ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿಯ 'ಎಕ್ಸಾಂ ಹಾಲ್' ಉತ್ತರಪ್ರದೇಶದ ಪೂರ್ವಾಂಚಲದ ಜಾತಿ ಲೆಕ್ಕಾಚಾರ
ಪೂರ್ವ ಉತ್ತರಪ್ರದೇಶ ಅಥವಾ ಪೂರ್ವಾಂಚಲದಲ್ಲಿ ಮತದಾನ ನಡೆಯುವುದು ಮೇ ಹತ್ತೊಂಬತ್ತರಂದು. ಅದು ಲೋಕಸಭೆ ಚುನಾವಣೆಗೆ ಏಳನೇ ಹಾಗೂ ಅಂತಿಮ ಹಂತದ ಮತದಾನ. ಇಲ್ಲಿ ಗೆದ್ದರೆ ದೆಹಲಿ ಗೆದ್ದಂತೆ ಎಂಬುದು ನಂಬಿಕೆ. ಆ ಕಾರಣಕ್ಕೆ ಬಿಜೆಪಿ, ಕಾಂಗ್ರೆಸ್ ಹಾಗೂ ಎಸ್ ಪಿ- ಬಿಎಸ್ ಪಿ ಮೈತ್ರಿಕೂಟ ಅದ್ಭುತ ಜಯ ಸಾಧಿಸುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದೆ.
ಅಂದ ಹಾಗೆ ಈಗ ಎಲ್ಲರ ಕಣ್ಣು ನೆಟ್ಟಿರುವುದು ಮೋಸ್ಟ್ ಬ್ಯಾಕ್ ವರ್ಡ್ ಕ್ಲಾಸ್ (ಎಂಬಿಸಿ ಅಥವಾ ತೀರಾ ಹಿಂದುಳಿದ ವರ್ಗಗಳು) ಮತಗಳ ಮೇಲೆ. ಉತ್ತರಪ್ರದೇಶದಲ್ಲಿ ಹಿಂದುಳಿದ ವರ್ಗಗಳ ಮತ ಪ್ರಮಾಣ 43.56 ಪರ್ಸೆಂಟ್ ಇದೆ. ಅದರೊಳಗೆ ಬರುವ ಎಂಬಿಸಿ ಪ್ರಮಾಣ 10.22 ಪರ್ಸೆಂಟ್ ಇದೆ. ಈ ಮತ ಬ್ಯಾಂಕ್ ಗಳು ಚುನಾವಣೆಯ ಹಣೆಬರಹವನ್ನು ನಿರ್ಧರಿಸುತ್ತವೆ.
ಏಳನೇ ಹಂತದ ಚುನಾವಣೆ: ಮೋದಿ ನೇತೃತ್ವದ ಬಿಜೆಪಿಗೆ ಬೆಟ್ಟದಷ್ಟು ಸವಾಲು
ಸೈತವಾರ್, ಬಿಂಡ್, ಗದರಿಯಾ, ನಿಶಾದ್, ಪ್ರಜಾಪತಿ, ತೆಲಿ, ಸಾಹು ಹೀಗೆ ಹಲವು ಜಾತಿಗಳು ಎಂಬಿಸಿ ಅಡಿಯಲ್ಲಿ ಬರುತ್ತವೆ. ಇವರಿಗೆ ರಾಜಕೀಯವಾಗಿ ಪ್ರಾತಿನಿಧ್ಯ ನೀಡುವ ಮೂಲಕ ಎಲ್ಲ ರಾಜಕೀಯ ಪಕ್ಷಗಳು ತಮ್ಮೆಡೆಗೆ ಸೆಳೆಯುವ ಪ್ರಯತ್ನದಲ್ಲಿ ಇವೆ. ರಾಜ್ ನಾಥ್ ಸಿಂಗ್ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಎಂಬಿಸಿಗಳ ಕಲ್ಯಾಣಕ್ಕಾಗಿ ಸರಕಾರದಿಂದ ಸಮಿತಿ ರಚಿಸಲಾಗಿತ್ತು.
ಎಂಬಿಸಿ ಓಲೈಕೆಗೆ ನಿಂತಿರುವ ರಾಜಕೀಯ ಪಕ್ಷಗಳು
ಆ ನಂತರ ಮುಲಾಯಂ ಸಿಂಗ್ ಯಾದವ್ ಮುಖ್ಯಮಂತ್ರಿ ಆಗಿದ್ದಾಗ, ಎಂಬಿಸಿ ಅಡಿಯಲ್ಲಿ ಇದ್ದ ಹದಿನೇಳು ಜಾತಿಗಳನ್ನು ಪರಿಶಿಷ್ಟ ಜಾತಿಗೆ ಸೇರಿಸಿ, ಆ ಮೂಲಕ ಬಹು ಕಾಲದ ಬೇಡಿಕೆ ಈಡೇರಿಸಿದರು. ಆಸಕ್ತಿಕರ ವಿಷಯ ಏನೆಂದರೆ, 2014ರ ಲೋಕಸಭಾ ಚುನಾವಣೆಯಲ್ಲಿ ಮತ್ತು 2017ರ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಎಂಬಿಸಿ ಮತಗಳು ಬಿಜೆಪಿಗೆ ಬಂದವು. ಈಗಿನ ಲೋಕಸಭಾ ಚುನಾವಣೆಯಲ್ಲಿ ಎಲ್ಲ ಪ್ರಮುಖ ಪಕ್ಷಗಳೂ ಎಂಬಿಸಿ ಅಡಿಯಲ್ಲಿ ಬರುವವರು ಓಲೈಕೆಗೆ ನಿಂತಿವೆ. ಸಂತ ಕಬೀರ್ ನಗರ್, ಗೋರಖ್ ಪುರ್, ಖುಷಿ ನಗರ್, ಸಲೀಂಪುರ್, ವಾರಾಣಸಿ, ಘಾಜಿಪುರ್ ಹಾಗೂ ಬಲಿಯಾ ಮತ್ತಿತರ ಕಡೆಗಳಲ್ಲಿ ಎಂಬಿಸಿ ಮತಗಳು ಪ್ರಮುಖ ಪಾತ್ರ ವಹಿಸುತ್ತವೆ.
ಜಾತಿ ಲೆಕ್ಕಾಚಾರದಲ್ಲೇ ಮೈತ್ರಿ, ಟಿಕೆಟ್ ಹಂಚಿಕೆ
ಆ ಮತಗಳನ್ನು ದೃಷ್ಟಿಯಲ್ಲಿ ಇಟ್ಟುಕೊಂಡೇ ಮೈತ್ರಿಗಳು ಆಗಿವೆ, ಟಿಕೆಟ್ ಹಂಚಿಕೆ ಅಗಿವೆ. ಬಿಜೆಪಿಯಿಂದ ರಾಷ್ಟ್ರೀಯ ನಿಶಾದ್ ಪಕ್ಷದ ಜತೆಗೆ ಮೈತ್ರಿ ಮಾಡಿಕೊಂಡಿದ್ದು, ಅದರ ಅಧ್ಯಕ್ಷ ಸಂಜಯ್ ನಿಶಾದ್ ಅವರ ಮಗ ಪ್ರವೀಣ್ ನಿಶಾದ್ ಗೆ ಸಂತ ಕಬೀರ್ ನಗರ ಲೋಕಸಭಾ ಕ್ಷೇತ್ರದ ಟಿಕೆಟ್ ನೀಡಲಾಗಿದೆ. ಭಾರತೀಯ ಸಮಾಜ ಪಕ್ಷದ ಜತೆಗೆ ಬಿಜೆಪಿಯ ಮೈತ್ರಿ ಮುರಿದ ನಂತರವೂ ಓಂ ಪ್ರಕಾಶ್ ರಾಜಭರ್ ಈಗಲೂ ಯೋಗಿ ಸರಕಾರದಲ್ಲಿ ಮುಂದುವರಿದಿದ್ದಾರೆ. ಪೂರ್ವಾಂಚಲ್ ಭಾಗದಲ್ಲಿ ರಾಜ್ ಭರ್ ನಾಯಕರಿಗೆ ಬಿಜೆಪಿಯಿಂದ ಸ್ಥಾನಗಳನ್ನು ನೀಡಲಾಗಿದೆ.
ಕಾಂಗ್ರೆಸ್ ಸಹ ಆ ಮತಗಳ ಮೇಲೆ ಕಣ್ಣಿಟ್ಟಿದೆ
ಪೂರ್ವಾಂಚಲ್ ದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಸೈತ್ ವಾರ್ ಗಳ ಮೇಲೆ ಕಾಂಗ್ರೆಸ್ ಕಣ್ಣಿಟ್ಟಿದೆ. ಪೂರ್ವಾಂಚಲ ಪ್ರದೇಶದ ಮಾಲ್ ರಾಜ ವಂಶಕ್ಕೆ ಸೇರಿದ ಆರ್ ಪಿಎನ್ ಸಿಂಗ್ ಗೆ ಟಿಕೆಟ್ ನೀಡಿದೆ. ಮುಲಾಯಂ ಸಿಂಗ್ ಯಾದವ್ ನಾಯಕತ್ವದ ವೇಳೆ ಹೇಗೆ ಸಂಬಂಧ ಚೆನ್ನಾಗಿತ್ತೋ ಆದೇ ರೀತಿ ಈಗಲೂ ಹದಿನೇಳು ಎಂಬಿಸಿ ಜತೆ ನಂಟು ಬೆಸೆಯಲು ಸಮಾಜವಾದಿ ಪಕ್ಷ ಪ್ರಯತ್ನಿಸುತ್ತಿದೆ. ಅವರಿಗೆ ಪಕ್ಷದೊಳಗೆ ಪ್ರಮುಖ ಸ್ಥಾನ-ಮಾನ ಹಾಗೂ ಈ ಹದಿನೇಳೂ ಜಾತಿಗೆ ಪರಿಶಿಷ್ಟ ಜಾತಿ ಸ್ಥಾನ ಮಾನ ದೊರಕಿಸಿ ಕೊಡಲು ಹೋರಾಟ ನಡೆಸುವುದಾಗಿ ಆಶ್ವಾಸನೆ ನೀಡಿದೆ. ಆದರೆ ತಜ್ಞರು ಅಭಿಪ್ರಾಯ ಪಡುವ ಪ್ರಕಾರ ಈ ಸಲ ಎಂಬಿಸಿ ಮತ ಬ್ಯಾಂಕ್ ಚದುರಿ ಹೋಗಲಿದೆ. ಉತ್ತರಪ್ರದೇಶವು ಕಳೆದ ಎರಡು ಬಾರಿ ಕಂಡ ಚುನಾವಣೆಯಲ್ಲಿ ಈ ಮತಗಳು ಬಿಜೆಪಿ ಪರ ವಾಲಿದ್ದವು. ಆದರೆ ಈ ಬಾರಿ ಅದು ಸಾಧ್ಯವಿಲ್ಲ ಎನ್ನಲಾಗುತ್ತಿದೆ.
ರಾಜಕೀಯ ಪಕ್ಷಕ್ಕಿಂತ ಅಭ್ಯರ್ಥಿಯ ಜಾತಿ ಮುಖ್ಯ
ಈ ಸಮುದಾಯಗಳು ತಮ್ಮ ಮತ ಚಲಾಯಿಸುವುದು ಅಭ್ಯರ್ಥಿಯ ಜಾತಿಯ ಆಧಾರದ ಮೇಲೆ. ರಾಜಕೀಯ ಪಕ್ಷ ಯಾವುದು ಎಂಬುದಕ್ಕಿಂತ ಹೆಚ್ಚಾಗಿ ಅಖಾಡದಲ್ಲಿ ಇರುವ ಅಭ್ಯರ್ಥಿಯ ಜಾತಿ ಮುಖ್ಯ ಪಾತ್ರ ವಹಿಸುತ್ತದೆ. ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಈ ಸಮುದಾಯದ ಮತಗಳನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದ್ದ ಬಿಜೆಪಿಯು ಅದೇ ಯಶಸ್ಸನ್ನು ಪುನರಾವರ್ತನೆ ಮಾಡುವ ಉಮೇದಿನಲ್ಲಿದೆ. ಆದರೆ ಕಳೆದ ಬಾರಿ ಹೇಗೆ ಸಾಲಿಡ್ ಆಗಿ ಬಿಜೆಪಿಗೆ ಮತಗಳು ಬಂದವೋ ಆ ರೀತಿ ಈ ಸಲ ಸಾಧ್ಯವಿಲ್ಲ ಎಂಬುದು ಸದ್ಯಕ್ಕೆ ಕಂಡುಬರುತ್ತಿದೆ.