ಭಾರತದ ಕೊಹಿನೂರ್ ವಜ್ರ -ಬ್ರಿಟಿಷರ ಕೈ ಸೇರಿದ ರಹಸ್ಯ ಬಯಲು
ನವದೆಹಲಿ, ಅಕ್ಟೋಬರ್ 17: ಬ್ರಿಟಿಷರ ಸುಪರ್ದಿಯಲ್ಲಿರುವ ಜಗತ್ ಪ್ರಸಿದ್ಧ, ಅತ್ಯಂತ ದುಬಾರಿ ವಜ್ರ ಕೊಹಿನೂರು, ಭಾರತಕ್ಕೆ ವಾಪಸ್ ತರಲು ಯತ್ನಿಸಿದ್ದ ಮೋದಿ ಸರ್ಕಾರಕ್ಕೆ ಈಗಾಗಲೇ ಹಿನ್ನಡೆಯಾಗಿದೆ. ಈಗ ಕೊಹಿನೂರ್ ವಜ್ರವನ್ನು ಬ್ರಿಟಿಷರ ಕೈಗೆ ನೀಡಿದ್ದಲ್ಲ, ಅದನ್ನು ಬ್ರಿಟಿಷ್ ಸಾಮ್ರಾಜ್ಯಕ್ಕೆ ಕಪ್ಪ ಕಾಣಿಕೆ ರೂಪದಲ್ಲಿ ಶರಣಾಗತರಾಗಿ ಲಾಹೋರಿನ ಮಹಾರಾಜರು ನೀಡಿದ್ದರು ಎಂಬ ವಿಷಯ ಈಗ ಬಹಿರಂಗಗೊಂಡಿದೆ.
ಯುನೈಟೆಡ್ ಕಿಂಗ್ಡಮ್ ನಿಂದ ಭಾರತದ ಹೆಮ್ಮೆಯ ಆಭರಣ ವಾಪಸ್ ತರುವ ಚರ್ಚೆ ನಡೆಯುತ್ತಿದೆ. ಈ ವಜ್ರವನ್ನು ಇಲ್ಲಿಂದ ಕಸಿದುಕೊಂಡು ಹೋಗಿಲ್ಲ, ಬದಲಿಗೆ ಬ್ರಿಟಿಷರಿಗೆ ಗಿಫ್ಟ್ ಮಾಡಿದ್ದು ಎಂದು ಸುಪ್ರೀಂಕೋರ್ಟಿಗೆ ಈ ಹಿಂದೆ ಕೇಂದ್ರ ಸರ್ಕಾರವೇ ಹೇಳಿತ್ತು. ಈಗ ಆರ್ ಟಿಐ ಅರ್ಜಿಯ ಪ್ರಶ್ನೆಗೆ ಸರ್ಕಾರದ ಇಲಾಖೆಯಿಂದ ಉತ್ತರ ಸಿಕ್ಕಿದೆ.
ದುಬಾರಿ ವಜ್ರ 'ಕೊಹಿನೂರು' ಏನಿದರ ತಕರಾರು
ಸುಮಾರು 108 ಕ್ಯಾರೇಟ್ ವಜ್ರವನ್ನು ಬ್ರಿಟಿಷರಿಗೆ ಗಿಫ್ಟ್ ಪ್ಯಾಕ್ ಮಾಡಿ ನೀಡಲಾಗಿತ್ತು ಎಂದು ಭಾರತೀಯ ಪುರಾತತ್ತ್ವ ಸರ್ವೇಕ್ಷಣ ಇಲಾಖೆ(ಎಎಸ್ಐ)ಯು ಲೂಧಿಯಾನದ ಆರ್ ಟಿಐ ಕಾರ್ಯಕರ್ತರ ಅರ್ಜಿಯೊಂದನ್ನು ಉತ್ತರಿಸಿದೆ.
ಸ್ವಾತಂತ್ರ್ಯ ನಂತರ ರೂಪುಗೊಂಡ ಭಾರತದ ಕಾನೂನಿನಲ್ಲಿ ವಜ್ರವನ್ನು ವಾಪಸ್ ತರಲು ಯಾವುದೇ ಕ್ರಮ ಇಲ್ಲ. ಸ್ವಾತಂತ್ರ್ಯ ಪೂರ್ವದಲ್ಲಿ ನಡೆದಿರುವ ಈ 105.602 ಕ್ಯಾರೇಟ್ ತೂಗುವ ವಜ್ರ ಹಸ್ತಾಂತರಕ್ಕೆ ಯಾವ ಕ್ರಮ ಅನುಸರಿಸಬೇಕು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಈ ಹಿಂದೆ ಸಾಲಿಸಿಟರ್ ಜನರಲ್ ರಣಜಿತ್ ಕುಮಾರ್ ಅವರು ಸುಪ್ರೀಂಕೋರ್ಟ್ ಗೆ ಹೇಳಿದ್ದರು.
ಹೊಡೆದರೆ ಹೀಗೆ ಹೊಡೀಬೇಕು ಲಕ್ಕು, ಬಡವನಿಗೆ ಸಿಕ್ತು ಭಾರಿ ವಜ್ರದ ತುಣುಕು
ಆದರೆ, ಎಎಸ್ ಐ ನೀಡಿರುವ ಉತ್ತರ ಭಿನ್ನವಾಗಿದ್ದು, ಮಹಾರಾಜ ರಣಜಿತ್ ಸಿಂಗ್ ಅವರು 1849ರ ಸಿಖ್ ಯುದ್ಧ ಸೋತ ಬಳಿಕ ಈಸ್ಟ್ ಇಂಡಿಯಾ ಕಂಪನಿಗೆ ಈ ಬಹುಮೌಲ್ಯದ ವಜ್ರವನ್ನು ಕಾಣಿಕೆಯಾಗಿ ನೀಡಿದ್ದರು ಎಂದು ತಿಳಿದು ಬಂದಿದೆ.
ಕೊಹಿನೂರ್ ಬಗ್ಗೆ ಲೂಧಿಯಾನದ ರೋಹಿತ್ ಆಸಕ್ತಿ
ಆರ್ ಟಿಐ ಕಾರ್ಯಕರ್ತ ರೋಹಿತ್ ಸಬರ್ ವಾಲ್ ಅವರು ಮಾಹಿತಿ ಹಕ್ಕು ಕಾಯ್ದೆ ಅನ್ವಯ ಹಾಕಿದ್ದ ಅರ್ಜಿಗೆ ಅಕ್ಟೋಬರ್ 10ರಂದು ಉತ್ತರ ಸಿಕ್ಕಿದೆ. ಸುಪ್ರೀಂಕೋರ್ಟಿನಲ್ಲಿ 2016ರಂದು ಕೇಂದ್ರ ಸರ್ಕಾರ ನೀಡಿದ್ದ ಹೇಳಿಕೆಗೆ ಇದು ವಿರುದ್ಧವಾಗಿದೆ. 200 ಮಿಲಿಯನ್ ಯುಎಸ್ ಡಾಲರ್ ಮೌಲ್ಯದ ಕೊಹಿನೂರ್ ವಜ್ರವನ್ನು ಬ್ರಿಟಿಷರು ಕದ್ದುಕೊಂಡು ಹೋಗಿಲ್ಲ ಅಥವಾ ಬಲವಂತವಾಗಿ ತೆಗೆದುಕೊಂಡಿಲ್ಲ. ಬದಲಿಗೆ, ಪಂಜಾಬ್ ಪ್ರಾಂತ್ಯದ ಅಂದಿನ ರಾಜರು, ಈಸ್ಟ್ ಇಂಡಿಯಾ ಕಂಪನಿಗೆ ಉಡುಗೊರೆ ರೂಪದಲ್ಲಿ ನೀಡಿದ್ದರು .
ಮಹಾರಾಜ ದುಲೀಪ್ ಸಿಂಗ್
ಲಾರ್ಡ್ ಡಾಲ್ ಹೌಸಿ ಹಾಗೂ ಮಹಾರಾಜ ದುಲೀಪ್ ಸಿಂಗ್ ನಡುವೆ 1849ರಲ್ಲಿ ಆಗಿದ್ದ ಲಾಹೋರ್ ಒಪ್ಪಂದ ಪ್ರಕಾರ, ಇಂಗ್ಲೆಂಡಿನ ಮಹಾರಾಣಿಗೆ ಕಪ್ಪ ಕಾಣಿಕೆ ರೂಪದಲ್ಲಿ ಈ ವಜ್ರವನ್ನು ನೀಡಲಾಗಿದೆ. 'ಮಹಾರಾಜ ರಣಜಿತ್ ಸಿಂಗ್ ಅವರು ಶಾ ಸುಜಾ ಉಲ್ ಮುಲ್ಕ್ ರಿಂದ ಕೊಹಿನೂರ್ ವಜ್ರವನ್ನು ಪಡೆದಿದ್ದರು. ಇದೇ ವಜ್ರವನ್ನು ಲಾಹೋರಿನ ಮಹಾರಾಜರಿಂದ ಇಂಗ್ಲೆಂಡಿನ ಮಹಾರಾಣಿಯವರಿಗೆ ಶರಣಾಗತಿ ರೂಪದಲ್ಲಿ ನೀಡಲಾಗಿದೆ' ಎಂದು ಒಪ್ಪಂದದಲ್ಲಿ ಹೇಳಿದೆ.
ಲಂಡನ್ನಿಗೆ ತೆರಳಿದ್ದ ಆರ್ ಟಿಐ ಕಾರ್ಯಕರ್ತ
ಕೊಹಿನೂರ್ ವಜ್ರವನ್ನು ನೋಡಲು ಲಂಡನ್ನಿಗೆ ತೆರಳಿದ್ದ ಆರ್ ಟಿ ಐ ಕಾರ್ಯಕರ್ತ ರೋಹಿತ್ ಅವರು ಅಲ್ಲಿ ಕೊಹಿನೂರ್ ವಜ್ರವನ್ನು ಮ್ಯೂಸಿಯಂನಲ್ಲಿ ನೋಡುತ್ತಾರೆ. ಅಲ್ಲಿ ನೀಡಿರುವ ಮಾಹಿತಿ ಫಲಕದ ಪ್ರಕಾರ, ಈ ಅಮೂಲ್ಯ ವಜ್ರವನ್ನು ಇಂಗ್ಲೆಂಡ್ ರಾಣಿಗೆ ಉಡುಗೊರೆಯಾಗಿ ನೀಡಲಾಗಿದೆ ಎಂದು ಬರೆಯಲಾಗಿದೆ.
ಈ ಬಗ್ಗೆ ಅನೇಕ ಪ್ರಶ್ನೆಗಳಿಗೆ ಸರಿಯಾಗಿ ಉತ್ತರ ಸಿಗದ ಕಾರಣ, ಭಾರತಕ್ಕೆ ಬಂದ ಬಳಿಕ, ಪ್ರಧಾನಮಂತ್ರಿ ಸಚಿವಾಲಯಕ್ಕೆ ಈ ಬಗ್ಗೆ ಮಾಹಿತಿ ಕೋರಿ ಆರ್ ಟಿಐ ಅರ್ಜಿ ಹಾಕುತ್ತಾರೆ. ಈ ಬಗ್ಗೆ ಎಎಸ್ ಐನಿಂದ ಸಿಕ್ಕ ಉತ್ತರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೋದಿ ಸರ್ಕಾರರಿಂದ ವಿಫಲ ಯತ್ನ
10ನೇ ಶತಮಾನಕ್ಕೆ ಸೇರಿದ ಭಾರತದ ಮೂರ್ತಿಯೊಂದನ್ನು 2015ರ ಏಪ್ರಿಲ್ ನಲ್ಲಿ ಜರ್ಮನಿಯ ಛಾನ್ಸೆಲರ್ ಅಂಜೆಲಾ ಮಾರ್ಕೆಲ್ ಹಿಂದಿರುಗಿಸಿದ್ದರು. ಭಾರತಕ್ಕೆ ಭೇಟಿ ನೀಡಿದ್ದ ಆಸ್ಟ್ರೇಲಿಯಾದ ಪ್ರಧಾನಿ ಸಹ ಭಾರತ ಮೂಲದ ಪುರಾತನ ವಸ್ತುಗಳನ್ನು ಹಿಂದಕ್ಕೆ ನೀಡುತ್ತೇನೆ ಎಂದು ಹೇಳಿಕೆ ನೀಡಿದ್ದರು. ನರೇಂದ್ರ ಮೋದಿಯವರ ವಿದೇಶ ಪ್ರವಾಸದ ವೇಳೆ ಪುರಾತನ ವಸ್ತುಗಳನ್ನು ಹಿಂದಕ್ಕೆ ಪಡೆಯುವ ಬಗ್ಗೆಯೂ ಚರ್ಚೆ ನಡೆದಿತ್ತು.ಅತ್ಯಮೂಲ್ಯ ಕೊಹಿನೂರು ವಜ್ರವನ್ನು ದೇಶಕ್ಕೆ ಮರಳಿ ತರುವ ಯತ್ನ ಮಾಡಲಾಗಿತ್ತು.