ಮೈಸೂರು; ಇದುವರೆಗೆ ಕುಸಿದ ಪಾರಂಪರಿಕ ಕಟ್ಟಡಗಳು
ಮೈಸೂರು ನಗರದಲ್ಲೀಗ ಮಳೆ ಸುರಿದರೆ ಬೆಚ್ಚಿ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಾರಣ ನಗರದಲ್ಲಿ ಸರ್ಕಾರಿ ಮತ್ತು ಖಾಸಗಿ ಒಡೆತನದಲ್ಲಿ ಪಾರಂಪರಿಕ ಹಾಗೂ ಹಳೆಯ ಕಟ್ಟಡಗಳಿದ್ದು, ಕೆಲವು ಕಟ್ಟಡಗಳು ನಿರ್ವಹಣೆಯಲ್ಲಿದ್ದರೆ, ಮತ್ತೆ ಕೆಲವು ಶಿಥಿಲಾವಸ್ಥೆಯಲ್ಲಿವೆ. ಹೀಗಾಗಿ ಅವು ಯಾವಾಗ ಕುಸಿದು ಬೀಳುತ್ತವೆಯೋ? ಎಂಬ ಭೀತಿ ಕಾಡುತ್ತಿದೆ.
ಹಾಗೆ ನೋಡಿದರೆ ಮೈಸೂರು ಪಾರಂಪರಿಕ ನಗರವಾಗಿದ್ದು, ಇಲ್ಲಿರುವ ಕಟ್ಟಡಗಳು ಇಲ್ಲಿನ ಸಂಸ್ಕತಿಯ ಪ್ರತೀಕವಾಗಿದ್ದು, ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನಸೆಳೆಯುವುದರೊಂದಿಗೆ ಅವು ಮೈಸೂರಿನ ಹಿರಿಮೆಯಾಗಿವೆ.
ವಿಡಿಯೋ: ಭಾರೀ ಮಳೆಗೆ ಕುಸಿಯುವ ಹಂತ ತಲುಪಿದ ಮೈಸೂರು ಅರಮನೆ ಛಾವಣಿ
ನಗರದ ಬಹಳಷ್ಟು ಬಡಾವಣೆಗಳಲ್ಲಿ ಮೈಸೂರು ರಾಜರ ಕಾಲದಲ್ಲಿ ನಿರ್ಮಾಣಗೊಂಡ ಬೃಹತ್ ಬಂಗಲೆಗಳಿದ್ದು ಅವುಗಳಲ್ಲಿ ಜನ ವಾಸ ಮಾಡುತ್ತಿದ್ದಾರೆ. ಕೆಲವು ಕಟ್ಟಡಗಳು ಸುಸ್ಥಿತಿಯಲ್ಲಿದ್ದರೆ, ಮತ್ತೆ ಕೆಲವು ಶಿಥಿಲಾವಸ್ಥೆಗೆ ತಲುಪಿವೆ. ಇಂತಹ ಕಟ್ಟಡಗಳಲ್ಲಿ ವಾಸ ಮಾಡುವವರಿಗೆ ಈಗ ಭೀತಿ ಶುರುವಾಗಿದೆ.
ಸಾಮಾನ್ಯವಾಗಿ ಮೊದಲೆಲ್ಲ ಮಳೆ, ಗಾಳಿ ಬಂದರೆ ನಗರದಲ್ಲಿ ಮರಗಳು ಮುರಿದು ಬೀಳುತ್ತಿದ್ದವು. ಆದರೆ ಈಗ ಅಲ್ಲಲ್ಲಿ ಕಟ್ಟಡ ಕುಸಿದು ಬೀಳುತ್ತಿರುವ ಘಟನೆಗಳು ನಡೆಯುತ್ತಿರುವುದು ಭಯವನ್ನುಂಟು ಮಾಡಿದೆ. ಇದುವರೆಗೆ ಮಳೆ ಮತ್ತು ಗಾಳಿಗೆ ಕಳೆದ ಒಂದು ದಶಕದ ಅವಧಿಯಲ್ಲಿ ಸುಮಾರು ಆರು ಕಟ್ಟಡಗಳ ಕೆಲ ಭಾಗಗಳು ಕುಸಿದು ಬಿದ್ದಿದ್ದು, ಇನ್ನು ಹಲವು ಕಟ್ಟಡಗಳ ಭಾಗಗಳು ಯಾವಾಗ ಬೇಕಾದರೂ ಕುಸಿದು ಬೀಳಬಹುದು ಎಂಬ ದುಸ್ಥಿತಿಯಲ್ಲಿರುವುದನ್ನು ನಾವು ಕಾಣಬಹುದಾಗಿದೆ.
ಶಿವರಾಮ ಕಾರಂತ ಬಡಾವಣೆ ಕಟ್ಟಡ ಮಾಲೀಕರಿಗೆ ಸಂತಸದ ಸುದ್ದಿ
10 ವರ್ಷಗಳು ಕಳೆದಿವೆ
ನಗರದ ಹೃದಯಭಾಗದಲ್ಲಿದ್ದ ಲ್ಯಾನ್ಸ್ ಡೌನ್ ಕಟ್ಟಡದ ಭಾಗ ಕುಸಿದು ಬಿದ್ದು ಬರೋಬ್ಬರಿ ಹತ್ತು ವರ್ಷವಾಗಿದ್ದು, ಇಲ್ಲಿಯವರೆಗೆ ಕಟ್ಟಡ ವಿಚಾರದಲ್ಲಿ ತಾರ್ಕಿಕ ಅಂತ್ಯಕ್ಕೆ ಯಾರು ಬಂದಿಲ್ಲ. ಆ ಕಟ್ಟಡವನ್ನು ಉಳಿಸಿಕೊಳ್ಳಬೇಕೇ? ಅಥವಾ ತೆರವು ಗೊಳಿಸಿ ಅದೇ ರೀತಿಯ ಕಟ್ಟಡವನ್ನು ಕಟ್ಟಬೇಕೇ? ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಒಮ್ಮತ ಮೂಡದ ಕಾರಣದಿಂದಾಗಿ ಕಳೆದ ಹತ್ತು ವರ್ಷಗಳಿಂದ ಭೂತಬಂಗಲೆಯಂತೆ ನಿಂತಿದ್ದು ಯಾವಾಗ ಕುಸಿದು ಬೀಳುತ್ತದೆಯೋ? ಎಂಬ ಭಯ ಸುತ್ತಮುತ್ತ ಇರುವ ವ್ಯಾಪಾರ ಮಾಡುವವರನ್ನು ಕಾಡುತ್ತಿದೆ.
ಈ ಕಟ್ಟಡವು ಕಳೆದ ಹತ್ತು ವರ್ಷಗಳ ಹಿಂದೆ ಪ್ರಮುಖ ವಾಣಿಜ್ಯ ವಹಿವಾಟಿನ ಕೇಂದ್ರವಾಗಿತ್ತು. ಇಲ್ಲಿನ ಮಳಿಗೆಗಳು ಪುಸ್ತಕ ವ್ಯಾಪಾರಗಳ ಕೇಂದ್ರ ಬಿಂದುವಾಗಿತ್ತು. ಆದರೆ 2012 ರಲ್ಲಿ ಇದರ ಒಂದು ಭಾಗ ಕುಸಿದು ಬಿತ್ತು. ಆ ನಂತರ ಅಲ್ಲಿದ್ದ ವ್ಯಾಪಾರಸ್ಥರನ್ನು ತೆರವುಗೊಳಿಸಿ ಪ್ರವೇಶವನ್ನು ನಿರ್ಬಂಧಿಸಲಾಯಿತು. ಅಲ್ಲಿಂದ ಇಲ್ಲಿ ತನಕ ಅದು ಭೂತಬಂಗಲೆಯಂತೆ ಉಳಿದಿದೆ.
ದೇವರಾಜ ಮಾರುಕಟ್ಟೆ
ಇನ್ನು 2016ರಲ್ಲಿ ದೇವರಾಜ ಮಾರುಕಟ್ಟೆ ಕಟ್ಟಡದ ಒಂದು ಭಾಗ ಕುಸಿದು ಬಿದ್ದಿತ್ತು. ದೇವರಾಜ ಮಾರುಕಟ್ಟೆ ವಿಚಾರದಲ್ಲಿಯೂ ಬೇಕು ಬೇಡಗಳ ವಿರೋಧಗಳು ವ್ಯಕ್ತವಾಗುತ್ತಿವೆ. ಕಟ್ಟಡ ಭದ್ರವಾಗಿದ್ದು ಅದನ್ನು ಮೂಲ ಹೇಗಿದೆಯೋ ಹಾಗೆಯೇ ಅಭಿವೃದ್ಧಿಗೊಳಿಸುವಂತೆ ಒತ್ತಾಯಗಳು ಕೇಳಿ ಬರುತ್ತಿದೆ. ಈಗಲೂ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟುಗಳು ನಡೆಯುತ್ತಿದ್ದು, ಕಟ್ಟಡದ ಕೆಲವು ಭಾಗಗಳು ಶಿಥಿಲಾವಸ್ಥೆಯಲ್ಲಿದ್ದು ಅದಕ್ಕೆ ಕಾಯಕಲ್ಪ ನೀಡುವ ಕಾರ್ಯ ಮಾತ್ರ ನಡೆಯುತ್ತಿಲ್ಲ.
ದೊಡ್ಡ ಗಡಿಯಾರ -ವಾಣಿ ವಿಲಾಸ ಕಟ್ಟಡ ಶಿಥಿಲ
ಇದಾದ ನಂತರ 2019ರಲ್ಲಿ ಅಗ್ನಿಶಾಮಕ ಠಾಣೆಯ ಕಟ್ಟಡದ ಸ್ವಾಗತ ಕಮಾನು ಕುಸಿದು ಬಿದ್ದಿತು. ಆ ಬಗ್ಗೆ ತಲೆಕೆಡಿಸಿಕೊಂಡಂತೆ ಕಾಣಿಸುತ್ತಿಲ್ಲ. ಕಳೆದ ವರ್ಷ ಅಂದರೆ 2021ರ ನವೆಂಬರ್ ನಲ್ಲಿ ಮಾನಸಗಂಗೋತ್ರಿಯ ಜಯಲಕ್ಷ್ಮೀ ವಿಲಾಸ ಅರಮನೆ ಚಾವಣಿ ಕುಸಿದಿತ್ತು. ಪ್ರಸಕ್ತ ವರ್ಷ ನಗರದ ಕೆ.ಆರ್. ಆಸ್ಪತ್ರೆಯ ಕಟ್ಟಡದ ಒಂದು ಭಾಗ ಶಿಥಿಲಗೊಂಡು ಹಾನಿಯಾಗಿದ್ದರೆ ಮೈಸೂರಿನ ಹೆಮ್ಮೆಯ ದೊಡ್ಡ ಗಡಿಯಾರ ಹಾಗೂ ವಾಣಿ ವಿಲಾಸ ಕಟ್ಟಡವೂ ಶಿಥಿಲಾವಸ್ಥೆಗೆ ತಲುಪಿದ್ದು, ವಿವಿ ಮಾರುಕಟ್ಟೆ ಈಗಾಗಲೇ ಕುಸಿದು ಬಿದ್ದು ಭಯ ಹುಟ್ಟಿಸಿದೆ. ಇದೆಲ್ಲವನ್ನು ಗಮನಿಸಿದರೆ ಪಾರಂಪರಿಕ ಕಟ್ಟಡಗಳನ್ನು ಕಾಲಕಾಲಕ್ಕೆ ನಿರ್ವಹಣೆ ಮಾಡದ ಕಾರಣದಿಂದ ಅವು ಇವತ್ತು ಮಳೆ ಬಂದಾಗ ಕುಸಿದು ಬೀಳುವ ಹಂತಕ್ಕೆ ಬಂದು ನಿಂತಿವೆ.
ಹಳೆ ಕಾಲದ ಮನೆಯಲ್ಲಿರುವವರು ಎಚ್ಚರವಾಗಿರಿ
ಇದೆಲ್ಲದರ ನಡುವೆ ಸಂಸ್ಥೆಗಳಿಗೆ, ಖಾಸಗಿಯವರಿಗೆ ಸೇರಿದ ಹಳೆಯ ಕಾಲದ ಹಲವು ಕಟ್ಟಡಗಳಿದ್ದು, ಅವುಗಳ ಪೈಕಿ ಕೆಲವು ಶಿಥಿಲಾವಸ್ಥೆಯಲ್ಲಿದ್ದು, ಅವುಗಳ ನಿರ್ವಹಣೆ ಮಾಡಲಾಗದ ಸ್ಥಿತಿಯಲ್ಲಿ ಬಹಳಷ್ಟು ಜನರಿದ್ದಾರೆ. ಇದರಾಚೆಗೆ ಹಳೆಯ ಕಾಲದ ಮಣ್ಣಿನ ಗೋಡೆಗಳ ಮನೆಗಳಲ್ಲಿ ವಾಸ ಮಾಡುವವರು ಹಲವರಿದ್ದು ಅವರೆಲ್ಲರೂ ಈಗ ಸುರಿಯುತ್ತಿರುವ ಮಳೆಯಿಂದ ಆತಂಕಗೊಂಡಿದ್ದಾರೆ.
ನಗರದ ಹೃದಯಭಾಗದಲ್ಲಿ ಹೆಚ್ಚಿನ ಪಾರಂಪರಿಕ ಕಟ್ಟಡ ಮತ್ತು ಹಳೆಯ ಕಾಲದಲ್ಲಿ ಮದ್ರಾಸ್ ತಾರಸಿಯಿಂದ ಕಟ್ಟಿದ ಮನೆಗಳಿವೆ. ಕೆಲವು ವಾಣಿಜ್ಯ ಮಳಿಗೆಗಳಾಗಿವೆ. ಕೆಲವು ಕಟ್ಟಡಗಳಿಗೆ ಹೊಂದಿಕೊಂಡಂತೆ ನೂತನ ಕಟ್ಟಡಗಳನ್ನು ನಿರ್ಮಾಣ ಮಾಡಲಾಗಿದೆ. ಇದರ ಜತೆಗೆ ಕೆಲವು ಕಟ್ಟಡಗಳಿಗೆ ಹೊಂದಿ ಕೊಂಡಂತೆ ಬೃಹತ್ ಮರಗಳಿದ್ದು ಅವುಗಳ ಭಯವೂ ಜನರನ್ನು ಕಾಡುತ್ತಿದೆ. ಮಳೆ ಗಾಳಿ ಬಂದಾಗ ಜೀವವನ್ನು ಕೈನಲ್ಲಿಡಿದು ಕುಳಿತುಕೊಳ್ಳಬೇಕಾದ ಸ್ಥಿತಿಯಾಗಿದೆ. ಅದು ಏನೇ ಇರಲಿ ಮಳೆಗಾಳಿಗೆ ಬಂದಾಗ ಎಚ್ಚರಿಕೆಯಿಂದ ಇರುವುದು ಅನಿವಾರ್ಯವಾಗಿದೆ.