ರಾಹುಲ್ ಗೆ ಪ್ರತಿಷ್ಠೆಯ ಕಣವಾಗಿರುವ 'ಅಮೇಥಿ' ಲೋಕಸಭಾ ಕ್ಷೇತ್ರ
Recommended Video
ಮಧ್ಯ ಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್ ಗಢದಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಗೆದ್ದ ನಂತರ ಸಾಕಷ್ಟು ಕಸುವು ತುಂಬಿಕೊಂಡಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಸೆಣಸಲಿರುವ ಲೋಕಸಭಾ ಕ್ಷೇತ್ರ, ಉತ್ತರ ಪ್ರದೇಶದ 'ಅಮೇಥಿ' ಕ್ಷೇತ್ರದಲ್ಲಿ ಈಗ ಎಲ್ಲರ ಕಣ್ಣು ನೆಟ್ಟಿದೆ.
ಸಮಗ್ರ ಮಾಹಿತಿಯುಳ್ಳ ಲೋಕಸಭೆ ಚುನಾವಣೆಯ ವಿಶೇಷ ಪುಟ
ಇಡೀ ಅಮೇಥಿ ಜಿಲ್ಲೆಯನ್ನು ಆವರಿಸಿಕೊಳ್ಳುವ ಈ ಕ್ಷೇತ್ರ ನಿರ್ಮಾಣವಾಗಿದ್ದು 1967ರಲ್ಲಿ. ಅಂದಿನಿಂದ, 1977 ಮತ್ತು 1999ರ ಚುನಾವಣೆಯನ್ನು ಹೊರತುಪಡಿಸಿದರೆ, ಈ ಕ್ಷೇತ್ರದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ತನ್ನ ಪ್ರಭುತ್ವ ಸಾಧಿಸಿದೆ. 1977ರಲ್ಲಿ ಜನತಾ ಪಕ್ಷದ ರವೀಂದ್ರ ಪ್ರತಾಪ್ ಸಿಂಗ್ ಮತ್ತು 1999ರಲ್ಲಿ ಡಾ. ಸಂಜಯ್ ಸಿಂಗ್ ಅವರು ಗೆದ್ದಿದ್ದು ಹೊರತುಪಡಿಸಿದರೆ, ಉಳಿದೆಲ್ಲ ಚುನಾವಣೆಗಳಲ್ಲಿ ಕಾಂಗ್ರೆಸ್ ಜಯದ ಮುದ್ರೆಯನ್ನು ಒತ್ತಿದೆ.
ಅಮೇಥಿಲಿ ರಾಹುಲ್ ವಿರುದ್ಧ ಸ್ಮೃತಿ ಇರಾನಿಗೆ ಶುಭಹಾರೈಸಿದ ಮೋದಿ
ಎಲ್ಲಕ್ಕಿಂತ ಹೆಚ್ಚಾಗಿ ಗಾಂಧಿ ಕುಟುಂಬದ ಕುಡಿಗಳೇ ಇಲ್ಲಿ ಪಾರುಪತ್ಯ ನಡೆಸಿದ್ದಾರೆ. 1980ರಲ್ಲಿ ಸಂಜಯ್ ಗಾಂಧಿ, 1981ರಿಂದ 1991ರವರೆಗೆ ರಾಜೀವ್ ಗಾಂಧಿ ನಾಲ್ಕು ಬಾರಿ, 1999ರಲ್ಲಿ ಸೋನಿಯಾ ಗಾಂಧಿ ಒಂದು ಬಾರಿ ಮತ್ತು ಕಳೆದ ಮೂರು ಚುನಾವಣೆಗಳಿಂದ ರಾಹುಲ್ ಗಾಂಧಿ ಅವರು ಇಲ್ಲಿ ಗೆದ್ದಿದ್ದಾರೆ. 2014ರಲ್ಲಿ ರಾಹುಲ್ ಗಾಂಧಿ ಅವರು ಗೆದ್ದಿದ್ದರೂ, ಅವರಿಗೆ ಕಳೆದ ಬಾರಿಗಿಂತ ಶೇ.25ರಷ್ಟು ಕಡಿಮೆ ಮತಗಳು ಬಂದಿದ್ದವು ಎಂಬುದು ವಿಶೇಷ. ಬಿಜೆಪಿಯಿಂದ ಸ್ಪರ್ಧಿಸಿದ್ದ ಸ್ಮೃತಿ ಇರಾನಿ ಅವರು ಭಾರೀ ಫೈಟ್ ನೀಡಿದ್ದರು.
ಸ್ಮೃತಿ ವಿರುದ್ಧ ರಾಹುಲ್ ಜಯ
ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಸ್ಪರ್ಧೆ ಎಂಬುದೇ ಇರಲಿಲ್ಲ. ಪ್ರತಿಬಾರಿ ಭಾರೀ ಮತಗಳ ಅಂತರದಿಂದ ಗೆಲ್ಲುತ್ತಿದ್ದ ರಾಹುಲ್ ಗಾಂಧಿ ಅವರು 2014ರ ಚುನಾವಣೆಯಲ್ಲಿ ಕೇವಲ ಶೇ.12ರಷ್ಟು ಮತಗಳ ಅಂತರದಿಂದ ಗೆದ್ದಿದ್ದರು. ರಾಹುಲ್ ಗಾಂಧಿ ಅವರಿಗೆ 408,651 ಮತಗಳು ಬಿದ್ದಿದ್ದರೆ, ಬಿಜೆಪಿಯ ಫೈರ್ ಬ್ರಾಂಡ್ ನಾಯಕಿ ಸ್ಮೃತಿ ಇರಾನಿ ಅವರಿಗೆ 300,748 ಬಿದ್ದಿದ್ದವು. ಹಾಗೂಹೀಗೂ 107,903 ಮತಗಳ ಅಂತರದಿಂದ ರಾಹುಲ್ ಜಯ ಸಾಧಿಸಿದ್ದರು. ನಂತರ ಗುಜರಾತ್ ನಿಂದ ರಾಜ್ಯ ಸಭೆಗೆ ಆಯ್ಕೆಯಾಗಿರುವ ಸ್ಮೃತಿ ಇರಾನಿ ಅವರು ಪ್ರಸ್ತುತ ಜವಳಿ ಖಾತೆಯ ಮಂತ್ರಿಯಾಗಿದ್ದಾರೆ.
ಸ್ಮೃತಿ ಇರಾನಿಗೆ ಅಮೇಥಿ ಟಿಕೆಟ್, ರಾಹುಲ್ ಗಾಂಧಿ ವಿರುದ್ಧ ಕಣಕ್ಕೆ
ಗ್ರಾಮೀಣ ಜನಸಂಖ್ಯೆಯೇ ಹೆಚ್ಚು
2,446,937ರಷ್ಟು ಜನಸಂಖ್ಯೆ ಹೊಂದಿರುವ ಈ ಕ್ಷೇತ್ರದಲ್ಲಿ ಶೇ.95.65ರಷ್ಟು ಗ್ರಾಮೀಣ ಜನರೇ ವಾಸವಿದ್ದಾರೆ. ಶೇ.4.35ರಷ್ಟು ಮಾತ್ರ ನಗರ ವಾಸಿಗಳಿದ್ದು, ಶೇ.26.61ರಷ್ಟು ಪರಿಶಿಷ್ಟ ಜಾತಿಯವರಿದ್ದಾರೆ. ಕಳೆದ ಬಾರಿ ಮತದಾನವಾಗಿದ್ದು ಕೂಡ ಕಡಿಮೆಯೆ. ಶೇ.52ರಷ್ಟು ಮಾತ್ರ ಇಲ್ಲಿ ಮತದಾನವಾಗಿತ್ತು. 1,669,843 ಮತದಾರರಲ್ಲಿ ಮತ ಚಲಾವಣೆ ಮಾಡಿದ್ದು 874,625 ಮಾತ್ರ. ಈ ಬಾರಿ ಮತ್ತೆ ಅದೇ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಸ್ಮೃತಿ ಇರಾನಿ ಅವರು ಈಗಾಗಲೇ ಅಲ್ಲಿ ಪ್ರಚಾರ ಆರಂಭಿಸಿದ್ದು, ಮತ್ತೊಮ್ಮೆ ರಾಹುಲ್ ಗಾಂಧಿ ಅವರಿಗೆ ಪ್ರಬಲ ಸವಾಲೊಡ್ಡಿದ್ದಾರೆ.
ಉತ್ತರ ಪ್ರದೇಶ ಬಿಟ್ಟು ಹೊರಬಂದರಷ್ಟೇ ರಾಹುಲ್ ಗಾಂಧಿಗೆ ಚಾನ್ಸ್?
ರಫೇಲ್ ಡೀಲ್ ಹಿಡಿದು ಮತಯಾಚನೆ
ವಿರೋಧ ಪಕ್ಷದ ಪರವಾಗಿ ಆಡಳಿತ ಪಕ್ಷದ ಪ್ರಬಲ ಟೀಕಾಕಾರರಾಗಿರುವ ರಾಹುಲ್ ಗಾಂಧಿ ಅವರು ರಫೇಲ್ ಡೀಲ್ ಆಗಿರಬಹುದು, ರೈತರ ಸಾಲಮನ್ನಾ ಆಗಿರಬಹುದು... ಮುಂತಾದ ವಿಷಯಗಳ ಬಗ್ಗೆ ಪ್ರಸ್ತಾಪಿಸಿದ್ದರೂ ಅವರು ಸಂಸತ್ತಿಗೆ ಅಟೆಂಡೆನ್ಸ್ ಹಾಕಿದ್ದು ಶೇ.51ರಷ್ಟು ಮಾತ್ರ. ಕೇಂಬ್ರಿಜ್ ವಿಶ್ವವಿದ್ಯಾಲಯ ಟ್ರಿನಿಟಿ ಕಾಲೇಜಿನಲ್ಲಿ ಡೆವಲಪ್ಮೆಂಟ್ಸ್ ಎಕಾನಾಮಿಕ್ಸ್ ನಲ್ಲಿ ಎಂಫಿಲ್ ಮಾಡಿರುವ 48 ವರ್ಷದ ರಾಹುಲ್ ಗಾಂಧಿ ಅವರು 2018ರ ಡಿಸೆಂಬರ್ ವರೆಗೆ ಚರ್ಚೆಯಲ್ಲಿ ಪಾಲ್ಗೊಂಡಿದ್ದು 12ರಲ್ಲಿ ಮಾತ್ರ.
ತಿರುಗೇಟು ನೀಡಿದ್ದ ಸ್ಮೃತಿ ಇರಾನಿ
ಅಮೇಥಿಯಲ್ಲಿ ವಿದ್ಯಾರ್ಥಿಗಳೊಂದಿಗೆ ಇತ್ತೀಚೆಗೆ ನಡೆಸಿದ್ದ ಸಂವಾದವೊಂದರಲ್ಲಿ, ಇಲ್ಲಿ ಏನು ಪ್ರಗತಿಯಾಗಿದೆ ಎಂದು ಕೇಳಿದ್ದ ಪ್ರಶ್ನೆಯೊಂದಕ್ಕೆ, ನೀವು ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನೇ ಪ್ರಶ್ನಿಸಬೇಕು ಎಂದು ರಾಹುಲ್ ಗಾಂಧಿ ಉತ್ತರಿಸಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ಸ್ಮೃತಿ ಇರಾನಿ ಅವರು, ಮೊದಲು ಇಲ್ಲಿ ಬಡತನ ತೋರಿಸಲೆಂದು ವಿದೇಶಿಯರನ್ನು ಕರೆಸಲಾಗುತ್ತಿತ್ತು, ಈಗ ಮೋದಿ ಸರಕಾರದಿಂದ ಹೇಗೆ ಅಭಿವೃದ್ಧಿ ಹೊಂದಿದೆ ಎಂದು ತಿಳಿಸಲು ವಿದೇಶಿಯರನ್ನೇ ಕರೆಸಬೇಕು ಎಂದು ಟಾಂಗ್ ನೀಡಿದ್ದರು.
ಗಾಂಧಿ ಕುಟುಂಬದ ಮೇಲೆ ಇನ್ನೂ ಪ್ರೀತಿ
ಏನೇ ಆಗಲಿ, ಇಲ್ಲಿಯ ಜನತೆ ಗಾಂಧಿ ಕುಟುಂಬದ ಮೇಲೆ ಇನ್ನೂ ಪ್ರೀತಿ ಹೊಂದಿದ್ದಾರೆ. ಶೇ.95ರಷ್ಟು ಗ್ರಾಮಸ್ಥರೇ ಇರುವ ಕ್ಷೇತ್ರದಲ್ಲಿ ಇನ್ನೂ ಸಾಕಷ್ಟು ಅಭಿವೃದ್ಧಿ ಕಾಣಬೇಕಿದೆ. ಇಲ್ಲಿ ಫುಡ್ ಪಾರ್ಕ್ ಸ್ಥಾಪಿಸುತ್ತೇನೆ ಎಂದು ರಾಹುಲ್ ಗಾಂಧಿ ವಾಗ್ದಾನ ನೀಡಿದ್ದರೂ ಇನ್ನೂ ಅದು ನೇರವೇರಿಲ್ಲ. ಇಲ್ಲಿ ಸಂಜಯ್ ಗಾಂಧಿ ಆಸ್ಪತ್ರೆ, ಇಂದಿರಾ ಗಾಂಧಿ ಸ್ಕೂಲ್ ಆಫ್ ನರ್ಸಿಂಗ್, ರಾಜೀವ್ ಗಾಂಧಿ ಚಾರಿಟೇಬಲ್ ಟ್ರಸ್ಟ್ ಇದೆಯಾದರೂ ಒಟ್ಟಾರೆಯಾಗಿ ಜನರಿಗೆ ಅನುಕೂಲತೆಗಳಾಗಿಲ್ಲ ಎಂಬುದು ಸಾಮಾನ್ಯ ದೂರು. ಇಲ್ಲಿ ಜನರಿಗಾಗಿ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆಯಾದರೂ ಲಾಭ ನೇರವಾಗಿ ಜನರಿಗೆ ಸಿಗುತ್ತಿಲ್ಲ ಎಂಬುದೂ ಮತ್ತೊಂದು ದೂರು.
ಫುಡ್ ಪಾರ್ಕೂ ಇಲ್ಲ, ಡೇಟಿಂಗ್ ಪಾರ್ಕೂ ಇಲ್ಲ
ಫುಡ್ ಪಾರ್ಕ್ ನಿರ್ಮಾಣ ಅತ್ಲಾಗಿರಲಿ, ಡೇಟಿಂಗ್ ಮಾಡಬೇಕೆಂದರೆ ಇಲ್ಲಿ ಒಂದು ಉತ್ತಮ ಪಾರ್ಕ್ ಕೂಡ ಇಲ್ಲ, ಇನ್ನು ಗರ್ಲ್ ಫ್ರೆಂಡ್ ಇಟ್ಟುಕೊಂಡರೇನು ಪ್ರಯೋಜನ? ಎಂಬುದು ತಮಾಷೆಯ ಮಾತೆನಿಸಿದರೂ ಇದರಲ್ಲಿ ಸತ್ಯಾಂಶವೂ ತುಂಬಿದೆ ಎನ್ನುವುದನ್ನು ಮರೆಯುವ ಹಾಗಿಲ್ಲ. ಈ ಎಲ್ಲ ಅಂಶಗಳಿಂದ ಅಮೇಥಿ ಈ ಬಾರಿ ಭಾರೀ ತುರುಸಿನ ಚುನಾವಣಾ ಕಣವಾಗುವುದರಲ್ಲಿ ಸಂಶಯವೇ ಇಲ್ಲ. ರಾಹುಲ್ ಗಾಂಧಿ ಇಲ್ಲಿ ಗೆಲ್ಲಬೇಕಿರುವುದು ಅವರಿಗೆ ಪ್ರತಿಷ್ಠೆಯ ಪ್ರಶ್ನೆಯೂ ಆಗಿದೆ. ಮೇ 6ರಂದು ಇಲ್ಲಿ ಮತದಾನ ನಡೆಯಲಿದ್ದು, ಮೇ 23ರಂದು ಫಲಿತಾಂಶ ಪ್ರಕಟವಾಗಲಿದೆ.