ವನ್ಯಜೀವನದ ಬಗ್ಗೆ ಜಗತ್ತಿನ ಗಮನ ಸೆಳೆದ ಬೆಂಗಳೂರಿನ 'ಕೃತಿ ಕಾರಂತ್'
ಮನುಷ್ಯ ಮತ್ತು ವನ್ಯಜೀವಿಗಳ ನಡುವಿನ ಸಂಘರ್ಷ ಇಂದು ನಿನ್ನೆಯದಲ್ಲ. ಆದರೆ ಈ ಸಂಘರ್ಷ ಏರ್ಪಡದಂತೆ ಮನುಷ್ಯನಲ್ಲಿ ವನ್ಯಜೀವಿಗಳ ಬಗ್ಗೆ ಭಯಕ್ಕಿಂತ ಮಿಗಿಲಾಗಿ ಪ್ರೀತಿ ಬೆಳೆಸುವ ಮತ್ತು ಅವುಗಳ ಕುರಿತು ಕನಿಷ್ಠ ಜ್ಞಾನವನ್ನಾದರೂ ಬೆಳೆಸುವ ಪ್ರಾಮಾಣಿಕ ಪ್ರಯತ್ನವನ್ನು ಸೆಂಟರ್ ಫಾರ್ ವೈಲ್ಡ್ ಲೈಫ್ ಸ್ಟಡೀಸ್ ಎಂಬ ನಾನ್ ಪ್ರಾಫಿಟ್ ಆರ್ಗನೈಸೇಶನ್ ಮಾಡುತ್ತ ಬಂದಿದೆ.
ಪ್ರಖ್ಯಾತ ವನ್ಯಜೀವಿ ತಜ್ಞ ಡಾ.ಕೆ ಉಲ್ಲಾಸ್ ಕಾರಂತ್ ಅವರ ನೇತೃತ್ವದಲ್ಲಿ ಹುಟ್ಟಿಕೊಂಡ ಸೆಂಟರ್ ಫಾರ್ ವೈಲ್ಡ್ ಲೈಫ್ ಸ್ಟಡೀಸ್, ಈಗ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ಭಾರತ ಮಾತ್ರವಲ್ಲದೆ ಕಾಂಬೋಡಿಯಾ, ಇಂಡೋನೇಶ್ಯಾ, ಮಲೇಷ್ಯಾ, ಮಯನ್ಮಾರ್, ರಷ್ಯಾ, ಥೈಲೆಂಡ್, ಆಫ್ರಿಕಾ ಮುಂತಾದ ದೇಶಗಳಲ್ಲೂ ತನ್ನ ಯೋಜನೆಗಳನ್ನು ಪರಿಚಯಿಸುವ ಕೆಲಸ ಮಾಡಿದೆ.
ರೋಲೆಕ್ಸ್ ಪ್ರಶಸ್ತಿಯ ಹಾದಿಯಲ್ಲಿ ವನ್ಯಜೀವಿ ತಜ್ಞೆ ಕೃತಿ ಕಾರಂತ್
ಬೆಂಗಳೂರು ಮೂಲದ ಈ ಸಂಸ್ಥೆಯ ಮುಖ್ಯ ಸಂರಕ್ಷಣಾ ವಿಜ್ಞಾನಿ ಮತ್ತು ನಿರ್ದೇಶಕಿಯಾಗಿರುವ ಕೃತಿ ಕಾರಂತ್ ಅವರು ವನ್ಯಜಗತ್ತಿನ ಬಗೆಗಿನ ತಮ್ಮ ಅವಿರತ ಕೆಲಸಕ್ಕಾಗಿ ಪ್ರತಿಷ್ಠಿತ ರೋಲೆಕ್ಸ್ ಪ್ರಶಸ್ತಿಗಾಗಿ ಆಯ್ಕೆಯಾದ ಹತ್ತು ಫೈನಲಿಸ್ಟ್ ಗಳಲ್ಲಿ ಒಬ್ಬರಾಗಿದ್ದಾರೆ.
ಅಂದಹಾಗೆ, ಕೃತಿ ಅವರು ಕನ್ನಡದ ಪ್ರಸಿದ್ಧ ಸಾಹಿತಿ, ಜ್ಞಾನಪೀಠ ಪ್ರಶಸ್ತಿ ವಿಜೇತ, ಕಡಲತೀರದ ಭಾರ್ಗವ ಶಿವರಾಮ ಕಾರಂತರ ಮೊಮ್ಮಗಳು. ಮತ್ತು ವನ್ಯಜೀವಿ ತಜ್ಞ, ಸಾಹಿತಿ ಉಲ್ಲಾಸ್ ಕಾರಂತ್ ಅವರ ಪುತ್ರಿ.
ರೋಲೆಕ್ಸ್ ಪ್ರಶಸ್ತಿಯ ಹಾದಿಯಲ್ಲಿರುವ ಅವರು 'ಒನ್ ಇಂಡಿಯಾ ಕನ್ನಡ'ದ ಜೊತೆ ತಮ್ಮ ಸಾಧನೆಯ ಹಾದಿಯ ಬಗ್ಗೆ ಕೆಲ ಹೊತ್ತು ಮಾತನಾಡಿದರು. ಅದರ ಸಾರಾಂಶ ಇಲ್ಲಿದೆ.
ವೈಲ್ಡ್ ಸೇವೆ ಕುರಿತು
ಈ ಯೋಜನೆಗಾಗಿ ಕಾಡಿನಲ್ಲಿ ವಾಸವಿರುವ ಇದುವರೆಗೂ ಸುಮಾರು 10,000 ಕ್ಕೂ ಹೆಚ್ಚು ಕುಟುಂಬವನ್ನು ಭೇಟಿಯಾಗಿದ್ದು, ಅವರ ಸಮಸ್ಯೆಗಳನ್ನೂ, ವನ್ಯಪ್ರಾಣಿಗಳೊಂದಿಗಿನ ಸಂಘರ್ಷವನ್ನೂ ಹತ್ತಿರದಿಂದ ಕಾಣುವ ಪ್ರಯತ್ನ ಮಾಡಿದ್ದಾರೆ. ಜೊತೆಗೆ ವನ್ಯ ಪ್ರಾಣಿಗಳಿಂದ ಆಗುವ ಬೆಳೆ ಹಾನಿ, ಜೀವ ಹಾನಿಗೆ ಸರ್ಕಾರದ ಕಡೆಯಿಂದ ಪರಿಹಾರ ಒದಗಿಸುವ ಕೆಲಸವನ್ನೂ ಇವರು ಮಾಡಿದ್ದಾರೆ. ವನ್ಯಪ್ರಾಣಿಗಳಿಂದ ಹಾನಿಯಾದ ಗುರಿತು ಇವರ ಎನ್ ಜಿಒ ಗೆ ಯಾವುದೇ ಕರೆ ಬಂದರೂ ತಕ್ಷಣವೇ ಅಲ್ಲಿಗೆ ತೆರಳಿ ವಸ್ತು ಸ್ಥಿತಿಯನ್ನು ಅರಿತುಕೊಂಡು, ಅವರಿಗೆ ಪರಿಹಾರದ ಅಗತ್ಯವಿದೆಯೇ ಎಂಬುದನ್ನು ಅಭ್ಯಸಿಸಿ, ಅಗತ್ಯವಿದ್ದರೆ ಅದನ್ನು ಸರ್ಕಾರದ ಕಡೆಯಿಂದ ಕೊಡಿಸುವ ಕೆಲಸ ಮಾಡಲಾಗುತ್ತಿದೆ. ಇದುವರೆಗೂ 12,174 ಕುಟುಂಬಗಳು ಪರಿಹಾರಕ್ಕಾಗಿ ಅರ್ಜಿ ಹಾಕಿದ್ದರೆ 5,400 ಕುಟುಂಬಗಳು ಇದುವರೆಗೆ 1,61,64,286 ರೂ.ಗಳನ್ನು ಪರಿಹಾರದ ರೂಪದಲ್ಲಿ ಪಡೆದಿದ್ದಾರೆ.
ವೈಲ್ಡ್ ಶಾಲೆ ಬಗ್ಗೆ
ಯಾವುದೇ ಒಂದು ಬದಲಾವಣೆ ಕೈಗೊಳ್ಳಬೇಕು ಎಂದರೆ ಮೊದಲು ಮಕ್ಕಳಲ್ಲಿ ಆ ಬದಲಾವಣೆ ತರಬೇಕು. ಅದನ್ನು ಅರಿತ CWS ಸದಸ್ಯರು ನಾಗರಹೊಳೆ, ಬಂಡಿಪುರದಂಥ ಅರಣ್ಯಗಳ ವ್ಯಾಪ್ತಿಯಲ್ಲಿ ಐವತ್ತಕ್ಕೂ ಹೆಚ್ಚು ಶಾಲೆಗೆ ತೆರಳಿ ಇಲ್ಲಿನ ಮಕ್ಕಳಲ್ಲಿ ವನ್ಯಜೀವಿಗಳ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ. 3000 ಕ್ಕೂ ಹೆಚ್ಚಿನ ಮಕ್ಕಳ ಬಳಿ ಮಾತನಾಡಿ, ಅವರಲ್ಲಿ ಕಾಡು, ವನ್ಯಜೀವಿಗಳ ಬಗ್ಗೆ ಪ್ರೀತಿ ಬೆಳೆಸುವ ಮತ್ತು ಜೀವವೈವಿಧ್ಯವನ್ನು ಗೌರವಿಸುವ ಬಗ್ಗೆ ತಿಳಿವಳಿಕೆ ನೀಡುವ ಕೆಲಸ ಮಾಡಲಾಗುತ್ತಿದೆ.
ಭಾರತದ ಈ ಹುಡುಗಿಗೆ ಪ್ರವೇಶ ನೀಡಲು ಅಮೆರಿಕ ವಿವಿಯಲ್ಲಿ ಪೈಪೋಟಿ!
ಏನಿದು ರೋಲೆಕ್ಸ್ ಪ್ರಶಸ್ತಿ?
ಕಳೆದ ನಲವತ್ತು ವರ್ಷಗಳಿಂದ ಈ ಪ್ರಶಸ್ತಿಯನ್ನು ರೋಲೆಕ್ಸ್ ಕೊಡಮಾಡುತ್ತಿದ್ದು, ಇದುವರೆಗೂ 140 ಜನರಿಗೆ ಈ ಪ್ರಶಸ್ತಿ ನೀಡಲಾಗಿದೆ. ಇದರಲ್ಲಿ ಹತ್ತು ಭಾರತೀಯರು ಈ ಪ್ರಶಸ್ತಿ ಪಡೆದಿದ್ದಾರೆ. ಯಾವುದೇ ಒಂದು ಕ್ಷೇತ್ರದಲ್ಲಿ ಅಸಾಮಾನ್ಯ ಸಾಧನೆ ಮೆರೆದು ಈ ಜಗತ್ತನ್ನು ಮತ್ತಷ್ಟು ಸುಂದರವಾಗಿಸಲು ಹೊರಟವರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
ಸಾಧನೆಯ ಹಾದಿ...
ಸೆಂಟರ್ ಫಾರ್ ವೈಲ್ಡ್ ಲೈಫ್ ಸ್ಟಡೀಸ್ ನ ಸಂರಕ್ಷಣಾ ವಿಜ್ಞಾನಿ ಮತ್ತು ನಿರ್ದೇಶಕಿಯಾಗಿರುವ ಇವರು ನ್ಯಾಶ್ನಲ್ ಜಿಯಾಗ್ರಫಿಕ್ ಸೊಸೈಟಿಗೂ ಕೆಲಸ ಮಾಡುತ್ತಿದ್ದಾರೆ. ಡ್ಯೂಕ್ ಮತ್ತು ನ್ಯಾಶ್ನಲ್ ಸೆಂಟರ್ ಫಾರ್ ಬಯೋಲಾಜಿಕಲ್ ಸೈನ್ಸ್ ನಲ್ಲಿ ಸಹಾಯಕ ಬೋಧಕರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಯಾಲೆಯಲ್ಲಿ ಎಂಇಎಸ್ಸಿ ಪದವಿ, ಫ್ಲೋರಿಡಾ ವಿವಿಯಿಂದ ಬಿ ಎಸ್, ಬಿಎ ಪದವಿ ಪಡೆದಿದ್ದಾರೆ.
ಬಿಬಿಸಿ, ಅಲ್ ಜಜೀರಾ, ನ್ಯಾಶ್ನಲ್ ಜಿಯೋಗ್ರಫಿ ಸೇರಿದಂತೆ ಹಲವು ಟೆಲಿವಿಶನ್ ಚಾನೆಲ್ ಗಳಿಗೂ ಕೆಲಸ ಮಾಡಿದ್ದಾರೆ.
ICSE ಫಲಿತಾಂಶ: ಬೆಂಗಳೂರಿನ ಬಾಲಕಿ ವಿಭಾ ದೇಶಕ್ಕೆ ಪ್ರಥಮ
ಸಂದ ಗೌರವಗಳು
ಅವರ ವನ್ಯಜೀವಿ ಸಂರಕ್ಷಣೆ ಮತ್ತು ಸಂಶೋಧನೆ ವಿಷಯಕ್ಕೆ ಸಂಬಂಧಿಸಿದ ಅವರ ಕೆಲಸಗಳು(ದಿ ಹಂಟ್, ಬಿಗ್ ಕ್ಯಾಟ್ ಮತ್ತು ಡೈನಾಸ್ಟೀಸ್) ಬಿಬಿಸಿಯ ಸರಣಿಯಲ್ಲಿ ಮೂರು ಬಾರಿ ಆಯ್ಕೆಯಾಗಿದೆ. ವೈಲ್ಡ್ ಸೇವೆ, ವೈಲ್ಡ್ ಶಾಲೆ ಮತ್ತು ಹ್ಯುಮನ್ ಹೈವೇಸ್ ಎಂಬ ಮೂರು ಡಾಕ್ಯುಮೆಂತರಿಗಳನ್ನು ಅವರು ತಯಾರಿಸಿದ್ದಾರೆ. ಫ್ಲೋರಿಡಾ ವಿಶ್ವವಿದಯಾಲಯದಿಂದ ಅತ್ಯುತ್ತಮ ವಿದ್ಯಾರ್ಥಿ ಎಂಬ ಗೌರವ, ಫೆಮಿನಾದಿಂದ ಭಾರತದ ಪವರ್ ವುಮನ್ ಎಂಬ ಗರಿ ಇಲ್ಲೆ ಇಂಡಿಯಾದಿಂದ ವುಮನ್ ಆಫ್ ದಿ ಇಯರ್ ಗೌರವ ಸೇರಿದಂತೆ ಹತ್ತು ಹಲವಾರು ಗೌರವಗಳನ್ನು ಮುಡಿಗೇರಿಸಿಕೊಂಡಿರುವ ಇವರು ಇದೀಗ 2019 ರ ಪ್ರತಿಷ್ಠಿತ ರೋಲೆಕ್ಸ್ ಪ್ರಶಸ್ತಿಯ ಹಾದಿಯಲ್ಲಿದ್ದಾರೆ. ಅವರಿಗೆ ನಮ್ಮ ಶುಭಾಶಯ.