮೈಕ್ರೋಬಯಾಲಜಿ ವಿಷಯದಲ್ಲಿ ಬಿಎಸ್ಸಿ ಪದವಿ ಪಡೆದುಕೊಂಡರು.
1991ರ ಮಾರ್ಚ್ 4ರಂದು ಸದಾನಂದ ಬಾಲಚಂದ್ರ ಸುಳೆ ಅವರೊಂದಿಗೆ ಸುಪ್ರಿಯಾ ವಿವಾಹವಾಯಿತು. ಅವರಿಗೆ ವಿಜಯ್ ಮತ್ತು ರೇವತಿ ಎಂಬ ಇಬ್ಬರು ಮಕ್ಕಳಿದ್ದಾರೆ.
ಮದುವೆ ಬಳಿಕ ಸುಪ್ರಿಯಾ ಅವರು ಕೆಲ ಸಮಯ ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿದ್ದರು. ಅಮೆರಿಕದ ಯುಸಿ ಬರ್ಕಲಿಯಲ್ಲಿ ನೀರಿನ ಮಾಲಿನ್ಯದ ಕುರಿತು ಅಧ್ಯಯನ ನಡೆಸಿದರು. ಅಲ್ಲಿಂದ ಇಂಡೋನೇಷ್ಯಾಕ್ಕೆ ತೆರಳಿದ್ದ ಅವರು, ಬಳಿಕ ಕೆಲಕಾಲ ಸಿಂಗಪುರದಲ್ಲಿ ನೆಲೆಸಿದ್ದರು. ನಂತರ ಭಾರತಕ್ಕೆ ಮರಳಿದರು.
ಬೆಂಗಳೂರು ಉತ್ತರ ಕ್ಷೇತ್ರ ಅಭ್ಯರ್ಥಿ ಸದಾನಂದ ಗೌಡರ ವ್ಯಕ್ತಿಚಿತ್ರ
ರಾಜ್ಯಸಭೆಗೆ ಆಯ್ಕೆ
ಸುಪ್ರಿಯಾ 2006ರ ಸೆಪ್ಟೆಂಬರ್ನಲ್ಲಿ ಮಹಾರಾಷ್ಟ್ರದಿಂದ ರಾಜ್ಯಸಭೆಗೆ ಆಯ್ಕೆಯಾದರು. ಅದೇ ವರ್ಷ ಅವರು ಮುಂಬೈನ ನೆಹರೂ ಕೇಂದ್ರದ ಟ್ರಸ್ಟಿ ಕೂಡ ಆಗಿದ್ದರು. ಮಹಾರಾಷ್ಟ್ರದಾದ್ಯಂತ ಅವರು ನಡೆಸಿದ ಹೆಣ್ಣು ಭ್ರೂಣ ಹತ್ಯೆ ವಿರುದ್ಧದ ಅಭಿಯಾನಕ್ಕೆ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ರಾಜ್ಯದೆಲ್ಲೆಡೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ಅವರು ಆಯೋಜಿಸಿದ್ದರು. ಪಾದಯಾತ್ರೆಗಳು, ಕಾಲೇಜು ಕಾರ್ಯಕ್ರಮಗಳು, ವಿವಿಧ ಬಗೆಯ ಸ್ಪರ್ಧೆಗಳನ್ನು ನಡೆಸಿದ್ದರು.
ಯುವತಿಯರಿಗೆ ರಾಜಕೀಯದಲ್ಲಿ ವೇದಿಕೆ ಒದಗಿಸುವ ಸಲುವಾಗಿ 2012ರಲ್ಲಿ ಸುಪ್ರಿಯಾ ಅವರ ನೇತೃತ್ವದಲ್ಲಿ ರಾಷ್ಟ್ರವಾದಿ ಯುವತಿ ಕಾಂಗ್ರೆಸ್ ಘಟಕವನ್ನು ರಚಿಸಲಾಯಿತು. ಈ ಘಟಕದ ಮೂಲಕವೂ ಅವರು ಅನೇಕ ತಿಂಗಳ ಕಾಲ ಮಹಾರಾಷ್ಟ್ರದಾದ್ಯಂತ ಹೆಣ್ಣು ಭ್ರೂಣ ಗರ್ಭಪಾತ, ವರದಕ್ಷಿಣೆ ಸಮಸ್ಯೆ ಮತ್ತು ಮಹಿಳಾ ಸಬಲೀಕರಣಗಳ ಕುರಿತು ಸಮಾವೇಶಗಳನ್ನು ನಡೆಸಿದರು.
ತುಮಕೂರು ಕ್ಷೇತ್ರದ ಅಭ್ಯರ್ಥಿ, ಪ್ರಭಾವಿ ಸಂಸತ್ ಪಟು ಎಚ್ಡಿ ದೇವೇಗೌಡ
ಐಪಿಎಲ್ ವಿವಾದ
ಅಲ್ಪಾವಧಿಯ ರಾಜಕೀಯ ಚಟುವಟಿಕೆಗಳ ನಡುವೆ ವಿವಾದಗಳಿಂದ ಸುಪ್ರಿಯಾ ಹೊರತಾಗಿಲ್ಲ. ಐಪಿಎಲ್ ಪುಣೆ ಕ್ರಿಕೆಟ್ ತಂಡದ ಫ್ರಾಂಚೈಸಿ ವಿವಾದದಲ್ಲಿ ಸುಪ್ರಿಯಾ ಕುಟುಂಬದ ಹೆಸರು ಕೇಳಿಬಂದಿತ್ತು. ಪುಣೆ ಫ್ರಾಂಚೈಸಿಯ ಶೇ 16.22ರಷ್ಟು ಪಾಲನ್ನು ಶರದ್ ಪವಾರ್ ಮತ್ತು ಸುಪ್ರಿಯಾ ಸುಳೆ ಹೊಂದಿದ್ದರು ಎಂದು ಪತ್ರಿಕೆಯೊಂದಿ ವರದಿ ಮಾಡಿತ್ತು. ಇದರ ಮಾಲೀಕತ್ವ, ಕಾರ್ಯಾಚರಣೆಗಳಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಲಾಗಿತ್ತು. ಸುಪ್ರಿಯಾ ಈ ಆರೋಪಗಳನ್ನು ನಿರಾಕರಿಸಿದ್ದರು. ಈ ಸಂಸ್ಥೆಯಲ್ಲಿ ತಾವು ಅಲ್ಪ ಮೊತ್ತದ ಷೇರುದಾರರಾಗಿದ್ದು, ಸಂಸ್ಥೆಯ ಚಟುವಟಿಕೆಗಳಿಗೆ ಹೊಣೆಗಾರರಲ್ಲ ಎಂದಿದ್ದರು.
ಕಲಾಪದಲ್ಲಿ ಹಾಜರಾತಿ
2014ರ ಮೇ ತಿಂಗಳಿನಿಂದ ಲೋಕಸಭೆಯ ಸದಸ್ಯೆಯಾಗಿರುವ ಸುಪ್ರಿಯಾ, ಕಲಾಪಗಳು ಮತ್ತು ಚರ್ಚೆಗಳಲ್ಲಿ ಭಾಗವಹಿಸುವುದರಲ್ಲಿ ಮುಂದಿದ್ದಾರೆ.
ಸಂಸದೆಯಾಗಿ ಅವರು ಕೆಳಮನೆ ಅಧಿವೇಶನಗಳಲ್ಲಿ ಶೇ 96ರಷ್ಟು ಬಾರಿ ಹಾಜರಾತಿ ಹಾಕಿದ್ದಾರೆ. 152 ಚರ್ಚೆಗಳಲ್ಲಿ ಅವರು ಪಾಲ್ಗೊಂಡಿದ್ದಾರೆ. 1181 ಪ್ರಶ್ನೆಗಳನ್ನು ಅವರು ಕೇಳಿದ್ದಾರೆ. ಇದರಲ್ಲಿ 292 ದೇಶಕ್ಕೆ ಸಂಬಂಧಿಸಿದ ಪ್ರಶ್ನೆಗಳಾದರೆ, 605 ಅವರ ರಾಜ್ಯವಾದ ಮಹಾರಾಷ್ಟ್ರಕ್ಕೆ ಸಂಬಂಧಿಸಿದ್ದವಾಗಿವೆ. ಒಟ್ಟು 22 ಖಾಸಗಿ ಮಸೂದೆಗಳಲ್ಲಿ ಅವರು ಭಾಗವಹಿಸಿದ್ದಾರೆ.
ಸಂಸತ್ ಸದಸ್ಯತ್ವದ ಜತೆಯಲ್ಲಿ ಅವರು ಮಹಿಳಾ ಸಬಲೀಕರಣ ಸಮಿತಿ, ವಿದೇಶಾಂಗ ವ್ಯವಹಾರಗಳ ಸಮಿತಿ ಮತ್ತು ಲಾಭದ ಕುರಿತ ಕಚೇರಿಯ ಜಂಟಿ ಸಮಿತಿಯ ಸದಸ್ಯರಾಗಿದ್ದಾರೆ.
ಚುನಾವಣೆಯಲ್ಲಿ ಸಾಧನೆ
2014ರ ಲೋಕಸಭೆ ಚುನಾವಣೆಯಲ್ಲಿ ಸುಪ್ರಿಯಾ ಅವರು 5,21,562 ಮತಗಳನ್ನು ಪಡೆದಿದ್ದರೆ, ಅವರ ಎದುರಾಳಿಯಾಗಿದ್ದ ಆರ್ಎಸ್ಪಿಯ ಮಹಾದೇವ್ ಜಗನ್ನಾಥ್ ಜಂಕರ್ ಅವರು 4,51,843 ಮತಗಳನ್ನು ಗಳಿಸಿದ್ದರು.
ಇದಕ್ಕೂ ಮೊದಲು 2009ರ ಚುನಾವಣೆಯಲ್ಲಿ ಸುಪ್ರಿಯಾ ಭರ್ಜರಿ ಗೆಲುವು ಕಂಡಿದ್ದರು. ಸುಪ್ರಿಯಾ 4,87,827 ಮತಗಳನ್ನು ಗಳಿಸಿದ್ದರೆ, ಅವರ ಎದುರಾಳಿಯಾಗಿದ್ದ ಬಿಜೆಪಿಯ ಕಾಂತ ಜಯಸಿಂಗ್ ನಲವಾಡೆ 1,50,996 ಮತಗಳನ್ನು ಮಾತ್ರ ಪಡೆದಿದ್ದರು.
ಈ ಕ್ಷೇತ್ರದಲ್ಲಿ ಜಯಗಳಿಸಿರುವ ಏಕೈಕ ಮಹಿಳಾ ಅಭ್ಯರ್ಥಿ ಎಂಬ ಹೆಗ್ಗಳಿಕೆಯನ್ನೂ ಸುಪ್ರಿಯಾ ಹೊಂದಿದ್ದಾರೆ. 2019ರ ಚುನಾವಣೆಗೆ ತಯಾರಿ ನಡೆಸುತ್ತಿರುವ ಅವರು ಹ್ಯಾಟ್ರಿಕ್ ಸಾಧನೆಯ ಲಕ್ಷ್ಯ ಇರಿಸಿದ್ದಾರೆ.