ಬಿಜೆಪಿ ಚುನಾವಣಾ ಪ್ರಣಾಳಿಕೆ: ಕೃಷಿ ಕ್ಷೇತ್ರಕ್ಕೆ ಭರವಸೆಗಳೇನು?
ನವದೆಹಲಿ, ಏಪ್ರಿಲ್ 8: ಲೋಕಸಭೆ ಚುನಾವಣೆಯ ಹೊಸ್ತಿಲಿನಲ್ಲಿ ಆಡಳಿತಾರೂಢ ಬಿಜೆಪಿ ಹೊಸ ಘೋಷಣೆಗಳೊಂದಿಗೆ ಮತ್ತೆ ಚುನಾವಣಾ ಅಖಾಡಕ್ಕೆ ಇಳಿದಿದೆ. 2019ರ ಚುನಾವಣೆಯ ತನ್ನ ಪ್ರಣಾಳಿಕೆಯನ್ನು ಬಿಜೆಪಿ ಸೋಮವಾರ ಪ್ರಕಟಿಸಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
2014ರ ಚುನಾವಣೆ ಸಂದರ್ಭದಲ್ಲಿ ಮತ್ತು ಬಜೆಟ್ ವೇಳೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ಬಗ್ಗೆ ಬಿಜೆಪಿ ಆಶಯ ವ್ಯಕ್ತಪಡಿಸಿತ್ತು. ಈ ಪ್ರಣಾಳಿಕೆಯಲ್ಲಿ ತನ್ನ ಗುರಿಯನ್ನು 2022ರ ವೇಳೆಗೆ ಈಡೇರಿಸುವ ಪ್ರಯತ್ನದ ಬಗ್ಗೆ ಪ್ರಣಾಳಿಕೆಯಲ್ಲಿ ತಿಳಿಸಿದೆ.
ಬಿಜೆಪಿ ಪ್ರಣಾಳಿಕೆ LIVE: ಏನಿದೆ 'ಸಂಕಲ್ಪ ಪತ್ರ'ದಲ್ಲಿ?
ಕೃಷಿ, ರೈತರು, ಕೃಷಿ ಸಂಬಂಧಿತ ವಲಯಗಳು, ಪಶುಸಂಗೋಪನೆ, ಮೀನುಗಾರಿಕೆ ಕ್ಷೇತ್ರಗಳಿಗೆ ಬಿಜೆಪಿ ಭರ್ಜರಿ ನೆರವಿನ ಭರವಸೆಗಳನ್ನು ನೀಡಿದೆ. 60 ವರ್ಷ ದಾಟಿದ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಪಿಂಚಣಿ ನೀಡುವ ಹೊಸ ಘೋಷಣೆ ಮಾಡಿದೆ. ಅಲ್ಲದೆ, ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ದೇಶದ ಎಲ್ಲ ರೈತರಿಗೂ ವಿಸ್ತರಿಸುವುದಾಗಿ ಆಶ್ವಾಸನೆ ನೀಡಿದೆ.
2014 ಲೋಕಸಭೆ ಚುನಾವಣೆ : ಒಂದು ವಿಶ್ಲೇಷಣೆ
ಬಿಜೆಪಿ ಬಿಡುಗಡೆ ಮಾಡಿರುವ ಪ್ರಣಾಳಿಕೆಯಲ್ಲಿ ಕೃಷಿ ಮತ್ತು ರೈತರ ಪರವಾಗಿ ಮಾಡಿರುವ ಘೋಷಣೆಗಳು ಏನಿವೆ? ನೋಡಿ...
ಕಿಸಾನ್ ಸಮ್ಮಾನ್ ನಿಧಿ ಯೋಜನೆ ವಿಸ್ತರಣೆ
ಪ್ರತಿಯೊಬ್ಬರಿಗೂ ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ: ಎರಡು ಹೆಕ್ಟೇರ್ ವರೆಗೆ ಭೂಮಿ ಉಳ್ಳ ಸಣ್ಣ ರೈತರಿಗೆ ಹಣಕಾಸು ನೆರವು ನೀಡುವ ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಆರಂಭಿಸಲಾಗಿದೆ. ಈ ಯೋಜನೆಯನ್ನು ದೇಶದ ಎಲ್ಲ ರೈತರಿಗೂ ಲಭ್ಯವಾಗುವಂತೆ ವಿಸ್ತರಿಸಲಾಗುವುದು.
ಸಣ್ಣ, ಅತಿಸಣ್ಣ ರೈತರಿಗೆ ಪಿಂಚಣಿ
ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಪಿಂಚಣಿ: 60 ವರ್ಷ ವಯಸ್ಸಾದ ದೇಶದ ಎಲ್ಲ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಸಾಮಾಜಿಕ ಭದ್ರತೆ ಒದಗಿಸುವ ಸಲುವಾಗಿ ಪಿಂಚಣಿ ಯೋಜನೆಯನ್ನು ಆರಂಭಿಸಲಿದ್ದೇವೆ.
ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ವಲಯದಲ್ಲಿನ ಉತ್ಪಾದಕತೆ ಸುಧಾರಿಸುವ ಸಲುವಾಗಿ 25 ಲಕ್ಷ ಕೋಟಿ ಹೂಡಿಕೆ ಮಾಡಲು ಬದ್ಧರಾಗಿದ್ದೇವೆ ಎಂದು ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ತಿಳಿಸಿದೆ.
ಬಿಜೆಪಿ ಚುನಾವಣೆ ಪ್ರಣಾಳಿಕೆ : ಎಲ್ಲಕ್ಕಿಂತ ದೇಶ ಮೊದಲು
ಬಿಜೆಪಿಯ ಇತರೆ ಭರವಸೆಗಳು
ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲ: ಮೂಲ ಮೊತ್ತದ ಪ್ರಾಮಾಣಿಕ ಮರುಪಾವತಿಯ ಷರತ್ತಿನೊಂದಿಗೆ 1-5ವರ್ಷದ ಅವಧಿಯಲ್ಲಿ ಶೂನ್ಯ ಬಡ್ಡಿದರದಲ್ಲಿ 1 ಲಕ್ಷ ರೂಪಾಯಿವರೆಗೆ ಅಲ್ಪಾವಧಿಯ ಹೊಸ ಕೃಷಿ ಸಾಲಗಳನ್ನು ಒದಗಿಸಲಾಗುವುದು.
* ಫಸಲ್ ಬಿಮಾ ಯೋಜನೆ: ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಸಂಕಷ್ಟದ ಸಂದರ್ಭದಲ್ಲಿ ನೆರವಾಗುತ್ತಿದ್ದು, ಎಲ್ಲ ರೈತರಿಗೂ ವಿಮೆಯನ್ನು ಒದಗಿಸುತ್ತಿದೆ. ಈ ಯೋಜನೆಯಡಿ ಸ್ವಯಂಪ್ರೇರಣೆಯಿಂದ ರೈತರು ನೋಂದಾಯಿಸಿಕೊಳ್ಳುವಂತೆ ಮಾಡಲಾಗುವುದು.
* ರೈತರ ಸಬಲೀಕರಣಕ್ಕೆ ನೀತಿ: ಕೃಷಿ ಆಮದುಗಳನ್ನು ತಗ್ಗಿಸುವ ನಿಟ್ಟಿನಲ್ಲಿ ಕೆಲಸ ಮಾಡಲಿದ್ದೇವೆ. ರಫ್ತು ಹೆಚ್ಚಳವನ್ನು ಉತ್ತೇಜಿಸುವ ಹಾಗೂ ಆಮದನ್ನು ಕಡಿಮೆಗೊಳಿಸುವ ಸ್ಥಾಪಿತ ವ್ಯವಸ್ಥೆಯನ್ನು ಬೆಳೆಸಲು ಆಮದು ಮತ್ತು ರಫ್ತು ನೀತಿಯನ್ನು ತರಲಾಗುವುದು.
* ಗುಣಮಟ್ಟದ ಬೀಜಗಳು: ಕಡಿಮೆ ದರದಲ್ಲಿ ಸುಧಾರಿತ ಬೀಜಗಳನ್ನು ಸೂಕ್ತಕಾಲಕ್ಕೆ ಒದಗಿಸುವ ಮತ್ತು ಮನೆಬಾಗಿಲಿನಲ್ಲಿ ಪರೀಕ್ಷೆ ನಡೆಸುವ ಸೌಲಭ್ಯವನ್ನು ನೀಡಲಾಗುವುದು.
* ತೈಲ ಬೀಜ ಯೋಜನೆ: ಎಣ್ಣೆ ಬೀಜಗಳು ಮತ್ತು ಇತರೆ ಕೃಷಿ ಉತ್ಪನ್ನಗಳಲ್ಲಿ ಸ್ವ-ಸಮೃದ್ಧಿ ಸಾಧನೆಗಾಗಿ ಹೊಸ ಯೋಜನೆ ಜಾರಿ ಮಾಡಲಾಗುವುದು.
ದೇಶದೆಲ್ಲೆಡೆ ಗೋದಾಮು
ಕೃಷಿ ಉತ್ಪನ್ನಗಳ ದಕ್ಷ ಶೇಖರಣೆ ಮತ್ತು ಸಾಗಾಣಿಕೆ ವ್ಯವಸ್ಥೆ ಕಲ್ಪಿಸಲಾಗುವುದು. ತನ್ನ ಗ್ರಾಮದ ಸಮೀಪದಲ್ಲಿಯೇ ತಾನು ಬೆಳೆದ ಉತ್ಪನ್ನವನ್ನು ಶೇಖರಿಸಲು ಅನುಕೂಲವಾಗುವಂತೆ ಮತ್ತು ಸೂಕ್ತ ಸಮಯಕ್ಕೆ ಸರಿಯಾದ ಬೆಲೆಗೆ ಮಾರಾಟ ಮಾಡಲು ಸಾಧ್ಯವಾಗುವಂತೆ ಮಾಡಲಾಗುವುದು. ಇದಕ್ಕಾಗಿ ಕೃಷಿ ಉತ್ಪನ್ನಗಳ ನೂತನ ಗ್ರಾಮೀಣ ಶೇಖರಣಾ ಯೋಜನೆಯನ್ನು ಆರಂಭಿಸಲಾಗುವುದು. ಕೃಷಿ ಉತ್ಪನ್ನಗಳ ಶೇಖರಣಾ ಸಾಮರ್ಥ್ಯಕ್ಕೆ ಅನುಗುಣವಾಗಿ ರೈತರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಒದಗಿಸಲಾಗುವುದು.
ಪ್ರಧಾನ ಮಂತ್ರಿ ಕೃಷಿ ಸಂಪದ ಯೋಜನೆಯಲ್ಲಿ ಗೋದಾಮನ್ನು ರೈತರ ಆದಾಯ ಹೆಚ್ಚಿಸುವ ಮೂಲವಾಗಿ ಪರಿಗಣಿಸಲಾಗಿದೆ. ದೇಶದಲ್ಲಿ ಗೋದಾಮುಗಳ ಮೂಲಸೌಕರ್ಯವನ್ನು ವಿಸ್ತರಿಸುವ ಸಲುವಾಗಿ ಕೃಷಿ ಉತ್ಪನ್ನಗಳಿಂದ ಗೋದಾಮುಗಳಿಗೆ ಸಂಪರ್ಕ ಕಲ್ಪಿಸಲು ರಾಷ್ಟ್ರೀಯ ಹೆದ್ದಾರಿಗಳ ಬಳಿ ರಾಷ್ಟ್ರೀಯ ಗೋದಾಮು ಗ್ರಿಡ್ ಸ್ಥಾಪಿಸಲಾಗುವುದು.
ಬಿಜೆಪಿ ಪ್ರಣಾಳಿಕೆ : ಗ್ರಾಮೀಣಾಭಿವೃದ್ಧಿಗೆ 5 ಸಂಕಲ್ಪಗಳು
ಸಾವಯವ ಕೃಷಿಯಲ್ಲಿ ಲಾಭದಾಯಕತೆ
ಮುಂದಿನ ಐದು ವರ್ಷಗಳಲ್ಲಿ ಗುಡ್ಡಗಾಡು, ಬುಡಕಟ್ಟು ಮತ್ತು ಮಳೆಯಾಧಾರಿತ ಪ್ರದೇಶಗಳಲ್ಲಿನ ಹೆಚ್ಚುವರಿ 20 ಲಕ್ಷ ಹೆಕ್ಟೇರ್ ಪ್ರದೇಶಗಳಲ್ಲಿ ರಾಸಾಯನಿಕ ರಹಿತ ಸಾವಯವ ಕೃಷಿಗೆ ಉತ್ತೇಜನ ನೀಡಲಾಗುವುದು. ಗ್ರಾಹಕರ ಮನೆ ಬಾಗಿಲಿಗೆ ಸಾವಯವ ಉತ್ಪನ್ನಗಳು ಸಿಗುವಂತೆ ಮಾಡಲು ಅದಕ್ಕೆಂದೇ ಸೀಮಿತವಾದ ಇ-ಕಾಮರ್ಸ್ ಪೋರ್ಟಲ್ ಆರಂಭಿಸಲಾಗುವುದು.
ಸಾವಯವ ಕೃಷಿಯನ್ನು ಉತ್ತೇಜನಕ್ಕೆ ದೇಶದ ಗೋಶಾಲೆಗಳೊಂದಿಗೆ ಸಂಪರ್ಕ ಕಲ್ಪಿಸಲಾಗುವುದು. ಸಾವಯವ ಪರಿಸರ ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ನೀಡುವ ಮೂಲಕ ರೈತರಿಗೆ ಹೆಚ್ಚುವರಿ ಆದಾಯ ಬರುವಂತೆ ಮಾಡಲಾಗುವುದು.
ಜೇನು ಉತ್ಪಾದನೆ ದುಪ್ಪಟ್ಟು
ರೈತರಿಗೆ ಹೆಚ್ಚುವರಿ ಆದಾಯ ಲಭ್ಯವಾಗುವಂತೆ ರಾಷ್ಟ್ರೀಯ ಜೇನು ಸಾಕಾಣಿಕೆ ಮತ್ತು ಜೇನು ಯೋಜನೆಯನ್ನು ಆರಂಭಿಸಲಾಗುವುದು. ಮೂಲಸೌಕರ್ಯ ಸೌಲಭ್ಯಗಳ ಅಭಿವೃದ್ಧಿ ಹಾಗೂ ಮಾರುಕಟ್ಟೆ ಬೆಂಬಲ ಒದಗಿಸುವ ಮೂಲಕ ಪ್ರಸ್ತುತ ಇರುವ 11,500 ಎಂಟಿ ಜೇನು ಉತ್ಪಾದನೆಯನ್ನು ದುಪ್ಪಟ್ಟು ಮಾಡಲಾಗುವುದು.
ಲೋಕಸಭೆ ಚುನಾವಣೆ: ಬಿಜೆಪಿ ಪ್ರಣಾಳಿಕೆ 15 ಮುಖ್ಯಾಂಶಗಳು
ನೀರಾವರಿ ವಿಸ್ತರಣೆ
ದೀರ್ಘಕಾಲದಿಂದ ಬಾಕಿ ಉಳಿದಿದ್ದ 31 ನೀರಾವರಿ ಯೋಜನೆಗಳ ಕಾರ್ಯಗಳನ್ನು ಪ್ರಧಾನ ಮಂತ್ರಿ ಕೃಷಿ ಸಿಂಚಯಿ ಯೋಜನೆಯಡಿ ಪೂರ್ಣಗೊಳಿಸಿದ್ದೇವೆ. ಉಳಿದ 68 ಯೋಜನೆಗಳ ಹಂತವನ್ನು 2019ರ ಡಿಸೆಂಬರ್ ವೇಳೆಗೆ ಪೂರ್ಣಗೊಳಿಸಲಾಗುವುದು. ಒಂದು ಕೋಟಿ ಹೆಕ್ಟೇರ್ ಕೃಷಿ ಭೂಮಿಯನ್ನು ಮೈಕ್ರೊ ಇರಿಗೇಷನ್ ಅಡಿ ತರಲಾಗುವುದು.
ನೇರ ಮಾರುಕಟ್ಟೆಗೆ ಬೆಂಬಲ
ಕೃಷಿ ವಲಯದಲ್ಲಿ ಉತ್ತಮ ಮಾರುಕಟ್ಟೆ ಸಂಪರ್ಕಗಳು ಹಾಗೂ ಅವಕಾಶಗಳನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಸಹಕಾರ ಹಾಗೂ ಕೃಷಿ ಉತ್ಪನ್ನ ಸಂಸ್ಥೆಗಳ ಮಹತ್ವದ ಅರಿವಿದೆ. ಅವುಗಳನ್ನು ಬಲಪಡಿಸಲು ಬದ್ಧರಾಗಿರುತ್ತೇವೆ. 2022ರ ವೇಳೆಗೆ 10,000 ಹೊಸ ಕೃಷಿ ಉತ್ಪಾದಕ ಸಂಸ್ಥೆಗಳನ್ನು (ಎಫ್ಪಿಒ) ಸೃಷ್ಟಿಸಲಾಗುವುದು. ರೈತರಿಗೆ ಹೆಚ್ಚಿನ ಲಾಭ ಬರುವಂತೆ ರೈತರ ಸಹಕಾರ ಸಂಘಟನೆಗಳ ಮೂಲಕ ತರಕಾರಿ, ಹಣ್ಣು, ಹಾಲು ಮತ್ತು ಮೀನುಗಾರಿಕಾ ಪದಾರ್ಥಗಳನ್ನು ನಗರ ಪ್ರದೇಶಗಳಲ್ಲಿ ನೇರವಾಗಿ ಮಾರುಕಟ್ಟೆಗೆ ತರುವ ನಿಟ್ಟಿನಲ್ಲಿ ಕೆಲಸ ಮಾಡಲಾಗುವುದು.
ಕಾಂಗ್ರೆಸ್ ಪ್ರಣಾಳಿಕೆ : ಕಾಮ್, ದಾಮ್, ಶಾನ್, ಸುಶಾಸನ್, ಸ್ವಾಭಿಮಾನ್ ಮತ್ತು ಸಮ್ಮಾನ್!
ಕೃಷಿ ಮತ್ತು ತಂತ್ರಜ್ಞಾನ
ಕೃಷಿ ತಂತ್ರಜ್ಞಾನಗಳ ಲಭ್ಯತೆಯನ್ನು ಬಾಡಿಗೆ/ಸುಂಕದ ಆಧಾರದಲ್ಲಿ ಪಡೆದುಕೊಳ್ಳಲು ಸಾಧ್ಯವಾಗುವಂತೆ ನೆರವಾಗುವ ಮೊಬೈಲ್ ಆಪ್ ಅಧಾರಿತ ವ್ಯವಸ್ಥೆಯನ್ನು ಸೃಷ್ಟಿಸಲಾಗುವುದು.
* ರೈತರಿಗೆ ಅನುಕೂಲವಾಗುವಂತೆ ಕೃಷಿ ಉತ್ಪನ್ನಗಳ ಮಾರುಕಟ್ಟೆ ದರಗಳ ಜ್ಞಾನ ಒದಗಿಸಲು ತಂತ್ರಜ್ಞಾನಗಳ ಬಳಕೆಯನ್ನು ಹೆಚ್ಚಿಸಲು ಶ್ರಮಿಸಲಾಗುವುದು.
* ಕೃತಕ ಬುದ್ಧಿಮತ್ತೆ, ಯಂತ್ರೋಪಕರಣ ಕಲಿಕೆ, ಬ್ಲಾಕ್ಚೈನ್ ತಂತ್ರಜ್ಞಾನ, ಬಿಗ್ ಡೇಟಾ ಅನಾಲಿಸಿಸ್ ಮುಂತಾದವುಗಳ ಅನುಕೂಲತೆ ಪಡೆದುಕೊಳ್ಳಲು ಯುವ ಕೃಷಿ ವಿಜ್ಞಾನಿಗಳನ್ನು ಸಿದ್ಧಪಡಿಸಲಾಗುವುದು. ರೈತರಿಗೆ ಹೆಚ್ಚುವರಿ ಆದಾಯದ ಮೂಲವಾಗಿ ಸೌರಶಕ್ತಿ ಬಳಕೆಯನ್ನು ನಾವು ಪರಿಗಣಿಸಿದ್ದೇವೆ. 'ಅನ್ನದಾತ' ಮುಂದೆ 'ಶಕ್ತಿ ದಾತ' ಆಗಿ ಬೆಳೆಯವಂತೆ ಮಾಡಲು ಬೃಹತ್ ಪ್ರಮಾಣದ ಸೌರಶಕ್ತಿ ಕೃಷಿಗೆ ಉತ್ತೇಜನ ನೀಡಲಾಗುವುದು.
ಭೂ ದಾಖಲೆಗಳ ಡಿಜಿಟಲೀಕರಣ
ಆಧಾರ್ ಯೋಜನೆಯ ಮೂಲಕ ತ್ವರಿತಗತಿಯಲ್ಲಿ ಭೂ ದಾಖಲೆಗಳ ಡಿಜಿಟಲೀಕರಣವನ್ನು ಪೂರ್ಣಗೊಳಿಸಲಾಗುವುದು. ಭೂ ಸಂಬಂಧಿ ದಾವೆಗಳ ಪ್ರಮಾಣ ತಗ್ಗಿಸಲು ಮತ್ತು ಭೂ ಒಡೆಯನಿಗೆ ಅಧಿಕೃತತೆ ದೊರಕಲು ಎರಡನೆಯ ಪೀಳಿಗೆಯ ಭೂ ಸುಧಾರಣೆ ಜಾರಿಗೊಳಿಸಲಾಗುವುದು.
ಮತ್ಯ್ಯ ಸಂಪದ ಯೋಜನೆ
ಐಸ್ ಬಾಕ್ಸ್, ಶೈತ್ಯಾಗಾರ, ಐಸ್ ಪ್ಲ್ಯಾಂಟ್ ಇತ್ಯಾದಿ ಮೂಲಸೌಕರ್ಯಗಳು ಮತ್ತು ಮಾರುಕಟ್ಟೆ ಸಾಧನಗಳು ಹಾಗೂ ಸಂಗ್ರಹಾಗಾರಗಳ ಲಭ್ಯತೆಯನ್ನು ಹೆಚ್ಚಿಸಲು 10 ಸಾವಿರ ಕೋಟಿ ಅನುದಾನದೊಂದಿಗೆ 'ಮತ್ಯ್ಯ ಸಂಪದ ಯೋಜನೆ'ಯನ್ನು ಆರಂಭಿಸಲಾಗುವುದು.
ಪಶುಸಂಗೋಪನೆಗೆ ಉತ್ತೇಜನ
ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗುವುದನ್ನು ತಡೆಯಲು ರಾಷ್ಟ್ರೀಯ ಆಹಾರ ಮತ್ತು ಮೇವು ಯೋಜನೆಯನ್ನು ಜಾರಿಗೊಳಿಸಲಾಗುವುದು. ಜಾನುವಾರಿಗಳಿಗೆ ಸಕಾಲಕ್ಕೆ ಆರೋಗ್ಯ ತಪಾಸಣೆ ನಡೆಸಲು ಮಾದರಿ ಕಾರ್ಯಕ್ರಮ ಆರಂಭಿಸಲಾಗುವುದು.