ಕಾರಂತಜ್ಜ ಎಂಬ ವಿಸ್ಮಯಕ್ಕೆ ನುಡಿ ನಮನ
ವಿಶ್ವ
ಮಾನವನಾಗೆ
ಕಷ್ಟವಿನಿತಿಲ್ಲ
ವಿಶ್ವವನು
ಮುಷ್ಟಿಯಲಿ
ಹಿಡಿವುದೊಂದೇ
ಸಂದಕಾಲದ
ಬದುಕ
ಕಂಡಿರ್ಪೆಯೇನು?
ಬರುವ
ಕಾಲದ
ಎಟುಕ
ಅಳೆವೆಯೇನು?
ಯಾರಲ್ಲ
ಮಾನವರು,
ಯಾರಿಹರು
ಅವರೆಂದು-
ಕಾಲಮಾನವ
ಬದುಕ
ಬಲ್ಲೆಯೇನು?
ಒಂಟಿ
ಮಾನವ
ತಲೆಯ
ಕಿರಿ
ಹೇನು
ನೀನು.
ವಿಶ್ವಮಾನವನಾಗಬಯಸುವ ಕನಸಿಗರಿಗೆ ಕಾರಂತಜ್ಜ ಹೇಳಿರುವುದು ಹೀಗೆ. ವಿಶ್ವಮಾನವ ಎಂಬ ಪದಕ್ಕೆ ಅನ್ವರ್ಥವಾಗಿ ಬದುಕಿದವರು ಕೋಟ ಶಿವರಾಮ ಕಾರಂತರು.
ಅಕ್ಟೋಬರ್ 10 ಕಾರಂತಜ್ಜನ ಜನ್ಮದಿನ. ಗದ್ಯರೂಪದಲ್ಲಿ ಅವರ ಅನೇಕ ಬರವಣಿಗೆಗಳು ಕಾಣಸಿಕ್ಕರೂ, ಅವರ ಕವನ ಸಂಕಲನಗಳು ಹೆಚ್ಚು ಪ್ರಚಲಿತವಾಗದಿದ್ದದ್ದೂ ಯಾಕೋ ಗೊತ್ತಿಲ್ಲ. ರಾಷ್ಟ್ರಗೀತ ಸುಧಾಕರ ಇವರ ಮೊದಲ ಸಂಕಲನ. ಮೇಲ್ಕಂಡ ಸಾಲುಗಳು ಸೇರಿದಂತೆ 55 ಕ್ಕೂ ಹೆಚ್ಚು ಕವನಗಳನ್ನೊಳಗೊಂಡ 'ಸೀಳ್ಗವನಗಳು' ಸಂಕಲನದಲ್ಲಿ ಮೂಡಿದವು.
ಪ್ರಯೋಗ ಶೀಲತೆಗೆ ಮತ್ತೊಂದು ಹೆಸರಾಗಿದ್ದ ಕಾರಂತಜ್ಜ ಇಂದಿನ ತಲೆಮಾರಿಗೆ ಒಂದು ವಿಸ್ಮಯ ವ್ಯಕ್ತಿ. ಸಾಹಿತ್ಯ, ಸಿನಿಮಾ, ನಾಟಕ, ಯಕ್ಷಗಾನ ಮುಂತಾದ ಕಲಾವಿಭಾಗವಲ್ಲದೆ ಅಲ್ಲದೆ ಸಮಾಜ ಸುಧಾರಣೆ, ಪರಿಸರ, ಪ್ರಾಣಿ, ಪಕ್ಷಿಗಳ ಸಂರಕ್ಷಣೆಗೂ ಮುಂದಾಗಿದ್ದವರು.
ಕಾರಂತರೆಂದರೆ ನಿಜಕ್ಕೂ ವಿಸ್ಮಯ: ಕಾರಂತರ ಆಸಕ್ತಿ ವಿಷಯಗಳಲ್ಲಿ ಸಾಹಿತ್ಯ, ರಂಗಭೂಮಿ, ಚಲನಚಿತ್ರ, ವಿಜ್ಞಾನ, ಚಿತ್ರಕಲೆ, ಸಂಗೀತ, ಶಿಕ್ಷಣ, ರಾಜಕೀಯ, ಪತ್ರಿಕೋದ್ಯಮ, ಭಾಷೆ, ಸಂಸ್ಕೃತಿ ಹೀಗೆ ಪಟ್ಟಿ ಬೆಳೆಯುತ್ತದೆ. ಒಬ್ಬ ವ್ಯಕ್ತಿ ತನ್ನ ಜೀವತಾವಧಿಯಲ್ಲಿ ಇಷ್ಟೆಲ್ಲ ಅಭಿರುಚಿಗಳನ್ನು ಮೈಗೂಡಿಸಿಕೊಂಡು 'ದೇಶ ಸುತ್ತು, ಕೋಶ ಓದು' ಎಂಬುದಕ್ಕೆ ನಿದರ್ಶನದಂತೆ ಬದುಕಿದ್ದು ನಿಜಕ್ಕೂ ವಿಸ್ಮಯ.
ಮೊದಲಿಗೆ ಕಾರಂತರ ಕೃತಿಗಳಲ್ಲಿ 'ಬಾಲ ಪ್ರಪಂಚ', 'ವಿಜ್ಞಾನ ಪ್ರಪಂಚ', ಪ್ರಾಣಿ ಪ್ರಪಂಚ ಇಷ್ಟವಾಯಿತು. ಆ ಕಾಲದಲ್ಲೇ ಸರಳವಾಗಿ ಸಚಿತ್ರ ವಿವರಣೆ ನೀಡಿ ವಿವರಿಸಿದ್ದು ಹೇಗೆ ಎಂಬುದು ಇಂದಿಗೂ ಅಚ್ಚರಿಯ ವಿಷಯ. ಸಿರಿಗನ್ನಡ ಅರ್ಥಕೋಶವಿರಬಹುದು, ಶೈಕ್ಷಣಿಕ ವಿಷಯವಾಗಿ ಬರೆದಿರುವ ಕೃತಿಗಳಿರಬಹುದು ಇಂದಿಗೂ ಬಹು ಉಪಯುಕ್ತವಾಗಿವೆ.
"ಕಡಲತೀರದ ಭಾರ್ಗವ", "ನಡೆದಾಡುವ ವಿಶ್ವಕೋಶ" ಎಂದೇ ಖ್ಯಾತರಾಗಿದ್ದ ಕನ್ನಡ ಸಾಹಿತ್ಯ-ಸಂಸ್ಕೃತಿಯ ವಕ್ತಾರ, ಕವಿ, ಕಾದಂಬರಿಕಾರ, ನಾಟಕಕಾರ, ಅನುವಾದಕ, ವೈಜ್ಞಾನಿಕ ಬರಹಗಾರರಾಗಿದ್ದ ಕಾರಂತರು ಯಾವುದೇ. ವಿಶ್ವ ವಿದ್ಯಾನಿಲಯಗಳಲ್ಲಿ ಪದವಿ, ಸ್ನಾತಕೋತ್ತರ ಪದವಿ ಪಡೆದವರಲ್ಲ, ಅನುಭವವನ್ನೇ ಸಾಹಿತ್ಯವನ್ನಾಗಿಸಿದವರು. ಜ್ಞಾನಪೀಠ, ಪದ್ಮಭೂಷಣ, ಪಂಪ ಪ್ರಶಸ್ತಿ, ನಾಡೋಜ ಪುರಸ್ಕಾರ, ಎಂಟು ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್ಗಳು ಇವರಿಗೆ ಸಂದಿವೆ.
ಕರ್ನಾಟಕ ಲೋಕಮಾನ್ಯ, ಮಾನವತಾವಾದಿ, ಪರಿಸರಪ್ರಿಯ ಕಾರಂತಜ್ಜನ ಬಗ್ಗೆ ಅವರ ಕೃತಿಗಳ ಬಗ್ಗೆ ಪ್ರತಿ ಬಾರಿ ಓದುವಾಗಲು ಹೊಸ ವಿಷಯ, ಆಲೋಚನೆ ಹುಟ್ಟುವಂತೆ ಮಾಡುತ್ತದೆ. ನಮ್ಮ ಹುಟ್ಟು ಜೀವನಕ್ಕೆ ಅರ್ಥ ಕಂಡುಕೊಳ್ಳಬೇಕಾದರೆ ಕಾರಂತಜ್ಜನ ಪಥ ಒಮ್ಮೆಯಾದರೂ ನಾವು ತುಳಿಯಬೇಕಿದೆ.