ಕಾಂಗ್ರೆಸ್ನ 'ಟ್ರಬಲ್ ಶೂಟರ್' ಕೆ.ಸಿ. ವೇಣುಗೋಪಾಲ್ ವ್ಯಕ್ತಿಚಿತ್ರ
ಕರ್ನಾಟಕ ಕಾಂಗ್ರೆಸ್ನ ಉಸ್ತುವಾರಿ ಹೊಣೆ ನಿಭಾಯಿಸುತ್ತಿರುವ ಕೆ.ಸಿ. ವೇಣುಗೋಪಾಲ್, ಕೇರಳದ ಅಲಪುಳ ಕ್ಷೇತ್ರದ ಸಂಸದ. ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಟ್ರಬಲ್ ಶೂಟರ್ ಆಗಿರುವ ಅವರು, ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಅಖಾಡಕ್ಕೆ ಇಳಿಯುತ್ತಿಲ್ಲ. ಪಕ್ಷದ ವರಿಷ್ಠರ ಸೂಚನೆಯಂತೆ ಅವರು ಈ ಚುನಾವಣೆಯಿಂದ ಹಿಂದಕ್ಕೆ ಸರಿದಿದ್ದಾರೆ.
ಬಿಜೆಪಿ, ಕಾಂಗ್ರೆಸ್, ಸಿಪಿಎಂ ಪ್ರಣಾಳಿಕೆಯ ತುಲನೆ. ಯಾವ ಪಕ್ಷದ ಪ್ರಣಾಳಿಕೆ ಉತ್ತಮವಾಗಿದೆ?
1963ರಲ್ಲಿ ಕಣ್ಣೂರಿನಲ್ಲಿ ಹುಟ್ಟಿದ 56 ವರ್ಷದ ಕೆ.ಸಿ. ವೇಣುಗೋಪಾಲ್, ಅಲಪುಳ ಲೋಕಸಭಾ ಕ್ಷೇತ್ರವನ್ನು ಮೂರನೇ ಬಾರಿಗೆ ಪ್ರತಿನಿಧಿಸುತ್ತಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಲ್ಲಿ ಒಬ್ಬರು.
ವಿಜಯಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ್ ಜಿಗಜಿಣಗಿ ವ್ಯಕ್ತಿ ಪರಿಚಯ
2017ರ ಏಪ್ರಿಲ್ 29ರಿಂದ ಕರ್ನಾಟಕ ಕಾಂಗ್ರೆಸಿನ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಕೇರಳದ ಕಣ್ಣೂರಿನಲ್ಲಿ ಹುಟ್ಟಿದ ಕೆಸಿ ವೇಣುಗೋಪಾಲ್ ವಿದ್ಯಾರ್ಥಿ ದೆಸೆಯಲ್ಲಿಯೇ ರಾಜಕೀಯ ಬದುಕು ಆರಂಭಿಸಿದ್ದರು.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಪಯ್ಯನೂರು ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ಕೇರಳ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷರಾಗಿ ಗುರುತಿಸಿಕೊಂಡರು. ಮುಂದೆ ಕೇರಳ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿ, ಕೇರಳ ಕಾಂಗ್ರೆಸ್ ಅಧ್ಯಕ್ಷರಾಗಿಯೂ ಜವಾಬ್ದಾರಿ ನಿರ್ವಹಿಸಿದರು.
1996ರಿಂದ ರಾಜಕೀಯ ಆರಂಭ
ಅವರ ರಾಜಕೀಯ ಪಯಣ ಚುರುಕುಗೊಂಡಿದ್ದು 1996ರಲ್ಲಿ. ಈ ವರ್ಷ ಅಲಪುಳ ಕ್ಷೇತ್ರದಲ್ಲಿ ಚುನಾವಣೆಯ ಅಖಾಡಕ್ಕೆ ಇಳಿದು ಮೊದಲ ಬಾರಿಗೆ ಕೇರಳ ವಿಧಾನಸಭೆಯನ್ನು ಪ್ರವೇಶಿಸಿದ ವೇಣುಗೋಪಾಲ್ ಅವರು 2001, 2006ರಲ್ಲಿಯೂ ಗೆಲುವು ಸಾಧಿಸಿದ್ದರು.
2004-06ರ ನಡುವೆ ಉಮ್ಮನ್ ಚಾಂಡಿ ಸರ್ಕಾರದಲ್ಲಿ ಮುಜುರಾಯಿ ಮತ್ತು ಪ್ರವಾಸೋದ್ಯಮ ಖಾತೆ ಸಚಿವರಾಗಿದ್ದರು. ಈ ಸಂದರ್ಭದಲ್ಲಿ ಅನೇಕ ಪ್ರವಾಸೋದ್ಯಮ ಯೋಜನೆಗಳನ್ನು ಕೈಗೆತ್ತಿಕೊಂಡು ವೇಣುಗೋಪಾಲ್ ಗಮನ ಸೆಳೆದಿದ್ದರು.
ರಾಜ್ಯದಲ್ಲಿ ಸಚಿವರಾಗಿದ್ದ ವೇಣುಗೋಪಾಲ್ ಲೋಕಸಭೆಯತ್ತ ಮುಖಮಾಡುವ ಮೂಲಕ ರಾಷ್ಟ್ರ ರಾಜಕಾರಣದತ್ತ ತೆರಳಿದರು. 2009ರಲ್ಲಿ ಅಲಪುಳ ಕ್ಷೇತ್ರದಿಂದಲೇ ಲೋಕಸಭೆಗೆ ಆಯ್ಕೆಯಾದರು. ಯುಪಿಎ ಎರಡನೇ ಅವಧಿಯಲ್ಲಿ ನಾಗರಿಕ ವಿಮಾನಯಾನ ಮತ್ತು ಇಂಧನ ಖಾತೆಯ ರಾಜ್ಯ ಸಚಿವರಾಗಿದ್ದರು.
ಕೊಲ್ಲೂರು ಮೂಕಾಂಬಿಕೆಯ ಭಕ್ತ
ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರಿಗೆ ಹೊಂದಿಕೊಂಡ ಕಣ್ಣೂರು ಕೆ.ಸಿ ವೇಣುಗೋಪಾಲ್ ಹುಟ್ಟೂರು. ಹೀಗಾಗಿ ಕರ್ನಾಟಕದ ಜತೆಗೂ ಅಲ್ಪ ಸ್ವಲ್ಪ ಒಡನಾಟ ಇಟ್ಟುಕೊಂಡಿದ್ದಾರೆ. ತಾನು ಕೊಲ್ಲೂರು ಮೂಕಾಂಬಿಕೆಯ ಭಕ್ತ. ಇಲ್ಲಿಗೆ ಆಗಾಗ ಭೇಟಿ ನೀಡುತ್ತಿರುತ್ತೇನೆ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.
ಕಾಲೇಜು ದಿನಗಳಲ್ಲಿ ವೇಣುಗೋಪಾಲ್ ವಾಲಿಬಾಲ್ ಆಟಗಾರರಾಗಿದ್ದರು. ಕ್ಯಾಲಿಕಟ್ ವಿಶ್ವವಿದ್ಯಾಲಯ ಮತ್ತು ಪಯ್ಯನೂರು ಕಾಲೇಜು ಪರವಾಗಿ ಅವರು ವಾಲಿಬಾಲ್ ಪಂದ್ಯಗಳನ್ನಾಡಿದ್ದರು. ಓದಿನಲ್ಲೂ ಮುಂದಿದ್ದರು. ಗಣಿತ ವಿಷಯದಲ್ಲಿ ಅವರು ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ಕೇರಳ ರಾಜಕಾರಣದ ದೊಡ್ಡ ಹೆಸರಾದ ಮಾಜಿ ಮುಖ್ಯಮಂತ್ರಿ ಕೆ. ಕರುಣಾಕರನ್ ಪರಮಾಪ್ತ ಶಿಷ್ಯ ವೇಣುಗೋಪಾಲ್. ತಮ್ಮ ನಾಯಕನಿಗೆ ನಿಷ್ಠೆಯಿಂದಿದ್ದು, ಅವರ ನೆರಳಿನಲ್ಲೇ ಗುರುತಿಸಿಕೊಂಡಿದ್ದರು. ಇದರಿಂದ ಬಹುಬೇಗ ಕೇರಳ ಕಾಂಗ್ರೆಸ್ನಲ್ಲಿ ಮುಂಚೂಣಿಗೆ ಬಂದ ವೇಣುಗೋಪಾಲ್ ಮುಂದೆ ನೇರ ರಾಷ್ಟ್ರ ರಾಜಕಾರಣದಲ್ಲಿ ಗುರುತಿಸಿಕೊಂಡರು.
ಚಾಮರಾಜನಗರದಲ್ಲಿ ಹ್ಯಾಟ್ರಿಕ್ ಸರದಾರರಾಗುವರೇ ಧ್ರುವನಾರಾಯಣ್?
ಹಗರಣ ಬಯಲಿಗೆಳೆದಿದ್ದರು
ಯುಪಿಎ ಎರಡನೇ ಅವಧಿಯಲ್ಲಿ ಮನಮೋಹನ್ ಸಿಂಗ್ ಸಂಪುಟದಲ್ಲಿ ವಿಮಾನಯಾನ ರಾಜ್ಯ ಖಾತೆ ಸಚಿವರಾಗಿದ್ದ ವೇಣುಗೋಪಾಲ್ ನಡೆಯಬಹುದಾಗಿದ್ದ ದೊಡ್ಡ ಹಗರಣವನ್ನು ಬಯಲಿಗೆಳೆದಿದ್ದರು.
ದೆಹಲಿ-ಕೊಚ್ಚಿ-ತಿರುವನಂತಪುರಂ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೇಣುಗೋಪಾಲ್ ವಿಮಾನದಲ್ಲಿ ಖಾಲಿ ಇದ್ದ 23 ಸೀಟುಗಳನ್ನು ಕಂಡಿದ್ದರು. ಆದರೆ ಅದೇ ವಿಮಾನದಲ್ಲಿ ಹತ್ತಲು ಹೊರಟಾಗ ವೇಣುಗೋಪಾಲ್ಗೆ ಟಿಕೆಟ್ ಖಾಲಿ ಇಲ್ಲ ಎನ್ನಲಾಗಿತ್ತು.
ಅದನ್ನು ಗಮನಿಸಿದ ವೇಣುಗೋಪಾಲ್ ಪ್ರಯಾಣಿಕರ ಪಟ್ಟಿ ನೀಡುವಂತೆ ಕೇಳಿದ್ದರು. ಆದರೆ, ಸಿಬ್ಬಂದಿ ಅದನ್ನು ಒದಗಿಸುವಲ್ಲಿ ವಿಫಲರಾಗಿದ್ದರು. ಈ ಬಗ್ಗೆ ವೇಣುಗೋಪಾಲ್ ತನಿಖೆಗೆ ಆದೇಶ ಮಾಡಿದ್ದರು. ಟಿಕೆಟ್ ಅವ್ಯವಹಾರದ ಹಗರಣ ಬೆಳಕಿಗೆ ಬಂದು ಇಬ್ಬರು ಅಧಿಕಾರಿಗಳು ಅಮಾನತ್ತಾಗಿದ್ದರು.
ಸ್ಪರ್ಧಿಸುವ ಕ್ಷೇತ್ರ ಬೇರೆ
ವೇಣುಗೋಪಾಲ್ ಅವರ ಹುಟ್ಟೂರಾದ ಕಣ್ಣೂರು ಉತ್ತರ ಕೇರಳದಲ್ಲಿದ್ದರೆ, ಅವರು ಪ್ರತಿನಿಧಿಸುವ ಅಲಪುಳ ರಾಜ್ಯದ ದಕ್ಷಿಣ ಭಾಗದಲ್ಲಿದೆ.
ತಮ್ಮ ತವರು ಕ್ಷೇತ್ರದಿಂದ ದೂರವಿದ್ದರೂ ವೇಣುಗೋಪಾಲ್, ಪ್ರವಾಸೋದ್ಯಮ ಸಚಿವರಾಗಿದ್ದಾಗ ಹುಟ್ಟೂರಿನ ಪ್ರವಾಸೋದ್ಯಮ ಬೆಳವಣಿಗೆಗೆ ಸಾಕಷ್ಟು ನೆರವು ನೀಡಿದ್ದರು.
ಇತ್ತೀಚೆಗೆ ಪ್ರಿಯಾಂಕಾ ಗಾಂಧಿ ಅವರನ್ನು ಉತ್ತರ ಪ್ರದೇಶದ ಪೂರ್ವ ಭಾಗದ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಿದ ಸಂದರ್ಭದಲ್ಲಿಯೇ ಕೆ.ಸಿ. ವೇಣುಗೋಪಾಲ್ ಅವರಿಗೆ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯ (ಆರ್ಗನೈಸೇಷನ್) ಪ್ರಮುಖ ಹುದ್ದೆ ನೀಡಲಾಗಿದೆ.
ಅಭಿಮಾನಿಗಳ ಪಾಲಿಗೆ 'ಅಭಿನವ ಇಂದಿರಾ' ಪ್ರಿಯಾಂಕಾ ವಾದ್ರಾ ವ್ಯಕ್ತಿಚಿತ್ರ
ಟ್ರಬಲ್ ಶೂಟರ್
ವೇಣುಗೋಪಾಲ್ ಅವರನ್ನು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿಯನ್ನಾಗಿ ನೇಮಿಸಿದ ಸಂದರ್ಭದಿಂದಲೂ ರಾಜಕೀಯ ಗೊಂದಲಗಳನ್ನು ನಿವಾರಿಸುವುದೇ ಸವಾಲಾಗಿದೆ. ಚುನಾವಣೆಯ ಚಟುವಟಿಕೆಗಳು, ಸಮ್ಮಿಶ್ರ ಸರ್ಕಾರದ ರಚನೆ, ಸಂಪುಟ ವಿಸ್ತರಣೆ, ಆಂತರಿಕ ಜಗಳ ಹೀಗೆ ನಿರಂತರವಾಗಿ ಒಂದಲ್ಲ ಒಂದು ಸಮಸ್ಯೆಗಳನ್ನು ಅವರು ಬಗೆಹರಿಸುವುದರಲ್ಲಿಯೇ ಮುಳುಗಿದ್ದಾರೆ.
ಕಾಂಗ್ರೆಸ್ ಪಾಲಿಗೆ ಅವರೀಗ ಟ್ರಬಲ್ ಶೂಟರ್ ಕೂಡ ಹೌದು. ವೇಣುಗೋಪಾಲ್ ಅವರ ಸಾಮರ್ಥ್ಯ ಅರಿತಿರುವ ಕಾಂಗ್ರೆಸ್ ನಾಯಕತ್ವ, ರಾಜಸ್ಥಾನದ ಚುನಾವಣೆ ಬಳಿಕ ಸರ್ಕಾರ ರಚಿಸುವ ಮಾತುಕತೆಗಳ ಜವಾಬ್ದಾರಿಯನ್ನು ವೇಣುಗೋಪಾಲ್ ಅವರಿಗೆ ವಹಿಸಿತ್ತು.
ಸೋಲಾರ್ ಹಗರಣದಲ್ಲಿ ವಿವಾದ
ರಾಜಕೀಯ ಜೀವನದಲ್ಲಿ ಚುರುಕಾಗಿದ್ದರೂ, ವೇಣುಗೋಪಾಲ್ ವಿವಾದದಿಂದ ಹೊರತಲ್ಲ. ಕೇರಳದಲ್ಲಿ ಬಿರುಗಾಳಿ ಎಬ್ಬಿಸಿದ ಸೋಲಾರ್ ಹಗರಣದಲ್ಲಿ ವೇಣುಗೋಪಾಲ್ ಹೆಸರು ತಳಕುಹಾಕಿಕೊಂಡಿತ್ತು.
ವೇಣುಗೋಪಾಲ್ ಅವರು ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಸೋಲಾರ್ ಪ್ಯಾನಲ್ ಸಂಸ್ಥೆಯ ಸರಿತಾ ನಾಯರ್ ಆರೋಪಿಸಿದ್ದರು. ಸರಿತಾ ನಾಯರ್ ಲೋಕಸಭೆ ಚುನಾವಣೆಯಲ್ಲಿ ವಯನಾಡು ಕ್ಷೇತ್ರದಿಂದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಸ್ಪರ್ಧಿಸುತ್ತಿದ್ದಾರೆ.