Vijayendra Prasad: 'ಬಾಹುಬಲಿ'ಗೆ ಶಕ್ತಿ ತುಂಬಿದ ಕಥೆಗಾರನಿಗೆ ತೆರೆಯಿತು ರಾಜ್ಯಸಭೆ ಬಾಗಿಲು!
ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕ, ನಟ ಮತ್ತು ಚಿತ್ರಕಥೆ ಬರಹಗಾರರಾಗಿ ಹೆಸರು ಗಳಿಸಿದ ಕೊದೂರ್ ವಿಶ್ವ ವಿಜಯೇಂದ್ರ ಪ್ರಸಾದ್ ಹೆಸರಿಗೆ ಮತ್ತೊಮ್ಮೆ ಹಿರಿಮೆ ಮೂಡಿದೆ. ಸಿನಿಮಾ ರಂಗದಲ್ಲಿ ಇವರ ಸಾಧನೆಯನ್ನು ಗುರುತಿಸಿದ ಕೇಂದ್ರ ಸರ್ಕಾರವು ರಾಜ್ಯಸಭೆ ಸದಸ್ಯರನ್ನಾಗಿ ನಾಮ ನಿರ್ದೇಶನ ಮಾಡಿದೆ.
ಆಂಧ್ರ ಪ್ರದೇಶದ ಕೊವ್ವೂರ್ ಗ್ರಾಮದಲ್ಲಿ ಜನಿಸಿದ ಕೆ. ವಿ. ವಿಜಯೇಂದ್ರ ಪ್ರಸಾದ್, ದೇಶದ ಕನ್ನಡ ಚಿತ್ರರಂಗದ ಜೊತೆಗೂ ನಂಟು ಹೊಂದಿದ್ದಾರೆ. ಕನ್ನಡ, ಹಿಂದಿ ಮತ್ತು ತೆಲುಗು ಚಿತ್ರರಂಗದಲ್ಲಿ ವಿಭಿನ್ನ ಚಿತ್ರಗಳಿಗೆ ಕಥೆಯನ್ನು ಬರೆದ ಖ್ಯಾತಿಯು ಇವರಿಗೇ ಸಲ್ಲುತ್ತದೆ.
ವೀರೇಂದ್ರ ಹೆಗ್ಗಡೆ, ಇಳಯರಾಜ, ಪಿ.ಟಿ. ಉಷಾ ರಾಜ್ಯಸಭೆಗೆ ನಾಮನಿರ್ದೇಶನ
ಬಾಲಿವುಡ್, ಟಾಲಿವುಡ್, ಸ್ಯಾಂಡಲ್ ವುಡ್ ಅಂಗಳದಲ್ಲಿ ಸದ್ದು ಮಾಡಿ ಸುದ್ದಿ ಆಗಿರುವ ಖ್ಯಾತ ನಿರ್ದೇಶಕ, ಚಿತ್ರಕಥೆ ಬರಹಗಾರ ಕೆ. ವಿ. ವಿಜಯೇಂದ್ರ ಪ್ರಸಾದ್ ಅನ್ನು ರಾಜ್ಯಸಭೆಯ ಸದಸ್ಯರನ್ನಾಗಿ ಜೂನ್ 6ರಂದು ನಾಮ ನಿರ್ದೇಶನ ಮಾಡಲಾಗಿದೆ. ಕೇಂದ್ರ ಮೇಲ್ಮನೆಯ ಸದಸ್ಯರಾಗಿ ಆಯ್ಕೆ ಆಗಿರುವ ಚಿತ್ರರಂಗದ ಹಿರಿಯ ನಿರ್ದೇಶಕರು ಸಾಗಿ ಬಂದ ಹಾದಿಯ ಬಗ್ಗೆ ಈ ವರದಿಯಲ್ಲಿ ತಿಳಿದುಕೊಳ್ಳಿರಿ.
ಕೆವಿ ವಿಜಯೇಂದ್ರ ಪ್ರಸಾದ್ ಕುಟುಂಬದ ಹಿನ್ನೆಲೆ
ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿರುವ ಕೆ. ವಿ. ವಿಜಯೇಂದ್ರ ಪ್ರಸಾದ್ ಮೂಲತಃ ಕರ್ನಾಟಕದ ರಾಯಚೂರು ಜಿಲ್ಲೆಯವರೇ ಆಗಿದ್ದಾರೆ. ಆದರೆ 1942ರ ಮೇ 27ರಂದು ಇವರು ಆಂಧ್ರ ಪ್ರದೇಶದ ಪಶ್ಚಿಮ ಗೋದಾವರಿಯ ಕೊವ್ವುರ್ ಸ್ಥಳದಲ್ಲಿ ಜನಿಸಿದರು. ನಂತರದಲ್ಲಿ ರಾಜಾ ನಂದಿನಿ ಜೊತೆ ಪ್ರೇಮ ವಿವಾಹವಾದರು. 2012ರಲ್ಲಿ ಪಾರ್ಶ್ವವಾಯು ಸಮಸ್ಯೆಗೆ ಗುರಿಯಾದ ರಾಜಾ ನಂದಿನಿ, ಆರು ತಿಂಗಳ ಕಾಲ ಕೋಮಾ ಸ್ಥಿತಿಯಲ್ಲಿದ್ದರು. 2012ರ ಅಕ್ಟೋಬರ್ 21ರಂದು ರಾಜಾ ನಂದಿನಿ ವಿಧಿವಶರಾದರು. ಈ ದಂಪತಿ ಪುತ್ರನೇ ಖ್ಯಾತ ನಿರ್ದೇಶಕ ಎಸ್. ಎಸ್. ರಾಜಮೌಳಿ.
ವಿಜಯೇಂದ್ರ ಪ್ರಸಾದ್ ಆರಂಭಿಕ ಬದುಕು ಹೇಗಿತ್ತು?
ಕಳೆದ 1988ರಲ್ಲಿ ಮೊದಲ ಬಾರಿಗೆ ಚಿತ್ರರಂಗಕ್ಕೆ ಪ್ರವೇಶಿಸಿದ ಕೆ. ವಿ. ವಿಜಯೇಂದ್ರ ಪ್ರಸಾದ್, ತಮ್ಮ ಸಹೋದರ ಕೊದೂರಿ ಶಿವಶಕ್ತಿ ದತ್ತ ಸಹಾಯಕರಾಗಿ ಸೇವೆ ಆರಂಭಿಸಿದರು. ಶಿವಶಕ್ತಿ ದತ್ತ ಒಬ್ಬ ಬರಹಗಾರರಾಗಿ ಯಶಸ್ವಿ ಆಗಲಿಲ್ಲ, ಆದರೆ ಅವರ ಮಾರ್ಗದರ್ಶನದಲ್ಲಿ ವಿಜಯೇಂದ್ರ ಪ್ರಸಾದ್ ಒಬ್ಬ ಯಶಸ್ವಿ ಚಿತ್ರಕಥೆ ಬರಹಗಾರರಾಗಿ ಬೆಳೆದರು. ಈ ಕುರಿತು ಸ್ವತಃ ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
"ನನಗಿಂತ 10 ವರ್ಷ ದೊಡ್ಡವರಾಗಿದ್ದ ಕೊದೂರಿ ಶಿವಶಕ್ತಿ ದತ್ತಾ ಎಂದರೆ ನನಗೆ ತುಂಬಾ ಅಚ್ಚುಮೆಚ್ಚು. ಇಂದು ನಾನು ಏನಾಗಿದ್ದೆನೋ ಅದಕ್ಕೆ ಮುಖ್ಯ ಕಾರಣ, ನನ್ನ ಸಹೋದರನೇ ಆಗಿದ್ದಾರೆ. ಅವರ ಮಾರ್ಗದರ್ಶನ ಮತ್ತು ಆಶೀರ್ವಾದವೇ ನನ್ನ ಇಂದಿನ ಯಶಸ್ವಿಗೆ ಮುಖ್ಯ ಕಾರಣವಾಗಿದೆ. ಇಂದು ನಾನು ಬದುಕಿದ್ದರೆ ಅದಕ್ಕೂ ಕಾರಣ ಅವರೇ ಆಗಿದ್ದು, ತಮ್ಮ ಪ್ರತಿಭೆಯನ್ನು ಅವರು ಸರಿಯಾಗಿ ಬಳಸಿಕೊಳ್ಳುವುದಕ್ಕೆ ಸಾಧ್ಯವಾಗಲಿಲ್ಲ. ಆದರೆ ಅವರೇ ಧಾರೆ ಎರೆದ ಪ್ರತಿಭೆಯಿಂದ ನಾನು ಪ್ರಸಿದ್ಧಿಯನ್ನು ಪಡೆದುಕೊಂಡಿದ್ದೇನೆ," ಎಂದು ಕೆ. ವಿ. ವಿಜಯೇಂದ್ರ ಪ್ರಸಾದ್ ಹೇಳಿಕೊಂಡಿದ್ದಾರೆ.
ಬಾಹುಬಲಿ ಚಿತ್ರಕ್ಕೆ ಕಥೆ ಬರೆದವರು ಇದೇ ವಿಜಯೇಂದ್ರ ಪ್ರಸಾದ್
ಭಾರತೀಯ ಚಿತ್ರರಂಗದಲ್ಲಿ ಹೊಸ ಇತಿಹಾಸ ಬರೆದ ಬಾಹುಬಲಿ ಚಿತ್ರಕ್ಕೆ ಎಸ್. ಎಸ್. ರಾಜಮೌಳಿ ಆಕ್ಷನ್-ಕಟ್ ಹೇಳಿರುವುದು ಎಲ್ಲರಿಗೂ ಗೊತ್ತಿದೆ. ಆದರೆ ಬಾಹುಬಲಿ-1 ಮತ್ತು ಬಾಹುಬಲಿ-2 ಚಿತ್ರದ ಹಿಂದೆ ಕಥೆಯನ್ನು ಬರೆದವರು ಇದೇ ಕೆ. ವಿ. ವಿಜಯೇಂದ್ರ ಪ್ರಸಾದ್ ಆಗಿದ್ದಾರೆ. ತಮ್ಮ ತಂದೆಯೇ ಬರೆದಿರುವ ಕಥೆಗೆ ಸಿನಿಮಾದ ಕಳೆ ನೀಡಿದ್ದು, ನಿರ್ದೇಶಕ ಎಸ್. ಎಸ್. ರಾಜಮೌಳಿ. ಅದ್ಧೂರಿ ಆಗಿ ಮೂಡಿ ಬಂದಿರುವ ಚಿತ್ರವು ದೇಶದಲ್ಲಿ ಬರೋಬ್ಬರಿ 3616 ಕೋಟಿ ರೂಪಾಯಿ ಸಂಗ್ರಹಿಸಿತು. ಅದೇ ರೀತಿ ಭಜರಂಗಿ ಭಾಯಿಜಾನ್, ಆರ್ಆರ್ಆರ್, ಆರಂಭ, ರಾಜಣ್ಣ ಸೇರಿದಂತೆ ಹಲವು ಚಿತ್ರಗಳಿಗೆ ಇವರೇ ಚಿತ್ರಕಥೆಯನ್ನು ಬರೆದಿದ್ದಾರೆ.
ಕೆವಿ ವಿಜಯೇಂದ್ರ ಪ್ರಸಾದ್ ಬರಹ ಮತ್ತು ನಿರ್ದೇಶನ
ಭಾರತೀಯ ಚಿತ್ರರಂಗದಲ್ಲಿ ಕೆ. ವಿ. ವಿಜಯೇಂದ್ರ ಪ್ರಸಾದ್, ಒಬ್ಬ ಕಥೆ ಬರಹಗಾರರಾಗಿ, ನಿರ್ದೇಶಕರಾಗಿ ಮತ್ತು ಚಿತ್ರಕಥೆಯ ಬರವಣಿಗೆ ಮೂಲಕ ಖ್ಯಾತರಾಗಿದ್ದಾರೆ. 1988ರಲ್ಲಿ ಜಾನಕಿ ರಾಮುಡು ಎಂಬ ಚಿತ್ರಕ್ಕೆ ಚಿತ್ರಕಥೆ ಬರೆದರು. 1996ರಲ್ಲಿ ಕನ್ನಡದ ಅಪ್ಪಾಜಿ ಸಿನಿಮಾದ ಚಿತ್ರಕಥೆಯನ್ನು ಬರೆದಿದ್ದರು. 1996ರಲ್ಲಿ ತೆಲುಗಿನ ಅರ್ಥಾಂಗಿ ಸಿನಿಮಾಗೆ ನಿರ್ದೇಶನ ಮಾಡಿದ್ದರು. 2017ರಲ್ಲಿ ಆರಂಭ ಹಿಂದಿ ಸಿನಿಮಾಗೆ ಚಿತ್ರಕಥೆ ಬರೆದರು. 2011ರಲ್ಲಿ ತೆಲುಗಿನ ರಾಜಣ್ಣ ಚಿತ್ರಕ್ಕಾಗಿ ನಂದಿ ಪ್ರಶಸ್ತಿಯನ್ನು ಪಡೆದುಕೊಂಡರು. ಅದೇ ರೀತಿ 2015ರಲ್ಲಿ ಹಿಂದಿ ಚಿತ್ರ ಭಜರಂಗಿ ಭಾಯಿಜಾನ್ ಸಿನಿಮಾ ಕಥೆಯನ್ನು ಬರೆದಿದ್ದು, ಈ ಸಿನಿಮಾಗೆ ಅಮೋಘ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
Recommended Video