ಉತ್ತರ ಭಾರತಕ್ಕಿಂತ ದಕ್ಷಿಣ ಭಾರತದ ರಾಜ್ಯಗಳು ಮುಂದುವರಿದಿರುವುದು ಹೌದಾ? ಏನು ಕಾರಣ?
ಹಿಂದಿ ಹೇರಿಕೆ, ದಕ್ಷಿಣ ಭಾರತ ವರ್ಸಸ್ ಉತ್ತರ ಭಾರತ ಇತ್ಯಾದಿ ಪದಗಳು ಇತ್ತೀಚೆಗೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಹೆಚ್ಚೆಚ್ಚು ಬಾರಿ ಕೇಳಿಬರುತ್ತಿರುತ್ತವೆ. ಇದಕ್ಕೆ ಕಾರಣಗಳು ಹಲವಾರು ಇವೆ. ಉತ್ತರ ಭಾರತ ಮತ್ತು ದಕ್ಷಿಣ ಭಾರತದ ಮಧ್ಯೆ ಪ್ರಾಂತೀಯ ವೈಭಿನ್ಯತೆ ಜೊತೆಗೆ ಹಲವಾರು ವ್ಯತ್ಯಾಸಗಳಿರುವುದು ಹೌದು.
ವಿವಿಧ ಅಭಿವೃದ್ಧಿ ಸೂಚಕ ಮತ್ತು ಮಾಪಕಗಳ ದತ್ತಾಂಶವನ್ನು ಅವಲೋಕಿಸಿದಾಗ ದಕ್ಷಿಣ ಭಾರತದ ರಾಜ್ಯಗಳು ಸರಾಸರಿಯಾಗಿ ಉತ್ತರ ಭಾರತೀಯ ರಾಜ್ಯಗಳಿಗಿಂತ ಹೆಚ್ಚು ಮುಂದುವರಿದಿವೆ. ಆರ್ಥಿಕ ಪರಿಸ್ಥಿತಿ, ಸ್ತ್ರೀ ಪುರುಷ ಅನುಪಾತ, ನವಜಾತ ಶಿಶುಮರಣ ಪ್ರಮಾಣ, ತಾಯಿ ಮರಣ ಪ್ರಮಾಣ, ಅರೋಗ್ಯ ವ್ಯವಸ್ಥೆ, ಪೌಷ್ಟಿಕಾಂಶ ವ್ಯವಸ್ಥೆ, ಶಾಲಾ ಶಿಕ್ಷಣ, ಉದ್ಯೋಗ, ರಾಜಕೀಯ ಪ್ರಾತಿನಿಧ್ಯ ಇತ್ಯಾದಿ ಹಲವು ಮಾಪಕಗಳಲ್ಲಿ ಕರ್ನಾಟಕ ಸೇರಿ ದಕ್ಷಿಣ ಭಾರತೀಯ ರಾಜ್ಯಗಳು ಉತ್ತಮ ಬೆಳವಣಿಗೆ ಹೊಂದಿವೆ.
ಇದರ ಜೊತೆಗೆ ಉತ್ತರದವರಿಗೆ ಹೋಲಿಸಿದರೆ ದಕ್ಷಿಣ ಭಾರತೀಯ ರಾಜ್ಯಗಳಲ್ಲಿ ಜನಸಂಖ್ಯೆ ಕಡಿಮೆ, ಸಂಪತ್ತು ಅಧಿಕ. ಹೀಗಾಗಿ, ಆರ್ಥಿಕ ಪರಿಸ್ಥಿತಿ ಉತ್ತಮವಾಗಿದೆ. ಉತ್ತರ ಭಾರತದಲ್ಲಿ ಹುಟ್ಟಿದ ಮಗುವಿಗಿಂತ ದಕ್ಷಿಣ ಭಾರತದಲ್ಲಿ ಹುಟ್ಟಿದ ಮಗು ಹೆಚ್ಚು ಆರೋಗ್ಯಯುತವಾದ, ಸಂಪದ್ಭರಿತವಾದ, ಹೆಚ್ಚು ಸುರಕ್ಷಿತವಾದ ಜೀವನ ನಡೆಸಬಲ್ಲುದು.
ಕರ್ನಾಟಕದಲ್ಲಿ ಮುಂದಿನ ಚುನಾವಣೆಯಲ್ಲಿ ಗೆಲ್ಲೋದು ಯಾರು? ಸಮೀಕ್ಷೆಗಳು ಹೇಳೋದೇನು?
ಈ ಬಗ್ಗೆ ಭಾರತದ ದತ್ತಾಂಶ ವಿಜ್ಞಾನಿ ನೀಲಂಕಠನ್ ಅವರು ಬಿಬಿಸಿಗೆ ಬರೆದ ವರದಿಯೊಂದರಲ್ಲಿ ಸಂಕ್ಷಿಪ್ತವಾಗಿ ಮಾಹಿತಿ ಮತ್ತು ವಿಶ್ಲೇಷಣೆ ನೀಡಿದ್ದಾರೆ. ಉತ್ತರ ಭಾರತೀಯ ರಾಜ್ಯಗಳಿಗಿಂತ ದಕ್ಷಿಣ ಭಾರತೀಯ ರಾಜ್ಯಗಳು ಯಾಕೆ ಮುಂದುವರಿದಿವೆ? ಅಭಿವೃದ್ಧಿ ಹೊಂದಿದ ತಪ್ಪಿಗೆ ಈಗ ಅವು ತೆರಬೇಕಾದ ಬೆಲೆ ಏನು? ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ಇದು.
ಎಂಬತ್ತರ ದಶಕದಿಂದ ಬದಲಾವಣೆ ಅಲೆ
ಭಾರತ ಸ್ವಾತಂತ್ರ್ಯ ಹೊಂದಿದಾಗ ಎಲ್ಲಾ ರಾಜ್ಯಗಳ ಪರಿಸ್ಥಿತಿ ಸಮಾನವಾಗಿಯೇ ಇತ್ತು. ದಕ್ಷಿಣ ಭಾರತೀಯ ರಾಜ್ಯಗಳಾದ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಕೇರಳ ಅಭಿವೃದ್ಧಿ ವಿಚಾರದಲ್ಲಿ ರಾಷ್ಟ್ರೀಯ ಸರಾಸರಿ ಅಥವಾ ಅದಕ್ಕಿಂತ ಕೆಳಗೇ ಇದ್ದವು. 1980ರವರೆಗೂ ಇದೇ ಪರಿಸ್ಥಿತಿ ಇದ್ದದ್ದು. ಆದರೆ, ಎಂಬತ್ತರ ದಶಕದಲ್ಲಿ ಈ ನಾಲ್ಕು ದಕ್ಷಿಣ ರಾಜ್ಯಗಳು ಅಭಿವೃದ್ಧಿ ಪಥದತ್ತ ವಾಲಿದ್ದು ಅಂಕಿ ಅಂಶಗಳಿಂದ ಗೊತ್ತಾಗುತ್ತದೆ.
ಆರ್ಥಿಕ ಹಿಂಜರಿತ: ವಿಶ್ವದಾದ್ಯಂತ 50% ಐಟಿ ಕಂಪನಿಗಳು ವಜಾಗೊಳಿಸಲು ತಯಾರಿ?
ದಕ್ಷಿಣ ರಾಜ್ಯಗಳು ಮುಂದುವರಿದಿದ್ದು ಯಾಕೆ?
ಎಂಬತ್ತರ ದಶಕದಿಂದೀಚೆ ದಕ್ಷಿಣ ಭಾರತೀಯ ರಾಜ್ಯಗಳು ಅಭಿವೃದ್ಧಿಯತ್ತ ಸಾಗಲು ಶುರುವಾಗಿದ್ದು ಹೇಗೆ ಎಂಬುದಕ್ಕೆ ಕಾರಣ ಗೊತ್ತಿಲ್ಲ. ಈ ನಾಲ್ಕ ದಕ್ಷಿಣ ರಾಜ್ಯಗಳು ದ್ರಾವಿಡ ಸಂಸ್ಕೃತಿ ಎಂಬುದನ್ನು ಬಿಟ್ಟರೆ ಸಮಾನತೆ ಎಂಬುದು ಕಡಿಮೆ. ರಾಜಕೀಯವಾಗಿ, ಸಾಮಾಜಿಕವಾಗಿ ಒಂದೊಂದು ರಾಜ್ಯವೂ ವಿಭಿನ್ನವೇ. ಆದರೆ, ನಾಲ್ಕೂ ರಾಜ್ಯಗಳು ಅಭಿವೃದ್ಧಿ ಪಥದಲ್ಲಿ ಏಕಸಮಯದಲ್ಲಿ ಹೆಜ್ಜೆ ಹಾಕತೊಡಗಲು ಏನು ಕಾರಣ? ಕೆಲ ರಾಜಕೀಯ ವಿಜ್ಞಾನಿಗಳ ಪ್ರಕಾರ ಪ್ರಾದೇಶಿಕತೆಯ ಮನೋಭಾವವು ದಕ್ಷಿಣ ಭಾರತದಲ್ಲಿ ಬಲವಾಗಿ ಬೇರೂರಿದ್ದು ಅವುಗಳ ಭಿನ್ನ ಹಾದಿಗೆ ಕಾರಣ ಇರಬಹುದು ಎನ್ನಲಾಗಿದೆ.
ದಕ್ಷಿಣ ರಾಜ್ಯಗಳ ವಿಶೇಷ ನೀತಿಗಳೂ ಈ ಪ್ರಗತಿಗೆ ಕಾರಣ ಇರಬಹುದು ಎಂದು ಭಾವಿಸಲಾಗಿದೆ. ಕರ್ನಾಟಕದಲ್ಲಿ ದೇವರಾಜ ಅರಸು ತಂದ ಭೂಸುಧಾರಣೆ ಕಾಯ್ದೆ ರಾಜ್ಯದ ಪ್ರಗತಿ ಪಥದಲ್ಲಿ ಕ್ರಾಂತಿಕಾರಕ ಹೆಜ್ಜೆ ಎನ್ನುತ್ತಾರೆ. ಹಾಗೆಯೆ, ಎಂಬತ್ತರ ದಶಕದಲ್ಲಿ ರಾಮಕೃಷ್ಣ ಹೆಗಡೆ ನೇತೃತ್ವದ ಜನತಾ ಪಕ್ಷ ಸರಕಾರ ತಂದ ಯೋಜನೆಗಳು ಕರ್ನಾಟಕದ ಅಭಿವೃದ್ಧಿಗೆ ಪುಷ್ಟಿ ಕೊಟ್ಟವೆನ್ನಲಾಗಿದೆ.
ಇನ್ನು, ಶಾಲಾ ಮಕ್ಕಳಿಗೆ ಮಧ್ಯಾಹ್ನ ಊಟ ಅಥವಾ ಮಿಡ್ ಡೇ ಮೀಲ್ ಯೋಜನೆ ಒಂದು ರೀತಿಯಲ್ಲಿ ಕೆಟಲಿಸ್ಟ್ ಅಥವಾ ಪರಿವರ್ತಕವಾಗಿ ಕೆಲಸ ಮಾಡಿತು. ಮೊದಲ ಬಾರಿಗೆ ಮಿಡ್ ಡೇ ಮೀಲ್ ಯೋಜನೆ ಜಾರಿಗೆ ಬಂದಿದ್ದು 1982ರಲ್ಲಿ ತಮಿಳುನಾಡಿನಲ್ಲಿ. ಮಕ್ಕಳನ್ನು ಶಾಲೆಗೆ ಕರೆತರಲು ಈ ಯೋಜನೆ ಅದ್ಭುತವಾಗಿ ಕೆಲಸ ಮಾಡಿತು. ಪರಿಣಾಮವಾಗಿ ತಮಿಳುನಾಡು ಅತಿ ಹೆಚ್ಚು ಸಾಕ್ಷರತೆ ಪ್ರಮಾಣ ಹೊಂದಿದೆ. ಕರ್ನಾಟಕ, ಆಂಧ್ರ ಕೇರಳದಲ್ಲೂ ಇಂಥ ವಿವಿಧ ಯೋಜನೆಗಳು ಈ ಅವಧಿಯಲ್ಲಿ ಜಾರಿಗೆ ಬಂದದ್ದನ್ನು ನಾವು ಗಮನಿಸಬಹುದು.
ಕೇರಳದಲ್ಲಿ ರಾಜಕೀಯ ಜಾಗೃತಿ, ಬಹುಸಂಸ್ಕೃತಿಯು ಅಲ್ಲಿನ ಆರೋಗ್ಯ ಮತ್ತು ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆಗೆ ಕಾರಣ ಎಂಬ ವಿಶ್ಲೇಷಣೆ ಇದೆ.
ಪ್ರಗತಿಯ ತಪ್ಪಿಗೆ ದಂಡ
ದಕ್ಷಿಣ ಭಾರತದ ರಾಜ್ಯಗಳು ಅಭಿವೃದ್ಧಿಯಲ್ಲಿ ಮುಂದಿವೆ. ಹೀಗಾಗಿ, ಹೆಚ್ಚು ತೆರಿಗೆ ಸೃಷ್ಟಿ ಇಲ್ಲಿಂದ ಆಗುತ್ತದೆ. ಉತ್ತರ ಭಾರತಕ್ಕೆ ಹೋಲಿಸಿದರೆ ಜನಸಂಖ್ಯೆ ಕಡಿಮೆ. ತಲಾದಾಯ ಲೆಕ್ಕ ಹಾಕಿದರೆ ದಕ್ಷಿಣದವರದ್ದು ಬಹಳ ಹೆಚ್ಚು.
ಆದರೆ, ಜಿಎಸ್ಟಿ ವ್ಯವಸ್ಥೆ ಬಂದು ದಕ್ಷಿಣ ರಾಜ್ಯಗಳ ಆರ್ಥಿಕ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಿರುವುದನ್ನು ನಿರಾಕರಿಸಲು ಸಾಧ್ಯವಿಲ್ಲ. ಒಕ್ಕೂಟದ ವ್ಯವಸ್ಥೆಯಲ್ಲಿ ಅಸಮಾನತೆ ನೀಗಿಸಲು ಕೊಡುಕೊಳ್ಳುವಿಕೆ ಅಗತ್ಯ ಎಂದು ಕೆಲವರು ವಾದಿಸಬಹುದು. ಅದು ಒಂದು ಮಟ್ಟಕ್ಕೆ ಹೌದು. ಆದರೆ, ದಕ್ಷಿಣ ರಾಜ್ಯಗಳ ಅಭಿವೃದ್ಧಿಗೆ ತಡೆಯಾಗುವ ರೀತಿಯಲ್ಲಿ ಇದ್ದರೆ ಅದು ಅನ್ಯಾಯ.
ಜಿಎಸ್ಟಿಯಿಂದ ಏನು ಅನ್ಯಾಯ?
ಜನಸಂಖ್ಯೆ ಆಧಾರದ ಮೇಲೆ ಜಿಎಸ್ಟಿ ಹಣವನ್ನು ರಾಜ್ಯಗಳಿಗೆ ಹಂಚಿಕೆ ಮಾಡಲಾಗುತ್ತದೆ. ಕಡಿಮೆ ಜನಸಂಖ್ಯೆ ಇರುವ ದಕ್ಷಿಣ ರಾಜ್ಯಗಳಿಗೆ ಕಡಿಮೆ ಜಿಎಸ್ಟಿ ಹಣ ಸಿಗುತ್ತದೆ. ಹೆಚ್ಚು ಜನಸಂಖ್ಯೆ ಇರುವ ಉತ್ತರಪ್ರದೇಶದಂಥ ರಾಜ್ಯಗಳಿಗೆ ಸಿಂಹಪಾಲು ಸಿಗುತ್ತದೆ. ಅಂದರೆ, ಹೆಚ್ಚು ತೆರಿಗೆ ಕಟ್ಟುವ ದಕ್ಷಿಣ ರಾಜ್ಯಗಳಿಗೆ ಕೇಂದ್ರದಿಂದ ಸಿಗುವ ತೆರಿಗೆ ಪಾಲು ಕಡಿಮೆ. ಅಭಿವೃದ್ಧಿ ಆದ ತಪ್ಪಿಗೆ ದಕ್ಷಿಣ ರಾಜ್ಯಗಳು ದುಬಾರಿ ದಂಡ ತೆರುವಂಥ ಪರಿಸ್ಥಿತಿ ಇದೆ ಎನ್ನುತ್ತಾರೆ ನೀಲಕಂಠನ್.
ಈ ಮುಂಚೆಯಾದರೆ ಪರೋಕ್ಷ ತೆರಿಗೆ ಮೂಲಕ ರಾಜ್ಯ ಸರಕಾರಗಳು ಹಣ ಕ್ರೋಢೀಕರಿಸಬಹುದಿತ್ತು. ಈಗ ಜಿಎಸ್ಟಿ ಬಂದ ಬಳಿಕ ರಾಜ್ಯ ಸರಕಾರಗಳಿಗೆ ಆ ಸ್ವಾತಂತ್ರ್ಯ ಹೊರಟುಹೋಗಿದೆ. ಮಧ್ಯಾಹ್ನದ ಬಿಸಿಯೂಟದಂಥ ಯೋಜನೆಗಳ ಫಂಡಿಂಗ್ಗೆ ಕೇಂದ್ರ ಸರಕಾರದ ಮೇಲೆ ತುಸು ಅವಲಂಬನೆಯಾಗಬೇಕಾದ ಪರಿಸ್ಥಿತಿ ಇದೆ. ಉತ್ತರ ಭಾರತದ ರಾಜ್ಯಗಳು ಹೆಚ್ಚು ಅಭಿವೃದ್ಧಿ ಕಾಣದಿದ್ದರೂ ಜಿಎಸ್ಟಿಯಲ್ಲಿ ಹೆಚ್ಚು ಪಾಲು ಸಿಕ್ಕಿ ಬೊಕ್ಕಸ ಸೇರುತ್ತಿವೆ.
"ರಾಜ್ಯ ಸರಕಾರಗಳಿಂದ ನೀವು ಎಲ್ಲಾ ರೀತಿಯ ತೆರಿಗೆ ಸ್ವಾತಂತ್ರ್ಯವನ್ನು ಕಿತ್ತುಕೊಂಡು ಜಿಎಸ್ಟಿ ವ್ಯಾಪ್ತಿಗೆ ತಂದುಬಿಟ್ಟಿರಿ. ಈಗ ರಾಜ್ಯ ಸರಕಾರಗಳು ತಮ್ಮ ಹಣಕಾಸು ನೀತಿ ಹೇಗೆ ನಿರ್ಧರಿಸುವುದು? ನೀವು ರಾಜ್ಯಗಳನ್ನು ಮುನಿಸಿಪಾಲಿಟಿಗಳ ಮಟ್ಟಕ್ಕೆ ತಂದುಬಿಟ್ಟಿರಿ" ಎಂದು ತಮಿಳುನಾಡಿನ ಹಣಕಾಸು ಸಚಿವ ಪಿ ತ್ಯಾಗರಾಜನ್ ಇತ್ತೀಚೆಗೆ ಹೇಳಿಕೆ ನೀಡಿದ್ದರು.
2026ರಲ್ಲಿ ಮರುವಿಂಗಡಣೆ ಅಪಾಯ
ದೇಶಾದ್ಯಂತ 2026ರಲ್ಲಿ ಚುನಾವಣಾ ಕ್ಷೇತ್ರಗಳ ಮರುವಿಂಗಡಣೆ ನಡೆಯಲಿದೆ. 1976ರಲ್ಲಿ ಕೊನೆಯ ಬಾರಿ ವಿಂಗಡಣೆ ಆಗಿದ್ದು. ಮರುವಿಂಗಡಣೆಯಿಂದ ದಕ್ಷಿಣ ಭಾರತದ ರಾಜ್ಯಗಳಿಗೆ ತುಸು ಹಿನ್ನಡೆಯಾಗಬಹುದು ಎಂಬ ಅಭಿಪ್ರಾಯ ಇದೆ. ಕಾರಣ ಅದೇ ಜನಸಂಖ್ಯೆ. ಜನಸಂಖ್ಯೆ ಪ್ರಮಾಣದ ಮೇಲೆ ಕ್ಷೇತ್ರಗಳ ಪುನಾರಚನೆ ಅಥವಾ ಮರುವಿಂಗಡಣೆ ಆಗುತ್ತದೆ. ಹೆಚ್ಚು ಜನಸಂಖ್ಯೆ ಇರುವ ರಾಜ್ಯಗಳಲ್ಲಿ ಹೆಚ್ಚು ಕ್ಷೇತ್ರಗಳು ಸೃಷ್ಟಿಯಾಗುತ್ತವೆ. ದಕ್ಷಿಣ ಭಾರತೀಯ ರಾಜ್ಯಗಳಲ್ಲಿ ಜನಸಂಖ್ಯೆ ಕಡಿಮೆ ಇರುವ ಕಾರಣ ಕಡಿಮೆ ಲೋಕಸಭಾ ಕ್ಷೇತ್ರಗಳು ಸಿಗುತ್ತವೆ. ಪರಿಣಾಮವಾಗಿ ಲೋಕಸಭೆಯಲ್ಲಿ ದಕ್ಷಿಣ ಪ್ರಾತಿನಿಧ್ಯ ಕಡಿಮೆ ಆಗುತ್ತದೆ. ಇದು ರಾಜಕೀಯವಾಗಿ ಹಿನ್ನಡೆಯ ಸ್ಥಿತಿಗೆ ಎಡೆ ಮಾಡುವುದರಲ್ಲಿ ಅನುಮಾನ ಇಲ್ಲ.
(ಒನ್ಇಂಡಿಯಾ ಸುದ್ದಿ)