ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್ ನ ಗಾಂಧಿ ಕುಟುಂಬದಿಂದ ನಾಯಕತ್ವ ಹೊರಬರಲು ಸೂಕ್ತ ಕಾಲ!; ಇವೆಲ್ಲ ಜನರೇ ಹೇಳಿದ ಪಾಠಗಳು

By ಅನಿಲ್ ಆಚಾರ್
|
Google Oneindia Kannada News

ಒಂದು ಕಾಲ ಇತ್ತು, ಬಿಜೆಪಿಗೆ ಚುನಾವಣೆಗೆ ನಿಲ್ಲಿಸುವುದಕ್ಕೆ ಅಭ್ಯರ್ಥಿಗಳೇ ಸಿಗುತ್ತಿರಲಿಲ್ಲ. ಆಗ ಕಾಂಗ್ರೆಸ್ ನಿಂದ ಯಾರು ನಿಂತರೂ ಗೆಲ್ಲುತ್ತಾರೆ ಎಂಬ ಮಾತಿತ್ತು. ಈ ಬಾರಿ ಲೋಕಸಭಾ ಚುನಾವಣೆ ನೋಡಿದರೆ ಕಾಂಗ್ರೆಸ್ ಎಂಬ ಭಾರತದ ಪುರಾತನ ಪಕ್ಷ ಎಂಥ ಸ್ಥಿತಿ ತಲುಪಿದೆ ಅಂದರೆ ಹಲವು ರಾಜ್ಯಗಳಲ್ಲಿ ಹೇಳ ಹೆಸರಿಲ್ಲದಂತೆ ಆಗಿದೆ.

ಇದು ಪ್ರಧಾನಿ ನರೇಂದ್ರ ಮೋದಿ ಅವರ ಗೆಲುವು ಎಂಬುದನ್ನು ಒಪ್ಪಲೇಬೇಕಾದ ಸಮಯ ಇದು. ಏಕೆಂದರೆ, ಕಳೆದ ಬಾರಿಯ ಚುನಾವಣೆಯಲ್ಲಿ ಮೋದಿ ಅವರ ಜತೆಗೆ ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಸುಷ್ಮಾ ಸ್ವರಾಜ್, ಅನಂತಕುಮಾರ್, ನಿತಿನ್ ಗಡ್ಕರಿ ಹೀಗೆ ಬೇರೆ ಹಿರಿ ತಲೆಗಳ ಬೆಂಬಲ ಇತ್ತು. ಆದರೆ ಈ ಸಲದ ಗೆಲುವು ಮಾತ್ರ ನರೇಂದ್ರ ಮೋದಿ ಹಾಗೂ ಅಮಿತ್ ಷಾ ಅವರದು ಎಂಬುದು ಸಾಬೀತಾದಂತೆ ಆಗಿದೆ.

ಪಕ್ಷದೊಳಗೆ, ಆರೆಸ್ಸೆಸ್ ನಲ್ಲಿ ಹಾಗೂ ಬಿಜೆಪಿಯ ಮೈತ್ರಿ ಪಕ್ಷಗಳಲ್ಲಿ ಈ ಬಾರಿಯ ಚುನಾವಣೆ ಫಲಿತಾಂಶ ಒಂದು ಸ್ಪಷ್ಟವಾದ ಸಂದೇಶ ರವಾನಿಸಿದಂತೆ ಆಗಿದೆ. ನರೇಂದ್ರ ಮೋದಿ ಬಗ್ಗೆ ಜನರಿಗೆ ಈಗಲೂ ನಂಬಿಕೆ ಇದೆ. ಬಿಜೆಪಿಯು ತನ್ನ ನಂಬಿಕೆಯನ್ನು ಉಳಿಸಿಕೊಂಡಿರುವುದು ಸಹ ನರೇಂದ್ರ ಮೋದಿ ಮೂಲಕ ಎಂಬುದು ರುಜುವಾತಾಗಿದೆ.

ಹಾಗಿದ್ದರೆ ಈ ಲೋಕಸಭಾ ಚುನಾವಣೆ ಫಲಿತಾಂಶ ಪಾಠ, ಸಂದೇಶ ಏನು?

ಗಾಂಧಿ ಕುಟುಂಬದ ಕಾಂಪೌಂಡ್ ನಿಂದ ಹೊರಗೆ ಬರಬೇಕು

ಗಾಂಧಿ ಕುಟುಂಬದ ಕಾಂಪೌಂಡ್ ನಿಂದ ಹೊರಗೆ ಬರಬೇಕು

ಕಾಂಗ್ರೆಸ್ ನ ನಾಯಕತ್ವ ಗಾಂಧಿ ಕುಟುಂಬದ ಕಾಂಪೌಂಡ್ ನಿಂದ ಹೊರಬರಲು ಸರಿಯಾದ ಸಮಯ ಇದು. ಸಾಮಾನ್ಯವಾಗಿ ಚುನಾವಣೆಗಳಲ್ಲಿ ಹೀನಾಯ ಸೋಲು ಕಂಡರೆ ಆ ಪಕ್ಷದ ಅಧ್ಯಕ್ಷರು ರಾಜೀನಾಮೆ ನೀಡುವುದು ಸಾಮಾನ್ಯ. ಈಗಿನ ಕಾಂಗ್ರೆಸ್ ಸೋಲಿಗೆ ರಾಜೀನಾಮೆ ನೀಡಬಹುದಾ ರಾಹುಲ್ ಗಾಂಧಿ? ಇದು ಒಂದು ಕಡೆಯಾದರೆ, ಮತ್ತೆ ಅದೇ ಗಾಂಧಿ ಕುಟುಂಬದ ಪ್ರಿಯಾಂಕಾರನ್ನೋ ಅಥವಾ ಸೋನಿಯಾರನ್ನೋ ತಂದು ಕೂರಿಸುವ ಬದಲಿಗೆ ಕುಟುಂಬದ ಹೊರಗಿನವರಿಗೆ ಪಕ್ಷದ ಚುಕ್ಕಾಣಿ ನೀಡುವುದು ಉತ್ತಮ. ನರೇಂದ್ರ ಮೋದಿ ಅವರ ಎದುರು ರಾಹುಲ್ ಗಾಂಧಿಯನ್ನು ಕಾಂಗ್ರೆಸ್ ಅಭ್ಯರ್ಥಿ ಎಂದು ಬಿಂಬಿಸದೆ ಇರಬಹುದು. ಹಾಗಂತ ಈಗಿನ ಸೋಲಿಗೆ ಹೊಣೆ ಹೊರದೆ ಹುದ್ದೆಯಲ್ಲಿ ಮುಂದುವರಿದರೆ ಜನರ ಸಿಟ್ಟಿಗೆ ತುತ್ತಾಗಬೇಕಾಗುತ್ತದೆ. ಕಾಂಗ್ರೆಸ್ ಈಗ ಬೇರು ಮಟ್ಟದಿಂದ ಬದಲಾವಣೆ ಮಾಡಿಕೊಳ್ಳಬೇಕು ಎಂಬ ತುರ್ತು ಸಂದೇಶ ಇದೆ.

ಉದ್ಯೋಗ ಸೃಷ್ಟಿ, ಆರ್ಥಿಕ ಸ್ಥಿತಿ ಬಗ್ಗೆ ಹೆಚ್ಚು ಗಮನ ಹರಿಸಬೇಕು

ಉದ್ಯೋಗ ಸೃಷ್ಟಿ, ಆರ್ಥಿಕ ಸ್ಥಿತಿ ಬಗ್ಗೆ ಹೆಚ್ಚು ಗಮನ ಹರಿಸಬೇಕು

ಇನ್ನು ಬಿಜೆಪಿ ಮೇಲೆ ಮೊದಲ ಬಾರಿಗಿಂತ ಹೆಚ್ಚಿನ ನಿರೀಕ್ಷೆ ಜನರ ಮೇಲಿದೆ. ಪುಲ್ವಾಮಾ ಉಗ್ರ ದಾಳಿಯ ನಂತರ ರಾಷ್ಟ್ರೀಯ ಭದ್ರತೆ ವಿಚಾರವಾಗಿ ಬಿಜೆಪಿಯು ಪ್ರತಿಕ್ರಿಯಿಸಿದ ರೀತಿಯ ಬಗ್ಗೆ ಇರುವ ಅಭಿಪ್ರಾಯ ಕಾಯ್ದುಕೊಳ್ಳಬೇಕಿದೆ. ಇದು ಹೊರತುಪಡಿಸಿ ಉದ್ಯೋಗ ಸೃಷ್ಟಿ, ಆರ್ಥಿಕ ಸ್ಥಿತಿ ಚೇತರಿಕೆ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಕಪ್ಪು ಹಣ ವಾಪಸ್ ತರುವ ವಿಚಾರವಾಗಿ ನೀಡಿದ್ದ ಮಾತನ್ನು ಉಳಿಸಿಕೊಳ್ಳಬೇಕಿದೆ. ರಫೇಲ್ ಯುದ್ಧ ವಿಮಾನ ಖರೀದಿ ವಿಚಾರದಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ ಎಂಬುದನ್ನು ಕಾನೂನಾತ್ಮಕವಾಗಿ ಸಾಬೀತು ಮಾಡಬೇಕಿದೆ. ಇವೆಲ್ಲದರ ಜತೆಗೆ ಆರ್ಥಿಕ ವ್ಯವಸ್ಥೆಯೊಳಗೆ ನಗದು ಹರಿವನ್ನು ಹೆಚ್ಚಿಸಬೇಕಿದೆ. ಏಕೆಂದರೆ, ವಿಪಕ್ಷಗಳ ನಾನಾ ಆರೋಪದ ಹೊರತಾಗಿಯೂ ಜನರು ಬಿಜೆಪಿ ಜತೆಗೆ ನಿಂತಿದ್ದಾರೆ. ಆ ನಂಬಿಕೆ ಉಳಿಸಿಕೊಳ್ಳುವ, ನಿರೀಕ್ಷೆ ಪೂರ್ತಿ ಮಾಡುವ ಜವಾಬ್ದಾರಿ ಬಿಜೆಪಿಗೆ ಇದೆ.

ರಾಷ್ಟ್ರೀಯ ಪಕ್ಷಗಳಿಗೆ ಸವಾಲಾಗಿರುವುದು ಪ್ರಾದೇಶಿಕ ಪಕ್ಷ

ರಾಷ್ಟ್ರೀಯ ಪಕ್ಷಗಳಿಗೆ ಸವಾಲಾಗಿರುವುದು ಪ್ರಾದೇಶಿಕ ಪಕ್ಷ

ರಾಷ್ಟ್ರೀಯ ಪಕ್ಷಗಳಿಗೆ ಪರ್ಯಾಯವಾಗಿ ಪ್ರಾದೇಶಿಕ ಪಕ್ಷಗಳು ನಿಂತಿವೆ. ಮುಖ್ಯವಾಗಿ ದಕ್ಷಿಣ ಭಾರತದ ತಮಿಳುನಾಡು, ಆಂಧ್ರಪ್ರದೇಶ ಹಾಗೂ ಕೇರಳದಲ್ಲಿ ಸಾಬೀತಾಗಿದೆ. ಪಶ್ಚಿಮ ಬಂಗಾಲ, ಉತ್ತರಪ್ರದೇಶದಲ್ಲಿನ ಫಲಿತಾಂಶವನ್ನು ಬಿಜೆಪಿಯ ಶಕ್ತಿ ಅಂತಲೇ ವ್ಯಾಖ್ಯಾನ ಮಾಡಬಹುದು. ಆದರೆ ಕಾಂಗ್ರೆಸ್ ತಲುಪಿರುವಂಥ ಸ್ಥಿತಿಗೆ ಇವುಗಳು ಜಾರಿಲ್ಲ್. ಮುಖ್ಯವಾಗಿ ತಮಿಳಿನಾಡು, ಆಂಧ್ರಪ್ರದೇಶದಲ್ಲಿ ಪ್ರಾದೇಶಿಕ ಪಕ್ಷಗಳು ಅದ್ಬುತ ಸಾಧನೆ ಮಾಡಿವೆ. ಅದೇ ಉತ್ತರ ಭಾರತದಲ್ಲಿ ಬಿಎಸ್ ಪಿ ಹಾಗೂ ಎಸ್ ಪಿ ಒಂದಾಗಿಯೂ ದೊಡ್ಡ ಮಟ್ಟದ ಗೆಲುವು ಸಾಧ್ಯವಾಗಿಲ್ಲ. ಪಶ್ಚಿಮ ಬಂಗಾಲದಲ್ಲಿ ದೀದಿಯ ಟಿಎಂಸಿ ಸಾಕಷ್ಟು ಕಳೆದುಕೊಂಡಿದೆ. ಒಡಿಶಾದಲ್ಲಿ ಬಿಜೆಡಿ ಹೇಗೋ ಮರ್ಯಾದೆ ಉಳಿಸಿಕೊಂಡಿದೆ. ಆದರೆ ಆಮ್ ಆದ್ಮಿ ಪಕ್ಷ ಹೀನಾಯವಾಗಿ ನೆಲ ಕಚ್ಚಿದೆ. ಉತ್ತರ ಭಾರತದಲ್ಲಿ ಬಿಜೆಪಿ ಹಿಡಿತ ಸ್ಪಷ್ಟವಾಗಿದೆ. ಅದಕ್ಕೆ ಪರ್ಯಾಯ ಆಯ್ಕೆ ಜನರ ಮನದಲ್ಲೂ ಇಲ್ಲ ಎಂಬುದು ಗೊತ್ತಾಗುತ್ತದೆ.

ನಾಯಕತ್ವದ ವಿಚಾರದಲ್ಲಿ ಸ್ಪಷ್ಟತೆ ಇರಬೇಕು

ನಾಯಕತ್ವದ ವಿಚಾರದಲ್ಲಿ ಸ್ಪಷ್ಟತೆ ಇರಬೇಕು

ನಾಯಕತ್ವದ ವಿಚಾರದಲ್ಲಿ ಸ್ಪಷ್ಟತೆ ಇರಬೇಕು. ಅಧಿಕಾರಕ್ಕೆ ಬಂದಲ್ಲಿ ಯಾರು ದೇಶವನ್ನು ಮುನ್ನಡೆಸುತ್ತಾರೆ ಎಂಬ ಬಗ್ಗೆ ನಿರ್ದಿಷ್ಟ ಆಲೋಚನೆ ಇಲ್ಲದಿದ್ದಲ್ಲಿ ಜನರನ್ನು ಒಪ್ಪಿಸುವುದು ಕಷ್ಟ ಎಂಬುದನ್ನು ಸಾಬೀತು ಮಾಡುವಂತಿದೆ ಈಗಿನ ಫಲಿತಾಂಶ. ಮಹಾಘಟಬಂಧನ್ ಎಂಬುದನ್ನು ಮಾಡಿಕೊಂಡು, ಬಿಜೆಪಿ ವಿರೋಧಿಗಳನ್ನೆಲ್ಲ ಒಗ್ಗೂಡಿಸಿಕೊಂಡು ಒಂದು ವೇದಿಕೆಯಲ್ಲಿ ತರಬೇಕು ಎಂಬುದೆಲ್ಲ ಪ್ರಯತ್ನದ ಮಟ್ಟದಲ್ಲಿ ಆಕರ್ಷಕವಾಗಿಯೇ ಕಂಡಿತು. ಆದರೆ ಅವುಗಳು ವಾಸ್ತವದಲ್ಲಿ ನಿಜ ಮಾಡಲು ಆಗಲಿಲ್ಲ. ಮುಖ್ಯವಾಗಿ ರಾಷ್ಟ್ರೀಯ ಪಕ್ಷವೊಂದು ಪ್ರಾದೇಶಿಕ ಪಕ್ಷಗಳ ಜತೆ ಹೇಗೆ ವ್ಯವಹರಿಸುತ್ತದೆ ಎಂಬುದು ಮುಖ್ಯವಾಗುತ್ತದೆ. ಕಾಂಗ್ರೆಸ್ ಪಕ್ಷ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ಜತೆ ನಡೆದುಕೊಂಡ ರೀತಿ ಹಾಗೂ ಕರ್ನಾಟಕದಲ್ಲಿ ಜೆಡಿಎಸ್ ಜತೆಗೆ ಇಟ್ಟ ಹೆಜ್ಜೆಗಳು ಸರಿಯಾಗಿ ಕೈಕೊಟ್ಟಿವೆ. ಇದ್ದುದರಲ್ಲಿ ತಮಿಳುನಾಡಿನಲ್ಲಿ ಮಾನ ಉಳಿದಿದೆ. ನಾಯಕತ್ವ ಕೂಡ ಬಹಳ ಮುಖ್ಯ ಎಂಬ ಸಂದೇಶವನ್ನು ಈ ಬಾರಿ ಜನರು ನೀಡಿದ್ದಾರೆ.

English summary
Here are the lessons to all parties from lok sabha elections 2019 results, which are announced on May 23rd.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X