ಮಲೆನಾಡಿನ ಬಾಲ್ಯ ಅಡಕೆ ಹಾಳೆಯ ದೋಣಿಯಂತೆ ಮುಳುಗುವುದೇ ಇಲ್ಲ!
ಬಾಲ್ಯ ಎಂದರೆ ಹಾಗೆಯೇ ಎಂದಿಗೂ ಮರೆಯಲಾಗದ ನೆನಪು, ಬಾಲ್ಯದ ಸ್ನೇಹಿತರೂ ಕೂಡ ನೆನಪಿನ ಬುತ್ತಿಯ ಒಂದೊಂದು ಎಳೆಯನ್ನು ಬಿಚ್ಚಿದಾಗಲೂ ಕಣ್ಮುಂದೆ ಒಬ್ಬೊಬ್ಬರಾಗಿ ಬರುತ್ತಾರೆ.
ಬಾಲ್ಯ ಎಂದಾಕ್ಷಣ ಮೊದಲ ಪ್ರಶ್ನೆ ಬಾಲ್ಯವನ್ನು ನೆನೆದರೆ ಬಾಲ್ಯ ಮರುಕಳಿಸುವುದೇ, ಆ ಮಳೆ, ಮಣ್ಣಿನ ಅಣೆಕಟ್ಟು ಕಟ್ಟೋದು, ಅಡಕೆ ಹಾಳೆಯ ಪುಟ್ಟ ಮನೆ ಕಟ್ಟೋದು ಈ ಬಾಲ್ಯ ಮತ್ತೊಮ್ಮೆ ಬಂದರೆ ಇನ್ನಷ್ಟು ಎಂಜಾಯ್ ಮಾಡಬಹದಿತ್ತು ಅನ್ಸುತ್ತೆ.
ನಾನು ಬಾಲ್ಯದಲ್ಲಿ ಮೊದಲ ಒಂಬತ್ತು ವರ್ಷ ಮಾತ್ರ ಅಪ್ಪ ಅಮ್ಮನ ಜೊತೆ ಬೆಳೆದೆ ಉಳಿದ ವರ್ಷವೆಲ್ಲ ಅಜ್ಜಿಯ ಮನೆ ಹಾಗೆಂದ ಮಾತ್ರಕ್ಕೆ ಬಾಲ್ಯ ಕಳೆದು ಹೋಗಿಲ್ಲ, ಆದರೆ ಅಪ್ಪ ಅಮ್ಮನೊಂದಿಗೆ ಇಲ್ಲದ ಬಾಲ್ಯವಾಗಿತ್ತು ಅಷ್ಟೆ ಅದೆಲ್ಲಾ ಬಿಡಿ, ಹಳ್ಳಿ ಅಂದ್ಮೇಲೆ ಓದು ಮುಗ್ಸೋವರೆಗೂ ಅಪ್ಪ, ಅಮ್ಮನ ಜೊತೆ ಇರೋಕಾಗಲ್ಲ ಅದು ಎಲ್ಲರಿಗೂ ಗೊತ್ತಿರೋ ವಿಷಯನೆ ಆದರೆ ನಾನು ಮನೆ ಬಿಟ್ಟು ಅಜ್ಜಿ ಮನೆಗೆ ಬರುವಾಗ ನನ್ನ ತಂಗಿಗಿನ್ನು ಎರಡು ವರ್ಷ ಅವಳನ್ನ ಬಿಟ್ಟು ಹೋಗ್ಬೇಕಲ್ಲ , ಅವಳ ಜತೆ ಆಟ ಆಡೋಕೆ ಆಗಲ್ವಲ್ಲ ಅನ್ನೋದೆ ಬೇಜಾರದ ಸಂಗತಿಯಾಗಿತ್ತು.
ಬಾಲ್ಯದ ನೆನಪು: ಹೊರಗೆ ಮಳೆ, ಒಳಗೆ ಆಹಾ! ಪತ್ರೊಡೆ, ಕಳಲೆ
ಆಗ ಪರೀಕ್ಷೆಗಳೆಲ್ಲ ಮುಗಿದ ದಿನ ಹಬ್ಬದಂತೆ ಎನಿಸುತ್ತಿತ್ತು, ಏಕೆಂದರೆ ಆಟ ಆಡಲು ಅಡ್ಡಿ ಇಲ್ಲವಲ್ಲ ಅದಕ್ಕೆ, ಮಳೆಗಾಲ ಎಂದರೆ ಸಾಕು ಕೆಸರಿನಲ್ಲೇ ನಮ್ಮ ಆಟಗಳು, ಮೇಷ್ಟ್ರು ಬರೋದು ಒಂದು ಚೂರು ತಡವಾದರೆ ಸಾಕು ಶಾಲೆಯ ಒಳಗೆ ಕಿಟಕಿಗಳ ಮೇಲೆ ಹತ್ತಿ ಮರಕೋತಿ ಆಟ ಆಡೋದು, ಕಣ್ಣಾ ಮುಚ್ಚಾಲೆ ಆಡೋದು, ಮನೆಗೆ ಬಂದು ಒಂದು ಪುಸ್ತಕ ಹುಡುಕೋಕೆ ಎಲ್ಲವನ್ನೂ ಎಳೆದು ಹಾಕೋದು ಬಯ್ಯುತ್ತಿದ್ದ ಅಮ್ಮನ ಮುಖದಲ್ಲಿ ಇಣುಕುತ್ತಿದ್ದ ಆ ನಗು ನಮ್ಮ ಸಂತೋಷವನ್ನು ಇಮ್ಮಡಿಗೊಳಿಸುತ್ತಿತ್ತು.
ಅಪ್ಪನಿಗೆ ಪೆಪ್ಪರ್ಮೆಂಟ್ ಕೊಡೋಕೆ ಕಾಡಿಗೆ ಹೋಗಿ ದಾರಿ ತಪ್ಪಿದ್ದು
ನನಗೆ ಆಗ ಸುಮಾರು ಏಳು ವರ್ಷ ಇದ್ದಿರಬಹುದು, ಅಪ್ಪ ಅಂದ್ರೆ ನಂಗೆ ಪ್ರಾಣ, ಏನೆ ಇದ್ರು ಅಪ್ಪನಿಗೆ ಕೊಡ್ದೇ ತಿನ್ನೋ ಅಭ್ಯಾಸ ನನ್ನದಲ್ಲ, ಎಲ್ಲವನ್ನೂ ಕೊಟ್ಟು ತಿಂದು ರೂಢಿ, ಹಾಗೆ ಅಪ್ಪ ಪೇಟೆಯಿಂದ ಜೀರಿಗೆ ಪೆಪ್ಪರ್ಮೆಂಟ್ ತಗೊಂಡು ಬಂದಿದ್ರು, ಮರುದಿನ ತಿಂತಾ ಅಮ್ಮನ ಹತ್ರ ಮಾತಾಡ್ತಾ ಕೂತಿದ್ದೆ ಅದ್ಹೇಗೆ ಅಪ್ಪನ ನೆನಪಾಯ್ತೋ ಗೊತ್ತಿಲ್ಲ, ಅಪ್ಪ ಕೊಟ್ಟಿಗೆಗೆ ಸೊಪ್ಪು ತರೋಕೆ ಅಂತಾ ಕಾಡಿಗೆ ಹೋಗಿದ್ರು ಅಪ್ಪಾ ಅಂತಾ ಕೂಗ್ತಾ ತಮ್ಮ ಅಪೂರ್ವನ ಜತೆಗೆ ಕಾಡಿಗೆ ಹೋದೆ.
ಹೋಗೊವಷ್ಟರಲ್ಲಿ ಪೆಪ್ಪರ್ಮೆಂಟ್ ಅರ್ಧ ಕರಗಿ ಹೋಗಿತ್ತು. ಅಪ್ಪ ಸಿಕ್ಕಿದ್ರು ಕೊಟ್ವಿ, ಅವರು ನಾನು ಬರ್ತೀನಿ ನಿಲ್ಲಿ ಅಂದರೂ ಕೇಳಿಲ್ಲ, ಬಂದವ್ರಿಗೆ ಹೋಗೋ ದಾರಿ ಗೊತ್ತಿಲ್ವ ಅಂತ ಹೇಳಿ ಹೊರಟು ದಾರಿ ತಪ್ಪಿಸ್ಕೊಂಡು ನಾಲ್ಕೈದು ಕಿಲೋಮೀಟರ್ ಅಲೆದಾಡಿದ್ವಿ ಕೊನೆಗೆ ಮನೆ ತಲುಪಿ ನಿಟ್ಟುಸಿರು ಬಿಟ್ಟಿದ್ವಿ ಮತ್ತೆ ಆ ತಪ್ಪು ತಿರುಗಿ ಮಾಡಿಲ್ಲ.
ಮಲೆನಾಡಲ್ಲಿ ಜೋರು ಮಳೆಯಂತೆ... ನೆನಪಿನ ದೋಣಿ ತುಂಬ ಸಂಭ್ರಮದ ಸಂತೆ!
ತಂತಿಯನ್ನು ಮಣ್ಣೊಳಗಿಟ್ಟರೆ ವರ್ಷದ ಬಳಿಕ ಅಯಸ್ಕಾಂತ ಆಗುತ್ತಂತೆ?
ತಂತೀನಾ ಮಣ್ಣೊಳಗಿಟ್ಟರೆ ಅಯಸ್ಕಾಂತ ಆಗುತ್ತೆ ಅಂತ ಅದ್ಯಾರು ಕಿವೀಲಿ ಊದಿದ್ರೋ ನೆನಪಿಲ್ಲ, ಮನೆಯಲ್ಲಿರೋ ಟಿವಿ, ತಂತಿ ಬೇಲಿಗೆ ಹಾಕ್ತಿದ್ದ ವಯರ್ ಒಳಗಿರುವ ಎಲ್ಲಾ ತಂತೀನೂ ತೆಗೆದುಬಿಟ್ವಿ, ತಿಂಗಳಿಗೊಮ್ಮೆ ದಿನ ನಿಗದಿ ಮಾಡಿ ಅದು ಅಯಸ್ಕಾಂತ ಆಯ್ತೋ, ಇಲ್ವೋ ಅಂತ ನೋಡ್ತಿದ್ವಿ.
ಆಮೇಲೆ ಇರೋ ವಯರೆಲ್ಲಾ ಹಾಳಾಗಿದ್ದು ನೋಡಿ ಮನೆಲಿ ಮೊದಲು ಇಲಿಕಾಟ ಅಂದ್ಕೊಂಡಿದ್ರು, ನಂತರ ನಮ್ಮ ಕಾಟ ಅಂತ ಗೊತ್ತಾದ್ಮೇಲೆ ಸರಿಯಾಗಿ ಒದೆ ತಿಂದಿದ್ದು ಈ ಎಲ್ಲಾ ನೆನಪುಗಳು ಸದಾ ಕಾಡುತ್ತಲೇ ಇರುತ್ತೆ.
'ಸದಾ' ಬಾಲ್ಯದ ನೆನಪು : ಕಳ್ಳಾಟ ಒಳ್ಳೇವ್ರಿಗಲ್ಲ..!
ಅಡಕೆ ಹಾಳೆಯ ಗೂಡು, ಅಮ್ಮನಿಗೆ ಮೊದಲ ಬಾಗಿನ
ತೋಟದಲ್ಲಿರುವ ಅಡಕೆ ಹಾಳೆ ಬಳಸಿ ಕಟ್ಟಿಗೆಯನ್ನ ಮಣ್ಣಿನೊಳಗೆ ಊರಿ ಅದರಿಂದ ಪುಟ್ಟ ಮನೆ ಮಾಡೋದು, ಅದಕ್ಕೆ ಮೊದಲು, ಕೊನೆಯ ಅತಿಥಿ ಅಮ್ಮ, ಮನೆಯಲ್ಲಿ ಮಾಡಿರೋ ಪದಾರ್ಥನೇ ಕೊಟ್ಟು, ಮನೆಯಲ್ಲಿರುವ ಸೀರೆಯನ್ನೇ ತಂದು ಅಮ್ಮನಿಗೆ ಬಾಗಿನ ಕೊಡೋದು ಅಮ್ಮ ಯಾವುದಕ್ಕೂ ಬೇಜಾರು ಮಾಡ್ಕೊಳ್ದೆ ನಮ್ಮ ಜೊತೆಯಲ್ಲೇ ಆ ಪುಟ್ಟ ಮನೆಲೆ ಗಂಟೆಗಟ್ಟಲೆ ಕೂರೋದು ಇದೆಲ್ಲಾ ಮತ್ತೆ ನೆನಪಾದರೆ ಬಾಲ್ಯ ಮತ್ತೆ ಬರಬಾರದಾ ಎನ್ನಿಸುತ್ತೆ.
ಕೊರಟು ಗಾಡಿ, ಅಜ್ಜನ ಬೈಗುಳ, ತಮ್ಮನ ಜೊತೆ ಮಾತಬಿಟ್ಟಿದ್ದು
ನನಗೆ ಮತ್ತೆ ನನ್ನ ದೊಡ್ಡಪ್ಪನ ಮಗ ಅಪೂರ್ವ ನಮ್ಮಿಬ್ಬರಿಗೂ ಮರದ ಗಾಡಿ ಆಟ ಆಡೋ ಹುಚ್ಚು, ಆಗ ಸೈಕಲ್ ಇರಲಿಲ್ಲ, ಗೊಂಬೆಗಳಿರಲಿಲ್ಲ ಆಡೋಕೆ ಏನೂ ಇರ್ತಿರ್ಲಿಲ್ಲ, ಆಗ ಮರದ ಕೋಲೊಂದನ್ನು ಮಾಡಿಕೊಂಡು ಅದಕ್ಕೆ ಚಕ್ರವನ್ನು ನಾವೇ ತಯಾರು ಮಾಡಿ ಆಡ್ತಿದ್ವಿ ಆದರೆ ಅದು ತುಂಬಾ ಕೆಟ್ಟದಾಗಿ ಶಬ್ದ ಮಾಡ್ತಿತ್ತು ಎಲ್ಲರಿಗೂ ಕಿರಿಕಿರಿ ಆಗ್ತಿದ್ದು ಸತ್ಯ, ಆಗ ಅಜ್ಜ ಬಂದು ಆ ಗಾಡಿನ ಮುರಿದು ಎಸೆದು ಬಿಟ್ಟಿದ್ರು ಆಗಿನಿಂದ ಸ್ವಲ್ಪ ದಿನ ತಮ್ಮನ ಜೊತೆ ಮಾತೂ ಬಿಟ್ಟಿದ್ದೆ ಅವರ ಮನೆಗೆ ಹೋಗೋದು ಬಿಟ್ಟಿದ್ದೆ.
ಪುಟ್ಟ ಆಕ್ಸಿಡೆಂಟ್, ಕಾಲ ಹಿಮ್ಮಡಿ ಇಲ್ದೆ ಇದ್ರು ಆಟ ಮಾತ್ರ ಬಿಟ್ಟಿರರ್ಲಿಲ್ಲ
ಚಿಕ್ಕಪ್ಪನ ಬೈಕ್ ಮೇಲೆ ಹೊಗ್ತಾ ಪುಟ್ಟ ಅಪಘಾತ ಒಂದು ಆಗಿತ್ತು ನಂತರ ಕಾಲ ಹಿಮ್ಮಡಿಯೇ ಇಲ್ಲದಾಗಿತ್ತು, ಆಸ್ಪತ್ರೆಗೆ ಹೋಗಿ ಬ್ಯಾಂಡೇಜ್ ಹಾಕಿಸ್ಕೊಂಡು ಮನೆಗೆ ಇನ್ನು ಕಾಲಿಟ್ಟಿಲ್ಲ, ಅಲ್ಲಿ ಡಾಕ್ಟರ್ ಆಸ್ಪತ್ರೆಯಲ್ಲಿ ನನ್ನ ಹಠಕ್ಕೆ ಆಟ ಆಡೋಕೆ ಕೊಟ್ಟಿದ್ದ ಸಿರಿಂಜ್, ಗ್ಲೂಕೋಸ್ ಬಾಟಲಿ ಹಿಡ್ದು ತೆವಳುತ್ತಾ ಪಕ್ಕದ ಮನೆಗೆ ಹೋಗಿದ್ದು, ಅಲ್ಲಿ ಅಣ್ಣ, ತಮ್ಮಂದಿರೊಂದಿಗೆ ಆಡಿ ಖುಷಿ ಪಟ್ಟಿದ್ದೆ.ನನ್ನ ನೋವನ್ನು ಮರೆತಿದ್ದೆ.
ಬಾಲ್ಯದ ಅದೆಷ್ಟೋ ದಿನಗಳು ಮತ್ತೆ ಬರಲಾರದು ಆದರೆ ಆ ದಿನಗಳು ಮನದಲ್ಲಿ ಶಾಶ್ವತವಾಗಿರುತ್ತದೆ. ಗಡಿಬಿಡಿಯ ಜಂಜಾಟದ ಈ ಜೀವನದಲ್ಲೂ ಆ ನೆನಪುಗಳು ಒಂದು ರೀತಿಯ ನೆಮ್ಮದಿಯನ್ನು ತರುತ್ತವೆ.