ಎಚ್ಡಿಕೆ ಭಯಂಕರ ಟೀಕೆಗೂ ಡಿಕೆಶಿ 'ಮಿಲಿಯನ್ ಡಾಲರ್' ಮೌನ: ಏನೀ ಮರ್ಮ?
ಸಮ್ಮಿಶ್ರ ಸರಕಾರ ಪತನದ ಆರಂಭದ ದಿನಗಳಲ್ಲಿ ಬಿಜೆಪಿ ನಾಯಕರನ್ನು ಒಂದೇ ಸಮನೆ ಟೀಕಿಸುತ್ತಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಂತರದ ದಿನಗಳಲ್ಲಿ ತಿರುಗಿ ಬೀಳಲಾರಂಭಿಸಿದ್ದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ವಿರುದ್ದ.
ಆದರೆ, ಇತ್ತೀಚಿನ ದಿನಗಳಲ್ಲಿ ಬಿಜೆಪಿ ನಾಯಕರಿಗಿಂತ ಕಾಂಗ್ರೆಸ್ ಮುಖಂಡರನ್ನೇ ಟಾರ್ಗೆಟ್ ಮಾಡುತ್ತಿರುವ ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ದವೂ ವಾಗ್ದಾಳಿಯನ್ನು ಶುರು ಹಚ್ಚಿಕೊಂಡಿದ್ದಾರೆ.
ಮೂವರು ನಾಯಕರ ಬಗ್ಗೆ ಮಾತನಾಡುವಷ್ಟು ಶಕ್ತಿ ನನಗಿಲ್ಲ: ಡಿಕೆಶಿ
ಆದರೆ, ಇಲ್ಲಿ ಗಮನಿಸಬೇಕಾದ ಅಂಶವೇನಂದರೆ, ದಳಪತಿಗಳ ಟೀಕೆಗೆ ಸಮರ್ಥವಾಗಿ ಸಿದ್ದರಾಮಯ್ಯ ಉತ್ತರಿಸುತ್ತಿದ್ದಾರೆ, ಆದರೆ, ಇದೇ ಮಾತು ಡಿಕೆಶಿಗೆ ಅನ್ವಯವಾಗುವುದಿಲ್ಲ. ಸಮ್ಮಿಶ್ರ ಸರಕಾರ ಪತನದಿಂದ ಹಿಡಿದು ಈಗಿನವರೆಗೂ ಕುಮಾರಸ್ವಾಮಿ ವಿರುದ್ದ ತೀವ್ರವಾಗಿ ಡಿಕೆಶಿ ತಿರುಗೇಟು ಕೊಟ್ಟ ಉದಾಹರಣೆಯೇ ಕಮ್ಮಿ ಎನ್ನಬಹುದು.
ಹಳೇ ಮೈಸೂರು ಭಾಗದ ಜೆಡಿಎಸ್ ಮುಖಂಡರು, ಗೌಡ್ರ ಕುಟುಂಬದ ಜೊತೆಗೆ ಅಂತರವನ್ನು ಕಾಯ್ದುಕೊಳ್ಳುತ್ತಿರುವುದಕ್ಕೆ ಎಚ್.ಡಿ.ಕುಮಾರಸ್ವಾಮಿ ಗುರಿಯಾಗಿರಿಸಿರುವುದು ಡಿಕೆಶಿಯನ್ನು. ತಮ್ಮ ಪತ್ರಿಕಾಗೋಷ್ಠಿ, ಸಂದರ್ಶನದಲ್ಲಿ ಬಹುಪಾಲು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರನ್ನು ತರಾಟೆ ತೆಗೆದುಕೊಳ್ಳಲು ಕುಮಾರಸ್ವಾಮಿ ಮೀಸಲಿಟ್ಟರೂ, ಅಂತದ್ದೇ ತಿರುಗೇಟು ಡಿಕೆಶಿ ಕಡೆಯಿಂದ ಬರುತ್ತಿಲ್ಲ ಎನ್ನುವುದು ವಾಸ್ತವತೆ.
'ಡಿಕೆಶಿ ಜೊತೆ ಹೆಜ್ಜೆ ಹಾಕುವಾಗ ಹುಷಾರ್, ಹಾಗೇ ತಿಹಾರ್ ಜೈಲಿಗೆ ಕರೆದೊಯ್ದು ಬಿಟ್ಟಾರು'
ನರೇಂದ್ರ ಮೋದಿಯವರೇ ಕುಮಾರಸ್ವಾಮಿಗೆ ಬಿಜೆಪಿ ಬೆಂಬಲದ ಆಫರ್
ತಮ್ಮ ನೇತೃತ್ವದ ಸಮ್ಮಿಶ್ರ ಸರಕಾರ ಪತನಗೊಂಡ ನಂತರ ತಮ್ಮಾಪ್ತರಲ್ಲಿ ಕಾಂಗ್ರೆಸ್ ನಂಬುವ ಬದಲು ಬಿಜೆಪಿಯನ್ನು ನಂಬಿದ್ದರೆ, ಐದು ವರ್ಷಕ್ಕೆ ನಾನೇ ಮುಖ್ಯಮಂತ್ರಿಯಾಗಿದ್ದೆ, ನಾನು ತಪ್ಪು ಮಾಡಿದೆ ಎನ್ನುವ ಮಾತನ್ನು ಎಚ್.ಡಿ.ಕುಮಾರಸ್ವಾಮಿ ಹೇಳಿದ್ದರು. ದೇವೇಗೌಡ್ರ ಆತ್ಮಕಥನದಲ್ಲಿ ಈ ರಾಜಕೀಯ ವಿದ್ಯಮಾನವು ಉಲ್ಲೇಖವಾಗಿತ್ತು ಕೂಡಾ. ನೀತಿ ಆಯೋಗದ ಸಭೆಯ ವೇಳೆ ನೇರವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರೇ ಕುಮಾರಸ್ವಾಮಿಗೆ ಬಿಜೆಪಿ ಬೆಂಬಲದ ಆಫರ್ ಅನ್ನು ನೀಡಿದ್ದರು. ಆದರೆ, ತಂದೆಗೆ ಗೌರವ ಕೊಡಲು ನಾನು ಆ ಆಫರ್ ಅನ್ನು ನಿರಾಕರಿಸಿದ್ದೆ ಎಂದು ಕುಮಾರಸ್ವಾಮಿ ಹೇಳಿದ್ದು ಪುಸ್ತಕದಲ್ಲಿ ಉಲ್ಲೇಖವಾಗಿತ್ತು.
|
ಕೋಟೆ ಕೊತ್ತಲಗಳನ್ನು ಕಟ್ಟಿಕೊಂಡು ಮೆರೆಯುತ್ತಿರುವ ಡಿಸೈನ್ ವೀರ
ಇತ್ತೀಚೆಗೆ ನಡೆದ ರಾಮನಗರದಲ್ಲಿನ ವಿದ್ಯಮಾನದ ಬಗ್ಗೆಯೂ ಕುಮಾರಸ್ವಾಮಿ ಡಿಕೆ ಬ್ರದರ್ಸ್ ವಿರುದ್ದ ಹರಿತವಾದ ಪದಗಳನ್ನು ಬಳಸಿ ವಾಕ್ ಪ್ರಹಾರ ನಡೆಸಿದ್ದರು. "ಕಲ್ಲು ಬಂಡೆಗಳನ್ನು ನುಂಗಿ, ಮಣ್ಣು ಬಗೆದು ಪರರಿಗೆ ಬಿಕರಿ ಮಾಡಿಕೊಂಡು ಕೋಟೆ ಕೊತ್ತಲಗಳನ್ನು ಕಟ್ಟಿಕೊಂಡು ಮೆರೆಯುತ್ತಿರುವ ʼಡಿಸೈನ್ ವೀರರಿಗೆʼ ನಮ್ಮ ನೆಲ, ನಮ್ಮ ಜಲ ಎನ್ನುವುದು ಈಗ ನೆನಪಿಗೆ ಬಂದಿದೆ. ಅಭದ್ರತೆ ಅಡಿಪಾಯವನ್ನೇ ಅಲ್ಲಾಡಿಸುತ್ತಿದೆ! ಅಲ್ಲವೇ?" ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದರು.
ಮೇಕೆದಾಟು ಪಾದಯಾತ್ರೆಯ ವಿಚಾರದಲ್ಲೂ ಡಿಕೆಶಿ ಟಾರ್ಗೆಟ್
ಇನ್ನೆರಡು ದಿನಗಳಲ್ಲಿ ಆರಂಭವಾಗಲಿರುವ ಮೇಕೆದಾಟು ಪಾದಯಾತ್ರೆಯ ವಿಚಾರದಲ್ಲೂ ಕುಮಾರಸ್ವಾಮಿಯವರ ಟಾರ್ಗೆಟ್ ಡಿ.ಕೆ.ಶಿವಕುಮಾರ್ ಅವರು. "ಸಹೋದರ, ಕುಮಾರಣ್ಣ ಎಂದೆಲ್ಲಾ ನಾಟಕವಾಡುವುದು ಬೇಡ, ಅವರ ಎಲ್ಲಾ ನಾಟಕವನ್ನು ಅರಿಯದಷ್ಟು ಬುದ್ದಿಯಿಲ್ಲದವನು ನಾನಲ್ಲ. ಎತ್ತಿನಹೊಳೆಯನ್ನು ಕೈಗೆತ್ತಿಕೊಂಡರು ಅದನ್ನು ಅರ್ಧಕ್ಕೇ ಬಿಟ್ಟರು. ಇವರ ಡ್ರಾಮಾ ರಾಜಕೀಯ ಎಲ್ಲಾ ಜನರಿಗೆ ಅರ್ಥವಾಗುತ್ತದೆ"ಎಂದು ಶುಕ್ರವಾರದ ಮಾಧ್ಯಮಗೋಷ್ಠಿಯಲ್ಲೂ ಕುಮಾರಸ್ವಾಮಿಯವರು ಡಿಕೆಶಿ ವಿರುದ್ದ ಹರಿಹಾಯ್ದರು.
ಮಾನ್ಯ ಕುಮಾರಸ್ವಾಮಿಯವರೇ ಎಂದು ಹೇಳುತ್ತೇನೆ
ಕುಮಾರಸ್ವಾಮಿ ವಾಗ್ದಾಳಿಯ ಬಗ್ಗೆ ಪ್ರತಿಕ್ರಿಯಿಸಿರುವ ಡಿಕೆಶಿ, "ಆಯ್ತು ಇನ್ನು ಮುಂದೆ ಕುಮಾರಣ್ಣ ಎಂದು ಹೇಳುವುದಿಲ್ಲಾ, ಮಾನ್ಯ ಕುಮಾರಸ್ವಾಮಿಯವರೇ ಎಂದು ಹೇಳುತ್ತೇನೆ. ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡುವುದಿಲ್ಲ"ಎಂದಷ್ಟೇ ಹೇಳಿದರು. ಯಾಕೆ ಸರ್, ಕುಮಾರಸ್ವಾಮಿಯವರು ಎಷ್ಟೇ ಟೀಕಿಸಿದರೂ ಸುಮ್ಮನಿದ್ದೀರಾ ಎನ್ನುವ ಪ್ರಶ್ನೆಗೆ ಡಿಕೆಶಿ ಉತ್ತರಿಸಲಿಲ್ಲ. ನಿಮ್ಮ ಟೀಕೆಗೆ ಡಿಕೆಶಿ ಏನೂ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ಕುಮಾರಸ್ವಾಮಿಯವರನ್ನು ಕೇಳಿದರೆ, ಅವರಿಗೆ ನೈತಿಕತೆಯಿಲ್ಲ ಎಂದು ಗೋಷ್ಠಿಯಿಂದ ಹೊರ ನಡೆದರು. ಡಿಕೆಶಿ ಯಾಕೆ ಗೌಡ್ರ ಕುಟುಂಬದ ವಿರುದ್ದ ತಿರುಗಿಬೀಳುತ್ತಿಲ್ಲ ಎನ್ನುವ ಪ್ರಶ್ನೆಗೆ ಕೆಲವೊಂದು ಸಾಧ್ಯತೆಗಳು ಮುಂದಿನ ಸ್ಲೈಡಿನಲ್ಲಿ..
ಒಕ್ಕಲಿಗ ಸಮುದಾಯದ ಪ್ರಶ್ನಾತೀತ ನಾಯಕರಾಗಿರುವ ದೇವೇಗೌಡರ ಕುಟುಂಬ
ಅಳೆದುತೂಗಿ ಹೇಳಿಕೆಯನ್ನು ನೀಡುತ್ತಿರುವ ಡಿಕೆಶಿ, ಟೀಕೆಗಳಿಗೆ ಉದಾಸೀನತೆಯೇ ಮದ್ದು ಎನ್ನುವ ನಿರ್ಧಾರಕ್ಕೆ ಬಂದಿರಬಹುದು. ಬಿಜೆಪಿ ಸರಕಾರವನ್ನು ಟೀಕಿಸುವಾಗಲೂ, ಡಿಕೆಶಿ ಹಿಂದಿನ ಶಿವಕುಮಾರ್ ಅಲ್ಲ ಎನ್ನುವುದು ಸ್ಪಷ್ಟ. ಇನ್ನು, ಒಕ್ಕಲಿಗ ಸಮುದಾಯದ ಪ್ರಶ್ನಾತೀತ ನಾಯಕರಾಗಿರುವ ದೇವೇಗೌಡರ ಕುಟುಂಬವನ್ನು ಎದುರು ಹಾಕಿಕೊಂಡರೆ ಒಕ್ಕಲಿಗರ ಮತಬ್ಯಾಂಕನ್ನೇ ಎದುರು ಹಾಕಿಕೊಂಡಂತೆ ಎನ್ನುವ ನಿರ್ಧಾರಕ್ಕೆ ಬಂದು, ಅವರ ಬೈಗುಳವನ್ನೆಲ್ಲಾ ಸಹಿಸಿಕೊಂಡು ಒಳ್ಳೆಯವರೆಂದು ತೋರಿಸಿಕೊಳ್ಳಲು ಸುಮ್ಮನಿದ್ದರೂ ಇದ್ದಿರಬಹುದು. ಯಾಕೆಂದರೆ ತಾಳಿದವನು ಬಾಳಿಯಾನು ಎಂದು ಹಲವು ಬಾರಿ ಹೇಳುತ್ತಿರುವ ಡಿಕೆಶಿಯ ಮುಂದೆ ಇರುವುದು ಒಂದೇ.. ಅದು.. ಮಹತ್ವಾಕಾಂಕ್ಷೆಯ ಮುಖ್ಯಮಂತ್ರಿ ಕುರ್ಚಿ. ಹಾಗಾಗಿ, ದಳಪತಿಗಳ ಟೀಕೆ ಟಿಪ್ಪಣಿಗಳನ್ನು ಅರಗಿಸಿಕೊಂಡು ಕೂತಿರಬಹುದು.