ಕನೌಜ್ ಲೋಕಸಭಾ ಕ್ಷೇತ್ರ: ಈ ಬಾರಿ ಗೆಲುವು ಯಾರಿಗೆ?
ಉತ್ತರ ಪ್ರದೇಶದ ಅತ್ಯಂತ ಪ್ರಮುಖ ಲೋಕಸಭಾ ಕ್ಷೇತ್ರಗಳಲ್ಲಿ ಕನೌಜ್ ಸಹ ಒಂದು. ಪುರಾಣಗಳಲ್ಲಿ ಕನ್ಯಕುಬ್ಜ್ ಎಂದು ಈ ನಗರವನ್ನು ಕರೆಯಲಾಗುತ್ತಿತ್ತು. ಒಂಬತ್ತನೇ ಶತಮಾನದಲ್ಲಿ ಮಿಹಿರಾ ಭೋಜಾ ಅವರ ಕಾಲದಲ್ಲಿ ಈ ನಗರನ್ನು ಮಹೋದಯ ಎಂದೂ ಕರೆಯಲಾಗುತ್ತಿತ್ತು.
ಪ್ರಸ್ತುತ ಈ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ನಾಯಕಿ ಡಿಂಪಲ್ ಯಾದವ್ ಅವರು ಸಂಸದರಾಗಿದ್ದು, 2019 ರ ಲೋಕಸಭಾ ಚುನಾವಣೆಯಲ್ಲಿ ಅವರ ಪತಿ, ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಈ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಕ್ಷೇತ್ರ ಪರಿಚಯ: ಕೃಷ್ಣಾ ನದಿ ತಟದ ಕ್ಷೇತ್ರ ವಿಜಯವಾಡ
ಡಿಂಪಲ್ ಯಾದವ್ ಅವರು ಲೋಕಸಭಾ ಚುನಾವನೆಗೆ ಸ್ಪರ್ಧಿಸುವುದಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿರುವ ಕಾರಣ, ಈ ಕ್ಷೇತ್ರದಿಂದ ಅಖಿಲೇಶ್ ಯಾದವ್ ಸ್ಪರ್ಧಿಸುವ ಸಾಧ್ಯತೆ ಇದೆ. ಈ ಕ್ಷೇತ್ರದಲ್ಲಿ 2014 ರಲ್ಲಿ ಡಿಂಪಲ್ ಯಾದವ್ ಕೇವಲ 19,000 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.
1998 ರಲ್ಲಿ ಎಸ್ಪಿಯ ಪ್ರದೀಪ್ ಕುಮಾರ್ ಅವರು ಈ ಕ್ಷೇತ್ರದಿಂದ ಗೆಲುವು ಸಾಧಿಸಿದಾಗಿನಿಂದಲೂ ಇದು ಸಮಾಜವಾದಿ ಪಕ್ಷದ ಭದ್ರಕೋಟೆಯಾಗಿದೆ.
ಅಕಸ್ಮಾತ್ ಈ ಕ್ಷೇತ್ರದಲ್ಲಿ ಅಖಿಲೇಶ್ ಯಾದವ್ ಕಣಕ್ಕಿಳಿದರೂ ಗೆಲ್ಲುವುದು ಸುಲಭವಿಲ್ಲ. ಏಕೆಂದರೆ 2014ರ ಲೋಕಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ತೀರಾ ಪ್ರಯಾಸದ ಗೆಲುವು ಸಾಧಿಸಿತ್ತು. ಆ ಸಂದರ್ಭದಲ್ಲಿ ರಾಜ್ಯದಲ್ಲಿ ಸಮಾಜವಾದಿ ಪಕ್ಷದ ಸರ್ಕಾರವಿದ್ದರೂ ಗೆಲುವು ಸುಲಭವಾಗಿರಲಿಲ್ಲ. ಈ ಬಾರಿ ಎಸ್ಪಿ-ಬಿಎಸ್ಪಿ ಮೈತ್ರಿ ಮಾಡಿಕೊಂಡಿರುವುದರಿಂದ ಸಮಾಜವಾದಿ ಪಕ್ಷಕ್ಕೆ ಸಹಾಯವಾಗಬಹುದಾದರೂ, ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಈ ಕ್ಷೇತ್ರದಲ್ಲಿ ಯಾರನ್ನು ಕಣಕ್ಕಿಳಿಸಲಿದ್ದಾರೆ ಎಂಬುದು ಕುತೂಹಲದ ಪ್ರಶ್ನೆಯಾಗಿ ಉಳಿದಿದೆ.
ಕನೌಜ್ ಅನ್ನು ಪ್ರಾಚೀನ ಬೌದ್ಧ ಸಾಹಿತ್ಯದಲ್ಲಿ ಕನ್ನಕುಜ ಎಂದು ಕರೆಯಲಾಗಿದೆ. ಮಹಾಭಾರತ, ರಾಮಾಯಣಗಳ ಸಮಯದಲ್ಲೂ ಈ ನಗರ ಪ್ರಸಿದ್ಧಿ ಪಡೆದಿತ್ತು ಎಂಬ ಉಲ್ಲೇಖಗಳು ಸಿಗುತ್ತವೆ.
1018 ರಲ್ಲಿ ಸುಲ್ತಾನ್ ಮಹಮ್ಮದ್ ಗಜ್ನಿ ಇದನ್ನು ವಶಪಡಿಸಿಕೊಂಡಿದ್ದ. ನಂತರ ಬ್ರಿಟಿಶ್ ಆಳ್ವಿಕೆಯ ಸಮಯದಲ್ಲಿ ಈ ನಗರವನ್ನು ಕ್ಯಾನೋಡ್ಜ್ ಎಂದು ಕರೆಯಲಾಗುತ್ತಿತ್ತು.
ಕನೌಜ್ ಲೋಕಸಭಾ ಕ್ಷೇತ್ರ ಒಟ್ಟು ಐದು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ. ಛಿಬ್ರಮೌ, ತಿರ್ವಾ, ಕನೌಜ್, ಬಿಧುನಾ, ರಸುಲಾಬಾದ್ ಈ ಐದು ವಿಧಾನಸಭಾ ಕ್ಷೇತ್ರಗಳು.
ಕನ್ಯಾಕುಮಾರಿ ಲೋಕಸಭಾ ಕ್ಷೇತ್ರದ ಪರಿಚಯ
1967-71 ರಲ್ಲಿ ಈ ಕ್ಷೇತ್ರದಿಂದ ಸಂಯುಕ್ತ ಸೋಶಿಯಲಿಸ್ಟ್ ಪಕ್ಷದ ರಾಮ ಮನೋಹರ್ ಲೋಹಿಯಾ ಗೆದ್ದರು. 1971-77 ರಲ್ಲಿ ಕಾಂಗ್ರೆಸ್ ನ ಸತ್ಯ ನಾರಾಯನ ಮಿಶ್ರಾ,1977-80 ರಲ್ಲಿ ಜನತಾ ಪಕ್ಷದ ರಾಮ್ ಪ್ರಕಾಶ್ ತ್ರಿಪಾಠಿ, 1980-84 ರಲ್ಲಿ ಜನತಾದಳದ ಛೋಟೆ ಸಿಂಗ್ ಯಾದವ್, 1984-89 ರಲ್ಲಿ ಕಾಂಗ್ರೆಸ್ ನ ಶೀಲಾ ದೀಕ್ಷಿತ್, 1989-96 ರವರೆಗೆ ಜನತಾ ದಳದ ಛೋಟೆ ಸಿಂಗ್ ಯಾದವ್ ಗೆಲುವು ಸಾಧಿಸಿದ್ದರು.
ನಂತರ 1996-98 ರಲ್ಲಿ ಮೊಟ್ಟ ಮೊದಲ ಬಾರಿಗೆ ಚಂದ್ರ ಭೂಷಣ ಸಿಂಗ್ ಗೆಲುವು ಸಾಧಿಸುವ ಮೂಲಕ ಬಿಜೆಪಿ ಖಾತೆ ತೆರೆದರು. ನಂತರ ಈ ಕ್ಷೇತ್ರ ಸಮಾಜವಾದಿ ಪಕ್ಷದ ಭದ್ರಕೋಟೆಯಾಗಿ ಬದಲಾಗಿ 1998-99 ರಲ್ಲಿ ಸಮಾಜವಾದಿ ಪಕ್ಷದ ಪ್ರದೀಪ್ ಕುಮಾರ್ ಯಾದವ್ ಗೆಲುವು ಸಾಧಿಸಿದರೆ, 1999-00 ಮುಲಾಯಂ ಸಿಂಗ್ ಯಾದವ್ ಗೆದ್ದರು.
ಆ ನಂತರ 2000 ರಿಂದ 2012 ರವರೆಗೆ ಸತತ ಮೂರು ಬಾರಿ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಗೆಲುವು ಸಾಧಿಸಿದರು. 2012 ರಲ್ಲಿ ನಡೆದ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ನಂತರ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಆಯ್ಕೆಯಾದರು. ಆ ಸಂದರ್ಭದಲ್ಲಿ ತಮ್ಮ ಕ್ಷೇತ್ರವನ್ನು ಪತ್ನಿ ಡಿಂಪಲ್ ಯಾದವ್ ಗೆ ಬಿಟ್ಟುಕೊಟ್ಟರು. 2012 ರಲ್ಲಿ ನಡೆದ ಉಪಚುನಾವಣೆಯಲ್ಲಿ ಮತ್ತು 2014 ರ ಲೋಕಸಭಾ ಚುನಾವಣೆಯಲ್ಲಿ ಡಿಂಪಲ್ ಯಾದವ್ ಈ ಕ್ಷೇತ್ರದಿಂದ ಗೆಲುವು ಸಾಧಿಸಿದರು.
ಈ ಕ್ಷೇತ್ರದ ಒಟ್ಟು ಜಸಂಖ್ಯೆ 26,02,855. ಗ್ರಾಮೀಣ ಪ್ರದೇಶದಲ್ಲಿ 86.20%, ನಗರ ಪ್ರದೇಶದಲ್ಲಿ 13.80% ಜನರಿದ್ದರೆ, ಪರಿಶಿಷ್ಠ ಜಾತಿಯವರು 21.39% ಮತ್ತು ಪರಿಶಿಷ್ಠ ಪಂಗಡದ ಜನರು 0.01% ರಷ್ಟಿದ್ದಾರೆ.
2014 ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಚುಚನಾವಣಾ ಆಯೋಗ ನೀಡಿದ ಮಾಹಿತಿ ಪ್ರಕಾರ ಈ ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ 18,08,889. ಅವರಲ್ಲಿ 10,00,007 ಪುರುಷರು. ಮತ್ತು 8,08,882 ಮಹಿಳೆಯರಿದ್ದಾರೆ.
ಕ್ಷೇತ್ರದ ಸಂಸದೆ ಡಿಂಪಲ್ ಯಾದವ್, ಇದುವರೆಗೂ ಲೋಕಸಭೆಯಲ್ಲಿ ಯಾವುದೇ ಪ್ರಶ್ನೆಗಳನ್ನೂ ಕೇಳಿಲ್ಲ. ಎರಡು ಚರ್ಚ ಗಳಲ್ಲಿ ಭಾಗವಹಿಸಿದ ಇವರ ಒಟ್ಟು ಸಂಸತ್ ಹಾಜರಾತಿ ಕೇವಲ 31%.