ದಾವಣಗೆರೆಯಲ್ಲಿ ಹ್ಯಾಟ್ರಿಕ್ ಬಾರಿಸಿರುವ ಜಿ.ಎಂ.ಸಿದ್ದೇಶ್ವರ ಪರಿಚಯ
ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಮೂರು ಬಾರಿ ಗೆಲುವು ಸಾಧಿಸುವ ಮೂಲಕ ಹ್ಯಾಟ್ರಿಕ್ ಬಾರಿಸಿದ್ದಾರೆ ಜಿ.ಎಂ.ಸಿದ್ದೇಶ್ವರ. ದಾವಣಗೆರೆಯ ಚುನಾವಣೆ ಎಂದರೆ ಜಿ.ಎಂ.ಸಿದ್ದೇಶ್ವರ ಮತ್ತು ಶಾಮನೂರು ಶಿವಶಂಕರಪ್ಪ ಅವರ ಕುಟುಂಬದ ನಡುವಿನ ಹೋರಾಟ.
2004, 2009 ಮತ್ತು 2014ರ ಚುನಾವಣೆಯಲ್ಲಿ ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಜಿ.ಎಂ.ಸಿದ್ದೇಶ್ವರ ಅವರು ಗೆಲುವು ಸಾಧಿಸಿದ್ದಾರೆ. ಈ ಮೂರು ಚುನಾವಣೆಗಳಲ್ಲಿ ಇವರಿಗೆ ಎದುರಾಳಿಯಾಗಿದ್ದು ಕಾಂಗ್ರೆಸ್ನ ಎಸ್.ಎಸ್.ಮಲ್ಲಿಕಾರ್ಜುನ. ಕರ್ನಾಟಕ ಕಾಂಗ್ರೆಸ್ನ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರ ಪುತ್ರ.
ಗೌಡರ್ ಮಲ್ಲಿಕಾರ್ಜುನ ಸಿದ್ದೇಶ್ವರ ಜಿ.ಎಂ.ಸಿದ್ದೇಶ್ವರ ಅವರ ಪೂರ್ಣ ಹೆಸರು. ಕೃಷಿಕರೂ ಆಗಿರುವ ಇವರು ರೈತರ ಕಷ್ಟಗಳನ್ನು ಹತ್ತಿರದಿಂದ ಬಲ್ಲವರು. ಕರ್ನಾಟಕದ ಇತರ ಸಂಸದರಿಗೆ ಮಾದರಿಯಾಗುವಂತೆ ಕೆಲಸ ಮಾಡಿದ್ದಾರೆ. ಸಂಸದರ ಅನುದಾನ ಬಳಕೆಯಲ್ಲಿ ಇವರು ನಂಬರ್ 1.
ಜಿ.ಎಂ.ಸಿದ್ದೇಶ್ವರ ಅವರು ಜನಿಸಿದ್ದು 5 ಜುಲೈ 1952ರಲ್ಲಿ. 66 ವರ್ಷದ ಇವರು ಮೂರು ಲೋಕಸಭಾ ಚುನಾವಣೆಯಲ್ಲಿ ಸತತವಾಗಿ ಜಯಗಳಿಸುವ ಮೂಲಕ ಹ್ಯಾಟ್ರಿಕ್ ಬಾರಿಸಿದ್ದಾರೆ. ಇಳಿಯ ವಯಸ್ಸಿನಲ್ಲಿಯೂ ಯುವ ಸಂಸದರಿಗೆ ಮಾದರಿಯಾಗಿದ್ದಾರೆ. ಈ ಬಾರಿಯೂ ಅವರೇ ದಾವಣಗೆರೆಯಲ್ಲಿ ಬಿಜೆಪಿ ಅಭ್ಯರ್ಥಿ.
2014ರ ಚುನಾವಣೆಯಲ್ಲಿ ಗೆದ್ದ ಬಳಿಕ ಜಿ.ಎಂ.ಸಿದ್ದೇಶ್ವರ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟದಲ್ಲಿ ಭಾರಿ ಕೈಗಾರಿಕೆ ಖಾತೆ ರಾಜ್ಯ ಸಚಿವರಾಗಿದ್ದರು. ಸಂಪುಟ ಪುನಾರಚನೆ ಸಂದರ್ಭದಲ್ಲಿ 2016ರಲ್ಲಿ ಅವರನ್ನು ಸಂಪುಟದಿಂದ ಕೈ ಬಿಡಲಾಯಿತು.
10ನೇ ತರಗತಿ ಓದಿರುವ ಜಿ.ಎಂ.ಸಿದ್ದೇಶ್ವರ ಅವರು ರಾಜಕಾರಣ ಮತ್ತು ಉದ್ಯಮದಲ್ಲಿ ತೊಡಗಿಕೊಂಡಿದ್ದಾರೆ. ಸಂಸತ್ನಲ್ಲಿಯೂ ಅವರು ಶೇ 60ರಷ್ಟು ಹಾಜರಾತಿ ಹೊಂದಿದ್ದಾರೆ. 219 ಪ್ರಶ್ನೆಗಳನ್ನು ಕೇಳಿದ್ದಾರೆ. 2019ರ ಚುನಾವಣೆಯಲ್ಲಿಯೂ ಅವರಿಗೆ ಟಿಕೆಟ್ ಸಿಗುವ ನಿರೀಕ್ಷೆ ಇದೆ.
ರಾಜಕಾರಣ ಹೊರತುಪಡಿಸಿದರೆ ಸಿದ್ದೇಶ್ವರ ಅವರು ಜಿ.ಎಂ.ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಅಧ್ಯಕ್ಷರು. ಶ್ರೀಶೈಲ ಎಜುಕೇಷನ್ ಟ್ರಸ್ಟ್ ನಿರ್ದೇಶಕರು. ಕರ್ನಾಟಕ ಅರೆಕಾ ಛೇಂಬರ್ಸ್ ಆಫ್ ಕಾಮರ್ಸ್ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ.
ರಾಜಕಾರಣದ ಜೊತೆ ಕ್ರೀಡೆಯಲ್ಲೂ ಸಿದ್ದೇಶ್ವರ ಅವರಿಗೆ ಅಪಾರವಾದ ಆಸಕ್ತಿ ಇದೆ. ಬ್ಯಾಡ್ಮಿಂಟನ್, ವಾಲಿಬಾಲ್ ಆಟಗಳು ಸಿದ್ದೇಶ್ವರ ಅವರಿಗೆ ಬಹಳ ಪ್ರೀತಿ. ಫ್ರಾನ್ಸ್, ಜರ್ಮನಿ, ಹಾಲೆಂಡ್, ಇಟಲಿ ಮುಂತಾದ ದೇಶಗಳ ವಿವಿಧ ಸಮ್ಮೇಳನಗಳಲ್ಲಿ ಅವರು ಪಾಲ್ಗೊಂಡಿದ್ದಾರೆ.