ವಿಶೇಷ ಮಹಿಳೆ; ಅಪರೂಪದ ಬೆಳೆಗಳ ಬೀಜ ಸಂರಕ್ಷಣೆ ಮಾಡುವ ಬೀಜ ಮಾತೆ ಪಾಪಮ್ಮ
ಕೋಲಾರ, ಜನವರಿ 20: ನಾವೆಲ್ಲ ವೃಕ್ಷಮಾತೆ ಅಂತಲೇ ಹೆಸರು ಮಾಡಿದ ಸಾಲು ಮರದ ತಿಮ್ಮಕ್ಕರನ್ನು ಬಹಳ ಚೆನ್ನಾಗಿಯೇ ಬಲ್ಲೆವು. ಅವರವಂತೆಯೇ ಕೋಲಾರದಲ್ಲೊಬ್ಬರು ಬೀಜ ಮಾತೆ ಇದ್ದಾರೆ.
ನಮ್ಮ ಮುಂದಿನ ತಲೆಮಾರಿನ ಮಕ್ಕಳಿಗೆ ಉತ್ತಮವಾದ ಆರೋಗ್ಯಕ್ಕಾಗಿ ನಾವು ಸಾವಯವ ಕೃಷಿಯನ್ನು ಮಾಡಬೇಕಿದೆ ಅನ್ನೋದು ಇವರ ಆಶಯ. ಇದಕ್ಕಾಗಿ ಇವರು ಕಳೆದ ಮೂರು ದಶಕಗಳಿಂದ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ. ಈ ಬೀಜ ಮಾತೆ ಯಾರು, ಇವರು ಕೈಗೊಂಡಿರುವ ಯಾವ ಕೆಲಸ ಇವರಿಗೆ ಬೀಜಮಾತೆ ಎನ್ನಲು ಏನು ಕಾರಣ ಅನ್ನೋದು ನಿಮ್ಮ ಪ್ರಶ್ನೆಯೇ, ಆಗಿದ್ದರೆ ಮುಂದೆ ಓದಿ...
ಪತಿಯೊಂದಿಗೆ ಸೇರಿ ಮೂವತ್ತು ವರ್ಷಗಳಿಂದ ಈ ಕಾಯಕ
ಇದು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಸಣ್ಣ ಗ್ರಾಮ ಡಿ.ಕುರುಬರಹಳ್ಳಿ. ಆಂಧ್ರಪ್ರದೇಶಕ್ಕೆ ಹೊಂದಿಕೊಂಡಿರುವ ಈ ಗ್ರಾಮದಲ್ಲಿ ಬೀಜಮಾತೆ ಪಾಪಮ್ಮರ ಸಮಾಜ ಸೇವೆ ಸದ್ದಿಲ್ಲದೆ ಸಾಗಿದೆ. ಅಷ್ಟಕ್ಕೂ ಇವರು ಮಾಡುತ್ತಿರುವ ಸಾಧನೆ ಏನೆಂದರೆ, ಅದು ಅಚ್ಚ ನಾಟಿ ತಳಿಗಳ ಮತ್ತು ಅಪರೂಪದ ವಿವಿಧ ಬೆಳೆಗಳ ಬೀಜಗಳನ್ನು ಸಂರಕ್ಷಣೆ ಮಾಡೋದು. ಮುಂದಿನ ದಿನಗಳಲ್ಲಿ ಇವುಗಳ ಅವಶ್ಯಕತೆ ಕುರಿತು ಅರಿವು ಮೂಡಿಸುವ ಕೆಲಸ ಈ ಬೀಜ ಮಾತೆ ಮಾಡುತ್ತಿದ್ದಾರೆ. ತಮ್ಮ ಪತಿಯೊಂದಿಗೆ ಸೇರಿ ಮೂವತ್ತು ವರ್ಷಗಳಿಂದ ಈ ಕಾಯಕದಲ್ಲಿ ತೊಡಗಿರುವ ಪಾಪಮ್ಮಗೆ ಈ ಕೆಲಸವೇ ಸಾಕಷ್ಟು ಪ್ರಸಿದ್ಧಿಯನ್ನು ತಂದು ಕೊಟ್ಟಿದೆ.
ತುಂಡು ಜಮೀನು, ವಿವಿಧ ಬೆಳೆ; ಮಾದರಿಯಾದ ಕೋಲಾರದ ರೈತ
ಅತ್ತೆ ಮತ್ತು ಮಾವನವರಿಂದ ಕಲಿತ ಈ ಕಲೆ
ಕುರುಬರಹಳ್ಳಿಯ ಪಾಪಮ್ಮ ಬಳಿ ಈಗ 150ಕ್ಕೂ ಹೆಚ್ಚು ತರಹದ ಅಚ್ಚ ನಾಟಿ ತಳಿ ಬೆಳೆಗಳ ಅಪರೂಪದ ಬೀಜಗಳು ಸಂರಕ್ಷಿಸಲ್ಪಟ್ಟಿವೆ. ಇವರ ಮನೆಯಲ್ಲಿ ನಾವೇನಾದರೂ ಒಳ ಹೊಕ್ಕರೆ ಅಲ್ಲಿ ನೂರಾರು ಮಾದರಿಯ ಸಾವಯವ ಕೃಷಿಯ ಬೀಜಗಳ ಕಾಣಬಹುದು. ಈ ಹಿಂದೆ ಇವರ ಬಳಿ 250ಕ್ಕೂ ಹೆಚ್ಚು ವಿವಿಧ ತಳಿಯ ಬೀಜಗಳ ಇದ್ದವಂತೆ. ಮಧ್ಯೆ ಬಂದ ಬರದಿಂದಾಗಿ ಈಗ ಕೆಲವು ಇಲ್ಲ. ಆದರೆ, ಮತ್ತೆ ಅವುಗಳನ್ನು ಸಂಗ್ರಹ ಮಾಡ್ತಾರಂತೆ. ತಮ್ಮ ಅತ್ತೆ ಮತ್ತು ಮಾವನವರಿಂದ ಕಲಿತ ಈ ಕಲೆಯನ್ನು ಪಾಪಮ್ಮ ಈಗಲೂ ಮುಂದುವರೆಸಿದ್ದಾರೆ. ನೂರಾರು ವರ್ಷ ಹಳೆಯದಾದ ಮಣ್ಣಿನ ಮಡಿಕೆಗಳಲ್ಲಿ ಈ ಬೀಜ ಸಂರಕ್ಷಣೆಯ ವಿಶೇಷ ಮಾದರಿ ಮುಂದುವರೆದಿದೆ. ಇವರ ಮನೆಯಲ್ಲಿ ಇರುವ ಯಾವುದೇ ಹಳೇ ಡಬ್ಬ ತೆಗೆದರೂ ಸಹ ಸಾವಯವ ಮತ್ತು ಅಪರೂಪದ ಬೀಜಗಳು ಸಿಗುತ್ತವೆ.
ಪಾಪಮ್ಮರನ್ನು ಹಲವು ಸಂಘ-ಸಂಸ್ಥೆಗಳು ಗೌರವಿಸಿದೆ
ಪಾಪಮ್ಮಗೆ ಒಂದು ಎಕರೆ ಭೂಮಿ ಇದೆ. ಇದರಲ್ಲಿ ತಾವೇ ಕೃಷಿ ಮಾಡುತ್ತಾ ಈ ಬೀಜ ಸಂರಕ್ಷಣೆ ಕಾಯಕ ಮುಂದುವರೆಸಿದ್ದಾರೆ. ಭತ್ತ, ಸಜ್ಜೆ, ನೊಣವೆ ಹಾಗೂ ತರಕಾರಿ ಬೀಜಗಳು ಸೇರಿದಂತೆ ಯಾವುದೇ ತಳಿಯ ಬೀಜವನ್ನು ಕೇಳಿದರು ಪಾಪಮ್ಮ ಇಲ್ಲವೆನ್ನುವುದಿಲ್ಲ. ಹೀಗೆ... ಸಂರಕ್ಷಿಸಲ್ಪಟ್ಟ ಬೀಜಗಳನ್ನು ರೈತರಿಗೆ ಉಚಿತವಾಗಿಯೇ ನೀಡುವ ಪಾಪಮ್ಮ, ನಂತರ ಅದರ ಎರಡು ಪಟ್ಟು ವಾಪಸ್ಸು ಕೊಡಬೇಕು ಅನ್ನುವ ಷರತ್ತು ವಿಧಿಸಿ ನೀಡುತ್ತಾರೆ. ಇವರ ಈ ಸಾಧನೆ ರಾಜ್ಯದಲ್ಲಿಯೇ ಅಲ್ಲ ದೇಶಾದ್ಯಂತ ಕೂಡಾ ಪಸರಿಸಿದೆ. ದೂರದ ಊರಿಗಳಿಂದ ಇವರನ್ನು ಹುಡುಕಿಕೊಂಡು ಬರುವರು ಇದ್ದಾರೆ. ಕೃಷಿಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಪಾಪಮ್ಮರನ್ನು ಹಲವು ಸಂಘ-ಸಂಸ್ಥೆಗಳು ಗೌರವಿಸಿದೆ. ತುಂಬಾನೇ ಸೂಕ್ಷ್ಮ ಮನಸ್ಸಿನ ಪಾಪಮ್ಮ ಎಲ್ಲರಿಗೂ ಬೆಲೆ ಕೊಟ್ಟು ಕೃಷಿಯಲ್ಲಿ ಸಾವಯವದ ಅವಶ್ಯಕತೆ ಕುರಿತು ಅರಿವು ಮೂಡಿಸುತ್ತಾರೆ.
ಕೃಷಿಯ ಕುರಿತು ಅವರ ಜ್ಞಾನ ನಿಜಕ್ಕೂ ಶ್ಲಾಘನೀಯ
ಒಟ್ಟಿನಲ್ಲಿ, ರಸಾಯನಿಕ ಗೊಬ್ಬರ ಮತ್ತು ಬಯೋಟೆಕ್ ಮಾದರಿಯ ಬೀಜಗಳಿಂದ ಇವತ್ತಿನ ಕೃಷಿ ಕ್ಷೇತ್ರವೂ ಕೂಡ ಹಲವು ಅಪಾಯಗಳನ್ನು ಎದುರಿಸುತ್ತಿದೆ. ಆದರೆ, ಸಾವಯವ ಮಾದರಿಯಿಂದಲೇ ಬೆಳೆಯಲಾದ ಮತ್ತು ಯಾವುದೇ ರಸಾಯನಿಕಗಳನ್ನು ಬಳಸದ ಬೆಳೆಯಿಂದ ಬಂದ ಖಾದ್ಯ ಧಾನ್ಯಗಳ ಸಂರಕ್ಷಣೆಯನ್ನು ಮಾಡುತ್ತಿರುವ ಪಾಪಮ್ಮ, ನಿಜಕ್ಕೂ ಅನಕ್ಷರಸ್ಥೆ ಅಲ್ಲವೇ ಅಲ್ಲ. ಕೃಷಿಯ ಕುರಿತು ಅವರ ಜ್ಞಾನ ನಿಜಕ್ಕೂ ಶ್ಲಾಘನೀಯ.