ಯಾವ ಹೈಟೆಕ್ ಶಾಲೆಗೂ ಕಡಿಮೆ ಇಲ್ಲ ಕೇರಳದ ಈ ಬಸ್ ಸ್ಕೂಲ್!
ತಿರುವನಂತಪುರಂ, ಜೂನ್ 2: ದೇಶದ ಪ್ರತಿ ಹಳ್ಳಿಯ ಮಕ್ಕಳಿಗೂ ಉತ್ತಮ ಶಿಕ್ಷಣ ದೊರೆಯುವಂತಾಗಬೇಕು, ಶಿಕ್ಷಣ ನೀಡಲು ಸರ್ಕಾರ ಹಲವು ಯೋಜನೆ ರೂಪಿಸಿ, ಕೋಟ್ಯಂತರ ಹಣವನ್ನು ಮಕ್ಕಳ ಶಿಕ್ಷಣಕ್ಕಾಗಿ ಖರ್ಚು ಮಾಡುತ್ತದೆ. ಆದರೂ ಇಂದಿಗೂ ಹಲವು ಗ್ರಾಮೀಣ ಪ್ರದೇಶದ ಶಾಲೆಗಳಿಗೆ ಸಮರ್ಪಕ ಕಟ್ಟಡದ ವ್ಯವಸ್ಥೆ ಇಲ್ಲ.
ಶಾಲಾ ಕಟ್ಟಡ ನಿರ್ಮಾಣಕ್ಕೆ ಲಕ್ಷಾಂತರ ಹಣ ಖರ್ಚು ಮಾಡಬೇಕು, ಇದಕ್ಕೆ ಎಲ್ಲಾ ಗ್ರಾಮಗಳಿಗೂ ಸೂಕ್ತ ಸಮಯದಲ್ಲಿ ಅನುದಾನ ದೊರೆತು ಕಾಮಗಾರಿ ನಡೆಯುವುದು ಕಷ್ಟದ ವಿಚಾರವೇ ಸರಿ, ಅಂತಹ ಸಂದರ್ಭದಲ್ಲಿ ಕಡಿಮೆ ಖರ್ಚಿನಲ್ಲಿ ಒಂದು ಹೈ ಟೆಕ್ ನಿರ್ಮಾಣ ಮಾಡಿದರೆ ಹೇಗೆ ಎನ್ನುವ ಪ್ರಶ್ನೆಯೊಂದಕ್ಕೆ ಕೇರಳದಲ್ಲಿ ಉತ್ತರ ಸಿಕ್ಕಿದೆ.
ಗಮನ ಸೆಳೆದ ಸರಕಾರಿ ಶಾಲಾ ವಿದ್ಯಾರ್ಥಿಗಳ ಹಳ್ಳಿ ಸೊಗಡಿನ ಪ್ರದರ್ಶನ
ಗುಜರಿಗೆ ಸೇರಬೇಕಾದ ಡಬಲ್ ಡೆಕ್ಕರ್ ಬಸ್ ಒಂದು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಶಾಲಾ ತರಗತಿಗಾಗಿ ಬದಲಾಗಿದೆ. ಆಧುನಿಕ ಸೌಲಭ್ಯವನ್ನು ಒಳಗೊಂಡಿರುವ ಈ ಬಸ್ ಶಾಲೆ ಈಗ ಸಖತ್ ಸುದ್ದಿಯಲ್ಲಿದೆ.
ಕೇರಳದ ರಾಜಧಾನಿ ತಿರುವನಂತಪುರಂ ಸಮೀಪದ ಮಣಕ್ಕಾಡ್ ಗ್ರಾಮದ ಸರ್ಕಾರಿ ಶಿಕ್ಷಕರ ತರಬೇತಿ ಸಂಸ್ಥೆಯ ಆವರಣದಲ್ಲಿ ಈ ಬಸ್ ಶಾಲೆ ಸ್ಥಾಪೆನೆಯಾಗಿದೆ.
ಗುಜರಿ ಸೇರಬೇಕಿದ್ದ ಬಸ್ ಶಾಲೆ ಆಗಿ ಬದಲಾಯ್ತು
ಗುಜರಿ ಸೇರಿದ್ದ ಕೇರಳ ರಾಜ್ಯ ಸಾರಿಗೆ ಸಂಸ್ಥೆ (ಕೆಎಸ್ಟಿಆರ್ ಸಿ) ಈಂಚಕ್ಕಲ್ ಡಿಪೋಗೆ ಸೇರಿದ ಡಬಲ್ ಡೆಕ್ಕರ್ ಬಸ್ ಇದೀಗ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ತರಗತಿ ಮತ್ತು ಮನರಂಜನೆಯ ತಾಣವಾಗಿದೆ.
ಕೇರಳ ರಾಜ್ಯ ಸಾರಿಗೆ ಸಂಸ್ಥೆಯಿಂದ ಗುಜರಿಗೆ ಹಾಕಲು ಉದ್ದೇಶಿಸಲಾದ ನೂರಾರು ಬಸ್ಗಳಲ್ಲಿ ಎರಡು ಡಬಲ್ ಡೆಕ್ಕರ್ ಬಸ್ಗಳಲ್ಲಿ ಒಂದು ಬಸ್ನಲ್ಲಿ ಎರಡು ಹಂತದ ತರಗತಿ ಸ್ಥಾಪಿಸಲಾಗಿದೆ. ಮಣಕ್ಕಾಡ್ ಸರ್ಕಾರಿ ಶಿಕ್ಷಕರ ತರಬೇತಿ ಸಂಸ್ಥೆಯ (ಟಿಟಿಐ) ಆವರಣದಲ್ಲಿರುವ ಶಾಲೆಗೆ ಬಸ್ ಅನ್ನು ಕೊಡುಗೆಯಾಗಿ ನೀಡಲಾಯಿತು.
ಮನೆ ಮನೆಗೆ ಬರಲಿದೆ ಮಾಂಟೆಸ್ಸರಿ ಮಕ್ಕಳಿಗಾಗಿ 'ಸ್ಕೂಲ್ ಆನ್ ವೀಲ್ಸ್'!
ತರಗತಿ ತುಂಬೆಲ್ಲಾ ರಂಗಿನ ಚಿತ್ತಾರ
ತರಗತಿಯಾಗಿ ಬದಲಾಗಿರುವ ಬಸ್ ಬಣ್ಣದ ಚಿತ್ತಾರದಿಂದ ಕಂಗೊಳಿಸುತ್ತಿದೆ. ಬಸ್ ಒಳಾಂಗಣ ಮತ್ತು ಹೊರಗಡೆ ಆಕರ್ಷಕವಾದ ಪೇಂಟಿಂಗ್ ಮಾಡಲಾಗಿದೆ. 'ಆಟದ ಮೂಲಕ ಕಲಿಕೆ' ಮಾದರಿಯಾಗಿಟ್ಟುಕೊಂಡು ತರಗತಿ ವಿನ್ಯಾಸ ಮಾಡಲಾಗಿದೆ. ವಿದ್ಯಾರ್ಥಿಗಳು ಕೂರಲು, ಆಟವಾಡಲು, ನಿದ್ದೆ ಮಾಡಲು ಸೌಲಭ್ಯ ಕಲ್ಪಿಸಲಾಗಿದೆ.
ಬಸ್ಸಿನ ಹೊರಗೆ ಉದ್ಯಾನ ಇದ್ದು, ಇದು ವಿದ್ಯಾರ್ಥಿಗಳಿಗೆ ಸಂಪೂರ್ಣ ಶಾಲಾ ಅನುಭವ ನೀಡಲು ಸಹಕಾರಿಯಾಗಿದೆ. ಇದು ರಾಜ್ಯದ ಮೊದಲ ಕೆಎಸ್ಆರ್ಟಿಸಿ ಬಸ್ ತರಗತಿ. 'ಕ್ಲಾಸ್ ರೂಮ್ ಆನ್ ವೀಲ್ಸ್' ಎಂದು ಹೇಳಲಾಗಿದೆ.
ಇನ್ನೊಂದು ಬಸ್ನ್ನು ತರಗತಿ ಕೊಠಡಿಯನ್ನಾಗಿ ಪರಿವರ್ತಿಸುವ ಕಾಮಗಾರಿಯು ಶೀಘ್ರದಲ್ಲೇ ಆರಂಭವಾಗಲಿದೆ. ವಿದ್ಯಾರ್ಥಿಗಳ ಕುತೂಹಲವನ್ನು ಹೆಚ್ಚು ಮಾಡುವ ಉದ್ದೇಶದಿಂದ, ಶಾಲೆಯು ಎರಡನೇ ಬಸ್ನ ಮೇಲಿನ ಡೆಕ್ನಲ್ಲಿ ಗ್ರಂಥಾಲಯ ಸ್ಥಾಪಿಸಲು ಉದ್ದೇಶಿಸಿದೆ. ಮತ್ತೊಂದು ಬಸ್ನ ಡೆಕ್ನಲ್ಲಿ ಥಿಯೇಟರ್ ಸ್ಥಾಪಿಸಲು ಕೂಡ ಯೋಜಿಸಲಾಗಿದೆ.
ಕೇರಳದಲ್ಲಿ 2 ವರ್ಷಗಳ ನಂತರ ಶಾಲೆ ಆರಂಭ
ಇನ್ನು ತರಗತಿಯಲ್ಲಿ ಟಿವಿ, ಹವಾನಿಯಂತ್ರಣ ವ್ಯವಸ್ಥೆ, ಬಣ್ಣ ಬಣ್ಣದ ಟೇಬಲ್, ಬೆಂಚು, ಪುಸ್ತಕ ಕಪಾಟಿನ ಕುರ್ಚಿಗಳಿವೆ. ಬಸ್ ಶಾಲೆಯಾಗಿ ಮಾರ್ಪಾಡಾಗಿದ್ದರೂ, ಸ್ಟೀರಿಂಗ್ ವೀಲ್ ಮತ್ತು ಡ್ರೈವರ್ ಸೀಟ್ ಅನ್ನು ಹಾಗೇ ಉಳಿಸಲಾಗಿದೆ. ಮಕ್ಕಳು ಬಸ್ ಡ್ರೈವಿಂಗ್ ಮಾಡುವ ರೀತಿ ಆಟವಾಡಬಹುದಾಗಿದೆ.
ಬಸ್ನ ಬದಿಗಳು ತಿಳಿ-ನೀಲಿ ಮತ್ತು ಹಳದಿ ಬಣ್ಣವನ್ನು ಹೊಂದಿದ್ದು, ಪಕ್ಷಿ, ಮರ, ಪ್ರಾಣಿಗಳು ಮತ್ತು ಪುಸ್ತಕಗಳ ರೇಖಾಚಿತ್ರಗಳನ್ನು ಬಿಡಿಸಲಾಗಿದೆ. ಆಕರ್ಷಕ ಪೇಂಟಿಂಗ್ ಮಕ್ಕಳನ್ನು ಶಾಲೆಯತ್ತ ಆಕರ್ಷಿಸಲು ಸಹಾಯ ಮಾಡುತ್ತದೆ. ಕೇರಳದಲ್ಲಿಕೋವಿಡ್-19 ಸಾಂಕ್ರಾಮಿಕ ಕಾರಣದಿಂದ 2 ವರ್ಷಗಳ ಸುದೀರ್ಘ ಅವಧಿಯ ನಂತರ ಬುಧವಾರ ಶಾಲೆಗಳು ಆರಂಭವಾಗಿದೆ.
ಬಸ್ ನೀಡಲು ಒಪ್ಪಿದ್ದ ಸಚಿವ
ರಾಜ್ಯ ಸಾರಿಗೆ ಸಂಸ್ಥೆಗೆ ಸೇರಿದ ಎರಡು ಬಸ್ಗಳನ್ನು ಬಳಸಿಕೊಳ್ಳಲು ರಾಜ್ಯ ಸಾರಿಗೆ ಸಚಿವ ಆಂಟನಿ ರಾಜು ಸರ್ಕಾರಿ ಶಾಲೆಗೆ ಒಪ್ಪಿಗೆ ನೀಡಿದ್ದರು. ಈಗ ಬಸ್ ತರಗತಿಯಾಗಿ ಬದಲಾಗಿದ್ದು ಅದನ್ನು ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಸುದ್ದಿಗಾರರ ಜೊತೆ ಮಾತನಾಡಿದ ಆಂಟೋನಿ ರಾಜು, "ತರಗತಿ ಕೊಠಡಿ ನಿರ್ಮಿಸಲು ಕೋಟ್ಯಂತರ ರೂಪಾಯಿ ಹಣ ವೆಚ್ಚವಾಗುತ್ತದೆ. ಆದರೆ ಈ ರೀತಿ ಯೋಜನೆ ರೂಪಿಸಿದರೆ ಕಡಿಮೆ ವೆಚ್ಚದಲ್ಲಿ ತರಗತಿಗಳನ್ನು ನಿರ್ಮಾನ ಮಾಡಬಹುದು, ಬಸ್ ನೀಡಿದ್ದರಿಂದ ಕೆಎಸ್ಆರ್ ಟಿಸಿಗೆ ಸ್ವಲ್ಪ ನಷ್ಟವಾಗಿದೆ ಅಷ್ಟೆ" ಎಂದಿದ್ದಾರೆ.
'ಕ್ಲಾಸ್ ಆನ್ ವೀಲ್ಸ್' ಉದ್ಘಾಟಿಸಿದ ಶಿಕ್ಷಣ ಸಚಿವ ವಿ.ಶಿವನಕುಟ್ಟಿ, "ಆರಂಭದಲ್ಲಿ ಅಪಹಾಸ್ಯ ಮಾಡಿದ್ದವರಿಗೆ ಈಗ ತಕ್ಕ ಉತ್ತರ ಸಿಕ್ಕಿದೆ. ಕೆಎಸ್ಆರ್ಟಿಸಿ ಬಸ್ನಲ್ಲಿ ತರಗತಿ ಸಾಧ್ಯ ಎಂದು ಯಾರೂ ಭಾವಿಸಿರಲಿಲ್ಲ, ಶಿಕ್ಷಣ ಇಲಾಖೆಗೆ ಈ ಬಸ್ ಶಾಲೆ ಹೆಮ್ಮೆ ತಂದಿದೆ" ಎಂದು ಹೇಳಿದ್ದಾರೆ.
ಬಳಕೆಯಾಗದೆ ಬಿದ್ದಿವೆ 455 ಸರ್ಕಾರಿ ಬಸ್
ಕೇರಳದಲ್ಲಿ 2,800 ಸಾರ್ವಜನಿಕ ಬಸ್ಗಳು ಡಿಪೋದಲ್ಲಿ ಬಳಕೆಯಾಗದೆ ಬಿದ್ದಿವೆ ಎಂದು ಆರೋಪಿಸಿ ಸಾರ್ವಜನಿಕ ಮೊಕದ್ದಮೆ ಹೂಡಲಾಗಿತ್ತು. ಆರೋಪವನ್ನು ನಿರಾಕರಿಸಿರುವ ಕೆಎಸ್ಆರ್ ಟಿಸಿ ಕೋವಿಡ್-19 ಕಾರಣದಿಂದಾಗಿ 1,736 ಬಸ್ಗಳು ಬಳಕೆಯಾಗದೆ ಬಿದ್ದಿವೆ ಮತ್ತು ಅವುಗಳಲ್ಲಿ 920 ಬಸ್ಗಳನ್ನು ಸ್ಕ್ರ್ಯಾಪಿಂಗ್ಗೆ ಮೀಸಲಿಡಲಾಗಿದೆ ಎಂದು ತಿಳಿಸಿದೆ.
239 ಬಸ್ಗಳು ಒಂಬತ್ತು ವರ್ಷಕ್ಕಿಂತ ಹಳೆಯವು ಮತ್ತು ಐದು ಲಕ್ಷ ಕಿಲೋ ಮೀಟರ್ಗಳಷ್ಟು ಓಡಿವೆ. ಹೀಗಾಗಿ ಅವುಗಳನ್ನು ಕೈಬಿಡಲು ನಿರ್ಧರಿಸಲಾಗಿದೆ ಎಂದು ತಿಳಿಸಿತ್ತು. ಪ್ರಸ್ತುತ, ಸುಮಾರು 455 ಬಸ್ಗಳು ಮಾತ್ರ ಬಳಕೆಯಾಗದೆ ವ್ಯರ್ಥವಾಗಿ ಬಿದ್ದಿವೆ ಎಂದು ನ್ಯಾಯಾಲಯಕ್ಕೆ ತಿಳಿಸಿತ್ತು.