ಲೋಕಸಭೆ ಚುನಾವಣೆ: ಬಿಜೆಪಿ ಪ್ರಣಾಳಿಕೆ 10 ಮುಖ್ಯಾಂಶಗಳು
ನವದೆಹಲಿ, ಏಪ್ರಿಲ್ 08: ಲೋಕಸಭಾ ಚುನಾವಣೆಗೆ ಮೂರು ದಿನ(ಏಪ್ರಿಲ್ 11) ಬಾಕಿ ಇರುವಾಗ ಬಿಜೆಪಿ ತನ್ನ ಪ್ರಣಾಳಿಕೆಯನ್ನು ಇಂದು ಬಿಡಗಡೆ ಮಾಡಿದ್ದು, ರಾಷ್ಟ್ರೀಯ ಭದ್ರತೆಗೆ ಮೊದಲ ಆದ್ಯತೆ ನೀಡಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ದೇಶವನ್ನು ಅಭಿವೃದ್ಧಿಶಿಲ ರಾಷ್ಟ್ರದಿಂದ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಬದಲಿಸುವುದೇ ನಮ್ಮ ಮೂಲ ಉದ್ದೇಶ ಎಂದು ಪ್ರಣಾಳಿಕೆ ಬಿಡುಗಡೆಯ ನಂತರ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಬಿಜೆಪಿ ಪ್ರಣಾಳಿಕೆ LIVE: ಏನಿದೆ 'ಸಂಕಲ್ಪ ಪತ್ರ'ದಲ್ಲಿ?
ತನ್ನ ಪ್ರಣಾಳಿಕೆಯನ್ನು ಬಿಜೆಪಿ 'ಸಂಕಲ್ಪ ಪತ್ರ' ಎಂದು ಕರೆದಿದ್ದು, 2022 ಕ್ಕೆ ಸ್ವಾತಂತ್ರ್ ಸಿಕ್ಕು 75 ವರ್ಷವಾಗಲಿರುವ ಹಿನ್ನೆಲೆಯಲ್ಲಿ ಅದು ೭೫ ಸಂಕಲ್ಪಗಳನ್ನು ಮಾಡಿಕೊಂಡಿದೆ. ಎನ್ ಡಿಎ ಸರ್ಕಾರ ಅಧಿಕಾರಕಕೆ ಬಂದರೆ ಮುಂದಿನ ಐದು ವರ್ಷಗಳಲ್ಲಿ ಈ ಎಲ್ಲಾ ಸಂಕಲ್ಪಗಳನ್ನೂ ಈಡೇರಿಸುವ ಗುರಿಯನ್ನು ಅದು ಹೊಂದಿದೆ.
ಬಿಜೆಪಿಯ ಸಂಕಲ್ಪ ಪತ್ರವನ್ನು, ಶಾಸನ ಪತ್ರ, ಸಮೃದ್ಧಿಯ ಪತ್ರ, ರಾಷ್ಟ್ರದ ಭದ್ರತೆಯ ಪತ್ರ ಎಂದು ಪ್ರಧಾನಿ ಮೋದಿ ಬಣ್ಣಿಸಿದ್ದಾರೆ. ಗೃಹಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಸಿದ್ಧವಾದ 48 ಪುಟಗಳ ಈ ಪ್ರಣಾಳಿಕೆಯ ಮುಖ್ಯಾಂಶಗಳು ಇಲ್ಲಿವೆ.
ಆರ್ಥಿಕತೆಗೆ ಒತ್ತು
2025 ರ ಹೊತ್ತಿಗೆ ಭಾರತ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯಿಂದ 2032 ಹೊತ್ತಿಗೆ 10 ಟ್ರಿಲಿಯನ್ ಡಾಲರ್ ವರೆಗೆ ಹೆಚ್ಚಿಸುತ್ತೇವೆ. ಮೂಲಸೌಕರ್ಯ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆಯನ್ನು 100 ಲಕ್ಷ ಕೋಟಿ ರೂ. ಗೆ ಹೆಚ್ಚಳ.
ಮಧ್ಯಮ ಮತ್ತು ಸಣ್ಣ ಕೈಗಾರಿಕೆಗೆ 1 ಲಕ್ಷ ಕೋಟಿ ರೂ. ಲಾಭ ಖಾತ್ರಿ ಯೋಜನೆ
ರೈತರಿಗೆ ಪಿಂಚಣಿ
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ದೇಶದ ಎಲ್ಲಾ ರೈತರಿಗೂ ವಿಸ್ತರಣೆ. ಸಣ್ಣ ಮತ್ತು ಅತಿ ಸಣ್ಣ ರೈತರು 60 ವರ್ಷ ಪೂರೈಸಿದ ಮೇಲೆ ಪಿಂಚಣಿ ನೀಡುವ ಯೋಜನೆ. ಕೃಷಿ ಕ್ಷೇತ್ರದಲ್ಲಿ ಉತ್ಪಾದನೆ ಹೆಚ್ಚಿಸುವ ಸಲುವಾಗಿ 25 ಲಕ್ಷ ಕೋಟಿ ರೂ. ಹೂಡಿಕೆ.
ಬಿಜೆಪಿ ಚುನಾವಣೆ ಪ್ರಣಾಳಿಕೆ : ಎಲ್ಲಕ್ಕಿಂತ ದೇಶ ಮೊದಲು
ಮಹಿಳಾ ಸಬಲೀಕರಣ
ಮಹಿಳೆಯರ ಹಕ್ಕುಗಳನ್ನು ಹತ್ತಿಕ್ಕುವ ತ್ರಿವಳಿ ತಲಾಖ್ ಮತ್ತು ನಿಖಾಹ್ ಹಲಾಲದಂಥ ಪದ್ಧತಿಗಳ ನಿರ್ಮೂಲನೆಗೆ ಮಸೂದೆ.
ಆಯುಷ್ಮಾನ್ ಭಾರತದ ಅಡಿಯಲ್ಲಿ ಎಲ್ಲಾ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ಸೇರ್ಪಡೆ. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಲ್ಲಿ ಶೇ.50 ರಷ್ಟು ಮಹಿಳಾ ಉದ್ಯೋಗಿಗಳಿದ್ದರೆ, ಅಂಥ ಸಂಸ್ಥೆಗಳಿಗೆ ಯಾವುದೇ ರೀತಿಯ ಪರಿಕರ ಖರೀದಿಗೆ ಶೇ.10 ರಷ್ಟು ಸಹಾಯಧನವನ್ನು ಸರ್ಕಾರ ನೀಡಲಿದೆ.
ಉತ್ತಮ ಆಡಳಿತಕ್ಕಾಗಿ
ವಿಧಾನಸಭೆ ಮತ್ತು ಲೋಕಸಭೆ, ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸಲು ಉತ್ತೇಜನ. ಭ್ರಷ್ಟಾಚಾರ ಮುಕ್ತ ಭಾರತದ್ದ ಮತ್ತಷ್ಟು ಹೆಜ್ಜೆ. ಯಾವುದೇ ಸಾರ್ವಜನಿಕ ಸೇವೆಯು ನಿರ್ದಿಷ್ಟ ಕಾಲಾವಧಿಯೊಳಗೆ ಸಿಗುವಂತೆ ಮಾಡುವುದು.
ಬಿಜೆಪಿ ಪ್ರಣಾಳಿಕೆ : ಗ್ರಾಮೀಣಾಭಿವೃದ್ಧಿಗೆ 5 ಸಂಕಲ್ಪಗಳು
ರಾಷ್ಟ್ರದ ಭದ್ರತೆಗೆ
ಭಯೋತ್ಪಾದನೆಯ ವಿರುದ್ಧ ಶೂನ್ಯ ಸಂವೇದನೆ. ಭಯೋತ್ಪಾದನೆಯನ್ನು ಹತ್ತಿಕ್ಕಲು ನಮ್ಮ ಸೇನಾ ಪಡೆಯನ್ನು ಮತ್ತಷ್ಟು ಸಬಲಗೊಳಿಸುವುದು. ಆಧಿನಿಕ ತಂತ್ರಜ್ಞಾನದ ಮೂಲಕ ಸೇನೆಗೆ ಸಾಕಷ್ಟು ಸೌಲಭ್ಯ ನೀಡುವುದು. ಈಶಾನ್ಯ ರಾಜ್ಯಗಳಲ್ಲಿ ಅಕ್ರಮ ನುಸುಳುವಿಕೆಯನ್ನು ತಡೆಗಟ್ಟುವುದು.
ಸರ್ವೇ ಸಂತು ನಿರಾಮಯಾಃ
1.5 ಲಕ್ಷ ಆರೋಗ್ಯ ಕೇಂದ್ರಗಳಲ್ಲಿ ಟೆಲಿಮೆಡಿಸಿನ್ ಮತ್ತು ಪ್ರಯೋಗಾಲಯ ಸೌಲಭ್ಯ.
ಪ್ರತಿ ಜಿಲ್ಲೆಯಲ್ಲಿ ಒಂದು ವೈದ್ಯಕೀಯ ಕಾಲೇಜ್ ಅಥವಾ ಸ್ನಾತಕೋತ್ತರ ವೈದ್ಯಕೀಯ ಕಾಲೇಜ್ ನಿರ್ಮಾಣ.
2022 ರ ಹೊತ್ತಿಗೆ ಎಲ್ಲಾ ಮಕ್ಕಳು ಮತ್ತು ಗರ್ಭಿಣಿಯರು ರೋಗಮುಕ್ತರಾಗುವಂತೆ ಮಾಡುವುದು.
ರಾಮಮಂದಿರ ನಿರ್ಮಾಣ
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಇರುವ ಎಲ್ಲಾ ಸಾಂವಿಧಾನಿಕ ತೊಡಕುಗಳನ್ನು ನಿವಾರಿಸಿ, ಮಂದಿರ ನಿರ್ಮಿಸುತ್ತೇವೆ.
ಗಂಗಾ ನದಿಯಿಂದ ಗಂಗೋತ್ರಿ ಮತ್ತು ಗಂಗಾ ಸಾಗರಕ್ಕೆ ಶುದ್ಧ ನೀರು, ಯಾವುದೇ ಅಡೆತಡೆಯಿಲ್ಲದೆ ಹರಿಯುವಂತೆ ಮಾಡುತ್ತೇವೆ. ಸಾರ್ವತ್ರಿಕ ನಾಗರಿಕ ಸಂಹಿತೆ ಜಾರಿಗೆ ತರಲು ಬದ್ಧರಾಗಿದ್ದೇವೆ.
ಬಿಜೆಪಿ ಪ್ರಣಾಳಿಕೆ : ಮತ್ತೆ ರಾಮ ಮಂದಿರ ನಿರ್ಮಾಣದ ಸಂಕಲ್ಪ
ವಿದೇಶಿ ನೀತಿ
ಭಾರತೀಯ ವಲಸಿಗರೊಂದಿಗೆ ಸಂವಹನ ಹೆಚ್ಚಿಸುವ ಸಲುವಾಗಿ 'ಭಾರತ ಗೌರವ' ಯೋಜನೆ. ಭಯೋತ್ಪಾದನೆ ಮತ್ತು ಭ್ರಷ್ಟಚಾರ ನಿರ್ಮೂಲನೆಗಾಗಿ ಜಾಗತಿಕ ಸಹಕಾರ ಕೇಳುವುದು.
ಮಧ್ಯಮ ವರ್ಗಕ್ಕಾಗಿ
ಐದು ಕಿ.ಮೀ.ಅಂತರದ ಎಲ್ಲೆಡೆಯೂ ಬ್ಯಾಂಕಿಂಗ್ ಸೌಲಭ್ಯ ದೊರಕುವಂತೆ ಮಾಡುವುದು. ಎಲ್ಲಾ ಸಣ್ಣ ವ್ಯಾಪಾರಿಗಳಿಗೆ, ಅಂಗಡಿಯವರಿಗೆ ಪಿಂಚಣಿ ಸೌಲಭ್ಯ.
ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ಸಂಖ್ಯೆಯನ್ನು ಗಣನೀಯ ಪ್ರಮಾಣದಲ್ಲಿ ತಗ್ಗಿಸುವುದು.
ನಾಳೆಯ ಭಾರತಕ್ಕಾಗಿ
ಭಾರತೀಯ ಆರ್ಥಿಕತೆಯನ್ನು 22 ಚಾಂಪಿಯನ್ ಸೆಕ್ಟರ್ ಗಳು ಮುನ್ನಡೆಸಲಿವೆ. ಹೊಸ ಉದ್ಯಮಿಗಳಿಗೆ ಸಹಾಯಧನ, ಯುಕರಿಗೆ ಉತ್ತೇಜನ.