ಹುಂಬತನದ ಆ ದಿನಗಳಿಂದ ಇಲ್ಲಿಯವರೆಗೆ ಎಷ್ಟೆಲ್ಲ ಬದಲಾದರು ಡಿಕೆಶಿ!
ರಾಜಕಾರಣದಲ್ಲಿ ಪರಿಪಕ್ವತೆ ಅಂದರೇನು? ಹೀಗೊಂದು ಪ್ರಶ್ನೆ ಬಂದರೆ ಸದ್ಯದ ಸ್ಥಿತಿಯಲ್ಲಿ ನೀಡಬಹುದಾದ ಅತ್ಯುತ್ತಮ ಉದಾಹರಣೆ ಸಚಿವ ಡಿ.ಕೆ.ಶಿವಕುಮಾರ್ ಅವರದು. ಎಸ್ಸೆಂ ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಬೆಂಕಿ ಉಗುಳುತ್ತಿದ್ದ, ಹಿಂದೆ ಮುಂದೆ ಯೋಚಿಸದೆ ಮಾತನಾಡುತ್ತಿದ್ದ ಕಿರಿಯ ವಯಸ್ಸಿನ ಡಿ.ಕೆ.ಶಿವಕುಮಾರ್ ಎಲ್ಲಿ?
ಜನರ ಮುಂದೆ ನಾವು ವಿನಮ್ರರಾಗಿ ಇರಬೇಕು, ಗೆಲುವು-ಸೋಲು ಅವರ ತೀರ್ಮಾನವೇ ಹೊರತು. ಅವರ ಮುಂದೆ ನಮ್ಮ ಅಹಂಕಾರ ನಡೆಯಲ್ಲ ಎಂದು ಬಳ್ಳಾರಿ ಲೋಕಸಭಾ ಉಪ ಚುನಾವಣೆ ಫಲಿತಾಂಶ ಬಂದ ನಂತರ ಮಾತನಾಡಿರುವ ಡಿ.ಕೆ.ಶಿವಕುಮಾರ್ ಎಲ್ಲಿ? ಬಳ್ಳಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಪರವಾಗಿ ತಂತ್ರ ರೂಪಿಸುವುದರಿಂದ ಆರಂಭವಾಗಿ ವಿ.ಎಸ್.ಉಗ್ರಪ್ಪ ಅವರ ಗೆಲುವಿನ ತನಕ ಶಿವಕುಮಾರ್ ಬೆವರು ಹರಿಸಿದ್ದಾರೆ.
5 ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ : ಯಾರಿಗೆ ಎಷ್ಟು ಮತಗಳು?
ಬಳ್ಳಾರಿ ಜಿಲ್ಲೆಯ ಉಸ್ತುವಾರಿಯೇ ಅವರ ಹೆಗಲ ಮೇಲಿದ್ದು, ರಾಮುಲು- ರೆಡ್ಡಿ ವಿರುದ್ಧ ಸಡ್ಡು ಹೊಡೆಯುವ ಮಾತನ್ನು ಎಲ್ಲೂ ಅವರು ಆಡಲಿಲ್ಲ. ಮಾತಿನಲ್ಲಿವ ವ್ಯಂಗ್ಯ, ಮೊನಚು ಬಿಟ್ಟುಕೊಡದೆ "ಶ್ರೀರಾಮುಲು ಅಣ್ಣನಿಗೆ ಅಭಿನಂದನೆಗಳು" ಅನ್ನೋವಾಗಲೂ ಶಿವಕುಮಾರ್ ಸಮತೋಲನ ತಪ್ಪಲಿಲ್ಲ.
ದೇವೇಗೌಡ ಕುಟುಂಬ ವರ್ಸಸ್ ಡಿಕೆ ಶಿವಕುಮಾರ್
ಕನಕಪುರ ಲೋಕಸಭಾ ಕ್ಷೇತ್ರದಿಂದ ದೇವೇಗೌಡರ ವಿರುದ್ಧ ತೇಜಸ್ವಿನಿ ಗೌಡ ಅವರನ್ನು ನಿಲ್ಲಿಸಿ, ಗೆಲ್ಲಿಸಿದ್ದ ಶಿವಕುಮಾರ್ ಒಂದು ಕಾಲದಲ್ಲಿ ದೇವೇಗೌಡರು ಮಾಜಿ ಪ್ರಧಾನಿ ಎಂಬುದನ್ನು ನೋಡದೆ, ಏಕ ವಚನದಲ್ಲಿ ಮಾತನಾಡಿದ್ದರು. ಆ ಯಪ್ಪಂಗೆ ತಲೆ ಸರಿ ಇಲ್ಲ ಎಂದಿದ್ದರು. ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸರಕಾರ ಅಧಿಕಾರಕ್ಕೆ ಬಂದು, ಧರಂ ಸಿಂಗ್ ಮುಖ್ಯಮಂತ್ರಿ ಆಗಿದ್ದ ಅವಧಿ ಡಿಕೆಶಿ ಪಾಲಿನ ಕಠಿಣ ದಿನಗಳು. ಆ ನಂತರ ಕುಮಾರಸ್ವಾಮಿ ಅವರು ಬಿಜೆಪಿ ಜತೆಗೆ ಟ್ವೆಂಟಿ-ಟ್ವೆಂಟಿ ಸರಕಾರದ ಮುಖ್ಯಮಂತ್ರಿ ಆಗಿ, ರಾಮನಗರದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ ವೇಳೆ ಅದು. ಆಗ ಎಚ್ ಡಿಕೆ ಆಡಿದ ಮಾತೊಂದು ಭಾರೀ ಚರ್ಚೆಗೆ ಕಾರಣವಾಗಿತ್ತು. ಶಿವಕುಮಾರ್ ತಮ್ಮ ತಾಯಿಯನ್ನು ಕುಮಾರಸ್ವಾಮಿ ಭಾಗವಹಿಸಿದ್ದ ಸಾರ್ವಜನಿಕ ಸಭೆಗೆ ಕರೆತಂದು, ಸುದ್ದಿಯಾದರು. ದೇವೇಗೌಡರ ಕುಟುಂಬ ಹಾಗೂ ಶಿವಕುಮಾರ್ ಮಧ್ಯದ ರಾಜಕೀಯ ಹೋರಾಟಕ್ಕೆ ಬಹಳ ದೊಡ್ಡ ಇತಿಹಾಸವಿದೆ.
ಗೆಲ್ಲಿಸಿಕೊಂಡು ಬಂದು ಸಚಿವರಾಗಬೇಕಾಯಿತು
ಬಹುಮತದೊಂದಿಗೆ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಾಗ ಡಿ.ಕೆ.ಶಿವಕುಮಾರ್ ರನ್ನು ಮೊದಲಿಗೆ ಸಂಪುಟಕ್ಕೆ ತೆಗೆದುಕೊಳ್ಳಲಿಲ್ಲ. ಆ ನಂತರವೇ ಅವರು ಸಾಮರ್ಥ್ಯ ಸಾಬೀತು ಪಡಿಸಿಕೊಳ್ಳುವ ಸಲುವಾಗಿ ಕೆಲವು ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಬೇಕಾಯಿತು. ಆ ಸಾಲಿನಲ್ಲಿ ಸೋದರ ಡಿ.ಕೆ.ಸುರೇಶ್ ಹಾಗೂ ರಮ್ಯಾರನ್ನು ಕ್ರಮವಾಗಿ ಬೆಂಗಳೂರು ಗ್ರಾಮಾಂತರ ಹಾಗೂ ಮಂಡ್ಯ ಲೋಕಸಭೆ ಕ್ಷೇತ್ರದಿಂದ ಗೆಲ್ಲಿಸಿಕೊಂಡರು. ಮತ್ತೆ ಸಚಿವರಾದರು. ಆದರೆ ವಿವಾದ, ಭ್ರಷ್ಟಾಚಾರದ ಆರೋಪ ಇವ್ಯಾವುದರಿಂದ ಡಿ.ಕೆ.ಶಿವಕುಮಾರ್ ಹೊರತಲ್ಲ. ತಮ್ಮ ಕುಟುಂಬದವರಿಗೆ ಲೇಔಟ್ ವೊಂದರಲ್ಲಿ ನಿವೇಶನಗಳನ್ನು ಕೊಡಿಸಿದ್ದಾರೆ ಎಂದು ಎಚ್.ಡಿ.ಕುಮಾರಸ್ವಾಮಿ ಆರೋಪ ಮಾಡಿದ್ದರು. ಅದೇ ಎಚ್.ಡಿ.ಕೆ ಮುಖ್ಯಮಂತ್ರಿ ಆಗಿರುವ ಮೈತ್ರಿ ಸರಕಾರದಲ್ಲಿ ಶಿವಕುಮಾರ್ ಈಗ ಸಚಿವರಾಗಿದ್ದಾರೆ.
ದಟ್ಟ ಕಾಡಿನ ಮಧ್ಯೆ ಡಿಕೆಶಿಗೆ ತಾತಯ್ಯ ನುಡಿದಿದ್ದ ಭವಿಷ್ಯವೇನು?
ಗುಜರಾತ್ ಶಾಸಕರನ್ನು ಕಾಯ್ದಿದ್ದರು
ನೆಹರೂ-ಗಾಂಧಿ ಕುಟುಂಬದ ಆಪ್ತ ಅಹ್ಮದ್ ಪಟೇಲ್ ರಾಜ್ಯಸಭೆಗೆ ಆಯ್ಕೆ ಆಗಬೇಕು ಎಂದಾಗ ಗುಜರಾತ್ ಎದುರಾಗಿದ್ದ ಸಂಕಷ್ಟದ ಸಮಯ ಇರಬಹುದು, ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಎದುರಿಸಿದ ಸವಾಲಿನ ಸಮಯ ಇರಬಹುದು. ಆಗೆಲ್ಲ ಹೈ ಕಮಾಂಡ್ ಸೂಚನೆಯಂತೆ ಪಕ್ಷದ ಶಾಸಕರನ್ನು ಕಾಯ್ದದ್ದು ಇದೇ ಡಿ.ಕೆ.ಶಿವಕುಮಾರ್. ಒಕ್ಕಲಿಗ ಸಮುದಾಯಕ್ಕೆ ಸೇರಿದ ಡಿ.ಕೆ.ಶಿವಕುಮಾರ್ ಮೇಲೆ ಉದ್ದೇಶ ಪೂರ್ವಕವಾಗಿ ಕೇಂದ್ರ ಸರಕಾರ ಐಟಿ, ಇಡಿ ದಾಳಿ ಮಾಡಿಸುತ್ತಿದೆ ಎಂದು ಬಿಂಬಿಸುವಲ್ಲಿ ಕೂಡ ಅವರು ಯಶಸ್ವಿಯಾದರು. ಯಾವಾಗೆಲ್ಲ ಪಕ್ಷವು ತಮ್ಮ ಮೇಲೆ ಜವಾಬ್ದಾರಿ ವಹಿಸಿದೆಯೋ ಆಗೆಲ್ಲ ಬಹುತೇಕ ಯಶಸ್ವಿ ಆಗಿದ್ದಾರೆ ಅನ್ನೋದಿಕ್ಕೆ ಡಿ.ಕೆ.ಶಿವಕುಮಾರ್ ಪಾಲಿಗೆ ಮತ್ತೊಂದು ಗರಿಯಂತೆ ಸೇರ್ಪಡೆ ಆಗಿರುವುದು ಬಳ್ಳಾರಿ ಲೋಕಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಸಾಧಿಸಿದ ಅದ್ಭುತ ಗೆಲುವು.
ಒರಟು, ಹುಂಬತನ ಎಲ್ಲಿ ಹೋಯಿತು?
ಸದ್ಯಕ್ಕೆ ಅಧಿಕಾರದಲ್ಲಿ ಇರುವ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ದೋಸ್ತಿ ಸರಕಾರ ಗಟ್ಟಿಯಾಗಿ ಉಳಿದಿರುವಲ್ಲಿ ಕೂಡ ಡಿ.ಕೆ.ಶಿವಕುಮಾರ್ ಪ್ರಮುಖ ಪಾತ್ರ ವಹಿಸಿದ್ದಾರೆ. ಡಿಕೆಶಿ ಹಾಗೂ ದೇವೇಗೌಡರ ಮಧ್ಯೆ ಹಸಿ ಹುಲ್ಲು ಹಾಕಿದರೂ ಧಗ್ಗೆಂದು ಹೊತ್ತು ಉರಿಯವಂಥ ದ್ವೇಷ ಇದೆ ಎಂದೇ ಬಿಂಬಿತವಾಗಿತ್ತು. ಆದರೆ ಶಿವಕುಮಾರ್ ಆರೋಗ್ಯ ವಿಚಾರಿಸಲು ಸ್ವತಃ ದೇವೇಗೌಡರೇ ಆಸ್ಪತ್ರೆಗೆ ತೆರಳಿದ್ದರು. ಸಿದ್ದರಾಮಯ್ಯ ಅವರು, ನಾನು ಮುಖ್ಯಮಂತ್ರಿ ಸ್ಥಾನಾಕಾಂಕ್ಷಿ ಎಂಬ ಹೇಳಿಕೆ ನೀಡಿದಾಗ, ಮುಂದಿನ ಚುನಾವಣೆ ನಂತರ ಅವರು ಪ್ರಯತ್ನಿಸಬಹುದು ಎನ್ನುವ ಮೂಲಕ ಎಚ್ ಡಿಕೆ ಪರ ಬ್ಯಾಟು ಬೀಸಿದ್ದರು ಡಿಕೆಶಿ. ಹುಂಬ, ಒರಟ, ಸಿಟ್ಟಿನ ಮನುಷ್ಯ ಎಂದೆಲ್ಲ ಬಿಂಬಿತವಾಗಿದ್ದ ಡಿ.ಕೆ.ಶಿವಕುಮಾರ್ ಬದಲಾಗಿದ್ದಾರೆ ಎಂಬುದಕ್ಕೆ ಹಲವು ಉದಾಹರಣೆಗಳು ಸಿಗುತ್ತವೆ. ಕರ್ನಾಟಕದಲ್ಲಿ ಕಾಂಗ್ರೆಸ್ ಪಾಳಯದಿಂದ ಮುಖ್ಯಮಂತ್ರಿ ಅಭ್ಯರ್ಥಿಗಳದೊಂದು ಹೆಸರು ಹರಿದಾಡಿದರೆ ಅದರಲ್ಲಿ ಶಿವಕುಮಾರ್ ಹೆಸರೂ ಕೇಳಿಬರುತ್ತದೆ. ಒಟ್ಟಾರೆ ಅವರ ಈ ಬದಲಾವಣೆ ಬಗ್ಗೆ ನಿಮಗೆ ಏನನ್ನಿಸುತ್ತದೆ?
ಒಂದೇ ಒಂದು ಪಾನ್ ಅಲ್ಲಾಡಿಸಿದ್ದಕ್ಕೆ ಡಿಕೆಶಿ ನೀಡಿದ ಖಡಕ್ ಉತ್ತರ ಇದು!