ಸುಪ್ರೀಂ ತೀರ್ಪಿನ ಬಗ್ಗೆ ತಕರಾರಿಲ್ಲವೆಂದ ಮೂಲ ಅರ್ಜಿದಾರ ಟೈಲರ್!
ದೇಶದ ಜನತೆಯ ಕುತೂಹಲ ಕೆರಳಿಸಿದ್ದ ಆಯೋಧ್ಯೆಯ ರಾಮ ಜನ್ಮಭೂಮಿ ಭೂ ವಿವಾದ ಇತ್ಯರ್ಥಗೊಂಡಿದೆ. ಅಯೋಧ್ಯೆಯಲ್ಲಿರುವ ರಾಮಜನ್ಮ ಭೂಮಿ ಆಸ್ತಿ ಹಕ್ಕು ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟಿನ ಸಾಂವಿಧಾನಿಕ ನ್ಯಾಯಪೀಠವು ಶನಿವಾರ(ನವೆಂಬರ್ 09) ಬೆಳಗ್ಗೆ ಅಂತಿಮ ತೀರ್ಪು ಪ್ರಕಟಿಸಿದೆ. ವಿವಾದಿತ ಭೂಮಿ ಮಂದಿರಕ್ಕೆ, ಮಸೀದಿಗೆ ಪ್ರತ್ಯೇಕ ಜಾಗ ಹಂಚಿಕೆ ಮಾಡಿ ತೀರ್ಪು ನೀಡಲಾಗಿದೆ.
ವರ್ಷಾನುವರ್ಷದಿಂದ ಕಗ್ಗಂಟಾಗಿದ್ದ ಈ ಸಿವಿಎಲ್ ಕೇಸಿಗೆ ಸಂಬಂಧಿಸಿದಂತೆ ತಕರಾರು ಅರ್ಜಿ ಸಲ್ಲಿಸಿದ್ದ ಅಯೋಧ್ಯಾ ನಿವಾಸಿ ದರ್ಜಿ ಕುಟುಂಬಸ್ಥರು ಸುಪ್ರೀಂಕೋರ್ಟಿನ ತೀರ್ಪನ್ನು ಸ್ವಾಗತಿಸಿದ್ದಾರೆ.
ಸುಪ್ರೀಂ ತೀರ್ಪು: ಅಯೋಧ್ಯಾ ಭೂ ವ್ಯಾಜ್ಯ ಅಂತ್ಯ, ಮಂದಿರ-ಮಸೀದಿಗೆ ಹಂಚಿಕೆ
ಅಯೋಧ್ಯಾ ಭೂ ವಿವಾದ, ಆಸ್ತಿ ಹಂಚಿಕೆ ಕುರಿತಂತೆ ಅರ್ಜಿ ಸಲ್ಲಿಸಿದವರ ಪೈಕಿ ಸ್ವತಂತ್ರವಾಗಿ ಮೊದಲಿಗೆ ತಕರಾರು ಅರ್ಜಿ ಸಲ್ಲಿಸಿದವರು ಮೊಹಮ್ಮದ್ ಫರೂಕ್. ಫರೂಕ್ ಬಿಟ್ಟರೆ ಮೂಲ ಅರ್ಜಿದಾರರೆಂದರೆ ಇಕ್ಬಾಲ್ ಅನ್ಸಾರಿ ಅವರ ತಂದೆ ಹಶೀಂ ಅನ್ಸಾರಿ. ಅನ್ಸಾರಿ ಅವರು 2016ರಲ್ಲಿ ನಿಧನರಾದರು. ಅವರ ಪುತ್ರ ಅಪ್ಪನ ಟೈಲರಿಂಗ್ ವೃತ್ತಿ ಮಾಡಿಕೊಂಡು ಬಾಬ್ರಿ ಮಸೀದಿಯ ಅನತಿ ದೂರದಲ್ಲೇ ನೆಲೆಸಿದ್ದರು. ಇಂದು ಸುಪ್ರೀಂಕೋರ್ಟ್ ತೀರ್ಪನ್ನು ಟಿವಿಯಲ್ಲಿ ಕಂಡ ಇಕ್ಬಾಲ್ ಅವರು ಪಿಟಿಐ ಜೊತೆ ಮಾತನಾಡಿ, ನಾವು ಸುಪ್ರೀಂಕೋರ್ಟ್ ತೀರ್ಪನ್ನು ಸ್ವಾಗತಿಸುತ್ತೇವೆ. ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವುದಿಲ್ಲ ಎಂದಿದ್ದಾರೆ.
ಸುಪ್ರೀಂ ತೀರ್ಪನ್ನು ಗೌರವಿಸುತ್ತೇವೆ: ಇಕ್ಬಾಲ್ ಅನ್ಸಾರಿ
ಅಯೋಧ್ಯಾ ಪ್ರಕರಣದಲ್ಲಿ ಸುಪ್ರೀಂನಿಂದ ಅಂತಿಮ ತೀರ್ಪು ಬಂದಿರುವುದು ಅಯೋಧ್ಯಾ ನಿವಾಸಿಯಾಗಿ ನನಗೆ ನೆಮ್ಮದಿ ತಂದಿದೆ. ಬಹುಕಾಲದಿಂದ ವಿಚಾರಣೆ ಹಂತದಲ್ಲೇ ಮುಂದುವರೆದಿದ್ದ ಈ ಪ್ರಕರಣವು ಅಂತ್ಯಗೊಂಡಿದ್ದು ದೊಡ್ಡ ಸಂತಸದ ವಿಷ್ಯವಾಗಿದೆ ಎಂದರು.
ಸುಪ್ರೀಂ ತೀರ್ಪನ್ನು ಗೌರವಿಸುತ್ತೇವೆ, ಸರ್ಕಾರವು ತನ್ನ ಹೊಣೆಯನ್ನು ಅರಿತು ಮಸೀದಿಗೆ ಸೂಕ್ತ ಜಾಗವನ್ನು ನೀಡಿದರೆ, ಮುಸ್ಲಿಮರಿಗೂ ವಿಜಯ ಸಿಕ್ಕಂತಾಗುತ್ತದೆ ಎಂದು ಹೇಳಿದರು.
1949ರಲ್ಲಿ ಕೇಸು ಹಾಕಿದ್ದ ಅಯೋಧ್ಯಾ ನಿವಾಸಿಗಳು
1528ರಲ್ಲಿ ಸ್ಥಾಪನೆಯಾದ ಬಾಬರ್ ಮಸೀದಿ ಇರುವ ಸ್ಥಳವು 1885ರಲ್ಲಿ ಮೊದಲ ಬಾರಿಗೆ ಭೂಮಿ ಆಸ್ತಿ ಹಕ್ಕು ವ್ಯಾಜ್ಯ ಕೋರ್ಟ್ ಮೇಟ್ಟಿಲೇರಿತ್ತು. ಅಂದಿನಿಂದ ಮೊದಲುಗೊಂಡು ಆರಂಭವಾದ ರಾಮಜನ್ಮಭೂಮಿ, ಬಾಬ್ರಿ ಮಸೀದಿ ವಿವಾದ ಇಂದಿನ ತನಕ ಪರಿಹಾರ ಕಾಣದಂತೆ ನಡೆದುಕೊಂಡು ಬಂದಿತ್ತು. ಪರಸ್ಪರ ಮಾತುಕತೆ ಮೂಲಕ ಸಮಸ್ಯೆಗೆ ಇತ್ಯರ್ಥ ಹಾಡಿ ಎಂದು ಸುಪ್ರೀಂಕೋರ್ಟ್ ಸೂಚಿಸಿತ್ತು. ಆದರೆ, ಕೇಸ್ ಮತ್ತೆ ಮತ್ತೆ ಬೇರೆ ಬೇರೆ ರೂಪದಲ್ಲಿ ಹಲವರನ್ನು ಕಾಡಿತ್ತು. ಭೂ ವ್ಯಾಜ್ಯದ ಸಿವಿಲ್ ಕಟ್ಲೆ ಅಲ್ಲದೆ, ಬಾಬ್ರಿ ಮಸೀದಿ ಧ್ವಂಸ ಪ್ರಕರಣವೂ ವರ್ಷಗಳ ಕಾಲ ಮೀರಿ ವಿಚಾರಣೆ ನಡೆದಿತ್ತು. ಸದ್ಯ ಭೂ ವಿವಾದ ಅಂತ್ಯ ಕಂಡಿದ್ದರೆ, ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ವಿಚಾರಣೆ ಮುಗಿದಿದ್ದು ಸಿಬಿಐ ವಿಶೇಷ ನ್ಯಾಯಾಲಯವು ಅಂತಿಮ ತೀರ್ಪು ನೀಡಲಿದೆ.
ಅಯೋಧ್ಯಾ ತೀರ್ಪು: ಗಮನಿಸಬೇಕಾದ ಕುತೂಹಲಕಾರಿ 10 ಸಂಗತಿಗಳು
ವಿವಾದಿತ ಪ್ರದೇಶಕ್ಕೆ ಬೇಲಿ ಹಾಕಿದ್ದ ಬ್ರಿಟಿಷ್ ಆಡಳಿತ
ವಿವಾದಿತ ಪ್ರದೇಶಕ್ಕೆ ಬೇಲಿ ಹಾಕಿದ ಬ್ರಿಟಿಷ್ ಆಡಳಿತ. ಒಳಾಂಗಣ ಭಾಗ ಮುಸ್ಲಿಮರಿಗೆ ಹಾಗೂ ಹೊರಾಂಗಣ ಭಾಗ ಹಿಂದೂಗಳಿಗೆ ಎಂದು ಹಂಚಿಕೆ. 1885: ಹಿಂದೂಗಳಿಗೆ ಹಂಚಿಕೆಯಾಗಿದ್ದ ಹೊರಾಂಗಣ ಭಾಗದಲ್ಲಿ ರಾಮ ಮಂದಿರ ನಿರ್ಮಿಸಲು ಮಹಂತ ರಘುವೀರ್ ದಾಸ್ ರಿಂದ ನಿರಾಕರಣೆ.
1949: ಮಸೀದಿಯೊಳಗೆ ಶ್ರೀರಾಮನ ಪ್ರತಿಮೆ ಕಾಣಿಸಿಕೊಂಡು ಎಲ್ಲರ ಹುಬ್ಬೇರಿಸಿತ್ತು. ಹಿಂದೂಗಳು ತಂದಿಟ್ಟಿದ್ದಾರೆ ಎಂದು ಮುಸ್ಲಿಮರಿಂದ ದೂರು. ಪ್ರಕರಣ ಕೋರ್ಟ್ ಮೆಟ್ಟಿಲೇರುತ್ತಿದ್ದಂತೆ ಎಚ್ಚೆತ್ತುಕೊಂಡ ಸರ್ಕಾರ ಗೇಟ್ ಬೀಗ ಹಾಕಿ ಜಡೆಯಿತು. 1949ರಲ್ಲಿ ಕೇಸು ಹಾಕಿದ್ದ ಏಳು ಮಂದಿ ಅಯೋಧ್ಯಾ ನಿವಾಸಿಗಳ ಪೈಕಿ ಹಿರಿಯರಾದ ಅರ್ಜಿದಾರ ಮೊಹಮ್ಮದ್ ಫರೂಕ್, ಮೊಹಮ್ಮದ್ ಹಶೀಂ ಅನ್ಸಾರಿ ನಿಧನರಾಗಿದ್ದಾರೆ. ಅನ್ಸಾರಿ ಪುತ್ರ ಇಕ್ಬಾಲ್ ಅವರು ಯಾವುದೇ ತಕರಾರಿಲ್ಲ ಎಂದಿದ್ದಾರೆ.
ಅಯೋಧ್ಯಾ ಭೂ ವಿವಾದ ಅಂತಿಮ ತೀರ್ಪು
ಜಸ್ಟೀಸ್ ಬೊಬ್ಡೆ ಅವರಲ್ಲದೆ, ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್, ಜಸ್ಟೀಸ್ ಚಂದ್ರಚೂಡ್, ಜಸ್ಟೀಸ್ ಭೂಷಣ್, ಜಸ್ಟೀಸ್ ಅಬ್ದುಲ್ ನಜೀರ್ ಅವರನ್ನೊಳಗೊಂಡ ನ್ಯಾಯಪೀಠವು, ಶನಿವಾರ(ನವೆಂಬರ್ 09)ದಂದು ನ್ಯಾಯಾಲಯಕ್ಕೆ ರಜೆ ಇದ್ದರೂ ಕಾರ್ಯ ನಿರ್ವಹಿಸಿ, ವಿವಾದಿತ ಭೂ ಭಾಗವನ್ನು ರಾಮಜನ್ಮಭೂಮಿ ನ್ಯಾಸ್ ಗೆ ಮಸೀದಿ ನಿರ್ಮಾಣಕ್ಕಾಗಿ 5 ಎಕರೆ ಪ್ರತ್ಯೇಕ ನೀಡುವಂತೆ ಸರ್ಕಾರಕ್ಕೆ ಸೂಚಿಸಿದೆ. ಜೊತೆಗೆ ಟ್ರಸ್ಟ್ ಸ್ಥಾಪಿಸಲು ಕೇಂದ್ರ ಸರ್ಕಾರಕ್ಕೆ ಗಡುವು ನೀಡಲಾಗಿದೆ
ಅಯೋಧ್ಯಾ ತೀರ್ಪಿನ ವೇಳೆ ಸಿಜೆಐ ಉಲ್ಲೇಖಿಸಿದ ಅಂಶಗಳೇನು?
ತೀರ್ಪು ಅರ್ಜಿದಾರರಿಗೆ ಒಮ್ಮತವಾಗದಿದ್ದರೆ ಏನಾಗುತ್ತಿತ್ತು?
ಪಂಚ ಸದಸ್ಯರ ನ್ಯಾಯಪೀಠದ ನೇತೃತ್ವ ವಹಿಸಿರುವ ನ್ಯಾ. ರಂಜನ್ ಗೊಗಾಯ್ ಅವರು ನಿವೃತ್ತರಾದ ಬಳಿಕವೂ ಅಂತಿಮ ತೀರ್ಪು ಹೊರಬೀಳದೆ ವಿಚಾರಣೆ ಮುಂದುವರೆಸಬಹುದು ಎಂಬ ಸುದ್ದಿಯೂ ಹರಿದಾಡಿತ್ತು. ಆದರೆ, ಈ ನ್ಯಾಯಪೀಠದಿಂದಲೇ ತೀರ್ಪು ಬಂದಿದೆ. ಒಂದು ವೇಳೆ ಮೂಲ ತಕರಾರು ಅರ್ಜಿದಾರರು ತೀರ್ಪನ್ನು ಒಪ್ಪದೆ, ಮೇಲ್ಮನವಿ ಸಲ್ಲಿಸಿದ್ದರೆ, ಹೊಸ ನ್ಯಾಯಪೀಠವನ್ನು ಪುನರ್ ರಚಿಸಿ, ಮತ್ತೊಮ್ಮೆ ವಿಚಾರಣೆ ನಡೆಸಬೇಕಾಗಿತ್ತು ಅಥವಾ ಸುಪ್ರೀಂಕೋರ್ಟಿನ ನಿರ್ದೇಶನದಂತೆ ಮೂವರು ಸದಸ್ಯರ ಸಂಧಾನಕಾರರ ಜೊತೆ ಮತ್ತೊಮ್ಮೆಈ ಭೂ ವ್ಯಾಜ್ಯವನ್ನು ಇತ್ಯರ್ಥ ಪಡಿಸಿಕೊಳ್ಳುವ ಮಾರ್ಗವೂ ಇತ್ತು.