ಕೋಲಾರ ಲೋಕ ಸಮರ: ಸಿಪಿಐ(ಎಂ) ಅಭ್ಯರ್ಥಿ ಎಸ್. ವರಲಕ್ಷ್ಮಿ ಪರಿಚಯ
ಅಭಿವೃದ್ಧಿ ಪಥದಲ್ಲಿ ತೆವಳುತ್ತಿರುವ ಕೋಲಾರವು ಕರ್ನಾಟಕ ಏಕೀಕರಣದ ಮುಂಚೆ ಮೈಸೂರು ರಾಜ್ಯವಾಗಿದ್ದಾಗ ಮೂರು ಚುನಾವಣೆ ಕಂಡಿದೆ. ಈವರೆಗೆ ನಡೆದಿರುವ 16 ಲೋಕಸಭೆ ಚುನಾವಣೆಗಳಲ್ಲಿ 15 ಚುನಾವಣೆಗಳಲ್ಲಿ ಇಲ್ಲಿನ ಜನ ಕಾಂಗ್ರೆಸ್ಗೆ ಅನ್ನು ಗೆಲ್ಲಿಸಿದ್ದಾರೆ. ಕೇವಲ ಒಂದು ಬಾರಿ ಮಾತ್ರ 1984ರಲ್ಲಿ ಜನತಾಪಕ್ಷದ ವಿ.ವೆಂಕಟೇಶ್ ಎಂಬುವರು ಗೆಲುವು ಸಾಧಿಸಿದ್ದರು.
ಕೋಲಾರ ಲೋಕಸಭೆ ಒಳಗೊಂಡಿರುವ ಎಂಟು ಕ್ಷೇತ್ರಗಳಲ್ಲಿ ಏಳರಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಒಂದರಲ್ಲಿ ಜೆಡಿಎಸ್ ಶಾಸಕ ಅಧಿಕಾರದಲ್ಲಿದ್ದಾರೆ. ಹೀಗಾಗಿ, ಕಾಂಗ್ರೆಸ್ ಪ್ರಾಬಲ್ಯ ಹೊಂದಿರುವ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ವಿರುದ್ಧವೇ ನೇರ ಹೋರಾಟ ನಡೆಸಬೇಕಾಗುತ್ತದೆ. ಈ ಬಾರಿಯ ಲೋಕಸಭಾ ಚುನಾವಣೆಯ ಪ್ರಮುಖ ವಿಷಯ ನೀರಿನದ್ದೇ ಆಗಲಿದೆ. ಕಾರ್ಮಿಕ ಸಮಸ್ಯೆ ಬಗ್ಗೆ ದನಿಯೆತ್ತುವವರು ಇಲ್ಲವಾಗಿದ್ದಾರೆ.
ಮಂಡ್ಯದಲ್ಲಿ ನಿಖಿಲ್ಗೆ ಸಿಪಿಐ(ಎಂ) ಬೆಂಬಲ, ಸುಮಲತಾಗೆ ಅಲ್ಲ
ಕಳೆದ ಬಾರಿ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ನ ಕೋಲಾರ ಕೇಶವ ಅವರು ಮುನಿಯಪ್ಪ ಅವರಿಗೆ ಭಾರಿ ಪೈಪೋಟಿ ನೀಡಿದ್ದರು. ಆದರೆ, ಈ ಬಾರಿ ಮೈತ್ರಿ ಅಭ್ಯರ್ಥಿಯಾಗಿ ಕೆಎಚ್ ಮುನಿಯಪ್ಪ ಅವರು ಕಣಕ್ಕಿಳಿದಿದ್ದಾರೆ. ಬಿಜೆಪಿಯಿಂದ ಎಸ್ ಮುನಿಸ್ವಾಮಿ ಅವರು ಸ್ಪರ್ಧಿಸುತ್ತಿದ್ದಾರೆ. ಇವರ ವಿರುದ್ಧ ಸ್ಪರ್ಧೆಗಿಳಿದಿರುವ ಸಿಪಿಐ(ಎಂ) ಅಭ್ಯರ್ಥಿ ಎಸ್ ವರಲಕ್ಷ್ಮಿ ಅವರ ಪರಿಚಯ ಇಲ್ಲಿದೆ.
ಸಿಪಿಐ(ಎಂ) ಅಭ್ಯರ್ಥಿಯಾಗಿರುವ ವರಲಕ್ಷ್ಮಿಯವರು, ಕೋಲಾರದ ಮಾಲೂರು ತಾಲ್ಲೂಕಿನ ಹಳ್ಳಿಯೊಂದರಲ್ಲಿ ಹಿಂದುಳಿದ ಸಮುದಾಯದ ಬಡಕುಟುಂಬದಿಂದ ಬಂದವರು. ಅವರು ಕೆಲಸ ಮಾಡುತ್ತಿದ್ದ ಕುಂಬಳಗೋಡು ಕಾರ್ಖಾನೆಯಲ್ಲಿ 1993ರಲ್ಲಿ ಕಾರ್ಮಿಕರ ಹೋರಾಟದಲ್ಲಿ ಭಾಗವಹಿಸಿದ ವರಲಕ್ಷ್ಮಿಯವರಿಗೆ ಪೊಲೀಸರು ಹೊಡೆದು ಹಿಂಸಿಸಿ ಜೈಲಿಗಟ್ಟಿದರು. ಇದರಿಂದ ವಿಚಲಿತರಾಗುವ ಬದಲು ಜೈಲಿನಿಂದ ಬಿಡುಗಡೆ ಹೊಂದಿದ ಮರುವರ್ಷವೇ ಅವರು ಸಿಐಟಿಯು ನ ಪೂರ್ಣಾವಧಿ ಕಾರ್ಯಕರ್ತೆಯಾಗಿ ಕಾರ್ಮಿಕರನ್ನು ಸಂಘಟಿಸಲು ದೃಢ ಸಂಕಲ್ಪ ಮಾಡಿದರು.
ಕೋಲಾರ ಲೋಕಸಭಾ ಕ್ಷೇತ್ರ ಪರಿಚಯ: ಚಿನ್ನದ ಜಿಲ್ಲೆಯ ಮುಕುಟ ಯಾರಿಗೆ?
ಮುಂದಿನ ದಿನಗಳಲ್ಲಿ ಅಂಗನವಾಡಿ, ಬಿಸಿಯೂಟ, ಗುತ್ತಿಗೆ ಕಾರ್ಮಿಕರು ಹಾಗೂ ಆಶಾ ಕಾರ್ಯಕರ್ತೆಯರ ಅಲ್ಲದೇ ಸಂಘಟಿತ ಮತ್ತು ಅಸಂಘಟಿತ ವಲಯದ ವಿವಿಧ ಕಾರ್ಮಿಕರ ಹಕ್ಕುಗಳಿಗಾಗಿ, ಅವರ ಸಮಸ್ಯೆಗಳ ಪರಿಹಾರಕ್ಕಾಗಿ ಸಿಐಟಿಯು ನೇತೃತ್ವದಲ್ಲಿ ಹೋರಾಟಗಳನ್ನು ಸಂಘಟಿಸುತ್ತಾ ಮುಂಚೂಣಿಯಲ್ಲಿ ನಿಂತರು. ದೇಶದ ಗಮನ ಸೆಳೆಯುವ ರೀತಿಯಲ್ಲಿ ಸಹಸ್ರಾರು ಮಹಿಳೆಯರ ಅಹೋರಾತ್ರಿ ಹೋರಾಟಗಳಲ್ಲಿ ತೊಡಗಿಸಿಕೊಂಡರು.
ಕಳೆದ 25 ವರ್ಷಗಳಿಂದ ರಾಜ್ಯದ ಕಾರ್ಮಿಕರು, ಮಹಿಳೆಯರು ಮತ್ತು ದುಡಿಯುವ ಜನರ ಸೇವೆಗೆ ವರಲಕ್ಷ್ಮಿಯವರು ಪೂರ್ಣವಾಗಿ ತಮ್ಮನ್ನು ಅರ್ಪಿಸಿಕೊಂಡಿದ್ದಾರೆ. ವರಲಕ್ಷ್ಮಿಯವರು ಸಿಐಟಿಯು ರಾಜ್ಯ ಘಟಕದ ಪ್ರಥಮ ಮಹಿಳಾ ಅಧ್ಯಕ್ಷರಾಗಿದ್ದಾರೆ. ದುಡಿಯುವ ಜನರ ಪಕ್ಷವಾದ ಸಿಪಿಐ(ಎಂ) ನ ಪ್ರಮುಖ ರಾಜ್ಯ ನಾಯಕಿಯಾಗಿ ಬೆಳೆದಿದ್ದಾರೆ.