ಎಲ್ಲ ಕೊಡವರೂ ಆಚರಿಸುವ ಹುತ್ತರಿ ಹಬ್ಬ-ಸಮೃದ್ಧಿಯ ಸಂಕೇತ...
ಇಂದು ಕೊಡವರ "ಹುತ್ತರಿ ಹಬ್ಬ". ಈ ದಿನ ಕೊಡಗಿನ ರೈತರು ತಮ್ಮ ಗದ್ದೆಗಳಿಗೆ ಹೋಗಿ ಹಿಡಿಯಷ್ಟು ಭತ್ತದ ಪೈರನ್ನು ಕುಯ್ದು ತಂದು ಪೂಜೆ ಮಾಡಿ ವರ್ಷವಿಡೀ ಅದನ್ನು ಕಾಪಿಟ್ಟುಕೊಳ್ಳುತ್ತಾರೆ. ಭತ್ತದ ಕಟ್ಟು ಸಮೃದ್ಧಿಯ ಸಂಕೇತ. ಹೀಗೆ ಭತ್ತ ಕುಯ್ದು ತರುವ ಆಚರಣೆ ಕುಯಿಲಿನ ಆರಂಭವೆಂಬ ಸಂಕೇತವೂ ಹೌದು.
ಕೊಡಗಿನ ಮಣ್ಣು ಕೃಷಿ ಬೆಳೆ ಬದುಕು ಬೆಸಗೊಂಡಿರುವ ಹುತ್ತರಿ ಹಬ್ಬವೆಂದರೆ ಮನೆ ಮಂದಿಯೆಲ್ಲಾ ಸಂಭ್ರಮದಿಂದ ಪಾಲ್ಗೊಳ್ಳುವ ವಿಶೇಷ ದಿನ.
ಕರಾವಳಿ ಕ್ರೈಸ್ತರ ವಿಶೇಷ ಹಬ್ಬ 'ಮೊಂತಿ ಫೆಸ್ತ್': ಏನೆಲ್ಲಾ ವಿಶೇಷತೆಗಳಿವೆ ಗೊತ್ತಾ?
ಬೇರೆ ಕಡೆ ನೆಲೆಸಿರುವ ಮೂಲ ಕೊಡವರು ಊರು-ಕೃಷಿ-ನೆಲದ ಸಂಬಂಧ ಉಳಿಸಿಕೊಂಡ ಬಹುತೇಕರು ಹುತ್ತರಿ ಹಬ್ಬಕ್ಕಾಗಿ ಕೊಡಗಿಗೆ ಬಂದು ಸೇರುತ್ತಾರೆ. ಸಾಂಪ್ರದಾಯಿಕ ಆಚರಣೆಯಲ್ಲಿ ಪಾಲ್ಗೊಂಡು ಸಂಭ್ರಮಿಸುತ್ತಾರೆ. ಮುಂದೆ ಓದಿ...
ರೋಹಿಣಿ ನಕ್ಷತ್ರದಂದು ಬರುವ ಹಬ್ಬ
ರೋಹಿಣಿ ನಕ್ಷತ್ರದಂದು ಬರುವ ಈ ಹಬ್ಬದಂದು ಯಾವ್ಯಾವ ಸಮಯಕ್ಕೆ ಏನೆಲ್ಲಾ ಆಚರಣೆಗಳನ್ನು ಮಾಡಬೇಕೆಂಬುದು ಇಗ್ಗುತಪ್ಪ ದೇವಳದಲ್ಲಿ ಎರಡು ಮೂರು ವಾರಗಳ ಮುನ್ನ ತೀರ್ಮಾನವಾಗುತ್ತದೆ. ಮನೆಯ ಹಿರಿಯರು ಇಂದು ಸಂಜೆ ಗದ್ದೆಗೆ ಹೋಗಿ ಒಂದು ಸುತ್ತು ಗುಂಡು ಹಾರಿಸಿ (ಪಟಾಕಿ ಹೊಡೆವುದೂ ಸೇರಿದಂತೆ) ಒಂದು ಕಟ್ಟು ಭತ್ತ ಕುಯ್ದು ತರುತ್ತಾರೆ. ಬರುವಾಗ 'ಪಲಿ ಪಲಿ ದೇವ' ಎಂದು ತಮ್ಮ ಇಷ್ಟದೈವವನ್ನು ಸ್ಮರಿಸುತ್ತಾ ಬರುತ್ತಾರೆ.
ಕೊಡವರ ಸುಗ್ಗಿ-ಹುತ್ತರಿ ಹಬ್ಬದ ವಿಶೇಷ
ಮನೆಗೆ ಬಂದು ತೆನೆ ಪೂಜೆ ಮಾಡಿ ಅಕ್ಕಿ ತಂಬಿಟ್ಟು ಪ್ರಸಾದ ತಿಂದು ಹರಳಿ ಎಲೆಯ ಮೇಲೆ ತಂಬಿಟ್ಟಿಟ್ಟು ಮನೆಯ ಮೂಲೆಗಳಲ್ಲಿ ಅಂಟಿಸುತ್ತಾರೆ. ಇಷ್ಟಾದ ಮೇಲೆ ಹಬ್ಬದ ಅಡುಗೆ ಊಟ ಮಾಡಿ ದಿನ ಮುಗಿಸುತ್ತಾರೆ. 'ನೆರೆ ಕಟ್ಟುವುದು' ಕದಿರು ತೆಗೆಯುವುದು" ಇನ್ನಿತರ ಆಚರಣೆಗಳ ನಡುವೆ ದಿನ ಮುಗಿಯುತ್ತದೆ. ಇದು ಕೊಡವರ ಸುಗ್ಗಿ- ಹುತ್ತರಿ ಹಬ್ಬದ ವಿಶೇಷ.
ಹಬ್ಬದಲ್ಲಿ ಸಾಂಪ್ರದಾಯಿಕ ಕುಣಿತ
ಹುತ್ತರಿ ಹಬ್ಬವಾದ ಮೇಲೆ ಸಾಂಪ್ರದಾಯಿಕ ಉಡುಗೆ ಧರಿಸಿ ವ್ರತ್ತಾಕಾರದಲ್ಲಿ ಕೋಲಾಟ, ಸುಗ್ಗಿ ಕುಣಿತ ಕುಣಿಯುತ್ತಾರೆ. ಮಹಿಳೆಯರು ಸಾಂಪ್ರದಾಯಿಕ ಮಹಿಳಾ ನೃತ್ಯ (ಉಮ್ಮತ್ತಾಟ್) ದಲ್ಲಿ ಭಾಗವಹಿಸುತ್ತಾರೆ. ಊರಿನವರೆಲ್ಲಾ ಒಟ್ಟಿಗೆ ಸೇರಿ ವಿವಿಧ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಾರೆ.
ಸುಗ್ಗಿ-ಸಮೃದ್ಧಿಯ ಸಂಕೇತ ಯಾರಿಗೆ ಬೇಡವಾದೀತು?
ಊರು ಸೇರಲಾಗದ ಮೂಲ ಕೊಡವರು ಅವರಿದ್ದಲ್ಲಿಯೇ "ಮನೆ ಶುಚಿಗೊಳಿಸಿ" ಹುತ್ತರಿ ಹಬ್ಬದ ಆಚರಣೆಯ ಸಂಭ್ರಮ ತಮ್ಮದಾಗಿಸಿಕೊಳ್ಳುತ್ತಾರೆ. ಇಂದು ಬೆಳಿಗ್ಗೆ ಸುಗ್ಗಿ ಹಬ್ಬದ ಶುಭಾಶಯ ಕೋರಲು ಮಾಧ್ಯಮ ಅಕಾಡೆಮಿಯ ಮಾಜಿ ಅಧ್ಯಕ್ಷರು, ಹಿರಿಯ ಪತ್ರಕರ್ತರೂ ಆದ ಕೊಡಗಿನ ಮನೆಯಪಂಡ ಪೊನ್ನಪ್ಪನವರಿಗೆ ಕರೆ ಮಾಡಿದಾಗ ಮನೆಯ ತಲೆಬಾಗಿಲಿಗೆ ವಾರ್ನಿಶ್ ಬಳಿದು, ಮನೆ ಶುಚಿಗೊಳಿಸಿ ಹಬ್ಬದ ವಾತಾವರಣ ತಾವಿರುವ ಬೆಂಗಳೂರಿನಲ್ಲಿಯೇ ಕಂಡುಕೊಂಡಿರುವುದಾಗಿ ಹೇಳಿ ಖುಷಿಪಟ್ಟರು. ಸಾಗರದಾಚೆ ಇರುವ ಅವರ ಮಕ್ಕಳೂ ಹುತ್ತರಿ ಹಬ್ಬವನ್ನು ಆಚರಿಸುತ್ತಿರಬೇಕು..!? ಸುಗ್ಗಿ-ಸಮೃದ್ಧಿಯ ಸಂಕೇತ ಯಾರಿಗೆ ಬೇಡವಾದೀತು...?